ಆ್ಯಪ್ನಗರ

ಸಾಲ ಮರುಪಾವತಿ ಬಾಕಿ: ಪ್ರಯಾಣಿಕರಿದ್ದ ಬಸ್‌ ಹೈಜಾಕ್‌

ಕೇರಳದ ಕಣ್ಣೂರಿಗೆ ಹೊರಟಿದ್ದ 42 ಪ್ರಯಾಣಿಕರಿದ್ದ ಖಾಸಗಿ ಬಸ್‌ನ್ನು ಹೆದ್ದಾರಿಯಲ್ಲಿ ತಡೆದು ಪ್ರಯಾಣಿಕರ ಜತೆ ಹೈಜಾಕ್‌ ಮಾಡಿದ ಘಟನೆ ಶುಕ್ರವಾರ ರಾತ್ರಿ ನಗರದಲ್ಲಿ ನಡೆದಿದ್ದು, ಆತಂಕಕ್ಕೆ ಕಾರಣವಾಯಿತು.

Vijaya Karnataka Web 29 Apr 2018, 11:07 am
ಬೆಂಗಳೂರು: ಕೇರಳದ ಕಣ್ಣೂರಿಗೆ ಹೊರಟಿದ್ದ 42 ಪ್ರಯಾಣಿಕರಿದ್ದ ಖಾಸಗಿ ಬಸ್‌ನ್ನು ಹೆದ್ದಾರಿಯಲ್ಲಿ ತಡೆದು ಪ್ರಯಾಣಿಕರ ಜತೆ ಹೈಜಾಕ್‌ ಮಾಡಿದ ಘಟನೆ ಶುಕ್ರವಾರ ರಾತ್ರಿ ನಗರದಲ್ಲಿ ನಡೆದಿದ್ದು, ಆತಂಕಕ್ಕೆ ಕಾರಣವಾಯಿತು.
Vijaya Karnataka Web ಬಸ್ ಹೈಜಾಕ್‌


ಗೂಂಡಾಗಳಂತೆ ಬಸ್‌ ಅಡ್ಡಗಟ್ಟಿದ ಅಪರಿಚಿತರು, ಬಸ್‌ ಅಪಹರಿಸಿ ಗೋಡೌನ್‌ ತೆಗೆದುಕೊಂಡು ಹೋಗಿದ್ದಾರೆ. ದಿಢೀರ್‌ ನಡೆದ ಘಟನೆಯಿಂದ ದರೋಡೆಯ ಶಂಕೆಯಿಂದ ಕೆಲ ಪ್ರಯಾಣಿಕರು ಕದ್ದುಮುಚ್ಚಿ ಪೊಲೀಸ್‌ ಕಂಟ್ರೋಲ್‌ ರೂಮ್‌ಗೂ ಕರೆ ಮಾಡಿದ ಪರಿಣಾಮ ಪೋಲಿಸರು ಸ್ಥಳಕ್ಕೆ ದೌಡಾಯಿಸಿ ದರೋಡೆಕೋರರನ್ನು ಬಂಧಿಸಿ, ಬಸ್‌ ಪ್ರಯಾಣಕ್ಕೆ ಅನುವು ಮಾಡಿಕೊಟ್ಟಿದ್ದಾರೆ.

ಏನಿದು ಅಪಹರಣ ಪ್ರಕರಣ ?

ರೂಬಿ ಲಾಮಾ ಟ್ರಾವೆಲ್ಸ್‌ಗೆ ಸೇರಿದ ಸೆಮಿ ಸ್ಲೀಪರ್‌ ಬಸ್‌, ಶುಕ್ರವಾರ ರಾತ್ರಿ ಬೆಂಗಳೂರಿನ ಕಲಾಸಿಪಾಳ್ಯದಿಂದ ಕೇರಳದ
ಕಣ್ಣೂರಿಗೆ ಹೊರಟಿತ್ತು. ರಾತ್ರಿ 10.30ಗಂಟೆ ಆಗಿದ್ದ ಕಾರಣ ಬಹಳಷ್ಟು ಪ್ರಯಾಣಿಕರು ನಿದ್ರೆಗೆ ಜಾರುತ್ತಿದ್ದರು. ಮೈಸೂರು ರಸ್ತೆ ಆರ್‌.ವಿ ಕಾಲೇಜು ಬಳಿ ತೆರಳುತ್ತಿದ್ದಾಗ ಮೂರು ವಾಹನಗಳಲ್ಲಿ ಬಂದಿದ್ದ ಆರೇಳು ಜನರು ನಾವು ಪೋಲಿಸರು ಎಂದು ಬಸ್‌ ತಡೆದು ನಿಲ್ಲಿಸಿದರು.

ಆ ಪೈಕಿ ಮೂವರು ಬಸ್‌ನ ಒಳಗೆ ಹತ್ತಿ ಸೀಟಿನಿಂದ ಚಾಲಕನನ್ನ ಕೆಳಗಿಳಿಸಿ ತಾವೇ ಪಟ್ಟಣಗೆರೆಯಲ್ಲಿರುವ ಖಾಲಿ ಜಾಗಕ್ಕೆ ಬಸ್‌ ತಂದು ನಿಲ್ಲಿಸಿದರು. ಆಗ ತಾನೇ ನಿದ್ರೆಗೆ ಜಾರುತ್ತಿದ್ದ ಪ್ರಯಾಣಿಕರು, ಮುಖ್ಯ ರಸ್ತೆ ಬಿಟ್ಟು ಬೇರೆ ಕಡೆ ಹೋಗುತ್ತಿರುವುದನ್ನು ಗಮನಿಸಿ ಕೂಡಲೇ 100ಗೆ ಕರೆ ಮಾಡಿ ಬಸ್‌ ಅಪಹರಣವಾಗಿದೆ ಎಂದು ಮಾಹಿತಿ ನೀಡಿದ್ದಾರೆ. ತಕ್ಷಣ ರಾಜರಾಜೇಶ್ವರಿ ನಗರ ಪೊಲೀಸರು ಕಾರ್ಯಪ್ರವೃತ್ತರಾಗಿ ವಿಳಾಸ ತಿಳಿದುಕೊಂಡು ಬಸ್‌ ನಿಲ್ಲಿಸಿದ್ದ ಪಟ್ಟಣಗೆರೆಯ ಖಾಲಿ ಜಾಗಕ್ಕೆ ತೆರಳಿದ್ದಾರೆ.


ಫೈನಾನ್ಸ್‌ ಹೈಡ್ರಾಮಾ

ಬಸ್‌ನೊಂದಿಗೆ ಬಂದ ವ್ಯಕ್ತಿಗಳನ್ನು ಪೊಲೀಸರು ವಿಚಾರಣೆ ನಡೆಸಿದಾಗ, ತಾವು ಫುಲ್ಲೆರ್ಟಾನ್‌ ಇಂಡಿಯಾ ಹೆಸರಿನ ಫೈನಾನ್ಸ್‌ ಸಂಸ್ಥೆಗೆ ಸೇರಿದವರಾಗಿದ್ದು, ಬಸ್‌ ಮಾಲೀಕ ಸಾಲ ಮರುಪಾವತಿ ಮಾಡದ ಕಾರಣ ಜಪ್ತಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಬಸ್‌ ನಿಲ್ಲಿಸಿದ್ದ ಜಾಗವೂ ಸಂಸ್ಥೆಯು ಜಪ್ತಿ ಮಾಡಿದ ವಾಹನಗಳನ್ನು ನಿಲ್ಲಿಸಲು
ಮಾಡಿದ ಯಾರ್ಡ್‌ ರೀತಿ ಇತ್ತು.

ಜಪ್ತಿಗೆ ತೆರಳಿದ್ದ ಸೆಕ್ಯುರಿಟಿ ಗಾರ್ಡ್‌ ಸೇರಿ ಕೆಲವರ ವಿಚಾರಣೆ ನಡೆಸಿದಾಗ, ‘‘ಹಣಕಾಸು ಸಂಸ್ಥೆಯಿಂದ ನೌಷಾದ್‌ ಎಂಬುವರು ಸಾಲ ಪಡೆದು ಬಸ್‌ ಖರೀದಿಸಿದ್ದಾರೆ. ಆದರೆ, ಪ್ರತಿ ತಿಂಗಳು ಇಎಂಐ ಸರಿಯಾಗಿ ಕಟ್ಟುತ್ತಿಲ್ಲ. ನೋಟಿಸ್‌ ಕೊಟ್ಟರೂ ಹಣ ಪಾವತಿ ಮಾಡದ ಕಾರಣ ಜಪ್ತಿ ಮಾಡಲಾಗಿದೆ,’’ ಎಂದು ತಿಳಿಸಿದ್ದಾರೆ.

ಬಸ್‌ ಅಪಹರಿಸಿದ್ದ ನಾಲ್ವರನ್ನು ವಶಕ್ಕೆ ಪಡೆದ ಪೊಲೀಸರು, ಪ್ರಯಾಣಿಕರಿಗೆ ತೊಂದರೆಯಾಗದಂತೆ ಚಾಲಕನಿಗೆ ಅದೇ ಬಸ್‌ನಲ್ಲಿ ಕಣ್ಣೂರಿಗೆ ಪ್ರಯಾಣ ಬೆಳೆಸಲು ಸೂಚಿಸಿದರು. ಘಟನೆ ನಡೆದು ಒಂದು ತಾಸಿನ ನಂತರ ಪ್ರಯಾಣಿಕರು ನಿಟ್ಟುಸಿರು ಬಿಟ್ಟರು. ಕಾನೂನು ಪಾಲಿಸಬೇಕಿತ್ತು

‘‘ಸಾಲ ಮರುಪಾವತಿ ಮಾಡಿಲ್ಲವೆಂದರೆ ನಿಯಮಾನುಸಾರ ಕ್ರಮ ತೆಗೆದುಕೊಳ್ಳುವುದು ಬಿಟ್ಟು ಪ್ರಯಾಣಿಕರಿದ್ದ ಬಸ್‌ ತಡೆದು ಬೇರೆಡೆ ತೆಗೆದುಕೊಂಡು ಹೋದ ಹಿನ್ನೆಲೆಯಲ್ಲಿ ಫೈನಾನ್ಸ್‌ ಕಂಪನಿಯ ಮೇಲೆ ಅಪಹರಣ ಪ್ರಕರಣದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ,’’ ಎಂದು ಪೊಲೀಸರು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ