ಆ್ಯಪ್ನಗರ

ಸಾಕು ನಾಯಿ ದಾಳಿಗೆ ನವಿಲು ಬಲಿ

ಜ್ಞಾನಭಾರತಿ ಆವರಣದಲ್ಲಿ ಸಾಕು ನಾಯಿಯೊಂದು ನರ್ತನ ಮಾಡುತ್ತಿದ್ದ ನವಿಲಿನ ಮೇಲೆ ದಾಳಿ ಮಾಡಿ ಕೊಂದು ಹಾಕಿದ ಘಟನೆ ನಡೆದಿದೆ.

Vijaya Karnataka Web 26 Feb 2019, 5:00 am
ಬೆಂಗಳೂರು: ಜ್ಞಾನಭಾರತಿ ಆವರಣದಲ್ಲಿ ಸಾಕು ನಾಯಿಯೊಂದು ನರ್ತನ ಮಾಡುತ್ತಿದ್ದ ನವಿಲಿನ ಮೇಲೆ ದಾಳಿ ಮಾಡಿ ಕೊಂದು ಹಾಕಿದ ಘಟನೆ ನಡೆದಿದೆ.
Vijaya Karnataka Web BNG-2502-2-2-NAVILU


ಜ್ಞಾನಭಾರತಿ ಆವರಣದ ಬಯೋಪಾರ್ಕ್‌ನಲ್ಲಿ ನೂರಕ್ಕೂ ಹೆಚ್ಚಿನ ನವಿಲುಗಳು ನೆಲೆಸಿವೆ. ಭಾನುವಾರ ಬೆಳಗ್ಗೆ ಕುಲಪತಿ ನಿವಾಸ ಹಿಂಭಾಗದ ವ್ಯಾಲಿ ಬಳಿ ನರ್ತನದಲ್ಲಿ ತೊಡಗಿದ್ದ ನವಿಲಿನ ಮೇಲೆ ನಾಯಿಯೊಂದು ದಾಳಿ ಮಾಡಿ ನವಿಲಿನ ಕುತ್ತಿಗೆ ಕಚ್ಚಿ ಗಾಯಗೊಳಿಸಿದೆ. ದಿಢೀರ್‌ ದಾಳಿಯಿಂದ ತಪ್ಪಿಸಿಕೊಳ್ಳಲು ನವಿಲು ತಕ್ಷಣವೇ ಹಾರಿದೆ. ಆದರೆ ನಾಯಿ ಬಲವಾಗಿ ಕಚ್ಚಿದ್ದರಿಂದ ತಕ್ಷಣವೇ ಕಾಂಪೌಂಡ್‌ ಮೇಲೆ ಬಿದ್ದಿದೆ. ಇದನ್ನು ಗಮನಿಸಿದ ಸ್ಥಳೀಯರು ನವಿಲಿನ ಆರೈಕೆ ಮಾಡಿದರೂ ಪ್ರಯೋಜನವಾಗಿಲ್ಲ.

ಸಾಮಾನ್ಯವಾಗಿ ನಾಯಿಗಳ ದಾಳಿಗೆ ನವಿಲು ಬಲಿಯಾಗಿದ್ದು ಇದೇ ಮೊದಲು. ಬೆಳಗಿನ ವಾಕಿಂಗ್‌ಗೆ ಬಂದವರು ಯಾರೋ ನಾಯಿಯನ್ನು ಬಿಚ್ಚಿ ಬಿಟ್ಟಿದ್ದಾರೆ. ಈ ಸಂದರ್ಭದಲ್ಲಿ ನಾಯಿ ನವಿಲಿನ ಮೇಲೆ ದಾಳಿ ಮಾಡಿದೆ. ಇದನ್ನು ಕೆಲ ಸ್ಥಳೀಯರು ಗಮನಿಸಿ ನಾಯಿ ಮಾಲೀಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಆದರೆ ನಾಯಿ ಮಾಲೀಕರ ಗುರುತು ಸಿಕ್ಕಿಲ್ಲ. ನವಿಲು ನಮ್ಮ ರಾಷ್ಟ್ರಪಕ್ಷಿಯಾಗಿದ್ದು, ಯಾರೂ ಕೊಲ್ಲುವಂತಿಲ್ಲ ಎಂದು ಬಯೋಪಾರ್ಕ್‌ನ ಯೋಜನಾಧಿಕಾರಿ ಡಾ.ಟಿ.ಜೆ.ರೇಣುಕಾಪ್ರಸಾದ್‌ 'ವಿಜಯ ಕರ್ನಾಟಕ 'ಕ್ಕೆ ತಿಳಿಸಿದರು.

''ನವಿಲು ಸತ್ತಿರುವ ಕುರಿತು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿತ್ತು. ಅವರು ಬಂದು ನವಿಲಿನ ಮೃತ ಶರೀರವನ್ನು ತೆಗೆದುಕೊಂಡು ಹೋಗಿದ್ದಾರೆ. ಬಯೋಪಾರ್ಕ್‌ 1 ಮತ್ತು 2ರಲ್ಲಿ ನೂರಾರು ನವಿಲುಗಳು ವಾಸಿಸುತ್ತಿವೆ. ಈಗ ಸಂತಾನೋತ್ಪತ್ತಿ ಸಮಯವಾಗಿರುವುದರಿಂದ ಹೆಣ್ಣು ನವಿಲುಗಳನ್ನು ಸೆಳೆಯಲು ಗಂಡು ನವಿಲುಗಳು ನರ್ತಿಸುತ್ತವೆ. ಇಂಥ ಸಂದರ್ಭದಲ್ಲಿ ನಾಯಿ ದಾಳಿ ಮಾಡಿದೆ. ಬೀದಿ ನಾಯಿಗಳ ಹಾವಳಿ ಇಲ್ಲ. ಆದರೆ ಬೆಳಗಿನ ವಾಕಿಂಗ್‌ ಬರುವವರು ಸಾಕು ನಾಯಿ ತಂದು ಇಲ್ಲಿ ಆಟವಾಡಲು ಬಿಡುತ್ತಾರೆ. ಇದನ್ನು ನಿಯಂತ್ರಿಸಬೇಕಿದೆ. ಜತೆಗೆ ಈ ಪ್ರದೇಶವನ್ನು ನವಿಲುಗಳ ಸಂರಕ್ಷಿತ ಪ್ರದೇಶ ಎಂದು ಘೋಷಿಸುವಂತೆ ಅರಣ್ಯ ಇಲಾಖೆಗೆ ವಿಶ್ವವಿದ್ಯಾಲಯದಿಂದ ಮನವಿ ಸಲ್ಲಿಸಲು ನಿರ್ಧರಿಸಲಾಗಿದೆ,''ಎಂದು ಹೇಳಿದರು.

ಬೆಂಕಿ ಅನಾಹುತ: ಜ್ಞಾನಭಾರತಿ ಆವರಣದಲ್ಲಿಯೂ ಬೆಂಕಿ ಸಮಸ್ಯೆ ಕಾಣಿಸಿಕೊಂಡಿದೆ. ಕಳೆದ ಮೂರ್ನಾಲ್ಕು ದಿನದಿಂದ ಐದಾರು ಕಡೆ ಬೆಂಕಿ ಬಿದ್ದಿದೆ. ಇದರಿಂದ ಹಲವು ಎಕರೆ ಅರಣ್ಯಪ್ರದೇಶ ಸುಟ್ಟು ಹೋಗಿದೆ. ಒಣಗಿದ ಹುಲ್ಲು ಹಾಗೂ ಎಲೆಗಳು ಇರುವುದರಿಂದ ಬೆಂಕಿ ಬೇಗನೆ ವ್ಯಾಪಿಸುತ್ತಿದೆ. ಬೆಂಕಿ ನಿಯಂತ್ರಿಸಲು ಲೇನ್‌ ಮಾಡಿದ್ದೇವೆ. ಆದರೆ ಸಾರ್ವಜನಿಕರು ಇಲ್ಲಿ ಸಂಚರಿಸುವುದರಿಂದ ಸಿಗರೇಟು ಸೇದಿ ಬಿಸಾಡಿದ ಕಿಡಿ ತಗುಲಿ ಇಲ್ಲವೇ ಕೆಲವು ಕಿಡಿಗೇಡಿಗಳು ಬೆಂಕಿ ಹಚ್ಚುವುದರಿಂದ ಈ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ ಎಂದು ವಿವಿ ಸಿಬ್ಬಂದಿ ಹೇಳುತ್ತಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ