ಆ್ಯಪ್ನಗರ

​ ಸೈಟ್‌ ಪರಿಹಾರ ಪಡೆದ ರೈತರಿಗೆ ಬಂಪರ್‌ ಲಾಭ !

ನಾಡಪ್ರಭು ಕೆಂಪೇಗೌಡ ಬಡಾವಣೆಗೆ ಜಮೀನು ಬಿಟ್ಟುಕೊಟ್ಟಿರುವ ಭೂಮಾಲೀಕರಲ್ಲಿ ನಗದು ಪರಿಹಾರ ಬೇಡ ಎಂದ ರೈತರಿಗೆ ಸೈಟ್‌ ರೂಪದಲ್ಲಿ ಬಿಡಿಎ ವಿತರಿಸಿರುವ ಪರಿಹಾರ ಬಂಪರ್‌ ಲಾಭ ತಂದುಕೊಟ್ಟಿದೆ.

ವಿಕ ಸುದ್ದಿಲೋಕ 2 Nov 2016, 4:23 am
-ಕೆಂಪೇಗೌಡ ಬಡಾವಣೆಗೆ ಜಮೀನು ಕೊಟ್ಟವರಿಗೆ ಶೇ.40ರಷ್ಟು ಸೈಟ್‌ ವಿತರಣೆ -
Vijaya Karnataka Web bumper profits for the farmers
​ ಸೈಟ್‌ ಪರಿಹಾರ ಪಡೆದ ರೈತರಿಗೆ ಬಂಪರ್‌ ಲಾಭ !


ಆರ್‌.ತುಳಸಿಕುಮಾರ್‌ ಬೆಂಗಳೂರು

ನಾಡಪ್ರಭು ಕೆಂಪೇಗೌಡ ಬಡಾವಣೆಗೆ ಜಮೀನು ಬಿಟ್ಟುಕೊಟ್ಟಿರುವ ಭೂಮಾಲೀಕರಲ್ಲಿ ನಗದು ಪರಿಹಾರ ಬೇಡ ಎಂದ ರೈತರಿಗೆ ಸೈಟ್‌ ರೂಪದಲ್ಲಿ ಬಿಡಿಎ ವಿತರಿಸಿರುವ ಪರಿಹಾರ ಬಂಪರ್‌ ಲಾಭ ತಂದುಕೊಟ್ಟಿದೆ.

ಬಡಾವಣೆ ವ್ಯಾಪ್ತಿಗೆ ಒಳಪಟ್ಟಿರುವ ಕೆಂಚನಪುರ, ಕನ್ನಲ್ಲಿ, ಕೊಮ್ಮಘಟ್ಟ, ರಾಮಸಂದ್ರ ಗ್ರಾಮಗಳಿಗೆ ಸೇರಿದ 234 ರೈತರಿಗೆ ಸೈಟ್‌ ಹಂಚಿಕೆ ಮಾಡಲಾಗಿದೆ. ಈ ರೈತರು ಅಭಿವೃದ್ಧಿ ಪಡಿಸಿದ ಭೂಮಿ ನೀಡಬೇಕೆಂದು ಪ್ರಾಧಿಕಾರಕ್ಕೆ ಪ್ರಸ್ತಾವನೆ ಇಟ್ಟಿದ್ದರು. ಇದಕ್ಕೆ ಒಪ್ಪಿಗೆ ನೀಡಲು ಪ್ರಾಧಿಕಾರವು ಹಲವು ಸುತ್ತಿನ ಸಭೆಗಳನ್ನು ನಡೆಸಿ ಅಂತಿಮ ನಿರ್ಧಾರ ಕೈಗೊಂಡಿರುವುದು ರೈತರಲ್ಲಿ ಸಂತಸ ಮೂಡಿಸಿದೆ.

ನಗದು ಪರಿಹಾರ 80 ಲಕ್ಷ ರೂ.

ಬಡಾವಣೆ ನಿರ್ಮಾಣಕ್ಕೆ 4054 ಎಕರೆ ಸ್ವಾಧೀನಪಡಿಸಿಕೊಂಡ ಭೂಮಿಯಲ್ಲಿ ಬಿಡಿಎ 1800 ಎಕರೆ ಜಮೀನಿಗೆ ನಗದು ಪರಿಹಾರ ನೀಡಿದೆ. ಉಳಿದ ಜಮೀನು ಕಾನೂನು ತೊಡಕಿನಲ್ಲಿ ಸಿಲುಕಿದೆ. ನಗದು ಪರಿಹಾರ ಪಡೆದ ರೈತರಿಗೆ ಎಕರೆಗೆ 80 ಲಕ್ಷ ರೂ. ಪರಿಹಾರ ನೀಡಲಾಗಿದೆ. ಜತೆಗೆ ಒಂದು ಸೈಟ್‌ ಕೊಡಬೇಕೆಂದು ಹೇಳಲಾಗಿದ್ದರೂ, ಬಿಡಿಎ ಸೈಟ್‌ ಕೊಡಲು ಸಾಧ್ಯವಿಲ್ಲ ಎಂದು ಹೇಳುತ್ತಿದೆ. ಈ ವಿಷಯ ಇನ್ನು ಇತ್ಯರ್ಥವಾಗಬೇಕು.

ಈ ಹಿಂದೆ ಅರ್ಕಾವತಿ ಬಡಾವಣೆಯಲ್ಲಿ ಜಮೀನು ನೀಡಿದ್ದ ಭೂಮಾಲೀಕರಿಗೆ ಎಕರೆಗೆ ಶೇ.40ರಷ್ಟು ಅಭಿವೃದ್ಧಿ ಪಡಿಸಿದ ಭೂಮಿ ವಿತರಿಸಲಾಗಿದೆ. ಅದರಲ್ಲೂ ಕೆಲ ಪ್ರಕರಣಗಳಲ್ಲಿ ಪರಿಹಾರ ಪೂರ್ಣವಾಗಿ ನೀಡಲು ಸಾಧ್ಯವಾಗಿರಲಿಲ್ಲ. ನಿವೇಶನದಾರರಿಗೆ ನೋಂದಣಿ ಮಾಡಿಕೊಟ್ಟಿದ್ದ ಸೈಟ್‌ಗಳನ್ನು ಮತ್ತೆ ರೈತರಿಗೆ ವಿತರಿಸಲಾಗಿತ್ತು. ಇದರಿಂದ ಸೈಟ್‌ದಾರರಿಗೆ ಬದಲಿ ನಿವೇಶನ ನೀಡುವ ಸನ್ನಿವೇಶ ಉದ್ಭವಿಸಿತ್ತು. ಹಾಲಿ ಕೆಂಪೇಗೌಡ ಬಡಾವಣೆಯಲ್ಲಿ ಇಂತಹ ಸಮಸ್ಯೆ ಉಂಟಾಗದಂತೆ ರೈತರು ಮುಂದಿಟ್ಟ ಪ್ರಸ್ತಾವನೆ ಆಧರಿಸಿ ಪರಿಹಾರ ಪ್ರಕಟಿಸಿರುವುದು ಬಿಡಿಎ ಹಾಗೂ ಭೂಮಾಲೀಕರ ಮಧ್ಯೆ ಎದ್ದಿದ್ದ ಸಮಸ್ಯೆಗೆ ಕೊನೆ ಹಾಡಲಾಗಿದೆ.

ಬಡಾವಣೆಗೆ ಭೂಸ್ವಾಧೀನ ಮಾಡಿಕೊಳ್ಳುವ ನಿಯಮದಂತೆ ಜಮೀನು ವಿಸ್ತೀರ್ಣವಾರು ಗಮನಿಸಿ ಪರಿಹಾರ ನಿಗದಿ ಮಾಡಲಾಗಿದೆ. ಈಗಾಗಲೇ ಹಲವು ರೈತರು ಪರಿಹಾರ ಪಡೆದಿದ್ದು, ಸದ್ಯ 234 ರೈತರಿಗೆ ಪರಿಹಾರ ಅಧಿಕ ಲಾಭ ತಂದುಕೊಡಲಿದೆ. ಬಡಾವಣೆ ನಿರ್ಮಾಣವಾಗಲಿರುವ ಭಾಗದಲ್ಲಿ ಭೂಮಿ ಬೆಲೆ ಎಕರೆಗೆ ಕೋಟಿ ರೂ. ದಾಟಿದ್ದು, 30/40 ಅಡಿ ವಿಸ್ತೀರ್ಣದ ಸೈಟ್‌ ದರ ಸುಮಾರು 25 ಲಕ್ಷ ರೂ. ಬೆಲೆ ಬಾಳುತ್ತದೆ. ಭೂಮಿ ವಿಸ್ತೀರ್ಣ ಆಧರಿಸಿ ಹೆಚ್ಚಿನ ಸೈಟ್‌ ಪಡೆಯುವ ರೈತರಿಗೆ ಪ್ರಾಧಿಕಾರದ ನಿರ್ಧಾರ ಸಮಾಧಾನ ತಂದಂತಿದೆ.

ಆಕ್ಷೇಪಣೆಗೆ ಗಡುವು

ಕೆಂಪೇಗೌಡ ಬಡಾವಣೆಗೆ ಜಮೀನು ಕಳೆದುಕೊಂಡಿರುವ 234 ರೈತರಿಗೆ ನಾನಾ ವಿಸ್ತೀಣದ ಸೈಟ್‌ಗಳನ್ನು ಹಂಚಿಕೆ ಮಾಡಲಾಗಿದೆ. ಇವುಗಳನ್ನು ಆಯಾ ಭೂಮಾಲೀಕರಿಗೆ ಪರಿಹಾರ ರೂಪದಲ್ಲಿ ವಿತರಿಸಿದ್ದು, ವಿವರಗಳನ್ನು ಪ್ರಾಧಿಕಾರವು ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ. ಕೆಂಚನಪುರ, ಕನ್ನಲ್ಲಿ, ಕೊಮ್ಮಘಟ್ಟ, ರಾಮಸಂದ್ರ ಗ್ರಾಮಗಳಿಗೆ ಸೇರಿದ ರೈತರಿಗೆ ಹಂಚಿಕೆ ಮಾಡಿರುವ ಸೈಟ್‌ಗಳ ತಾತ್ಕಾಲಿಕ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಇದಕ್ಕೆ ಆಕ್ಷೇಪಣೆಯನ್ನು ನ.14ರೊಳಗೆ ಸಲ್ಲಿಸಲು ಪ್ರಾಧಿಕಾರವು ಕೋರಿದೆ. ಆಕ್ಷೇಪಣೆ ಬಳಿಕ ಲಭ್ಯ ಸೈಟ್‌ಗಳನ್ನು ಅಂತಿಮ ಪಟ್ಟಿಯಲ್ಲಿ ಪ್ರಕಟಿಸಿ ಹಂಚಿಕೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಲಾಗುತ್ತದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ