ಆ್ಯಪ್ನಗರ

ನಗರದಲ್ಲಿ ನಿಯಂತ್ರಣಕ್ಕೆ ಬಾರದ ಸೋಂಕು: ಒಂದೇ ದಿನ 94 ಮಂದಿಯಲ್ಲಿ ಕೋವಿಡ್‌-19

ನಗರದಲ್ಲಿ ಕೊರೊನಾ ಆರ್ಭಟ ಮುಂದುವರಿದಿದೆ. ಶನಿವಾರ ಕೂಡ 94 ಮಮಧಿ ಹೊಸ ಪ್ರಕರಣಗಳು ಪತ್ತೆಯಾಗಿವೆ. ಇದರೊಂದಿಗೆ ನಗರದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1076ಕ್ಕೆ ಏರಿಕೆಯಾಗಿದೆ.

Vijaya Karnataka Web 21 Jun 2020, 6:24 am
ಬೆಂಗಳೂರು: ನಗರದಲ್ಲಿ ಕೊರೊನಾ ಸೋಂಕಿನ ಅಟ್ಟಹಾಸ ಮುಂದುವರಿದಿದ್ದು, ಶನಿವಾರವೂ 94 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. ಮೂವರು ಸೋಂಕಿಗೆ ಬಲಿಯಾಗಿದ್ದಾರೆ.
Vijaya Karnataka Web ಕೊರೊನಾ ಸೋಂಕು


ನಗರದಲ್ಲಿ ಅಂಕೆ ಮೀರಿ ವ್ಯಾಪಕವಾಗಿ ಹರಡುತ್ತಿರುವ ಕ್ರೂರಿ ಕೊರೊನಾದಿಂದ ಜನರು ಅಕ್ಷರಶಃ ಬೆಚ್ಚಿ ಬಿದ್ದಿದ್ದಾರೆ. ಸಿಲಿಕಾನ್‌ ಸಿಟಿಯ ಎಲ್ಲ ಪ್ರದೇಶಗಳನ್ನೂ ಸೋಂಕು ಆವರಿಸುತ್ತಿದ್ದು, ಕಂಟೈನ್ಮೆಂಟ್‌ ವಲಯಗಳ ಸಂಖ್ಯೆ 279ಕ್ಕೆ ಏರಿಕೆಯಾಗಿದೆ. ಸೋಂಕಿತರ ಸಂಖ್ಯೆ ಸಾವಿರದ ಗಡಿ ದಾಟಿದ್ದು, ಈವರೆಗೆ 61 ಮಂದಿ ಮೃತಪಟ್ಟಿದ್ದಾರೆ.

ಕೊರೊನಾ ಸೋಂಕಿಗೆ ಬಲಿಯಾಗುತ್ತಿರುವವರ ಸಂಖ್ಯೆ ಹೆಚ್ಚುತ್ತಲೇ ಇದ್ದು, ಶನಿವಾರವೂ ಮೂವರು ಮೃತಪಟ್ಟಿದ್ದಾರೆ. 39 ವರ್ಷ, 46 ವರ್ಷ ಮತ್ತು 56 ವರ್ಷದ ಪುರುಷರೊಬ್ಬರು ಸಾವಿಗೀಡಾಗಿದ್ದಾರೆ. ಪ್ರಯಾಣ ಇತಿಹಾಸ ಮತ್ತು ಸೋಂಕಿತರೊಂದಿಗೆ ಸಂಪರ್ಕವೇ ಇಲ್ಲದವರಲ್ಲೂ ಸೋಂಕು ಕಾಣಿಸಿಕೊಂಡಿದೆ. ಇವರಿಗೆ ಸೋಂಕು ತಗಲಿದ್ದು ಹೇಗೆ ಎಂಬುದೇ ನಿಗೂಢವಾಗಿದೆ. ಹೀಗಾಗಿ, ಸೋಂಕಿನ ಮೂಲ ಪತ್ತೆಯಾಗದಂತಾಗಿದೆ.

ಬೆಂಗಳೂರು: ರಾಜಧಾನಿಯಲ್ಲಿ ಮತ್ತೆ ಕೊರೊನಾಬ್ಬರ, ಸಾವಿರದ ಗಡಿ ದಾಟಿದ ಸೋಂಕಿತರ ಸಂಖ್ಯೆ

ದಮನ್‌ನಿಂದ ಬಂದಿದ್ದ 18 ಮಂದಿಗೆ ಸೋಂಕು

ದಮನ್‌ನಿಂದ ನಗರಕ್ಕೆ ಬಂದಿದ್ದ 18 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. ಇವರೆಲ್ಲರೂ ಸಾಂಸ್ಥಿಕ ಕ್ವಾರಂಟೈನ್‌ನಲ್ಲಿದ್ದರು. ಇದಲ್ಲದೇ ಪ್ರತಿನಿತ್ಯದಂತೆ ತೀವ್ರ ಉಸಿರಾಟದ ಸಮಸ್ಯೆ ಮತ್ತು ವಿಷಮಶೀತ ಮಾದರಿಯ ಜ್ವರದಿಂದ ಬಳಲುತ್ತಿದ್ದ ಹಲವರಲ್ಲಿ ಸೋಂಕು ಇರುವುದು ದೃಢಪಟ್ಟಿದೆ.

ಬಿಎಂಟಿಸಿಯ 6 ಮಂದಿಗೆ ಸೋಂಕು
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಇಂದಿರಾನಗರ ಡಿಪೊ ಮತ್ತು ಅಂಜನಾಪುರ ಡಿಪೊದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ 6 ಮಂದಿ ಸಿಬ್ಬಂದಿಗೆ ಸೋಂಕು ಇರುವುದು ದೃಢಪಟ್ಟಿದೆ.

ಅಂಜನಾಪುರ ಡಿಪೊದಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ಚಾಲಕರಿಗೆ ಸೋಂಕು ತಗಲಿದೆ. ಅನಾರೋಗ್ಯದ ಹಿನ್ನೆಲೆಯಲ್ಲಿ ಕೆಲ ದಿನಗಳಿಂದ ಸೇವೆಗೆ ಹಾಜರಾಗಿರಲಿಲ್ಲ. ಇವರೊಂದಿಗೆ ಸಂಪರ್ಕದಲ್ಲಿದ್ದ ಮೂವರು ಸಿಬ್ಬಂದಿಯನ್ನು ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ.

ಅಂಜನಾಪುರದಿಂದ ಕೆಂಪೇಗೌಡ ಬಸ್‌ ನಿಲ್ದಾಣ ಮತ್ತು ರಾವುಗೋಡ್ಲುನಿಂದ ಕೆಂಪೇಗೌಡ ಬಸ್‌ ನಿಲ್ದಾಣ ಮಾರ್ಗದಲ್ಲಿ ಚಾಲಕರಾಗಿ ಕಾರ್ಯ ನಿರ್ವಹಿಸುತ್ತಿದ್ದ ಇಬ್ಬರಲ್ಲಿಸೋಂಕು ಕಾಣಿಸಿಕೊಂಡಿದೆ. ಒಬ್ಬರು ಭೈರಮಂಗಲ ಮತ್ತು ಮತ್ತೊಬ್ಬರು ಹಾರೋಹಳ್ಳಿ ಸಮೀಪದ ಹಳ್ಳಿಯೊಂದರಲ್ಲಿ ವಾಸವಿದ್ದರು.

ಇಂದಿರಾನಗರ ಡಿಪೊದಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ಸಂಚಾರ ನಿಯಂತ್ರಕರು ಮತ್ತು ಇಬ್ಬರು ಸಹಾಯಕ ಸಂಚಾರ ನಿರೀಕ್ಷಕರಿಗೆ ಸೋಂಕು ತಗಲಿದೆ. ಇದೇ ಡಿಪೊದಲ್ಲಿಕಾರ್ಯ ನಿರ್ವಹಿಸುತ್ತಿದ್ದ ಸಂಚಾರ ನಿಯಂತ್ರಕರಿಗೆ ಜೂ. 13ರಂದು ಸೋಂಕು ಪತ್ತೆಯಾಗಿತ್ತು. ಇವರೊಂದಿಗೆ ಸಂಪರ್ಕದಲ್ಲಿದ್ದ 4 ಮಂದಿಗೆ ಸೋಂಕು ದೃಢಪಟ್ಟಿದೆ.

ಇಡೀ ಕಗ್ಗಲೀಪುರ ಗ್ರಾಮವೇ ಸೀಲ್‌ಡೌನ್‌
ಕನಕಪುರ ಮುಖ್ಯರಸ್ತೆಯ ಕಗ್ಗಲೀಪುರ ಗ್ರಾಮ ಮತ್ತು ಪಕ್ಕದ ರಮೇಶ್‌ನಗರದಲ್ಲಿ ಒಟ್ಟು ಮೂರು ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ. ಹೀಗಾಗಿ, ಇಡೀ ಗ್ರಾಮವನ್ನೇ ಸೀಲ್‌ಡೌನ್‌ ಮಾಡಲಾಗಿದೆ. ಔಷಧಿ ಮತ್ತು ಹಾಲಿನ ಮಳಿಗೆ ಹೊರತುಪಡಿಸಿ, ಉಳಿದೆಲ್ಲಾಅಂಗಡಿ-ಮುಂಗಟ್ಟುಗಳನ್ನು ಮುಚ್ಚಿಸಲಾಗಿದೆ.

ಬೆಸ್ತರ ಬೀದಿಯ ನಿವಾಸಿಯೊಬ್ಬರು ಕಗ್ಗಲೀಪುರ ವೃತ್ತದಲ್ಲಿ ಹಣ್ಣು, ತರಕಾರಿ ಅಂಗಡಿ ಇಟ್ಟುಕೊಂಡಿದ್ದರು. ಮಧುಮೇಹ, ರಕ್ತದೊತ್ತಡದಿಂದ ಬಳಲುತ್ತಿದ್ದ ಅವರಿಗೆ ತೀವ್ರ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿತ್ತು. ಹಾಗಾಗಿ, ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಕೋವಿಡ್‌ ಪತ್ತೆ ಪರೀಕ್ಷೆ ನಡೆಸಿದಾಗ ವರದಿಯು ಪಾಸಿಟಿವ್‌ ಬಂದಿದೆ. ಇವರು ಹಲವರಿಗೆ ಹಣ್ಣು, ತರಕಾರಿ ಮಾರಾಟ ಮಾಡಿದ್ದಾರೆ. ಅಲ್ಲದೇ ಹಲವರೊಂದಿಗೆ ಸಂಪರ್ಕದಲ್ಲಿದ್ದರು. ಸದ್ಯ ಪ್ರಾಥಮಿಕ ಸಂಪರ್ಕದಲ್ಲಿದ್ದ 10 ಮಂದಿಯನ್ನು ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ