ಅಪಾರ್ಟ್ಮೆಂಟ್ ಸೀಲ್ಡೌನ್: ಬೆಳ್ಳಂದೂರು ವಾರ್ಡ್ನ ಗ್ರೀನ್ಗ್ರೆನ್ ಲೇಔಟ್ನಲ್ಲಿನ ಶೋಭಾ ಕಾರ್ನೇಶಿಯಾ ಅಪಾರ್ಟ್ಮೆಂಟ್ನಲ್ಲಿ ವಾಸವಿರುವ ಯುವಕನಿಗೆ ಸೋಂಕು ತಗಲಿದೆ. ಈತ ಹೊಸದಿಲ್ಲಿಯಿಂದ ನಗರಕ್ಕೆ ಬಂದು ಹೋಟೆಲ್ವೊಂದರಲ್ಲಿ ಕ್ವಾರಂಟೈನ್ಗೆ ಒಳಪಟ್ಟಿದ್ದ. 7 ದಿನಗಳ ಕ್ವಾರಂಟೈನ್ ಅವಧಿ ಮುಗಿದ ಹಿನ್ನೆಲೆಯಲ್ಲಿ ಮನೆಗೆ ಮರಳಿದ್ದ. ಮನೆಗೆ ಕಳುಹಿಸುವ ಒಂದು ದಿನ ಹಿಂದಷ್ಟೇ ಗಂಟಲು ದ್ರವ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಸದ್ಯ ವರದಿ ಬಂದಿದ್ದು, ಸೋಂಕು ತಗಲಿರುವುದು ದೃಢಪಟ್ಟಿದೆ. ಆತನೊಂದಿಗೆ ಸಂಪರ್ಕದಲ್ಲಿದ್ದ ತಾಯಿ ಮತ್ತು ಸಹೋದರನನ್ನು ಪ್ರತ್ಯೇಕ ವಾಸಕ್ಕೆ ಒಳಪಡಿಸಲಾಗಿದೆ.
ಟ್ರಾವೆಲ್ ಹಿಸ್ಟರಿ ಇಲ್ಲದೆ ಸೋಂಕು!
ಸಿಂಗಸಂದ್ರ ವಾರ್ಡ್ನ ಎಇಸಿಎಸ್ ಲೇಔಟ್ನಲ್ಲಿ ಇಬ್ಬರಲ್ಲಿ ಸೋಂಕು ಕಾಣಿಸಿಕೊಂಡಿದೆ. ಹೊಸದಿಲ್ಲಿಯಿಂದ ಕುಟುಂಬ ಸದಸ್ಯರೊಂದಿಗೆ ಆಗಮಿಸಿದ್ದ ವ್ಯಕ್ತಿಯಲ್ಲಿ ಸೋಂಕಿರುವುದು ದೃಢಪಟ್ಟಿದೆ. ಇವರೆಲ್ಲರೂ ಕ್ವಾರಂಟೈನ್ ಅವಧಿ ಮುಗಿಸಿ ಮನೆಗೆ ಮರಳಿದ್ದರು. ಆದರೆ, ಆರೋಗ್ಯ ಇಲಾಖೆ ವೈದ್ಯರು ಮನೆಗೆ ಮರಳುವ ಹಿಂದಿನ ದಿನ ಗಂಟಲು ದ್ರವ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಿದ್ದರು. ವರದಿ ಬರುವ ಮುನ್ನವೇ ಮನೆಗೆ ಕಳುಹಿಸಲಾಗಿತ್ತು. ಇದೀಗ ಒಬ್ಬರಲ್ಲಿ ಪಾಸಿಟಿವ್ ಬಂದಿದ್ದು, ಉಳಿದವರ ವರದಿಯು ನೆಗೆಟಿವ್ ಆಗಿದೆ. ಸೋಂಕಿತ ವ್ಯಕ್ತಿ ವಾಸವಿದ್ದ ಸ್ಕೈಲೇನ್ ಅಪಾರ್ಟ್ಮೆಂಟ್ ಅನ್ನು ಸೀಲ್ಡೌನ್ ಮಾಡಲಾಗಿದೆ. ಇದೇ ಲೇಔಟ್ನ ಕೊಹಿನೂರು ರೆಸಿಡೆನ್ಸಿ ಅಪಾಟ್ ರ್ಮೆಂಟ್ನಲ್ಲಿ ವಾಸವಿದ್ದ 37 ವರ್ಷದ ಮಹಿಳೆಗೆ ಸೋಂಕು ತಗುಲಿದೆ. ಇವರಿಗೆ ಯಾವುದೇ ಪ್ರಯಾಣ ಇತಿಹಾಸವಿಲ್ಲ. ಪತಿ ಮತ್ತು ಪತ್ನಿ ಇಬ್ಬರೇ ಮನೆಯಲ್ಲಿದ್ದರು. ಈ ಅಪಾರ್ಟ್ಮೆಂಟ್ ಸೀಲ್ಡೌನ್ ಮಾಡಲಾಗಿದೆ. ಕೊರೊನಾ ಸೋಂಕು ನಗರದಲ್ಲಿ ಕಾಣಿಸಿಕೊಂಡ ಆರಂಭದಲ್ಲಿ ಸಿಂಗಸಂದ್ರ ವಾರ್ಡ್ ಕಂಟೈನ್ಮೆಂಟ್ ವಲಯವೆಂದು ಗುರುತಿಸಲ್ಪಟ್ಟಿತ್ತು. ಆನಂತರ ಯಾವುದೇ ಹೊಸ ಪ್ರಕರಣಗಳು ಪತ್ತೆಯಾಗದ ಹಿನ್ನೆಲೆಯಲ್ಲಿ ಕಂಟೈನ್ಮೆಂಟ್ ತೆರವುಗೊಳಿಸಲಾಗಿತ್ತು. ಇದೀಗ ಹೊಸದಾಗಿ ಎರಡು ಪ್ರಕರಣಗಳು ಪತ್ತೆಯಾಗಿದ್ದು, ಮತ್ತೆ ಕಂಟೈನ್ಮೆಂಟ್ ವಲಯ ಪಟ್ಟಿಗೆ ಸೇರಿದೆ. ವೈಟ್ಫೀಲ್ಡ್, ಚಿಕ್ಕಬಾಣಾವಾರ ಸಮೀಪದ ಶಿವಕೋಟೆ ಬಳಿಯ ಮುದ್ದಯ್ಯನಪಾಳ್ಯ, ಕನಕಪುರ ರಸ್ತೆಯ ರಾಯಲ್ಪಾಮ್ ಲೇಔಟ್ನಲ್ಲಿ ಒಬ್ಬರಿಗೆ ಸೋಂಕು ತಗುಲಿದೆ.
12 ಆರೋಪಿಗಳ ಎಫ್ಐಆರ್ ತಡೆಗೆ ಹೈಕೋರ್ಟ್ ನಕಾರ
ನಗರದ ಪಾದರಾಯನಪುರ ದಲ್ಲಿ ಕೊರೊನಾ ನಿಯಂತ್ರಣ ಕರ್ತವ್ಯದಲ್ಲಿದ್ದ ವೈದ್ಯರು, ಆರೋಗ್ಯ ಕಾರ್ಯಕರ್ತರು ಹಾಗೂ ಪೊಲೀಸರ ಮೇಲೆ ಹಲ್ಲೆ ನಡೆಸಿದ ಪ್ರಕರಣದ 126 ಆರೋಪಿಗಳ ವಿರುದ್ಧ ಜೆಜೆ ನಗರ ಠಾಣಾ ಪೊಲೀಸರು ದಾಖಲಿಸಿರುವ ಪ್ರತ್ಯೇಕ ನಾಲ್ಕು ಎಫ್ಆರ್ಐಗಳಿಗೆ ತಡೆಯಾಜ್ಞೆ ನೀಡಲು ಹೈಕೋರ್ಟ್ ಸ್ಪಷ್ಟವಾಗಿ ನಿರಾಕರಿಸಿದೆ. ವರ್ಜೀಖಾನ್ ಸೇರಿ 126 ಆರೋಪಿಗಳು ಎಫ್ ಐಆರ್ ರದ್ದು ಕೋರಿ ಸಲ್ಲಿಸಿದ್ದ ನಾಲ್ಕು ಪ್ರತ್ಯೇಕ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪಿ.ಬಿ.ಭಜಂತ್ರಿ ಅವರಿದ್ದ ಏಕಸದಸ್ಯಪೀಠ, ಈ ಆದೇಶ ಮಾಡಿತು. ಎರಡೂ ಕಡೆ ವಾದ ಪ್ರತಿವಾದ ಆಲಿಸಿದ ನ್ಯಾಯಪೀಠ, ಎಫ್ಐಆರ್ಗಳಿಗೆ ಮಧ್ಯಂತರ ತಡೆಯಾಜ್ಞೆ ನೀಡಲು ನಿರಾಕರಿಸಿ ವಿಚಾರಣೆ ಮುಂದೂಡಿತು. ಸದ್ಯ ಹೈಕೋರ್ಟ್ ಎಲ್ಲ 126 ಆರೋಪಿಧಿಗಳಿಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿರುವುದನ್ನು ಇಲ್ಲಿ ಸ್ಮರಿಸಬಹುದು.
ಎಸ್ಪಿ ರಸ್ತೆ ಸಂಪೂರ್ಣ ಸೀಲ್ಡೌನ್
ಧರ್ಮರಾಯಸ್ವಾಮಿ ದೇವಾಲಯ ವಾರ್ಡ್ನ ಎಸ್ಪಿ ರಸ್ತೆಯ ಅಪಾ ರ್ಟ್ಮೆಂಟ್ವೊಂದರಲ್ಲಿ ವಾಸವಿದ್ದ ಹೊರರಾಜ್ಯದ ವ್ಯಕ್ತಿಯೊಬ್ಬರಿಗೆ ಸೋಮವಾರ ಸೋಂಕು ತಗಲಿತ್ತು. ಹೀಗಾಗಿ, ಧರ್ಮರಾಯಸ್ವಾಮಿ ದೇವಸ್ಥಾನ ಮತ್ತು ಎಸ್ಪಿ ರಸ್ತೆಯನ್ನು ಸಂಪೂರ್ಣವಾಗಿ ಸೀಲ್ಡೌನ್ ಮಾಡಲಾಗಿದೆ. ಎಸ್ಪಿ ರಸ್ತೆಯಲ್ಲಿ ಮೊಬೈಲ್ ಮತ್ತು ಕಂಪ್ಯೂಟರ್ ಬಿಡಿಭಾಗಗಳ ಮಾರಾಟ ಮಳಿಗೆಗಳು ಹೆಚ್ಚಿನ ಸಂಖ್ಯೆಯಲ್ಲಿವೆ. ಹೀಗಾಗಿ, ಇಲ್ಲಿ ಯಾವಾಗಲೂ ಗ್ರಾಹಕರ ದಟ್ಟಣೆ ಜಾಸ್ತಿ ಇರುತ್ತಿತ್ತು.
ಸಹಾಯಕ ಆಯುಕ್ತರ ವರದಿ ನೆಗೆಟಿವ್
ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಹಾಯಕ ಆಯುಕ್ತರೊಬ್ಬರಿಗೆ ಕೊರೊನಾ ಸೋಂಕು ಇಲ್ಲದಿರುವುದು ದೃಢಪಟ್ಟಿದೆ. ಆರೋಗ್ಯ ಇಲಾಖೆಯ ಪ್ರಮಾದದಿಂದ ಮೊದಲು ಪಾಸಿಟಿವ್ ಬಂದಿತ್ತು. ಪಾದರಾಯನಪುರ ವಾಡ್ ರ್ನ ಕಾರ್ಪೊರೇಟರ್ ಜತೆ ಸಂಪರ್ಕ ಹೊಂದಿದ್ದ ಹಿನ್ನೆಲೆಯಲ್ಲಿ ಸಹಾಯಕ ಆಯುಕ್ತರು ಸ್ವಯಂಧಿಪ್ರೇರಿಧಿತವಾಗಿ ಸೋಮವಾರ ಆರೋಗ್ಯ ತಪಾಸಣೆ ಮಾಡಿಸಿಧಿಕೊಂಡಾಗ ಸೋಂಕು ಇರುವುದು ದೃಢಪಟ್ಟಿತ್ತು. ಹೀಗಾಗಿ, ಸೋಮವಾರ ರಾತ್ರಿಯೇ ಬೇರೊಂದು ಪ್ರಯೋಗಾಲಯದಲ್ಲಿ ಗಂಟಲು ದ್ರವದ ಪರೀಕ್ಷೆ ನಡೆಸಿದಾಗ ನೆಗೆಟಿವ್ ಬಂದಿದೆ. ಆದಾಗ್ಯೂ, ಅಧಿಕಾರಿಯನ್ನು ಪ್ರತ್ಯೇಕ ವಾಸಕ್ಕೆ (ಹೋಮ್ ಕ್ವಾರಂಟೈನ್) ಒಳಪಡಿಸಲಾಗಿದೆ. ವಾರದ ಬಳಿಕ ಮತ್ತೊಮ್ಮೆ ಗಂಟಲು ದ್ರವ ಸಂಗ್ರಹಿಸಿ ಪರೀಕ್ಷೆ ನಡೆಸಲು ತೀರ್ಮಾನಿಸಲಾಗಿದೆ.