ಆ್ಯಪ್ನಗರ

ಕೊರೊನಾ ವೈರಸ್ ಹರಡೋ ಭೀತಿ, ಆತಂಕದಲ್ಲಿ ವೃಷಭಾವತಿ ನದಿ ನೀರು ಬಳಸೋ ರೈತರು

ಬೆಂಗಳೂರು ನಗರ ಪ್ರದೇಶದಿಂದ ಒಳಚರಂಡಿ ಮೂಲಕ ಮನುಷ್ಯ ತ್ಯಾಜ್ಯಗಳು ವೃಷಭಾವತಿ ನದಿಯನ್ನು ಸೇರುತ್ತಿರುವುದರಿಂದ ಕೊರೊನಾ ಸೋಂಕು ಹರಡುವ ಸಾಧ್ಯತೆ ಇದೆಯಾ ಎಂಬ ಕುರಿತಾಗಿ ರಾಮನಗರ ಪರಿಸರದ ರೈತರು ಆತಂಕಕ್ಕೆ ಒಳಗಾಗಿದ್ದಾರೆ.

Vijaya Karnataka Web 16 Apr 2020, 6:59 pm
ಬೆಂಗಳೂರು: ಬೆಂಗಳೂರು ನಗರ ಪ್ರದೇಶದಿಂದ ಮನುಷ್ಯ ತ್ಯಾಜ್ಯಗಳು ಒಳಚರಂಡಿ ಮೂಲಕ ವೃಷಭಾವತಿ ನದಿ ಸೇರುತ್ತಿದ್ದು ಕೊರೊನಾ ಸೋಂಕು ಹರಡುವ ಸಾಧ್ಯತೆಗಳಿಂದ ರಾಮನಗರ ಜಿಲ್ಲೆಯ ಅಕ್ಕಪಕ್ಕದ ಗ್ರಾಮಗಳ ರೈತರು ಆತಂಕಕ್ಕೆ ಒಳಗಾಗಿದ್ದಾರೆ.
Vijaya Karnataka Web corona


ಬೆಂಗಳೂರು ನಗರದಲ್ಲಿ ಕೊರೊನಾ ವ್ಯಾಪಕವಾಗಿ ಹರಡುತ್ತಿದ್ದು ಹಾಟ್‌ಸ್ಪಾಟ್‌ ಪ್ರದೇಶಗಳಾದ ಬಾಪೂಜಿನಗರ ಹಾಗೂ ಪಾದರಾಯನಪುರ ಪ್ರದೇಶಗಳನ್ನು ಸೀಲ್‌ಡೌನ್ ಮಾಡಲಾಗಿದೆ. ಆದರೆ ಈ ಪ್ರದೇಶಗಳ ಒಳಚರಂಡಿಗಳು ವೃಷಭಾವತಿ ನದಿ ಸೇರುತ್ತವೆ. ನದಿ ನೀರನ್ನು ರಾಮನಗರ ಜಿಲ್ಲೆಯ ರೈತರು ಕೃಷಿಗಾಗಿ ಬಳಸುತ್ತಾರೆ. ಮಲ ತ್ಯಾಜ್ಯಗಳಿಂದ ಕೊರೊನಾ ಸೋಂಕು ಹರಡುವ ಸಾಧ್ಯತೆ ಇರುವುದರಿಂದ ರೈತರು ಆತಂಕಕ್ಕೆ ಒಳಗಾಗಿದ್ದಾರೆ.

ರಾಜ್ಯದಲ್ಲಿ ಮುಂದುವರಿದ ಕೊರೊನಾ ಅಟ್ಟಹಾಸ, ಚಿಕ್ಕಬಳ್ಳಾಪುರದ ವ್ಯಕ್ತಿ ಬಲಿ, 11ಕ್ಕೇರಿದ ಸಾವಿನ ಸಂಖ್ಯೆ

ಬೆಂಗಳೂರು ನಗರದಿಂದ ಶೇ 30 ರಷ್ಟು ಮನುಷ್ಯ ತ್ಯಾಜ್ಯಗಳು ಒಳಚರಂಡಿಯ ಮೂಲಕ ವೃಷಭಾವತಿ ನದಿ ಸೇರುತ್ತದೆ. ಪೀಣ್ಯ, ಯಶವಂತಪುರ, ವಿಜಯನಗರ, ಚಾಮರಾಜಪೇಟೆ, ಕೆ.ಆರ್ ಮಾರ್ಕೆಟ್‌, ಕೆಂಗೇರಿ ಉಪನಗರ, ರಾಜಾಜಿನಗರ ಭಾಗದ ಕೈಗಾರಿಕಾ ತ್ಯಾಜ್ಯ ಹಾಗೂ ಮನುಷ್ಯ ತ್ಯಾಜ್ಯಗಳು ಇವುಗಳಲ್ಲಿ ಸೇರಿವೆ.


“ಕೊರೊನಾ ಲಾಕ್‌ಡೌನ್‌ನಿಂದಾಗಿ ಕೈಗಾರಿಕ ತ್ಯಾಜ್ಯ ನದಿ ನೀರು ಸೇರುವುದು ಕಡಿಮೆಯಾಗಿದೆ. ಇದರಿಂದ ನದಿ ನೀರು ಸ್ವಚ್ಛವಾಗಿದೆ. ರೈತರು ಇಷ್ಟೊಂದು ಸ್ವಚ್ಛ ನದಿ ನೀರನ್ನು ನೋಡಿ ಬಹಳ ವರ್ಷಗಳಾಗಿವೆ. ಆದರೆ ನಗರದ ಒಳಚರಂಡಿಗಳು ವೃಷಭಾವತಿ ಸೇರುತ್ತಿರುವುದರಿಂದ ಕೊರೊನಾ ಸೋಂಕು ಹರಡುವ ಭೀತಿ ರೈತರಲ್ಲಿದೆ” ಎನ್ನುತ್ತಾರೆ ಚೌಕಹಳ್ಳಿ ರಾಮನಗರ ಜಿಲ್ಲೆಯ ರೈತ ನಟರಾಜ್‌ ಪಿ.

ಕೊರೊನಾ ಲಾಕ್ ಡೌನ್: ಪರಿಸರ ಮಾಲಿನ್ಯಕ್ಕೆ ಬಿತ್ತು ಬ್ರೇಕ್ !

"ಕೊರೊನಾ ವೈರಸ್‌ ನೀರಿನ ಮೂಲಕ ಜನರಿಗೆ ಹರಡುತ್ತದೆ ಎಂಬುವುದು ವೈಜ್ಞಾನಿಕವಾಗಿ ದೃಢಪಟ್ಟಿಲ್ಲ. ಆದರೆ ಈ ಕುರಿತಾಗಿ ಅಧ್ಯಯನ ನಡೆಸಿ ಜನರ ಆತಂಕವನ್ನು ದೂರಮಾಡುವುದು ಸರ್ಕಾರದ ಇಲಾಖೆಗಳ ಕರ್ತವ್ಯ. ಮಾಲಿನ್ಯ ನಿಯಂತ್ರಣ ಮಂಡಳಿ, ಬಿಬಿಎಂಪಿ ಹಾಗೂ ಬಿಡಬ್ಲ್ಯೂಎಸ್ಎಸ್ಬಿ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು. ನೀರನ್ನು ಪರಿಶೀಲನೆ ನಡೆಸಿ ಜನರ ಗೊಂದಲ ದೂರಮಾಡಬೇಕು" ಎನ್ನುತ್ತಾರೆ ಬೆಂಗಳೂರು ಎನ್ವಿರಾನ್ಮೆಂಟ್ ಟ್ರಸ್ಟ್ (BET) ಸದಸ್ಯೆ ರಜನಿ.

ನೀರಿನಿಂದ ವೈರಾಣುಗಳು ಹರಡಿ ಮನುಷ್ಯ ದೇಹ ಸೇರಿಕೊಳ್ಳುವ ಸಾಧ್ಯತೆಗಳು ಕುರಿತಾಗಿ ವೈಜ್ಞಾನಿಕ ಸಂಶೋಧನೆಗಳು ನಡೆಯುತ್ತಿದೆ. ಆದರೆ ಅಧಿಕೃತವಾಗಿ ಸಾಧ್ಯ ಎಂಬುವುದು ದೃಢಪಟ್ಟಿಲ್ಲ. ಆದರೂ ನಗರದ ಒಳಚರಂಡಿ ಸೇರುವ ನದಿ ನೀರನ್ನು ರೈತರು ಕೃಷಿ ಕಾರ್ಯಗಳಿಗೆ ಬಳಸುತ್ತಿದ್ದು, ಸೋಂಕು ಹರಡುವ ಸಾಧ್ಯತೆಗಳ ಕುರಿತಾಗಿ ಆತಂಕಕ್ಕೆ ಒಳಗಾಗಿದ್ದಾರೆ. ಈ ನಿಟ್ಟಿನಲ್ಲಿ ಸಂಬಂಧಪಟ್ಟ ಇಲಾಖೆ ರೈತರ ಆತಂಕವನ್ನು ನಿವಾರಿಸಬೇಕಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ