ಆ್ಯಪ್ನಗರ

ಮೆಟ್ರೋ ಕಾಮಗಾರಿ ವೇಳೆ ಅವಘಡ: ಕಾರ್ಮಿಕರ ಹಿತ ಕಾಪಾಡುವಂತೆ ಸೌಮ್ಯ ರೆಡ್ಡಿಯಿಂದ ಬಿಎಸ್‌ವೈಗೆ ಪತ್ರ

ಮೆಟ್ರೋ ಕಾಮಗಾರಿ ವೇಳೆ ಅವಘಡದಲ್ಲಿ ಮೃತಪಟ್ಟ ಕಾರ್ಮಿಕರ ಕುಟುಂಬಗಳಿಗೆ ಸೂಕ್ತ ಪರಿಹಾರ ಕೊಡಬೇಕು ಹಾಗೂ ಇಂತಹ ಅವಘಡಗಳು ನಡೆಯದಂತೆ ಎಚ್ಚರಿಕೆ ವಹಿಸುವಂತೆ ಸೂಚಿಸಬೇಕು ಎಂದು ಆಗ್ರಹಿಸಿ ಸಿಎಂ ಬಿಎಸ್‌ವೈಗೆ ಶಾಸಕಿ ಸೌಮ್ಯ ರೆಡ್ಡಿ ಪತ್ರ ಬರೆದಿದ್ದಾರೆ.

Vijaya Karnataka Web 20 Dec 2020, 1:52 pm
ಬೆಂಗಳೂರು: ನಗರದ ಹಲವು ಕಡೆಗಳಲ್ಲಿ ಮೆಟ್ರೋ ಕಾಮಗಾರಿ ನಡೆಯುವ ಸ್ಥಳದಲ್ಲಿ ಅವಘಡಗಳು ನಡೆಯುತ್ತಿದ್ದು ಅಮಾಯಕ ಕಾರ್ಮಿಕರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಈ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಕಾಂಗ್ರೆಸ್ ಶಾಸಕಿ ಸೌಮ್ಯ ರೆಡ್ಡಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರಿಗೆ ಪತ್ರವನ್ನು ಬರೆಯುವ ಮೂಲಕ ಆಗ್ರಹಿಸಿದ್ದಾರೆ.
Vijaya Karnataka Web soumya reddy


ಡಿಸೆಂಬರ್ 17 ರಂದು ಜಯನಗರ 9 ನೇ ಬ್ಲಾಕ್‌ನಲ್ಲಿ ಮೆಟ್ರೋ ಕಾಮಗಾರಿ ನಡೆಯುತ್ತಿದ್ದ ವೇಳೆ 21 ವರ್ಷದ ಸಂತೋಷ್ ಎಂಬ ಕಾರ್ಮಿಕ ಕೇಬಲ್ ಪೈಪ್‌ ತಲೆಗೆ ಬಿದ್ದ ಪರಿಣಾಮ ಮೃತಪಟ್ಟಿದ್ದಾನೆ. ಮೆಟ್ರೋ ಕಾಮಗಾರಿಯ ವೇಳೆ ಸೂಕ್ತ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳದ ಪರಿಣಾಮ ಇಂತಹ ಘಟನೆಗಳು ನಡೆಯುತ್ತಿರುವುದು ಇದೇ ಮೊದಲ ಬಾರಿಯಲ್ಲ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.


ಈ ಹಿಂದೆ ಎಸ್‌ ಕಾಂತ ಸೇನಾಪತಿ ಎಂಬುವವರು ಎಲೆಕ್ಟ್ರಾನಿಕ್‌ ಸಿಟಿಯಲ್ಲಿ ಮೃತಪಟ್ಟಿದ್ದರು. ಜೊತೆಗೆ ಮಾರ್ಚ್‌ 1 ನೇ ತಾರೀಕಿನಂದು ಕೆಂಗೇರಿಯ ಪಟ್ಟಣಗೆರೆ ಮೆಟ್ರೋ ಸ್ಟೇಷನ್‌ನಲ್ಲಿ ಕೂಡಾ ಇದೇ ರೀತಿಯ ಘಟನೆ ನಡೆದಿತ್ತು ಎಂದು ಅವರು ಆರೋಪಿಸಿದ್ದಾರೆ.

ಮೆಟ್ರೋ ಕಾಮಗಾರಿಗಾಗಿ ಹಗಲಿರುಳು ಶ್ರಮಿಸುತ್ತಿರುವ ಪ್ರತಿ ಕಾರ್ಮಿಕರ ಜೀವ ಅತ್ಯಮೂಲ್ಯವಾಗಿದ್ದು ಮಡದಿ ಮಕ್ಕಳು ಹಾಗು ತಂದೆ ತಾಯಿಯನ್ನು ಪೋಷಿಸುವ ಜವಾಬ್ದಾರಿ ಅವರ ಮೇಲಿದೆ. ಪದೇ ಪದೇ ದುರಂತ ಆಗುತ್ತಿದ್ದು ಬಿಎಂಆರ್‌ಸಿಎಲ್‌ ಬೇಜವಾಬ್ದಾರಿಗೆ ಹಿಡಿದ ಕೈಗನ್ನಡಿಯಾಗಿದೆ ಎಂದು ಸೌಮ್ಯ ರೆಡ್ಡಿ ಕಿಡಿಕಾರಿದ್ದಾರೆ.

ಈ ನಿಟ್ಟಿನಲ್ಲಿ ಅವಘಡದಿಂದ ಮೃತ ಪಟ್ಟ ಕಾರ್ಮಿಕರ ಕುಟುಂಬಕ್ಕೆ ಸೂಕ್ತ ಪರಿಹಾರ ಹಾಗೂ ಇಂತಹ ಅವಘಡಗಳು ಪುನರಾವರ್ತಿತವಾಗದಂತೆ ಸುರಕ್ಷತಾ ಕ್ರಮ ಕೈಗೊಳ್ಳುವುದು ಆದ್ಯ ಕರ್ತವ್ಯ ಎಂದು ಪತ್ರದಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ