ಆ್ಯಪ್ನಗರ

ಡಿಜೆ ಹಳ್ಳಿ ಗಲಭೆ ತನಿಖೆ ಎನ್‌ಐಎ ಸುಪರ್ದಿಗೆ, ಶೀಘ್ರ ಅಧಿಕೃತ ಆದೇಶ

ಎರಡು ಪೊಲೀಸ್‌ ಠಾಣೆಗಳ ಮೇಲೆ ನಡೆದ ದಾಳಿ ಪ್ರಕರಣದಲ್ಲಿ ಯುಎಪಿಎ ಅಡಿಯಲ್ಲಿ ದಾಖಲಾಗಿರುವ ಎರಡು ಪ್ರಕರಣಗಳ ತನಿಖೆಯನ್ನು ಎನ್‌ಐಎಗೆ ವಹಿಸಲು ಕೇಂದ್ರ ಸರಕಾರ ನಿರ್ಧರಿಸಿದೆ. ಈ ಕುರಿತು ಒಂದೆರಡು ದಿನಗಳಲ್ಲಿ ಅಧಿಕೃತ ಆದೇಶ ಹೊರಬೀಳಲಿದೆ ಎಂದು ಎನ್‌ಐಎ ಎಸ್‌ಪಿಪಿ ಮಾಹಿತಿ ನೀಡಿದ್ದಾರೆ.

Vijaya Karnataka 12 Sep 2020, 1:00 am
ಬೆಂಗಳೂರು: ಆಗಸ್ಟ್‌ 11ರಂದು ನಡೆದ ಡಿ.ಜೆ. ಹಳ್ಳಿ, ಕೆ.ಜಿ. ಹಳ್ಳಿ ಪೊಲೀಸ್‌ ಠಾಣೆಗಳ ಮೇಲಿನ ದಾಳಿ ಹಾಗೂ ಗಲಭೆ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ)ಗೆ ವಹಿಸಲು ಕೇಂದ್ರ ಸರಕಾರ ನಿರ್ಧರಿಸಿದೆ. ಈ ಕುರಿತು ಒಂದೆರಡು ದಿನಗಳಲ್ಲಿ ಅಧಿಕೃತ ಆದೇಶ ಹೊರಬೀಳಲಿದೆ. ಎನ್‌ಐಎ ಪರ ಎಸ್‌ಪಿಪಿ ಪಿ. ಪ್ರಸನ್ನ ಕುಮಾರ್‌ ಹೈಕೋರ್ಟ್‌ಗೆ ಶುಕ್ರವಾರ ಈ ಮಾಹಿತಿ ನೀಡಿದ್ದಾರೆ.
Vijaya Karnataka Web DJ halli violence


ಗಲಭೆ ಪ್ರಕರಣದ ತನಿಖೆಯನ್ನು ಎನ್‌ಐಎಗೆ ವಹಿಸುವಂತೆ ಕೋರಿ ವಕೀಲ ಎನ್‌.ಪಿ. ಅಮೃತೇಶ್‌ ಮತ್ತು ಗಿರೀಶ್‌ ಭಾರಧ್ವಾಜ್‌ ಸಲ್ಲಿಸಿರುವ ಪಿಎಎಲ್‌ಗಳ ವಿಚಾರಣೆ ನಡೆಸುತ್ತಿರುವ ಸಿ.ಜೆ ಎ.ಎಸ್‌. ಓಕಾ‌ ನೇತೃತ್ವದ ನ್ಯಾಯಪೀಠಕ್ಕೆ ವಕೀಲರು ಈ ಮಾಹಿತಿ ಒದಗಿಸಿದರು.

ವಿಚಾರಣೆ ಆರಂಭವಾಗುತ್ತಿದ್ದಂತೆಯೇ ವಿಷಯ ಪ್ರಸ್ತಾಪಿಸಿದ ಪ್ರಸನ್ನಕುಮಾರ್‌, "ಎರಡು ಪೊಲೀಸ್‌ ಠಾಣೆಗಳ ಮೇಲೆ ನಡೆದ ದಾಳಿ ಪ್ರಕರಣದಲ್ಲಿ ಕಾನೂನು ಬಾಹಿರ ಅಪರಾಧ ಚಟುವಟಿಕೆಗಳ ನಿಯಂತ್ರಣ ತಡೆ ಕಾಯಿದೆ (ಯುಎಪಿಎ) ಅಡಿಯಲ್ಲಿ ದಾಖಲಾಗಿರುವ ಎರಡು ಪ್ರಕರಣಗಳ ತನಿಖೆಯನ್ನು ಎನ್‌ಐಎಗೆ ವಹಿಸಲು ಕೇಂದ್ರ ಸರಕಾರ ನಿರ್ಧರಿಸಿದೆ. ಈ ಕುರಿತು ಒಂದೆರಡು ದಿನಗಳಲ್ಲಿ ಅಧಿಕೃತ ಆದೇಶ ಹೊರಬೀಳುವ ಕುರಿತು ನನಗೆ ಮೌಖಿಕ ಮಾಹಿತಿ ದೊರೆತಿದೆ," ಎಂದರು.

ಬೆಂಗಳೂರು: ಡಿಜೆ ಹಳ್ಳಿ ಶಾಸಕರ ಮನೆಗೆ ಬೆಂಕಿ ಹಚ್ಚಿದ್ದ ವಾಟರ್‌ ಮುಜಾಯಿದ್‌ ಬಂಧನ

ಅಲ್ಲದೆ, "ಆ ಕುರಿತು ಆದೇಶದ ಪ್ರತಿಯನ್ನು ಸಲ್ಲಿಸಲು ಒಂದು ವಾರ ಕಾಲಾವಕಾಶ ಬೇಕು," ಎಂದು ಕೋರಿದರು.

ಸರಕಾರದ ಪರ ವಾದ ಮಂಡಿಸಿದ ಅಡ್ವೊಕೇಟ್‌ ಜನರಲ್‌ ಪ್ರಭುಲಿಂಗ ನಾವಡಗಿ, "ಗೃಹ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಸೆಪ್ಟೆಂಬರ್‌ 3ರಂದು ಎರಡೂ ಪ್ರಕರಣಗಳಲ್ಲಿ ಯುಎಪಿಎ ಕಾಯಿದೆಯನ್ನು ಜಾರಿಗೊಳಿಸಲು ಕೇಂದ್ರ ಗೃಹ ಸಚಿವಾಲಯದ ಕಾರ್ಯದರ್ಶಿಗೆ ಇ-ಮೇಲ್‌ ಮೂಲಕ ಪತ್ರ ಬರೆದಿದ್ದರು," ಎಂದು ವಿವರಿಸಿದರು.

ಅಲ್ಲದೆ, "ಕೇಂದ್ರ ಸರಕಾರ ಎನ್‌ಐಎ ಕಾಯಿದೆಯ ನಿಯಮದಂತೆ ತನಿಖೆಯನ್ನು ಎನ್‌ಐಎಗೆ ಹಸ್ತಾಂತರಿಸುವ ಕುರಿತು ನಿರ್ಧಾರ ಕೈಗೊಳ್ಳಲು 15 ದಿನಗಳ ಕಾಲಾವಕಾಶ ಕೋರಿತ್ತು. ಆ ಕುರಿತು ನಿರ್ಧಾರ ಕೈಗೊಂಡಿದೆ,'' ಎಂದು ಹೇಳಿದರು.

ರಾಜ್ಯ ಪೊಲೀಸರು ಈವರೆಗೆ ನಡೆಸಿರುವ ತನಿಖಾ ವರದಿಯನ್ನು ಅವರು ನ್ಯಾಯಪೀಠಕ್ಕೆ ಸಲ್ಲಿಸಿದರು. ವರದಿಗಳನ್ನು ಪರಿಶೀಲಿಸಿದ ನ್ಯಾಯಪೀಠ, "ತನಿಖೆಯು ಇನ್ನೂ ಪ್ರಾಥಮಿಕ ಹಂತದಲ್ಲಿದೆ. ಮುಂದಿನ ತನಿಖಾ ಪ್ರಗತಿ ಸಲ್ಲಿಸಬೇಕು,'' ಎಂದು ಸರಕಾರಕ್ಕೆ ಸೂಚಿಸಿ ವಿಚಾರಣೆಯನ್ನು ಸೆ.21ಕ್ಕೆ ಮುಂದೂಡಿತು.

ಅರ್ಜಿದಾರರ ಪರ ವಾದಿಸಿದ ವಕೀಲ ಶ್ರೀಧರ್‌ ಪ್ರಭು, "ಅರ್ಜಿಯಲ್ಲಿ ಕೇಂದ್ರ ಸರಕಾರವನ್ನು ಪ್ರತಿವಾದಿಯನ್ನಾಗಿ ಮಾಡಬೇಕು. ಈ ಕುರಿತು ಸಲ್ಲಿಸಿರುವ ಮಧ್ಯಂತರ ಅರ್ಜಿಯನ್ನು ಮಾನ್ಯ ಮಾಡಬೇಕು" ಎಂದು ಕೋರಿದರು. ಅದಕ್ಕೆ ನ್ಯಾಯಾಲಯ ಸಮ್ಮತಿಸಿತು.

ನಷ್ಟ ವಸೂಲಿಗೆ ಅಗತ್ಯ ಕ್ರಮ

"ಡಿ.ಜೆ. ಹಳ್ಳಿ, ಕೆ.ಜಿ. ಹಳ್ಳಿ ಗಲಭೆ ಪ್ರಕರಣದಲ್ಲಾಗಿರುವ ಸಾರ್ವಜನಿಕ ಆಸ್ತಿ-ಪಾಸ್ತಿ ನಷ್ಟದ ಅಂದಾಜು ಮತ್ತು ವಸೂಲಿಗೆ ನೇಮಿಸಲಾಗಿರುವ ಕ್ಲೇಮ್‌ ಕಮಿಷನರ್‌ ನಿವೃತ್ತ ನ್ಯಾಯಮೂರ್ತಿ ಎಚ್‌.ಎಸ್‌. ಕೆಂಪಣ್ಣ ಅವರಿಗೆ ಅಗತ್ಯ ಮೂಲಸೌಕರ್ಯ ಕಲ್ಪಿಸಲಾಗಿದೆ. ಅವರಿಗೆ ನೆರವು ನೀಡಲು ನೋಡಲ್‌ ಅಧಿಕಾರಿಯನ್ನು ನೇಮಿಸಲಾಗಿದೆ," ಎಂದು ಅಡ್ವೊಕೇಟ್‌ ಜನರಲ್‌ ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ