ಆ್ಯಪ್ನಗರ

ಶೋಷಿತರು ಜಾತಿ ಹೆಸರು ಹೇಳಲು ಹಿಂಜರಿಯಬಾರದು

ಶೋಷಿತ ಸಮುದಾಯಗಳು ತಮ್ಮ ಜಾತಿಯ ಹೆಸರನ್ನು ಹೇಳಲು ಹಿಂಜರಿಯಬಾರದು. ಜಾತಿಯಿಂದಲೇ ಸಮಾಜದಲ್ಲಿ ಶೋಷಣೆ ನಡೆಯುತ್ತಿದೆ. ಹಾಗಾಗಿ, ಜಾತಿಯನ್ನು ಮುಂದಿಟ್ಟುಕೊಂಡು ಬದಲಾವಣೆ ತರಬೇಕು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

Vijaya Karnataka 6 Jan 2019, 5:00 am
ಬೆಂಗಳೂರು : ಶೋಷಿತ ಸಮುದಾಯಗಳು ತಮ್ಮ ಜಾತಿಯ ಹೆಸರನ್ನು ಹೇಳಲು ಹಿಂಜರಿಯಬಾರದು. ಜಾತಿಯಿಂದಲೇ ಸಮಾಜದಲ್ಲಿ ಶೋಷಣೆ ನಡೆಯುತ್ತಿದೆ. ಹಾಗಾಗಿ, ಜಾತಿಯನ್ನು ಮುಂದಿಟ್ಟುಕೊಂಡು ಬದಲಾವಣೆ ತರಬೇಕು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
Vijaya Karnataka Web downtroddens should not hesitate to tell cast name
ಶೋಷಿತರು ಜಾತಿ ಹೆಸರು ಹೇಳಲು ಹಿಂಜರಿಯಬಾರದು


ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಕುರುಬರ ಸಾಂಸ್ಕೃತಿಕ ಪರಿಷತ್‌ ಶನಿವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ 'ಕುರುಬರ ಸಂಸ್ಕೃತಿ ದರ್ಶನ ಮಾಲಿಕೆ-ಹದಿಮೂರು ಗ್ರಂಥ'ಗಳನ್ನು ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.

''ಜಾತಿಯ ಹೆಸರು ಹೇಳಿಕೊಳ್ಳಲು ನಮ್ಮವರು ಹಿಂಜರಿಯುತ್ತಾರೆ. ನಾನು ಕಾನೂನು ಪದವಿಯಲ್ಲಿ ವ್ಯಾಸಂಗ ಮಾಡುವಾಗ ಹಲವು ಮಂದಿ ಕುರುಬರು ಗೌಡ ಎಂದು ಹೆಸರಿಟ್ಟುಕೊಂಡಿದ್ದರು. ಅವರ ಜಾತಿಯನ್ನು ಕೇಳಿದರೆ ಗೌಡ ಎಂದು ಹೇಳುತ್ತಿದ್ದರು. ಹಾಗಾಗಿ, ನಾನು ಕಾಳಿದಾಸ ವಿದ್ಯಾರ್ಥಿಗಳ ಬಳಗವನ್ನು ಪ್ರಾರಂಭಿಸಿ ಎಲ್ಲಾ ಕಾಲೇಜುಗಳಿಗೂ ಭೇಟಿ ನೀಡಿ ಕುರುಬ ವಿದ್ಯಾರ್ಥಿಗಳನ್ನು ಸಂಘಟಿಸುತ್ತಿದ್ದೆ. ಹಾಗಾಗಿ, ಜಾತಿಯಿಂದ ಲಾಭ ಪಡೆದವರು ನಮ್ಮನ್ನು ಜಾತಿವಾದಿಗಳು ಎನ್ನುತ್ತಾರೆ. ಶತಮಾನಗಳಿಂದ ಶೋಷಣೆಗೊಳಪಟ್ಟ ಸಮುದಾಯಗಳು ಸಂಘಟಿತರಾಗಿ ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಮೇಲಕ್ಕೆ ಬರಲು ಯತ್ನಿಸಿದರೆ ಅದು ಜಾತಿವಾದ ಅಲ್ಲ. ಬದಲಾಗಿ, ಅದು ಸಮುದಾಯದ ಜಾಗೃತ ಪ್ರಜ್ಞೆಯಾಗಲಿದೆ,'' ಎಂದು ವ್ಯಾಖ್ಯಾನಿಸಿದರು.

''ಮನುಷ್ಯರು ನೂರಾರು ಜಾತಿಗಳನ್ನು ಸೃಷ್ಟಿಸಿದ್ದಾರೆ. ನಾನು 1991ರಲ್ಲಿ ಕೊಪ್ಪಳದಲ್ಲಿ ಚುನಾವಣೆಗೆ ಸ್ಪರ್ಧಿಸಿದ್ದಾಗ, ಕೆಲವರು ನಿಮಗೆ ವೋಟು ಹಾಕುತ್ತೇವೆ. ಆದರೆ ನಮ್ಮ ಬೀದಿಗೆ ಬರಬೇಡಿ ಎಂದು ತಡೆ ಒಡ್ಡಿದ್ದರು. ದೇಶದಲ್ಲಿ ಕಲಿತವರು ಮತ್ತು ಕಲಿಯದವರ ಮಧ್ಯೆ ಸಂಘರ್ಷ ನಡೆದಿರುವುದು ಮಹಾರಾಷ್ಟ್ರ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಮಾತ್ರ. ಹಾಗಾಗಿ, ನಮ್ಮಲ್ಲಿ ಇಂದೂ ಕೂಡ ಅಸಮಾನತೆ ಅಸ್ತಿತ್ವದಲ್ಲಿದೆ. ಒಂದು ವೇಳೆ ದೇಶಾದ್ಯಂತ ಇಂತಹ ಸಂಘರ್ಷ ನಡೆದಿದ್ದರೆ, ಭಾರತದ ಚರಿತ್ರೆ ಬದಲಾಗುತ್ತಿತ್ತು. ನಾವು ಚಿಕ್ಕ ಹುಡುಗರಾಗಿದ್ದಾಗ ಕುರುಬರಿಗೇಕೆ ವಿದ್ಯೆ ಎಂದು ಊರಿನಲ್ಲಿ ದೊಡ್ಡ ಜಾತಿಯವರು ಹೇಳುತ್ತಿದ್ದರು. 1992ರಲ್ಲಿ ಕಾಗಿನೆಲೆಯಲ್ಲಿ ಕನಕಗುರು ಪೀಠ ಪ್ರಾರಂಭಿಸಿದ ನಂತರ ಕುರುಬ ಸಮುದಾಯಕ್ಕೆ ಚಲನೆ ಸಿಕ್ಕಿತು. ಹಾಗಾಗಿ, ಶೋಷಿತ ಸಮುದಾಯಗಳಿಗೆ ದೊಡ್ಡ ಇತಿಹಾಸ, ಪರಂಪರೆಯಿದ್ದು ಅದನ್ನು ಎಲ್ಲರಿಗೂ ತಿಳಿಸುವ ಕೆಲಸ ಆಗಬೇಕು,'' ಎಂದು ಸಿದ್ದರಾಮಯ್ಯ ಹೇಳಿದರು.

ಸಚಿವ ಸಿ.ಎಸ್‌.ಶಿವಳ್ಳಿ, ''ಕಾಗಿನೆಲೆ ಪೀಠವನ್ನು ಕಟ್ಟಿದ ನಂತರ ಹಾಲುಮತ ಧರ್ಮ ಪ್ರಚಾರ ನಡೆಯುತ್ತಿಲ್ಲ. ಹಾಗಾಗಿ, ಕಾಗಿನೆಲೆಯಲ್ಲಿ ಧರ್ಮಾಧಿಕಾರಿಗಳನ್ನು ತಯಾರು ಮಾಡುವ ವ್ಯವಸ್ಥೆಯಾಗಬೇಕು. ರಾಜ್ಯದಲ್ಲಿ ಮರಾಠಿ ಮಾತನಾಡುವಂತಹ ಧನಗರ್‌, ಹಟಕಾರ್‌ ಮುಂತಾದ ಕುರುಬ ಸಮುದಾಯದ ಉಪ ಪಂಗಡಗಳಿವೆ. ಇವುಗಳನ್ನು ಜನಗಣತಿಯಲ್ಲಿ ಕುರುಬ ಸಮುದಾಯದಿಂದ ಹೊರಗಿಡಲಾಗಿದೆ. ಆದ್ದರಿಂದ ಈ ಪಂಗಡಗಳನ್ನು ಕುರುಬ ಸಮುದಾಯದ ಮುಖ್ಯವಾಹಿನಿಗೆ ತರಬೇಕು'' ಎಂದು ಹೇಳಿದರು.

ಈಶ್ವರಾನಂದಪುರಿ ಸ್ವಾಮೀಜಿ, ಹಿರಿಯ ವಿದ್ವಾಂಸ ಪ್ರೊ.ಹಂಪ ನಾಗರಾಜಯ್ಯ, ಸಚಿವರಾದ ಬಂಡೆಪ್ಪ ಕಾಶಂಪೂರ್‌, ಎಂ.ಟಿ.ಬಿ.ನಾಗರಾಜ್‌, ಶಾಸಕರಾದ ಭೈರತಿ ಬಸವರಾಜು, ರಾಮಯ್ಯ, ಕುರುಬರ ಸಾಂಸ್ಕೃತಿಕ ಪರಿಷತ್‌ನ ಅಧ್ಯಕ್ಷ ಎಚ್‌.ಎಂ. ರೇವಣ್ಣ, ವಿಧಾನ ಪರಿಷತ್‌ ಮಾಜಿ ಸದಸ್ಯ ಹುಲಿನಾಯ್ಕರ್‌ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ