ಆ್ಯಪ್ನಗರ

ಆಸ್ತಿ ವಿವರ ಸಲ್ಲಿಸದ 34 ಸದಸ್ಯರಿಗೆ ಸಂಕಷ್ಟ

ನಿಗದಿತ ಅವಧಿಯೊಳಗೆ ಆಸ್ತಿ ವಿವರ ಸಲ್ಲಿಸದ ಆರೋಪ ಎದುರಿಸುತ್ತಿರುವ ಬಿಬಿಎಂಪಿಯ 34 ಕಾರ್ಪೋರೇಟರ್‌ಗಳಿಗೆ ಸಂಕಷ್ಟ ಎದುರಾಗಿದೆ.

Vijaya Karnataka 4 Jul 2019, 5:00 am
ಬೆಂಗಳೂರು : ನಿಗದಿತ ಅವಧಿಯೊಳಗೆ ಆಸ್ತಿ ವಿವರ ಸಲ್ಲಿಸದ ಆರೋಪ ಎದುರಿಸುತ್ತಿರುವ ಬಿಬಿಎಂಪಿಯ 34 ಕಾರ್ಪೋರೇಟರ್‌ಗಳಿಗೆ ಸಂಕಷ್ಟ ಎದುರಾಗಿದೆ. ಆಸ್ತಿ ವಿವರ ಸಲ್ಲಿಸದ ಕಾರ್ಪೋರೇಟರ್‌ಗಳ ಅನರ್ಹತೆ ಕೋರಿ ಸಲ್ಲಿಸಿರುವ ಅರ್ಜಿಯ ಕುರಿತಂತೆ ವಿಚಾರಣೆ ನಡೆಸಿರುವ ಹೈಕೋರ್ಟ್‌, ಪಾಲಿಕೆ ಸದಸ್ಯರು ಆಸ್ತಿ ವಿವರ ಸಲ್ಲಿಸದಿರುವ ಬಗ್ಗೆ ಸರಕಾರಕ್ಕೆ ಕಳುಹಿಸಿರುವ ಮಾಹಿತಿಯನ್ನು ನೀಡುವಂತೆ ಬಿಬಿಎಂಪಿಗೆ ಸೂಚನೆ ನೀಡಿದೆ.
Vijaya Karnataka Web corporators are in trouble
ಆಸ್ತಿ ವಿವರ ಸಲ್ಲಿಸದ 34 ಸದಸ್ಯರಿಗೆ ಸಂಕಷ್ಟ


ಸಾಮಾಜಿಕ ಹೋರಾಟಗಾರ ಕೆ.ಅನಿಲ್‌ ಕುಮಾರ್‌ ಶೆಟ್ಟಿ ಸಲ್ಲಿಸಿರುವ ಅರ್ಜಿಯನ್ನು ಆಲಿಸಿದ ನ್ಯಾ.ಜಿ.ನರೇಂದರ್‌ ಅವರಿದ್ದ ಏಕಸದಸ್ಯಪೀಠ ಬಿಬಿಎಂಪಿ ಪರ ವಕೀಲರಿಗೆ ಈ ನಿರ್ದೇಶನ ನೀಡಿ ವಿಚಾರಣೆಯನ್ನು ಜು.10ಕ್ಕೆ ಮುಂದೂಡಿದೆ. ಕಳೆದ 4 ವರ್ಷಗಳಿಂದ ಎಷ್ಟು ಪಾಲಿಕೆ ಸದಸ್ಯರು ಆಸ್ತಿ ವಿವರ ಸಲ್ಲಿಸಿದ್ದಾರೆ, ಎಷ್ಟು ಮಂದಿ ಸಲ್ಲಿಸಿಲ್ಲ, ಸಲ್ಲಿಸದವರ ವಿರುದ್ಧ ಶಿಸ್ತು ಕ್ರಮಕ್ಕೆ ರಾಜ್ಯ ಸರಕಾರಕ್ಕೆ ಶಿಫಾರಸು ಮಾಡಲಾಗಿದೆಯೇ ಎಂಬ ಬಗ್ಗೆ ಒಂದು ವಾರದಲ್ಲಿ ಸಂಪೂರ್ಣ ಮಾಹಿತಿ ನೀಡುವಂತೆ ನ್ಯಾಯಾಲಯ ಬಿಬಿಎಂಪಿ ಪರ ವಕೀಲರಾದ ಎಂ.ಸಿ. ನಾಗಶ್ರೀ ಅವರಿಗೆ ಸೂಚನೆ ನೀಡಿತು.

''ಬಿಬಿಎಂಪಿಯ ಹಾಲಿ ಪಾಲಿಕೆ ಸದಸ್ಯರು 2015ರ ಸೆ.11ರಂದು ಅಧಿಕಾರ ವಹಿಸಿಕೊಂಡಿದ್ದಾರೆ. ಅದರಂತೆ ಅವರೆಲ್ಲರೂ 2015ರ ಅಕ್ಟೋಬರ್‌ನೊಳಗೆ ಆಸ್ತಿ ಹಾಗೂ ಸಾಲದ ವಿವರ ನೀಡಬೇಕಿತ್ತು. ಮಾಹಿತಿ ಹಕ್ಕು ಕಾಯಿದೆಯಡಿ ಪಡೆದ ಮಾಹಿತಿ ಪ್ರಕಾರ ಬಿಬಿಎಂಪಿಯ 34 ಕಾರ್ಪೋರೇಟರ್‌ಗಳು ತಮ್ಮ ಹಾಗೂ ತಮ್ಮ ಕುಟುಂಬ ಸದಸ್ಯರ ಆಸ್ತಿ ಹಾಗೂ ಸಾಲದ ವಿವರಗಳನ್ನು ಮೇಯರ್‌ಗೆ ಒದಗಿಸಿಲ್ಲ'' ಎಂದು ಅರ್ಜಿದಾರರ ಪರ ವಕೀಲರು ನ್ಯಾಯಾಲಯದ ಗಮನಕ್ಕೆ ತಂದರು.

''ಕರ್ನಾಟಕ ಮುನಿಸಿಪಲ್‌ ಕಾರ್ಪೋರೇಷನ್‌ ಕಾಯಿದೆ 1976ರ ಸೆಕ್ಷನ್‌ 19(1)ರ ಅನ್ವಯ ಎಲ್ಲ ಪಾಲಿಕೆ ಸದಸ್ಯರು ತಮ್ಮ ಹಾಗೂ ತಮ್ಮ ಕುಟುಂಬದ ಸದಸ್ಯರ ಆಸ್ತಿ ವಿವರಗಳನ್ನು ಪ್ರತಿ ವರ್ಷ ಮೇಯರ್‌ಗೆ ಸಲ್ಲಿಸಬೇಕು.ಆದರೆ 34 ಸದಸ್ಯರು ಆಸ್ತಿ ವಿವರಗಳನ್ನು ಸಲ್ಲಿಸಿಲ್ಲ, ಈ ನಿಯಮ ಪಾಲಿಸದ ಸದಸ್ಯರನ್ನು ಆ ಸ್ಥಾನದಲ್ಲಿ ಮುಂದುವರಿಯಲು ಅನರ್ಹರಾಗುತ್ತಾರೆ. ಆಸ್ತಿ ವಿವರ ಸಲ್ಲಿಸದ ಸದಸ್ಯರನ್ನು ಅವರ ಸ್ಥಾನದಲ್ಲಿ ಮುಂದುವರಿಸದಂತೆ ಕೋರಿ ಸಲ್ಲಿಸಿದ್ದ ಮನವಿಯನ್ನು ಬಿಬಿಎಂಪಿ ಪ್ರಾದೇಶಿಕ ಆಯುಕ್ತರು ಪರಿಗಣಿಸಿಲ್ಲ,'' ಎಂದು ಅರ್ಜಿದಾರರು ದೂರಿದ್ದಾರೆ. ಅರ್ಜಿಯನ್ನು ಆಲಿಸುತ್ತಿರುವ ನ್ಯಾಯಾಲಯ ಕಳೆದ ವಿಚಾರಣೆ ವೇಳೆ ಆಸ್ತಿ ವಿವರ ಸಲ್ಲಿಸದ 34 ಪಾಲಿಕೆ ಸದಸ್ಯರಿಗೆ ನೋಟಿಸ್‌ ನೀಡಿತ್ತು.


ಯಾರಿಗೆ ಸಂಕಷ್ಟ ?

ಉಮಾದೇವಿ ನಾಗರಾಜ್‌, ಎಂ.ಪದ್ಮಾವತಿ ಶ್ರೀನಿವಾಸ್‌, ಎ. ಕೋದಂಡರೆಡ್ಡಿ, ಲಾವಣ್ಯ ಗಣೇಶ್‌ ರೆಡ್ಡಿ, ಮೀನಾಕ್ಷಿ, ರಾಜಾ ಎಸ್‌, ವಿ.ಶಿವಪ್ರಕಾಶ್‌, ಬಾಲಕೃಷ್ಣನ್‌ ಜಿ, ಸರಳ ಸಿ. ಮಹೇಶ್‌ಬಾಬು, ಟಿ.ರಾಮಚಂದ್ರ, ಎಂ.ಚಂದ್ರಪ್ಪ, ಜಿ.ಮಂಜುನಾಥ್‌, ಆರ‍್ಯ ಶ್ರೀನಿವಾಸ್‌, ಎನ್‌. ರಾಜಶೇಖರ್‌, ನೌಷೀರ್‌ ಆಹ್ಮದ್‌, ಪದ್ಮಾವತಿ ನರಸಿಂಹಮೂರ್ತಿ, ಶ್ವೇತಾ ವಿಜಯ್‌ಕುಮಾರ್‌ , ಮಹಾಲಕ್ಷ್ಮಿ ಎಚ್‌.ರವೀಂದ್ರ, ಕೆ.ಎಂ.ಮಮತಾ, ವೇಲು ನಾಯಕರ್‌ , ಬಿ.ಎನ್‌.ಜಯಪ್ರಕಾಶ್‌, ಎಂ.ಎನ್‌. ಶ್ರೀಕಾಂತ್‌ , ವಿ.ಏಳುಮಲೈ, ಜಿ.ಮೋಹನ್‌ ಕುಮಾರ್‌, ಎನ್‌.ರಮೇಶ್‌, ಫರಿದಾ ಇಸ್ತಿಕ್ಯೂ, ಜಿ.ಬಾಲಕೃಷ್ಣಪ್ಪ , ಆರ್‌.ವಿ. ಯುವರಾಜ್‌, ಡಿ.ಪ್ರಮೋದ್‌, ಎಂ.ಗಾಯತ್ರಿ, ಅಜ್ಮಲ್‌ ಬೇಗ್‌, ಜಿ.ಮಂಜುನಾಥ್‌ , ಎನ್‌.ನಾಗರಾಜ್‌ ಮತ್ತು ಎಸ್‌.ಅನ್ಸರ್‌ ಪಾಷಾ ಅವರು ಆಸ್ತಿ ವಿವರ ಸಲ್ಲಿಸಿಲ್ಲ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ