ಆ್ಯಪ್ನಗರ

ಚೆನ್ನೈನಂತೆ ಜಲ ಬಿಕ್ಕಟ್ಟಿನ ಹಾದಿಯಲ್ಲಿ ಕೆರೆಗಳ ನಗರ ಬೆಂಗಳೂರು

ತಮಿಳುನಾಡಿನ ರಾಜಧಾನಿ ಚೆನ್ನೈನಲ್ಲಿ 'ಜಲ ತುರ್ತುಪರಿಸ್ಥಿತಿ' ನಿರ್ಮಾಣವಾಗಿದೆ. ಕಳೆದ 30 ವರ್ಷಗಳಲ್ಲೇ ಭೀಕರ ನೀರಿನ ಅಭಾವದಿಂದ ಚೆನ್ನೈ ನಗರ ಅಕ್ಷರಶಃ 'ಬತ್ತಿಹೋಗಿದೆ'. ಬೆಂಗಳೂರಿಗೆ ಈ ಸ್ಥಿತಿ ಸನ್ನಿಹಿತವಾಗುತ್ತಿದೆ.

Vijaya Karnataka Web 30 Jun 2019, 1:56 pm
ದಕ್ಷಿಣ ಭಾರತದ ಮಹಾ ನಗರಗಳಲ್ಲೊಂದಾದ ಚೆನ್ನೈ ನಗರ ಜಲ ಬಿಕ್ಕಟ್ಟಿನಲ್ಲಿದೆ. ಅದರ ನಾಲ್ಕು ಪ್ರಮುಖ ಜಲಾಶಯಗಳು ಸಂಪೂರ್ಣವಾಗಿ ಒಣಗಿ ಹೋಗಿವೆ. ನೀರಿನ ತೀವ್ರ ಕೊರತೆಗೆ ಸಿಲುಕಿರುವ ನಗರ ತುರ್ತು ಪರಿಹಾರಗಳಿಗೆ ನೋಡುತ್ತಿದೆ. ಸರಕಾರಿ ಟ್ಯಾಂಕ್‌ಗಳಿಂದ ಸಿಗುವ ನೀರಿಗೆ ನಿವಾಸಿಗಳು ಗಂಟೆಗಟ್ಟಲೆ ಸರದಿಯಲ್ಲಿ ನಿಲ್ಲುವಂತಾಗಿದೆ. ಹೋಟೆಲ್‌ ಮತ್ತು ರೆಸ್ಟೊರಂಟ್‌ಗಳು ತಾತ್ಕಾಲಿಕವಾಗಿ ಮುಚ್ಚಿವೆ. ನಗರದ ಮೆಟ್ರೋದಲ್ಲಿ ಎಸಿಯನ್ನು ಬಂದ್‌ ಮಾಡಲಾಗಿದೆ. ನೀರಿನ ಪರ್ಯಾಯ ಮೂಲಗಳಿಗೆ ಹುಡುಕಲು ಅಧಿಕಾರಿಗಳು ಪ್ರಯತ್ನಿಸುತ್ತಿದ್ದಾರೆ. ಜನ ಸಮುದಾಯ ಮಳೆಗಾಗಿ ಪ್ರಾರ್ಥಿಸುತ್ತಿದೆ.
Vijaya Karnataka Web Water Crisis


ಚೆನ್ನೈಗೆ ಬಹಳ ಹತ್ತಿರದಲ್ಲಿರುವ ಬೆಂಗಳೂರಿಗೆ ಚೆನ್ನೈ ಸ್ಥಿತಿ ಬರಲು ಹೆಚ್ಚು ದಿನ ಬೇಕಿಲ್ಲ ಎನ್ನುತ್ತಿದ್ದಾರೆ ಪರಿಸರ ತಜ್ಞರು.

ಸಿಲಿಕಾನ್ ಸಿಟಿ ಕಲ್ಪನೆಗೂ ಮೀರಿ ಬೆಳೆಯುತ್ತಿದೆ. ಹಳ್ಳಿಗಳೆಲ್ಲ ಬರಿದಾಗಿ ದೊಡ್ಡದಾಗುತ್ತಿದೆ. ಜನಸಂಖ್ಯೆ ಏರುತ್ತಿದೆ. ನೀರಿನ ಅಸಮರ್ಪಕ ನಿರ್ವಹಣೆಯಿಂದಾಗಿ ನೀರಿನ ಮೂಲಗಳು ಬರಿದಾಗುತ್ತಿವೆ. ಅಂತರ್ಜಲ ಮಟ್ಟ ಪಾತಾಳಕ್ಕೆ ಇಳಿಯುತ್ತಿದೆ.

ಒಂದು ಕಾಲಕ್ಕೆ ಬೆಂಗಳೂರು ಕೆರೆಗಳ ನಗರವಾಗಿತ್ತು. ಒಂದು ಕಾಲದಲ್ಲಿ 300ಕ್ಕೂ ಅಧಿಕ ಕೆರೆಗಳಿದ್ದವು. ಹಾಗಾಗಿ ನಗರ ಎಂದಿಗೂ ಬರದಂಥ ಪರಿಸ್ಥಿತಿ ಎದುರಿಸಲೇ ಇಲ್ಲ. ನಮ್ಮ ಹಿರಿಯರು ನಗರದ ನೀರಿನ ಅವಶ್ಯಕತೆಗೆ ಹೆಚ್ಚೇ ಎನ್ನುವಂತೆ ಸಾಕಷ್ಟು ಕೆರೆಗಳನ್ನು ನಿರ್ಮಿಸಿದ್ದರು. ಆದರೆ ಇದ್ದದ್ದನ್ನು ಉಳಿಸಿಕೊಂಡು ಹೋಗಲು ಸಹ ನಮ್ಮಿಂದಾಗಲಿಲ್ಲ. ಸಾಕಷ್ಟು ಕೆರೆಗಳನ್ನು ಮುಚ್ಚಿ ಅಪಾರ್ಟ್‌ಮೆಂಟ್‌ಗಳನ್ನು ನಿರ್ಮಿಸಲಾಯಿತು. ಮತ್ತೆ ಕೆಲವು ಕೆರೆಗಳು ನಗರದ ಕೊಳಚೆಯ ಸಂಗ್ರಹಾರಗಳಾದವು. ನಮಗೇ ಕುತ್ತು ಎಂಬುದನ್ನು ಪರಿಗಣಿಸದೇ ಇದ್ದ ಕೆರೆಗಳನ್ನು ನಾಶಗೈದು ಮತ್ತೀಗ ಶರಾವತಿ, ನೇತ್ರಾವತಿ ಎಂದು ದೂರದ ಮಲೆನಾಡಿನ, ಕರಾವಳಿಯ ನದಿಮೂಲಗಳ ಕಡೆಗೆ ಮುಖ ಮಾಡಲಾಗುತ್ತಿದೆ. ಇದನ್ನು ಮೂರ್ಖತನವೆನ್ನುವುದೋ, ಬೇಜವಾಬ್ದಾರಿ ಎನ್ನುವುದೋ ಅಥವಾ ವಿಪರ್ಯಾಸ ಎನ್ನುವುದೋ?

ನೀರಿನ ಸಂರಕ್ಷಣೆ ಬಗ್ಗೆ ಗಮನ ಹರಿಸದಿದ್ದರೆ 2030ರ ವೇಳೆಗೆ ಭಾರತದ 40% ಜನರಿಗೆ ಕುಡಿಯುವ ನೀರೇ ಸಿಗುವುದಿಲ್ಲ, ಎಂದು ನೀತಿ ಆಯೋಗ ಎಚ್ಚರಿಸಿದೆ. ಕುಡಿಯುವ ನೀರೇ ಸಿಗದ 11 ನಗರಗಳಲ್ಲಿ ಸಿಲಿಕಾನ್ ಸಿಟಿ ಕೂಡ ಇರಲಿದೆ ಎಂದು ಹಲವು ವರದಿಗಳು ಹೇಳುತ್ತವೆ. ಹೀಗಾಗಿ ಈಗಲು ಕೂಡ ಎಚ್ಚೆತ್ತುಕೊಳ್ಳದಿದ್ದರೆ ನಗರಕ್ಕೆ ಉಳಿಗಾಲವಿಲ್ಲ ಎನ್ನುವುದಂತೂ ಖಚಿತ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ