ಆ್ಯಪ್ನಗರ

ನಕಲಿ ನೋಟು ಚಲಾವಣೆ: ಬೆಂಗಳೂರಿನ ಇಬ್ಬರು ಸೇರಿ ಮೂವರಿಗೆ 6 ವರ್ಷ ಜೈಲು

2018ರ ಸೆಪ್ಟೆಂಬರ್‌ನಲ್ಲಿ ಬೆಂಗಳೂರು ಗ್ರಾ. ಜಿಲ್ಲೆಯ ಮಾದನಾಯಕನಹಳ್ಳಿಯ ಫ್ಲ್ಯಾಟ್‌ವೊಂದರಲ್ಲಿ ನಕಲಿ ನೋಟು ಸಂಗ್ರಹಿಸಿಟ್ಟಿದ್ದು ಪತ್ತೆಯಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಮೊಹಮ್ಮದ್‌ ಸಜ್ಜದ್‌ ಅಲಿ, ಎಂ.ಜಿ.ರಾಜು ಮತ್ತು ಪ. ಬಂಗಾಳದ ಅಬ್ದುಲ್‌ ಖಾದೀರ್‌ ಶಿಕ್ಷೆಗೆ ಗುರಿಯಾಗಿದ್ದಾರೆ.

Vijaya Karnataka 3 Dec 2020, 7:59 pm
ಬೆಂಗಳೂರು: ನಕಲಿ ನೋಟು ಚಲಾವಣೆ ಪ್ರಕರಣದಲ್ಲಿ ಮೂವರಿಗೆ 6 ವರ್ಷ ಜೈಲು ಶಿಕ್ಷೆ ಮತ್ತು ತಲಾ 20 ಸಾವಿರ ರೂ. ದಂಡ ವಿಧಿಸಿ ನಗರದ ಎನ್‌ಐಎ ಪ್ರಕರಣಗಳ ವಿಶೇಷ ನ್ಯಾಯಾಲಯ ಆದೇಶ ಹೊರಡಿಸಿದೆ.
Vijaya Karnataka Web fake currencies


ಮೊಹಮ್ಮದ್‌ ಸಜ್ಜದ್‌ ಅಲಿ, ಎಂ.ಜಿ.ರಾಜು ಮತ್ತು ಅಬ್ದುಲ್‌ ಖಾದೀರ್‌ ಶಿಕ್ಷೆಗೆ ಒಳಗಾದವರು. 2018ರ ಸೆಪ್ಟೆಂಬರ್‌ನಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಮಾದನಾಯಕನಹಳ್ಳಿ ವ್ಯಾಪ್ತಿಯ ಫ್ಲ್ಯಾಟ್‌ವೊಂದರಲ್ಲಿ ನಕಲಿ ನೋಟು ಸಂಗ್ರಹಿಸಿಟ್ಟಿರುವ ಮಾಹಿತಿ ಆಧರಿಸಿ ಎನ್‌ಐಎ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ವೇಳೆ 2 ಸಾವಿರ ರೂ. ಮುಖಬೆಲೆಯ 6.80 ಲಕ್ಷ ರೂ. ಪತ್ತೆಯಾಗಿತ್ತು. ಈ ವೇಳೆ ಸಜ್ಜದ್‌, ರಾಜು, ಗಂಗಾಧರ ಮತ್ತು ವನಿತಾ ಎಂಬುವರನ್ನು ಬಂಧಿಸಲಾಗಿತ್ತು. ಆರಂಭದಲ್ಲಿ ಮಾದನಾಯಕನಹಳ್ಳಿ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದ ತನಿಖೆಯನ್ನು ಎನ್‌ಐಎ ಕೈಗೆತ್ತಿಕೊಂಡು ಪುನಃ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು.

ಈ ನಾಲ್ವರು ಆರೋಪಿಗಳಿಗೆ ಬೆಳಗಾವಿಯ ವಿಜಯ್‌ ಮತ್ತು ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯ ಸಬಿರುದ್ದೀನ್‌, ಅಬ್ದುಲ್‌ ಖಾದಿರ್‌ ಮತ್ತು ಜಹೀರುದ್ದಿನ್‌ ಎಂಬುವರು ನಕಲಿ ನೋಟು ಪೂರೈಕೆ ಮಾಡುತ್ತಿರುವ ಮಾಹಿತಿ ಸಿಕ್ಕಿತ್ತು. ಮಾಹಿತಿ ಆಧರಿಸಿ ಮೂವರನ್ನು ಎನ್‌ಐಎ ಬಂಧಿಸಿತ್ತು. ಜಹೀರುದ್ದಿನ್‌ ಈಗಲೂ ತಲೆಮರೆಸಿಕೊಂಡಿದ್ದಾನೆ.

ತನಿಖೆ ಪೂರ್ಣಗೊಳಿಸಿದ ಎನ್‌ಐಎ, ಮೊಹಮ್ಮದ್‌ ಸಜ್ಜದ್‌ ಅಲಿ, ಎಂ.ಜಿ.ರಾಜು, ಗಂಗಾಧರ್‌ ರಾಮಪ್ಪ ಕೋಲ್ಕರ್‌, ವನಿತಾ, ಅಬ್ದುಲ್‌ ಖಾದಿರ್‌, ಸಬೀರುದ್ದಿನ್‌ ಮತ್ತು ವಿಜಯ್‌ ವಿರುದ್ಧ ಆರೋಪಪಟ್ಟಿ ಸಲ್ಲಿಸಿತ್ತು.

ಇದೇ ಡಿ.1ರಂದು ಎಲ್ಲ ಏಳು ಮಂದಿ ಆರೋಪಿಗಳ ವಿರುದ್ಧ ಎನ್‌ಐಎ ಹೊರಿಸಲಾಗಿರುವ ಆರೋಪಗಳಿಗೆ ಸಾಕ್ಷ್ಯಾಧಾರಗಳು ಇವೆ. ವಿಚಾರಣೆ ಮುಂದುವರಿಸಬಹುದು ಎಂದು ನ್ಯಾಯಾಲಯ ತಿಳಿಸಿತ್ತು. ಈ ವೇಳೆ ಸಜ್ಜದ್‌ ಅಲಿ, ಎಂ.ಡಿ.ರಾಜು ಮತ್ತು ಅಬ್ದುಲ್‌ ಖಾದಿರ್‌ ತಪ್ಪೊಪ್ಪಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಮೂವರಿಗೆ ತಲಾ 20 ಸಾವಿರ ರೂ. ದಂಡ ಮತ್ತು 6 ವರ್ಷಗಳ ಜೈಲು ಶಿಕ್ಷೆ ವಿಧಿಸಿ ನ್ಯಾಯಾಲಯ ಆದೇಶಿಸಿದೆ. ಉಳಿದ ಮೂವರು ಆರೋಪಿಗಳ ವಿರುದ್ಧ ನ್ಯಾಯಾಲಯದಲ್ಲಿ ವಿಚಾರಣೆ ಮುಂದುವರಿಯಲಿದೆ. ತಲೆಮರೆಸಿಕೊಂಡಿರುವ ಜಹಿರುದ್ದೀನ್‌ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಎನ್‌ಐಎ ತಿಳಿಸಿದೆ.

ಗಡಿ ದಾಟಿ ಬಂದಿದ್ದ ನೋಟುಗಳುದೇಶದ ಅರ್ಥ ವ್ಯವಸ್ಥೆಯನ್ನು ಹಾಳುಗೆಡವಲು ದೇಶದ ಹೊರಗಿನ ಶತ್ರುಗಳು ನಕಲಿ ನೋಟುಗಳನ್ನು ಮುದ್ರಿಸಿ ಭಾರತ ಮತ್ತು ಬಾಂಗ್ಲಾ ಗಡಿ ಮೂಲಕ ಭಾರತದೊಳಗೆ ನಕಲಿ ನೋಟುಗಳನ್ನು ಕಳುಹಿಸುತ್ತಿದ್ದರು. ಈ ಜಾಲಕ್ಕೆ ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯ ಕೆಲವರು, ಕರ್ನಾಟಕದವರು ಕೂಡ ಸೇರಿದ್ದು, ನಕಲಿ ನೋಟುಗಳ ಚಲಾವಣೆ ದಂಧೆ ನಡೆಸುತ್ತಿದ್ದರು ಎಂಬುದು ಎನ್‌ಐಎ ತನಿಖೆಯಲ್ಲಿ ಗೊತ್ತಾಗಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ