ಬೆಂಗಳೂರು: ಕೆಂಗೇರಿ ಸಮೀಪ ಬಿಡಿಎ ರಚಿಸಿರುವ ನಾಡಪ್ರಭು ಕೆಂಪೇಗೌಡ ಬಡಾವಣೆಯ ಮೊದಲ ಹಂತದಲ್ಲಿ ಐದು ಸಾವಿರ ಮಂದಿಗೆ ಸೈಟ್ ಹಂಚಿಕೆ ಆಗಿದ್ದರೂ, ಫಲಾನುಭವಿಗಳು ಮನೆ ಕಟ್ಟಿಕೊಳ್ಳಲು ಕನಿಷ್ಠ ಎರಡು ವರ್ಷ ಕಾಯಬೇಕಿದೆ.
ಏಕೆಂದರೆ, ಈ ಲೇಔಟ್ ಇನ್ನೂ ಪೂರ್ಣವಾಗಿ ಅಭಿವೃದ್ಧಿಗೊಂಡಿಲ್ಲ. ಈಗಷ್ಟೇ ಒಂದೊಂದಾಗಿ ಮೂಲಸೌಕರ್ಯ ಕಲ್ಪಿಸುತ್ತಿದ್ದು, ನಾನಾ ಕಾಮಗಾರಿ ಪ್ರಗತಿಯಲ್ಲಿದೆ. ಸಿವಿಲ್ ಕಾಮಗಾರಿಗಾಗಿ ಹತ್ತು ಪ್ಯಾಕೇಜ್ಗಳಲ್ಲಿ ಟೆಂಡರ್ ನೀಡಿ ಎರಡು ವರ್ಷ ಕಳೆಯುತ್ತಾ ಬಂದಿದ್ದರೂ, ಈವರೆಗೆ ಅರ್ಧದಷ್ಟು ಪ್ರಗತಿ ಸಾಧಿಸಿಲ್ಲ. ಗುತ್ತಿಗೆ ವಹಿಸಿಕೊಂಡಿರುವ ಕಂಪನಿಗಳು ಕಾಲಮಿತಿಯಲ್ಲಿ ಕೆಲಸ ನಿರ್ವಹಿಸದಿರುವುದು ಪ್ರಾಧಿಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದೆ.
ಬಡಾವಣೆ ನಿರ್ಮಿಸುವ ಘೋಷಣೆ ಮಾಡಿದ್ದ ವೇಳೆ ಪ್ರಾಧಿಕಾರ ಹಲವು ಕನಸು ಕಂಡಿತ್ತು. ಈವರೆಗಿನ ಲೇಔಟ್ಗಳ ಪೈಕಿ ಕೆಂಪೇಗೌಡ ಬಡಾವಣೆಯನ್ನು ಮಾದರಿಯಾಗಿ ಅಭಿವೃದ್ಧಿ ಪಡಿಸಲು ಭರವಸೆ ನೀಡಲಾಗಿತ್ತು. ಕೈಗೆಟಕುವ ಬೆಲೆಯಲ್ಲಿ ಸೈಟ್ ಹಂಚಿಕೆ, ಕಾಲಮಿತಿಯಲ್ಲಿ ಲೇಔಟ್ ನಿರ್ಮಾಣದ ಪೂರ್ಣ, ಪರಿಸರ ಸ್ನೇಹಿ ವಾತಾವರಣ, ಉಪನಗರ ಮಾದರಿ ಸೌಲಭ್ಯಗಳನ್ನು ಕಲ್ಪಿಸುವುದಾಗಿ ಹೇಳಿದ್ದ ಪ್ರಾಧಿಕಾರ ಈಗ ತನ್ನ ಮಾತನ್ನು ಉಳಿಸಿಕೊಳ್ಳಲು ಪರದಾಡುತ್ತಿದೆ.
ಸಾಮಾನ್ಯವಾಗಿ ಸೈಟ್ ಹಂಚಿಕೆ ಮಾಡಿದರೆ ಆ ಬಡಾವಣೆಯಲ್ಲಿ ಮನೆ ಕಟ್ಟಿಕೊಳ್ಳಲು ಅಗತ್ಯ ಸೌಲಭ್ಯ ಇದೆ ಎಂಬುದು ಅರ್ಥ. ಬಿಡಿಎ ತನ್ನ ಹಳೆಯ ಚಾಳಿಯನ್ನೇ ಇಲ್ಲೂ ಮುಂದುವರಿಸಿದೆ. ಜನರಿಂದ ಹಣ ಸಂಗ್ರಹಿಸಿ ನಂತರ ಬಡಾವಣೆ ನಿರ್ಮಿಸಲಾಗುತ್ತಿದೆ ಎಂಬ ದೂರುಗಳು ಕೇಳಿಬಂದಿವೆ.
ಇತ್ತೀಚಿನ ನೋಟು ಅಮಾನ್ಯ ವಿದ್ಯಮಾನದ ಬಳಿಕ ಸೈಟ್ ಹಂಚಿಕೆ ಪಡೆದವರು ಬಾಕಿ ಮೊತ್ತವನ್ನು ಪಾವತಿಸಲಾಗದೆ ಹಂಚಿಕೆಯಾದ ಸೈಟ್ನ್ನು ವಾಪಸ್ ಮಾಡಿದ್ದಾರೆ. ಹಣ ಪಾವತಿಗೆ ಗಡುವು ವಿಸ್ತರಣೆ ಮಾಡದಿರುವುದು ಸೈಟ್ ಬೇಡಿಕೆ ಕುಸಿಯಲಾರಂಭಿಸಿದೆ. ಕೆಲ ನಾಗರಿಕರು ಬಡಾವಣೆ ಪ್ರದೇಶಕ್ಕೆ ಭೇಟಿ ನೀಡಿ ವಸ್ತುಸ್ಥಿತಿ ಅರಿತು ಅಧಿಕಾರಿಗಳನ್ನು ಪ್ರಶ್ನಿಸಲಾರಂಭಿಸಿದ್ದಾರೆ. ಮೂಲಸೌಕರ್ಯ ಇಲ್ಲದ ಲೇಔಟ್ನಲ್ಲಿ ಮನೆ ಕಟ್ಟಲು ಸಾಧ್ಯವಿಲ್ಲದಿರುವಾಗ ಹಣ ಪಾವತಿಗೆ ಗಡುವು ವಿಸ್ತರಿಸಿ ಎಂಬ ಹೊಸ ಬೇಡಿಕೆಯನ್ನು ನಾಗರಿಕರು ಪ್ರಾಧಿಕಾರದ ಮುಂದಿಟ್ಟಿದ್ದಾರೆ.
ಬಡಾವಣೆಯ ವಸ್ತುಸ್ಥಿತಿ ಏನು?
ಕೆಂಪೇಗೌಡ ಬಡಾವಣೆ ಒಟ್ಟು 4043.27 ಎಕರೆಯಲ್ಲಿ ರೂಪುಗೊಳ್ಳಲಿದ್ದು, 40 ಸಾವಿರ ಸೈಟ್ಗಳನ್ನು ರಚಿಸುವ ಗುರಿ ಹೊಂದಲಾಗಿದೆ. ಈ ಪೈಕಿ ಹೆಚ್ಚಿನ ಪ್ರಮಾಣದ ಸೈಟ್ಗಳನ್ನು ನಾಗರಿಕರಿಗೆ ಹಂಚಿಕೆ ಮಾಡುವ ವಾಗ್ದಾನ ನೀಡಲಾಗಿದೆ. ಇದನ್ನು ಸಾಕಾರಗೊಳಿಸಲು ಹನ್ನೆರಡು ಗ್ರಾಮಗಳಲ್ಲಿ ಭೂಸ್ವಾಧೀನ ಮಾಡಿಕೊಳ್ಳಲಾದ ಜಮೀನನ್ನು ಬಡಾವಣೆಯನ್ನಾಗಿ ರೂಪಾಂತರಿಸುವ ಕೆಲಸಕ್ಕೆ ಹೆಚ್ಚಿನ ಸಮಯ ವ್ಯಯವಾಗಿದೆ. ಭೂಮಾಲೀಕರಿಗೆ ಪರಿಹಾರ ನೀಡುವ ವಿಚಾರದಿಂದಾಗಿ ಮತ್ತಷ್ಟು ಸಮಯ ವ್ಯರ್ಥವಾಗಿದೆ. ಬಡಾವಣೆ ವ್ಯಾಪ್ತಿಗೆ ಬರುವ ಹನ್ನೆರಡು ಗ್ರಾಮಗಳಿಗೆ ಸೇರಿದ ಜಮೀನನ್ನು ಪ್ರಾಧಿಕಾರದ ಭೂಸ್ವಾಧೀನ ವಿಭಾಗ ಪರಿಶೀಲನೆ ನಡೆಸಿ ಶೇ.55ರಷ್ಟನ್ನು ಕಾಮಗಾರಿ ವಿಭಾಗಕ್ಕೆ ಹಸ್ತಾಂತರಿಸಿದೆ. ಅಂದರೆ 2226 ಎಕರೆ ಪ್ರದೇಶದಲ್ಲಿ ಸಿವಿಲ್ ಕಾಮಗಾರಿ ಕೈಗೊಳ್ಳಲು ಅವಕಾಶ ಮಾಡಿಕೊಟ್ಟಿದ್ದರೂ, ರಸ್ತೆ, ಚರಂಡಿ, ಕಲ್ವರ್ಟ್ ಹಾಗೂ ಮಳೆನೀರು ಚರಂಡಿ ನಿರ್ಮಾಣದ ಕೆಲಸ ಪೂರ್ಣಗೊಂಡಿಲ್ಲ.
ಬಡಾವಣೆಯನ್ನು ಒಟ್ಟು ಒಂಬತ್ತು ಬ್ಲಾಕ್ಗಳನ್ನಾಗಿ ವಿಂಗಡಿಸಿದ್ದು, ಪ್ರತಿಯೊಂದರಲ್ಲೂ ನಾಲ್ಕೈದು ಹಂತಗಳಾಗಿ ವಿಂಗಡಿಸಲಾಗಿದೆ. ಸೈಟ್ ವಿಸ್ತೀರ್ಣಕ್ಕೆ ಅನುಗುಣವಾಗಿ 30-60 ಅಡಿ ಅಗಲದ ರಸ್ತೆಗಳನ್ನು ನಿರ್ಮಿಸಲಾಗಿದೆ. ಸೈಟ್ಗಳಿಗೆ ಸಂಖ್ಯೆಗಳನ್ನು ನಮೂದಿಸಿದ್ದು, ಗುರುತು ಕಲ್ಲುಗಳನ್ನು ನೆಡಲಾಗಿದೆ. ಸದ್ಯ ಚಲ್ಲಘಟ್ಟ, ಕೊಮ್ಮಘಟ್ಟ, ಕೃಷ್ಣಸಾಗರ, ಸೂಲೀಕೆರೆ, ರಾಮಸಂದ್ರ, ಕೆಂಚನಪುರ ಹಾಗೂ ಕನ್ನಲ್ಲಿ ಗ್ರಾಮಗಳಿಗೆ ಸೇರಿದ ಜಮೀನಿನಲ್ಲಿ ಸೈಟ್ಗಳನ್ನು ರಚಿಸಲಾಗಿದೆ. ಇವು ಮೊದಲ ಹಂತದಲ್ಲಿ ಹಂಚಿಕೆಯಾದ ಫಲಾನುಭವಿಗಳಿಗೆ ವಿತರಿಸಲು ಲಭ್ಯವಿದೆ.
ಎರಡನೇ ಹಂತದಲ್ಲಿ ಮತ್ತೆ ಐದು ಸಾವಿರ ಸೈಟ್ ಹಂಚಿಕೆಗೆ ಬೇಕಿರುವ ಸೈಟ್ಗಳನ್ನು ರಚಿಸುವ ಕೆಲಸ ಇನ್ನು 3-4 ತಿಂಗಳಲ್ಲಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ. ಆದರೆ, ಸಿವಿಲ್ ಕಾಮಗಾರಿ ಬಳಿಕ ಕುಡಿಯುವ ನೀರು, ಒಳಚರಂಡಿ ಹಾಗೂ ವಿದ್ಯುತ್ ಪೂರೈಕೆ ಕೆಲಸ ಸವಾಲಿನದಾಗಿದೆ.
ಕೆರೆ, ಬಫರ್ ವಲಯದಲ್ಲಿ ಸೈಟ್ ಹಂಚಿಕೆಯಿಲ್ಲ
ಬಡಾವಣೆಯಲ್ಲಿ ಹನ್ನೆರಡು ಜಲತಾಣಗಳಿದ್ದು, ಈ ಪೈಕಿ ಆರು ಕೆರೆಗಳಿವೆ. ಈ ಎಲ್ಲದರ ಸುತ್ತಲಿನ ಜಾಗವನ್ನು ಹಾಗೆಯೇ ಉಳಿಸಿಕೊಂಡು ಹಸಿರು ಹೆಚ್ಚಿಸಲಾಗುತ್ತದೆ. ಕೆರೆ ಬದಿ ಹಾಗೂ ಬಫರ್ ವಲಯದ ಮಿತಿಯೊಳಗೆ ಯಾವುದೇ ಸೈಟ್ ರಚನೆ ಮಾಡುವ ಮುನ್ನೆಚ್ಚರಿಕೆ ಕೈಗೊಳ್ಳಲಾಗಿದೆ. ಈ ಹಿಂದಿನ ಲೇಔಟ್ಗಳಲ್ಲಿ ಕೆಲವೆಡೆ ಕೆರೆ ಜಾಗದಲ್ಲಿ ನಿವೇಶನ ಹಂಚಿಕೆ ವಿವಾದಕ್ಕೆ ತಿರುಗಿರುವ ಕಾರಣ ಕೆರೆಗಳ ಗಡಿಯಿಂದ ದೂರಕ್ಕೆ ಸೈಟ್ ರಚಿಸಲಾಗುತ್ತಿದೆ. ಬಫರ್ ವಲಯದ ವ್ಯಾಪ್ತಿಯಲ್ಲಿ ನಾಗರಿಕ ಸೌಲಭ್ಯ ಜಾರಿಗೆ ಒಲವು ವ್ಯಕ್ತವಾಗಿದ್ದರೂ, ಎನ್ಜಿಟಿ ಆದೇಶದಂತೆ ನಿಯಮಗಳನ್ನು ಅಳವಡಿಸಿಕೊಳ್ಳುವ ಇಂಗಿತ ಪ್ರಾಧಿಕಾರದಿಂದ ವ್ಯಕ್ತವಾಗಿದೆ.
ನಾನಾ ಸೌಲಭ್ಯಕ್ಕೆ ಜಮೀನು ಮೀಸಲು
ಕೆಂಪೇಗೌಡ ಬಡಾವಣೆಯಲ್ಲಿ ನಾನಾ ರೀತಿಯ ನಾಗರಿಕ ಸೌಲಭ್ಯಗಳನ್ನು ಒದಗಿಸಲು ಅಗತ್ಯ ಜಮೀನನ್ನು ಪ್ರಾಧಿಕಾರ ಮೀಸಲಿಟ್ಟಿದೆ. ಭವಿಷ್ಯದಲ್ಲಿ ಫ್ಲ್ಯಾಟ್ಸ್ ಸಮುಚ್ಚಯಗಳನ್ನು ನಿರ್ಮಿಸಲು ಒಂಬತ್ತೂ ಬ್ಲಾಕ್ಗಳಲ್ಲಿ ಒಟ್ಟು 450 ಎಕರೆಯನ್ನು ನಿಗದಿ ಮಾಡಲಾಗಿದೆ. ನಿಯಮದ ಪ್ರಕಾರ ಸಿಎ ಸೈಟ್ ಹಾಗೂ ಉದ್ಯಾನಕ್ಕೆ ಜಮೀನು ಕಾಯ್ದಿರಿಸಲಾಗಿದೆ. ಹತ್ತು ತ್ಯಾಜ್ಯ ನೀರು ಘಟಕ(ಎಸ್ಟಿಪಿ) ಸ್ಥಾಪನೆಗೆ ದೊಡ್ಡ ಸಿಎ ನಿವೇಶನಗಳನ್ನು ಗುರುತಿಸಲಾಗಿದೆ. ಇದರ ಜತೆಗೆ ಶಾಲೆ, ಆಸ್ಪತ್ರೆ, ಬಸ್ ನಿಲ್ದಾಣ, ಅಂಚೆ ಕಚೇರಿ, ಬೆಂಗಳೂರು ಒನ್ ಕೇಂದ್ರ ಸಹಿತ, ಮಾರುಕಟ್ಟೆಗಾಗಿ ಪ್ರತ್ಯೇಕ ಜಮೀನನ್ನು ಗುರುತಿಸುವ ಕೆಲಸ ಪ್ರಗತಿಯಲ್ಲಿದೆ.
ಬಡಾವಣೆಯ ವಿಶೇಷತೆ
* ಬಿಡಿಎ ನಿರ್ಮಿಸಿರುವ ಇದುವರೆಗಿನ ಅತಿ ದೊಡ್ಡ ಲೇಔಟ್ ನಿರ್ಮಾಣ
* ಬಡಾವಣೆ ಮಧ್ಯೆ 10.75 ಕಿ.ಮೀ. ಉದ್ದದ ಸಂಪರ್ಕ ರಸ್ತೆ ನಿರ್ಮಾಣ
* ಗೃಹ, ಗೃಹೇತರ ಬಳಕೆಗೆ ಪ್ರತ್ಯೇಕ ನೀರಿನ ಕೊಳವೆ ಮಾರ್ಗ
* ಮಳೆನೀರು ಚರಂಡಿ ಉದ್ದಕ್ಕೂ ತಡೆಗೋಡೆ ನಿರ್ಮಾಣ
* ಮಳೆಕೊಯ್ಲು ಕಡ್ಡಾಯ, ಇಂಗು ಗುಡಿಗಳ ನಿರ್ಮಾಣ
* ನೆಲದಾಳದಲ್ಲಿ ವಿದ್ಯುತ್ ಕೇಬಲ್ ಅಳವಡಿಕೆ
* 6 ಕೆರೆ ಹಾಗೂ ಜಲತಾಣಗಳ ಅಭಿವೃದ್ಧಿ
* ರಸ್ತೆ ಬದಿ 60 ಸಾವಿರ ಸಸಿಗಳ ನಡುವಿಕೆಗೆ ಕ್ರಮ