ಆ್ಯಪ್ನಗರ

ಕೊರೊನಾ ಸಂಕಷ್ಟ: ಕ್ಯಾಬ್‌ಗಳಿಗೆ ಕುಸಿದ ಡಿಮ್ಯಾಂಡ್‌, ವ್ಯಾಪಾರಿಗಳಾಗಿ ಬದಲಾದ ಕ್ಯಾಬ್‌ ಚಾಲಕರು

ಕೊರೊನಾ ಸಂಕಷ್ಟದ ಹಿನ್ನಲೆಯಲ್ಲಿ ಕ್ಯಾಬ್‌ ಚಾಲಕರು ತಮ್ಮ ವಾಹನದಲ್ಲೇ ಬಟ್ಟೆ, ಮಾಸ್ಕ್‌, ತೆಂಗಿನಕಾಯಿ, ಹಣ್ಣು ಇತ್ಯಾದಿ ಮಾರುತ್ತಾ ಜೀವನ ಸಾಗಿಸಲು ಹೊಸ ದಾರಿ ಕಂಡುಕೊಳ್ಳುತ್ತಿದ್ದಾರೆ.

Vijaya Karnataka Web 5 Jul 2020, 8:55 am
ಬೆಂಗಳೂರು: ಟ್ರಾವೆಲ್ಸ್‌ ಉದ್ಯಮ ನೆಲಕಚ್ಚಿರುವ ಹಿನ್ನೆಲೆಯಲ್ಲಿ ಕ್ಯಾಬ್‌ ಚಾಲಕರು ತಮ್ಮ ವಾಹನದಲ್ಲೇ ಬಟ್ಟೆ, ಮಾಸ್ಕ್‌, ತೆಂಗಿನಕಾಯಿ, ಹಣ್ಣು ಇತ್ಯಾದಿ ಮಾರುವ ಮೂಲಕ ಉಪ ಜೀವನಕ್ಕೆ ದಾರಿ ಕಂಡುಕೊಳ್ಳುತ್ತಿದ್ದಾರೆ.
Vijaya Karnataka Web ಸಾಂದರ್ಭಿಕ ಚಿತ್ರ


ಕಾರಿನ ಹಿಂದಿನ ಡಿಕ್ಕಿ ತೆರೆದು ಅದರಲ್ಲಿ ನಾನಾ ವಸ್ತುಗಳನ್ನು ಮಾರಾಟ ಮಾಡುತ್ತಿರುವುದು ನಗರದ ಅಲ್ಲಲ್ಲಿ ಕಂಡು ಬರುತ್ತಿದೆ. ಈ ರೀತಿಯ ವ್ಯಾಪಾರ ಮಾಡುವವರಲ್ಲಿ ಕ್ಯಾಬ್‌ ಚಾಲಕರ ಸಂಖ್ಯೆಯೂ ದೊಡ್ಡದಿದೆ.

ಲಾಕ್‌ಡೌನ್‌ ತೆರವಾದರೂ ಮಾಲ್‌, ಚಿತ್ರಮಂದಿರ, ಕಚೇರಿಗಳು ಪೂರ್ಣ ಪ್ರಮಾಣದಲ್ಲಿ ಆರಂಭವಾಗಿಲ್ಲ. ರೈಲು, ವಿಮಾನ ಸಂಚಾರ ಕಡಿಮೆ ಇದೆ. ಹೀಗಾಗಿ, ಜನರು ಕ್ಯಾಬ್‌ಗಳಲ್ಲಿ ಓಡಾಡುತ್ತಿಲ್ಲ. ಐಟಿ ಕಂಪನಿಗಳು ಮನೆಯಿಂದಲೇ ಕೆಲಸ ಮಾಡಿಸುತ್ತಿವೆ. ಹೀಗಾಗಿ, ಕ್ಯಾಬ್‌ ಚಾಲಕರಿಗೆ ಕೆಲಸವೇ ಇಲ್ಲದಂತಾಗಿದೆ. ಅಗತ್ಯ ಖರ್ಚು ನಿಭಾಯಿಸಲು ಹಲವು ಚಾಲಕರು ಕಾರಿನಲ್ಲೇ ವ್ಯಾಪಾರ ಆರಂಭಿಸಿದ್ದಾರೆ.

''ನನ್ನ ಸಹೋದರ ಬಟ್ಟೆ ಅಂಗಡಿ ನಡೆಸುತ್ತಿದ್ದ. ವ್ಯಾಪಾರ ನಿಂತು ಹೋಗಿದೆ. ಬಾಡಿಗೆ ಕಟ್ಟಲಾಗದೇ ಅಂಗಡಿ ಖಾಲಿ ಮಾಡಿ ವಸ್ತುಗಳನ್ನು ಮನೆಗೆ ತಂದಿದ್ದ. ಜೀವನ ಸಾಗಲೇಬೇಕು. ಹೀಗಾಗಿ, ಆ ವಸ್ತುಗಳನ್ನು ತೆಗೆದುಕೊಂಡು ಮಾರಾಟ ಮಾಡಲು ಬಂದಿದ್ದೇವೆ. ಹೇಗೂ ನನಗೂ ಕ್ಯಾಬ್‌ ಚಾಲನೆ ಕೆಲಸವಿಲ್ಲ,'' ಎಂದು ಚಾಲಕ ಸರವಣ ಕುಮಾರ್‌ ಹೇಳಿದರು.

''17 ವರ್ಷದ ಪಿಯು ಓದುತ್ತಿರುವ ಮಗನಿಗೆ 80 ಸಾವಿರ ರೂ. ಕಾಲೇಜು ಶುಲ್ಕ ಕಟ್ಟಬೇಕಿದೆ. ಹೀಗಾಗಿ, ದುಡಿಮೆಗೆ ಪರ್ಯಾಯ ದಾರಿ ಹುಡುಕಿಕೊಂಡಿದ್ದೇನೆ,'' ಎಂದು ಅವರು ಹೇಳಿದರು.

ಕ್ಯಾಬ್‌ ಅಗ್ರಿಗೇಟರ್‌ ಕಂಪನಿಗೆ ಕೆಲಸ ಮಾಡುತ್ತಿದ್ದ ಚಾಲಕ ರವಿಕುಮಾರ್‌ ತೆಂಗಿನಕಾಯಿ ಮಾರುತ್ತಿದ್ದಾರೆ. ''ಕ್ಯಾಬ್‌ನಲ್ಲಿ ನಗರದ ವಿವಿಧ ಸ್ಥಳಗಳಿಗೆ ಹೋಗಿ 50 ತೆಂಗಿನಕಾಯಿ ಮಾರಿ ದಿನಕ್ಕೆ 300 ರೂ. ದುಡಿಯುತ್ತೇನೆ. ಲಾಕ್‌ಡೌನ್‌ ಮೊದಲು ಕ್ಯಾಬ್‌ ಚಲಾಯಿಸಿ 2000 ರೂ. ದುಡಿಮೆ ಮಾಡುತ್ತಿದ್ದೆ,'' ಎಂದು ಅವರು ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ