ಆ್ಯಪ್ನಗರ

ಇಂದಿರಾ ಕ್ಯಾಂಟೀನ್‌ ಆಹಾರದ ತೂಕದಲ್ಲಿ ವಂಚನೆ

ಹಸಿದ ಬಡವರ ಹೊಟ್ಟೆ ತುಂಬಿಸಲು ರಿಯಾಯಿತಿ ದರದಲ್ಲಿ ತಿಂಡಿ ಊಟ ನೀಡುವ ಸದುದ್ದೇಶದಿಂದ ರಾಜ್ಯ ಸರಕಾರ ಬೆಂಗಳೂರಿನಲ್ಲಿ ಆರಂಭಿಸಿರುವ ಇಂದಿರಾ ಕ್ಯಾಂಟೀನ್‌ಗಳಲ್ಲಿ ಗುತ್ತಿಗೆದಾರರು ನಿಗದಿತ ಪ್ರಮಾಣಕ್ಕಿಂತ ಕಡಿಮೆ ಆಹಾರ ನೀಡಿ, ಬಡವರ ಅನ್ನಕ್ಕೆ ಕನ್ನ ಹಾಕುತ್ತಿದ್ದಾರೆ.

Vijaya Karnataka 20 Nov 2017, 10:14 am
ಇಂದಿರಾ ಕ್ಯಾಂಟೀನ್‌ ಆಹಾರದ ತೂಕದಲ್ಲಿ ವಂಚನೆ | ಸರಕಾರಕ್ಕೆ ಮಾಸಿಕ ಲಕ್ಷಾಂತರ ರೂ. ಪಂಗನಾಮ
Vijaya Karnataka Web corruption in indira canteen food
ಇಂದಿರಾ ಕ್ಯಾಂಟೀನ್‌ ಆಹಾರದ ತೂಕದಲ್ಲಿ ವಂಚನೆ


* 50ರಿಂದ 100 ಗ್ರಾಂನಷ್ಟು ಕಡಿಮೆ ಊಟ ವಿತರಣೆ

* ಅರ್ಧದಷ್ಟು ಜನರಿಗೆ ಸಿಗ್ತಿಲ್ಲ ಮೊಸರನ್ನ

* ಮೊಸರನ್ನ ಖಾಲಿಯಾದ್ರೆ, ಹೆಚ್ಚುವರಿ ಅನ್ನ ಕೊಡ್ತಿಲ್ಲ

* ಗುತ್ತಿಗೆದಾರರಿಂದ ಮೋಸ, ಅಧಿಕಾರಿಗಳ ಜಾಣಮೌನ

ನಾಗಪ್ಪ ನಾಗನಾಯಕನಹಳ್ಳಿ

ಬೆಂಗಳೂರು: ಹಸಿದ ಬಡವರ ಹೊಟ್ಟೆ ತುಂಬಿಸಲು ರಿಯಾಯಿತಿ ದರದಲ್ಲಿ ತಿಂಡಿಊಟ ನೀಡುವ ಸದುದ್ದೇಶದಿಂದ ರಾಜ್ಯ ಸರಕಾರ ಬೆಂಗಳೂರಿನಲ್ಲಿ ಆರಂಭಿಸಿರುವ ಇಂದಿರಾ ಕ್ಯಾಂಟೀನ್‌ಗಳಲ್ಲಿ ಗುತ್ತಿಗೆದಾರರು ನಿಗದಿತ ಪ್ರಮಾಣಕ್ಕಿಂತ ಕಡಿಮೆ ಆಹಾರ ನೀಡಿ, ಬಡವರ ಅನ್ನಕ್ಕೆ ಕನ್ನ ಹಾಕುತ್ತಿದ್ದಾರೆ.

'ವಿಜಯ ಕರ್ನಾಟಕ' ಶನಿವಾರ ನಡೆಸಿದ ರಿಯಾಲಿಟಿ ಚೆಕ್‌ನಲ್ಲಿ ಈ ವಿಷಯ ಬಯಲಾಗಿದೆ. ಕೆಲವು ಇಂದಿರಾ ಕ್ಯಾಂಟೀನ್‌ಗಳಿಗೆ ವಿಕ ಪ್ರತಿನಿಧಿಗಳು ಶನಿವಾರ ಖುದ್ದು ಭೇಟಿ ನೀಡಿ ಅನ್ನ, ಸಾಂಬಾರ್‌, ಪಲಾವ್‌ ಮತ್ತು ಮೊಸರನ್ನ ಖರೀದಿಸಿ ಪ್ರತ್ಯೇಕ ಕವರ್‌ಗಳಲ್ಲಿ ಪಾರ್ಸೆಲ್‌ ಕೊಂಡೊಯ್ದು ತೂಕ ಹಾಕಿಸಿದಾಗ 50ರಿಂದ 100 ಗ್ರಾಂನಷ್ಟು ಕಡಿಮೆ ಇರುವುದು ದೃಢಪಟ್ಟಿತು.

ನಗರದ 27 ವಿಧಾನಸಭಾ ಕ್ಷೇತ್ರಗಳ ಪೈಕಿ 15 ಕ್ಷೇತ್ರಗಳಲ್ಲಿನ ಕ್ಯಾಂಟೀನ್‌ಗಳಿಗೆ ಊಟ ಮತ್ತು ತಿಂಡಿ ಪೂರೈಸಿ, ಸಾರ್ವಜನಿಕರಿಗೆ ಬಡಿಸುವ ಗುತ್ತಿಗೆಯನ್ನು ಶೆಫ್‌ಟಾಕ್‌ ಸಂಸ್ಥೆಗೆ ಮತ್ತು ಉಳಿದ 12 ಕ್ಷೇತ್ರಗಳ ಗುತ್ತಿಗೆಯನ್ನು ರಿವಾರ್ಡ್ಸ್‌ ಸಂಸ್ಥೆಗೆ ವಹಿಸಲಾಗಿದೆ. 198 ವಾರ್ಡ್‌ಗಳ ಪೈಕಿ ಸದ್ಯ 151 ಕಡೆಯಷ್ಟೇ ಆಹಾರ ವಿತರಣೆ ಮಾಡಲಾಗುತ್ತಿದೆ.

ಗುತ್ತಿಗೆ ಷರತ್ತಿನಂತೆ ಈ ಸಂಸ್ಥೆಗಳು ಸಾರ್ವಜನಿಕರಿಗೆ ಮಧ್ಯಾಹ್ನ ಮತ್ತು ರಾತ್ರಿ ಊಟಕ್ಕೆ 300 ಗ್ರಾಂ ಅನ್ನ, 150 ಗ್ರಾಂ ಸಾಂಬಾರ್‌, 100 ಗ್ರಾಂ ಮೊಸರನ್ನ, 50 ಗ್ರಾಂ ಚಟ್ನಿ ನೀಡಬೇಕು. ಇಲ್ಲವೇ 300 ಗ್ರಾಂ ರೈಸ್‌ಬಾತ್‌, 100 ಗ್ರಾಂ ಮೊಸರನ್ನ, 50 ಗ್ರಾಂ ಚಟ್ನಿ ಕೊಡಬೇಕು. ಆದರೆ, ಇದು ಬಹುತೇಕ ಕ್ಯಾಂಟೀನ್‌ಗಳಲ್ಲಿ ಪಾಲನೆಯಾಗುತ್ತಿಲ್ಲ.

ಕೆಲ ಆಯ್ದ ಕ್ಯಾಂಟೀನ್‌ಗಳಲ್ಲಿ ಊಟ ಖರೀದಿ ಮಾಡಿ, ಬೇರೆಡೆ ತೂಕ ಮಾಡಿಸಲಾಯಿತು. ಆಗ ಕಡಿಮೆ ಪ್ರಮಾಣದಲ್ಲಿ ಆಹಾರ ನೀಡುತ್ತಿರುವುದು ಗೊತ್ತಾಯಿತು. ಒಂದು ಹೊತ್ತಿಗೆ ಅನ್ನ, ಸಾಂಬಾರು, ಮೊಸರನ್ನ, ಚಟ್ನಿ ಸೇರಿ 600 ಗ್ರಾಂನಷ್ಟು ಆಹಾರ ನೀಡಬೇಕು. ಆದರೆ, ಜನರ ಹೊಟ್ಟೆ ಸೇರುತ್ತಿರುವುದು 450-500 ಗ್ರಾಂ ಮಾತ್ರ.

ಇಂದಿರಾ ಕ್ಯಾಂಟೀನ್‌ ಸೇವೆಯ ಗುತ್ತಿಗೆ ಪಡೆದ ಸಂಸ್ಥೆಗಳು ಕಡಿಮೆ ಪ್ರಮಾಣದಲ್ಲಿಆಹಾರ ನೀಡುತ್ತಿದ್ದರೂ, ಬಿಬಿಎಂಪಿಯಿಂದ ಪ್ಲೇಟ್‌ ಲೆಕ್ಕದಲ್ಲಿಹಣ ಪಡೆಯುತ್ತಿವೆ. ಇದರಿಂದ ಸರಕಾರಕ್ಕೆ ಮಾಸಿಕ ಲಕ್ಷಾಂತರ ರೂ. ಖೋತಾ ಆಗುತ್ತಿದೆ. ಗುತ್ತಿಗೆ ಸಂಸ್ಥೆಗಳು ಹಸಿದವರಿಗೆ ಅರೆಬರೆ ಹೊಟ್ಟೆ ತುಂಬಿಸಿ, ತಮ್ಮ ಜೇಬಿಗೆ ಕೋಟ್ಯಂತರ ರೂ. ಇಳಿಸಿಕೊಳ್ಳುತ್ತಿವೆ.

ಅಷ್ಟೇ ಅಲ್ಲ, ಕ್ಯಾಂಟೀನ್‌ಗೆ ಬರುವವರಿಗೆಲ್ಲಾ ಮೊಸರನ್ನ ಸಿಗುತ್ತಿಲ್ಲ. ಮಧ್ಯಾಹ್ನ ಮತ್ತು ರಾತ್ರಿ ವೇಳೆ ಅನ್ನ, ಸಾಂಬಾರ್‌ ಅಥವಾ ರೈಸ್‌ಬಾತ್‌ ಜತೆ 100 ಗ್ರಾಂ ಮೊಸರನ್ನ, ಚಟ್ನಿ ನೀಡಬೇಕು. ಮೊಸರನ್ನ ಅರ್ಧಕ್ಕೆ ಖಾಲಿಯಾದರೆ, ಬದಲಿಯಾಗಿ ಹೆಚ್ಚುವರಿ ಅನ್ನ ಕೊಡುತ್ತಿಲ್ಲ. ಚಟ್ನಿಯನ್ನಂತೂ ಕೇಳುವಂತೆಯೇ ಇಲ್ಲ.

ಪ್ರತಿ ಕ್ಯಾಂಟೀನ್‌ನಲ್ಲಿಮಧ್ಯಾಹ್ನ ಮತ್ತು ರಾತ್ರಿ ಸರಾಸರಿ ಒಟ್ಟು500 ಮಂದಿಗೆ ಊಟ ನೀಡಲಾಗುತ್ತದೆ. ಆಹಾರ ವಿತರಣೆಯಲ್ಲಿ100 ಗ್ರಾಂನಷ್ಟು ಕಡಿಮೆಯಾದರೆ, 500 ಮಂದಿಗೆ 50 ಕೆ.ಜಿಯಷ್ಟು ಅನ್ನಕ್ಕೆ ಕನ್ನ ಹಾಕಿದಂತಾಗುತ್ತದೆ. ದಿನಕ್ಕೆ 151 ಕ್ಯಾಂಟೀನ್‌ಗಳಲ್ಲಿ7550 ಕೆ.ಜಿ ಉಳಿತಾಯವಾಗುತ್ತದೆ. ಅದರಂತೆ ಒಂದು ತಿಂಗಳಿಗೆ 2265 ಕ್ವಿಂಟಾಲ್‌ ಅನ್ನಕ್ಕೆ ಕತ್ತರಿ ಬೀಳುತ್ತಿದೆ. ಆದರೆ, ಪಾಲಿಕೆಯಿಂದ ಪ್ಲೇಟ್‌ ಲೆಕ್ಕದಲ್ಲಿ ಹಣ ಭರಿಸಲಾಗುತ್ತಿದ್ದು, ಕೋಟ್ಯಂತರ ರೂ. ಅಕ್ರಮದ ವಾಸನೆ ಮೂಗಿಗೆ ಬಡಿಯುತ್ತಿದೆ.

ಕ್ಯಾಂಟೀನ್‌ಗಳಲ್ಲಿ ವಿತರಿಸುವ ಊಟಕ್ಕೆ 10 ರೂ., ತಿಂಡಿಗೆ 5 ರೂ. ದರ ನಿಗದಿಪಡಿಸಲಾಗಿದೆ. ಗುತ್ತಿಗೆ ಪಡೆದ ಸಂಸ್ಥೆಗಳಿಗೆ ಸರಕಾರವು ಮೂರು ಹೊತ್ತಿನ ಊಟ, ತಿಂಡಿಗೆ 32 ರೂ. ಪಾವತಿಸಲಿದೆ. ಜತೆಗೆ ಗ್ರಾಹಕರಿಂದ ಸಂಸ್ಥೆಯು 25 ರೂ. ಸಂಗ್ರಹಿಸುತ್ತದೆ.

ಜನರಿಂದ ಕೇಳಿಬಂದ ದೂರುಗಳು

* ಕಡಿಮೆ ಪ್ರಮಾಣದ ಆಹಾರ ನೀಡಲಾಗುತ್ತಿದೆ

* ರೈಸ್‌ಬಾತ್‌ನಷ್ಟು ಅನ್ನ, ಸಾಂಬಾರ್‌ ರುಚಿ ಇರುವುದಿಲ್ಲ

* ಸಾಂಬಾರ್‌ನಲ್ಲಿತರಕಾರಿಯೇ ಇರುವುದಿಲ್ಲ

* ಒಮ್ಮೊಮ್ಮೆ ಸಾಂಬಾರ್‌ನಲ್ಲಿಉಪ್ಪು, ಖಾರ ಏರುಪೇರಾಗಿರುತ್ತದೆ

* ಮೊಸರನ್ನವು ನೀರು ಇಲ್ಲವೇ ಗಂಜಿಯಂತಿರುತ್ತದೆ

* ನಿಗದಿತ ಸಮಯಕ್ಕೆ ಊಟ, ತಿಂಡಿ ವಿತರಣೆ ಮಾಡುವುದಿಲ್ಲ

* ಮೊಸರನ್ನ ಖಾಲಿಯಾದ್ರೆ, ಬದಲಿಗೆ ಹೆಚ್ಚಿನ ಅನ್ನ ಕೊಡಲ್ಲ




ಅನ್ನ, ಸಾಂಬಾರ್‌ ಮತ್ತು ರೈಸ್‌ಬಾತ್‌ ಗುಣಮಟ್ಟದಲ್ಲಿ ಮತ್ತಷ್ಟು ಸುಧಾರಣೆ ಆಗಬೇಕಿದೆ. ಬರಿ ನೀರು ಹಾಕಿ ಮೊಸರನ್ನ ಸಿದ್ಧಪಡಿಸಿದಂತಿರುತ್ತದೆ. ಇಲ್ಲವೆ ಗಂಜಿಯಾಗಿರುತ್ತದೆ. ಹೀಗಾಗಿ, ಮೊಸರನ್ನವನ್ನು ತಿನ್ನಲಾಗದೆ ತಟ್ಟೆಯಲ್ಲಿಯೇ ಬಿಟ್ಟುಹೋಗುವಂತಾಗಿದೆ.

ಚಂದ್ರಕಾಂತ್‌, ವಿದ್ಯಾರ್ಥಿ

ಊಟದ ರುಚಿ, ಗುಣಮಟ್ಟ ಪರವಾಗಿಲ್ಲ. ಆದರೆ, ಸಾಂಬಾರ್‌ನಲ್ಲಿತರಕಾರಿಯೇ ಇರುವುದಿಲ್ಲ. ಅಲ್ಲದೆ ಕಡಿಮೆ ಪ್ರಮಾಣದಲ್ಲಿಆಹಾರ ವಿತರಿಸಲಾಗುತ್ತದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲಿಸಿ, ಸೂಕ್ತ ಕ್ರಮ ಕೈಗೊಳ್ಳಬೇಕು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ