ಆ್ಯಪ್ನಗರ

ಕೆರೆ ಅಂಗಳದ ಪ್ರದೇಶದಲ್ಲಿ ಕಟ್ಟಡ ಕಟ್ಟಿದ್ದೇ ಕುಸಿಯಲು ಕಾರಣ

ಮಾರುತಿ ಸೇವಾ ನಗರದ ಥಾಮಸ್‌ ನಗರ 2ನೇ ಕ್ರಾಸ್‌ನಲ್ಲಿ ನಿರ್ಮಾಣ ಹಂತದ ಕಟ್ಟಡದ ಮೂಲ ವಿನ್ಯಾಸದಲ್ಲೇ ಲೋಪವಿತ್ತು. ಅಲ್ಲದೆ, ಕಟ್ಟಡ ನಿರ್ಮಿಸಿದ ಜಾಗ ಕೆರೆ ಅಂಗಳದಲ್ಲಿರುವುದು ಅನಾಹುತಕ್ಕೆ ಪ್ರಮುಖ ಕಾರಣವಾಗಿದೆ ಎಂದು ಬಿಬಿಎಂಪಿ ಪೂರ್ವ ವಲಯದ ಜಂಟಿ ಆಯುಕ್ತ ಜಿ.ಎಂ.ರವೀಂದ್ರ ತಿಳಿಸಿದ್ದಾರೆ.

Vijaya Karnataka 11 Jul 2019, 5:00 am
* ಕಟ್ಟಡದ ವಿನ್ಯಾಸದಲ್ಲೇ ಲೋಪ ಇತ್ತು ಎಂದ ಬಿಬಿಎಂಪಿ ಜಂಟಿ ಆಯುಕ್ತರು
Vijaya Karnataka Web construction in wet area main cause for building collapse
ಕೆರೆ ಅಂಗಳದ ಪ್ರದೇಶದಲ್ಲಿ ಕಟ್ಟಡ ಕಟ್ಟಿದ್ದೇ ಕುಸಿಯಲು ಕಾರಣ


* ಮೂರು ಅಂತಸ್ತುಗಳಿಗೆ ಅನುಮತಿ ಪಡೆದು 5 ಮಹಡಿ ನಿರ್ಮಾಣ

ವಿಕ ಸುದ್ದಿಲೋಕ ಬೆಂಗಳೂರು

ಮಾರುತಿ ಸೇವಾ ನಗರದ ಥಾಮಸ್‌ ನಗರ 2ನೇ ಕ್ರಾಸ್‌ನಲ್ಲಿ ನಿರ್ಮಾಣ ಹಂತದ ಕಟ್ಟಡದ ಮೂಲ ವಿನ್ಯಾಸದಲ್ಲೇ ಲೋಪವಿತ್ತು. ಅಲ್ಲದೆ, ಕಟ್ಟಡ ನಿರ್ಮಿಸಿದ ಜಾಗ ಕೆರೆ ಅಂಗಳದಲ್ಲಿರುವುದು ಅನಾಹುತಕ್ಕೆ ಪ್ರಮುಖ ಕಾರಣವಾಗಿದೆ ಎಂದು ಬಿಬಿಎಂಪಿ ಪೂರ್ವ ವಲಯದ ಜಂಟಿ ಆಯುಕ್ತ ಜಿ.ಎಂ.ರವೀಂದ್ರ ತಿಳಿಸಿದ್ದಾರೆ.

''ನೆಲಮಹಡಿ ಸೇರಿ 4 ಅಂತಸ್ತಿನ ನಿರ್ಮಾಣ ಹಂತದ ಕಟ್ಟಡ ಮತ್ತು ಅದರ ಪಕ್ಕದಲ್ಲಿ 4 ವರ್ಷದ ಹಿಂದೆ ನಿರ್ಮಿಸಿದ್ದ ಕಟ್ಟಡ ಕುಸಿತಕ್ಕೊಳಗಾಗಿದೆ.. ಕಟ್ಟಡಗಳು ನಿರ್ಮಾಣಗೊಂಡಿರುವ ಜಾಗ ಕೆರೆ ಅಂಗಳದ ಜೌಗು ಪ್ರದೇಶವಾಗಿದೆ. ಆದರೆ, ಕೇವಲ 3 ಅಡಿ ಪಾಯ ತೆಗೆದು ಕಟ್ಟಡ ನಿರ್ಮಿಸಲಾಗಿದೆ. ಪರಿಣಾಮ, ಮಣ್ಣು ಸಡಿಲುಗೊಂಡು ಕಟ್ಟಡಗಳು ಕುಸಿದು ಬಿದ್ದಿವೆ,'' ಎಂದು ಹೇಳಿದರು.

''ನೆಲಮಹಡಿ ಸೇರಿ 3 ಅಂತಸ್ತುಗಳ ಕಟ್ಟಡಕ್ಕೆ ನಕ್ಷೆ ಮಂಜೂರಾತಿ ಪಡೆಯಲಾಗಿತ್ತು. ಆದರೆ, ಕಟ್ಟಡ ಮಾಲೀಕರು ನಿಯಮ ಉಲ್ಲಂಘಿಸಿ, 4 ಮಹಡಿಗಳನ್ನು ನಿರ್ಮಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ ಒಂದು ತಿಂಗಳ ಹಿಂದೆಯೇ ನೋಟಿಸ್‌ ನೀಡಲಾಗಿತ್ತು. ಸದ್ಯದಲ್ಲೇ ನಿಯಮ ಉಲ್ಲಂಘಿಸಿ ನಿರ್ಮಿಸಿದ್ದ ಕಟ್ಟಡದ ಭಾಗವನ್ನು ತೆರವುಗೊಳಿಸಲು ಆದೇಶಿಸಬೇಕಿತ್ತು. ಅಷ್ಟರೊಳಗೆ ಅನಾಹುತ ಸಂಭವಿಸಿದೆ,'' ಎಂದು ಮಾಹಿತಿ ನೀಡಿದರು.

ಮೃತರ ಕುಟುಂಬಕ್ಕೆ 5 ಲಕ್ಷ ರೂ.:

ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಉಪ ಮುಖ್ಯಮಂತ್ರಿ ಡಾ. ಜಿ.ಪರಮೇಶ್ವರ್‌ ಮತ್ತು ಸಚಿವ ಕೆ.ಜೆ.ಜಾರ್ಜ್‌ ಅವರು ಮೃತರ ಕುಟುಂಬಗಳಿಗೆ ಪಾಲಿಕೆ ವತಿಯಿಂದ ತಲಾ 5 ಲಕ್ಷ ರೂ. ಪರಿಹಾರ ನೀಡಲಾಗುವುದು ಎಂದು ಹೇಳಿದರು.

ಬಾವಿ ಇದ್ದ ಜಾಗ ಸರಿಯಾಗಿ ಮುಚ್ಚಿರಲಿಲ್ಲ :

ಕಟ್ಟಡ ನಿರ್ಮಾಣಗೊಂಡಿರುವ ಜಾಗದಲ್ಲಿ ಬಾವಿ ಇತ್ತು. ನಾಲ್ಕು ಅಡಿ ಅಗಲ ಮತ್ತು ಭಾರಿ ಅಳ ಇತ್ತು. ಕಟ್ಟಡ ನಿರ್ಮಿಸುವ ಮೊದಲು ಬಾವಿಯನ್ನು ಕಟ್ಟಡದ ತ್ಯಾಜ್ಯ, ಮಣ್ಣು ಸೇರಿದಂತೆ ಇನ್ನಿತರ ವಸ್ತುಗಳನ್ನು ಬಳಸಿ ಮುಚ್ಚಲಾಗಿದೆ. ಆದರೆ, ಅದನ್ನು ಸರಿಯಾದ ರೀತಿಯಲ್ಲಿ ಮುಚ್ಚಿರಲಿಲ್ಲ. ಮಣ್ಣು ಗಟ್ಟಿಯಾಗಿ ಒಳಗೆ ಸೇರಿರಲಿಲ್ಲ. ಅದೇ ಜಾಗದ ಒಂದು ಮೂಲೆಯಲ್ಲಿ ಸುಮಾರು ಮೂರು ಅಡಿಯಷ್ಟು ಆಳಕ್ಕೆ ಪಾಯ ತೆಗೆದು ಕಟ್ಟಡ ನಿರ್ಮಿಸಲಾಗಿದೆ. ಬಾವಿ ಇದ್ದ ಜಾಗದಲ್ಲೇ ಕಟ್ಟಡದ ಒಂದು ಮೂಲೆ ಹೆಚ್ಚು ಕುಸಿದಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.


ಮಾಲೀಕರು, ಎಂಜಿನಿಯರ್‌ ವಿರುದ್ಧ

ಕ್ರಿಮಿನಲ್‌ ಕೇಸ್‌ ದಾಖಲು


ಘಟನೆಗೆ ಸಂಬಂಧಿಸಿದಂತೆ ನಿರ್ಮಾಣ ಹಂತದ ಕಟ್ಟಡದ ಮಾಲೀಕರಾದ ಮೊಹಮ್ಮದ್‌ ಶೋಯಬ್‌ ಮತ್ತು ಮೊಹಮ್ಮದ್‌ ಇಮ್ತಿಯಾಜ್‌, ಬಿಲ್ಡರ್‌ ಸೈಯ್ಯದ್‌ ಮತ್ತು ವಾಸ್ತುಶಿಲ್ಪಿ ಶ್ರೀಧರ್‌ ಹಾಗೂ ಪಕ್ಕದ ಆದಿ ಸಾಯಿ ಅಂಬಲ್‌ ಕಟ್ಟಡ ಮಾಲೀಕರಾದ ಸಿ.ಎ ರುದ್ರಾಣಿ ಮತ್ತು ವಾಸ್ತುಶಿಲ್ಪಿ ಕೆ.ರವಿಕುಮಾರ್‌ ಸೇರಿ ಇನ್ನಿತರರ ವಿರುದ್ಧ ಪುಲಕೇಶಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಐಪಿಸಿ ಕಲಂ 304 ಉದ್ದೇಶಪೂರ್ವಕವಲ್ಲದ ಕೊಲೆ ಆರೋಪದಲ್ಲಿ ಕೇಸ್‌ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.


ತನಿಖೆಗೆ ಸೂಚನೆ

''ನಿಯಮ ಉಲ್ಲಂಘಿಸಿದರೂ ಕಾಮಗಾರಿ ಸ್ಥಗಿತಕ್ಕೆ ಕ್ರಮ ಕೈಗೊಳ್ಳದೆ, ಅಧಿಧಿಕಾರಿಗಳು ನಿರ್ಲಕ್ಷ್ಯ ವಹಿಸಿರುವುದು ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಸಮಗ್ರ ತನಿಖೆ ನಡೆಸಿ ವರದಿ ನೀಡುವಂತೆ ಜಂಟಿ ಆಯುಕ್ತರಿಗೆ ಸೂಚಿಸಲಾಗಿದೆ. ನಕ್ಷೆ ಮಂಜೂರಾತಿ ಉಲ್ಲಂಘಿಸಿ ನಿರ್ಮಿಸುವ ಕಟ್ಟಡದ ಭಾಗಗಳನ್ನು ನೋಟಿಸ್‌ ನೀಡಿದ ಮರುದಿನವೇ ತೆರವುಗೊಳಿಸುವ ಸಂಬಂಧ ಮುಂದಿನ ಕೌನ್ಸಿಲ್‌ ಸಭೆಯಲ್ಲಿ ಚರ್ಚಿಸಿ, ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುವುದು,'' ಎಂದು ಪಾಲಿಕೆ ಮೇಯರ್‌ ಗಂಗಾಂಬಿಕೆ ಮಲ್ಲಿಕಾರ್ಜುನ್‌ ತಿಳಿಸಿದ್ದಾರೆ.


ಕಟ್ಟಡ ಮಾಲೀಕರು, ನಿರ್ಮಾಣ ಹೊಣೆ ಹೊತ್ತಿದ್ದ ಎಂಜಿನಿಯರ್‌ ಮತ್ತು ಮೇಸ್ತ್ರಿ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುತ್ತದೆ. ಬಿಬಿಎಂಪಿಯಿಂದ ಲೋಪವಾಗಿದ್ದರೆ ಆ ಕುರಿತಾಗಿಯು ಪರಿಶೀಲನೆ ನಡೆಸಲಾಗುವುದು.

- ಮುರುಗನ್‌, ಹೆಚ್ಚುವರಿ ಪೊಲೀಸ್‌ ಆಯುಕ್ತ ಪೂರ್ವ ವಿಭಾಗ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ