ಆ್ಯಪ್ನಗರ

ಇನ್ಶೂರೆನ್ಸ್‌ ದಾಖಲೆ ಇಲ್ಲದೆ ಸವಾರಿ ಮಾಡಿದ್ರೆ 2,000 ರೂ ದಂಡ

ದೇಶದಲ್ಲಿ ನೂತನ ಮೋಟಾರು ವಾಹನ ಕಾಯಿದೆ ಜಾರಿಗೆ ಬಂದ ಬಳಿಕ ಸಂಚಾರ ನಿಯಮ ಉಲ್ಲಂಘಿಸುವವರಿಗೆ ವಿಧಿಸುವ ದಂಡದ ಪ್ರಮಾಣ ಭಾರೀ ಏರಿಕೆಯಾಗಿದೆ. ವಾಹನ ಸವಾರರು ಎಲ್ಲ ದಾಖಲೆಗಳನ್ನು ಡಿಜಿ ಲಾಕರ್‌ನಲ್ಲಿ ಇಟ್ಟುಕೊಂಡಿದ್ದರೂ ವಿಮಾ ದಾಖಲೆಯನ್ನು ಮಾತ್ರ ಮುದ್ರಿತ ಪ್ರತಿಯನ್ನೇ ತೋರಿಸಬೇಕಾಗುತ್ತದೆ.

TNN 6 Sep 2019, 12:47 pm
ಬೆಂಗಳೂರು: ವಾಹನದ ದಾಖಲೆಗಳನ್ನು ಡಿಜಿಲಾಕರ್‌ನಲ್ಲಿ ಇಟ್ಟುಕೊಂಡು ಚಲಾಯಿಸುವ ಸವಾರರು ಇನ್ಶೂರೆನ್ಸ್‌ ದಾಖಲೆಯನ್ನು ಮಾತ್ರ ಮುದ್ರಿತ ಪ್ರತಿಯನ್ನೇ ಇರಿಸಿಕೊಳ್ಳಬೇಕಾದ ಅನಿವಾರ್ಯತೆ ಇದೆ. ಪೊಲೀಸರು ಕೇಳಿದಾಗ ದಾಖಲೆ ತೋರಿಸಿದ್ದರೆ ಮೊದಲ ತಪ್ಪಿಗೆ 2,000 ರೂ ದಂಡ ತೆರಬೇಕಾಗುತ್ತದೆ.
Vijaya Karnataka Web Traffic


ಹೀಗಾಗಿ ಡಿಎಲ್‌ ಮತ್ತು ಆರ್‌ಸಿ ಗಳನ್ನು ಡಿಜಿಲಾಕರ್‌ನಿಂದಲೇ ತೋರಿಸಿದರೂ ಇನ್ಶೂರೆನ್ಸ್‌ ವಿಚಾರದಲ್ಲಿ ಹಾರ್ಡ್ ಕಾಪಿಯನ್ನೇ ಇಟ್ಟುಕೊಳ್ಳಬೇಕಾಗುತ್ತದೆ. ಬೆಂಗಳೂರು ಸಂಚಾರ ಪೊಲೀಸರು ಈ ಬಗ್ಗೆ ಗುರುವಾರ ಟ್ವೀಟ್ ಮಾಡಿ ನಾಗರಿಕರಿಗೆ ಸೂಚನೆಗಳನ್ನು ನೀಡಿದ್ದಾರೆ.

ಈ ಸಂಬಂಧ ಟೈಮ್ಸ್ ಆಫ್ ಇಂಡಿಯಾ ಹಲವು ಟ್ರಾಫಿಕ್ ಅಧಿಕಾರಿಗಳನ್ನು ಸಂಪರ್ಕಿಸಿದಾಗ, ಇದನ್ನು ಕಡ್ಡಾಯಗೊಳಿಸಿದ ಬಗ್ಗೆ ತಮಗೆ ಇನ್ನೂ ಸೂಚನೆ ಬಂದಿಲ್ಲ ಎಂದು ತಿಳಿಸಿದ್ದಾರೆ.

ಇನ್ಶೂರೆನ್ಸ್‌ (ಮೂಲ ದಾಖಲೆ) ಹಾರ್ಡ್ ಕಾಪಿಯನ್ನೇ ಇಟ್ಟುಕೊಳ್ಳಬೇಕು. ಡ್ರೈವಿಂಗ್ ಲೈಸೆನ್ಸ್‌, ನೋಂದಣಿ ಪ್ರಮಾಣಪತ್ರ (ಆರ್‌ಸಿ) ಮತ್ತು ಮಾಲಿನ್ಯ ಪ್ರಮಾಣಪತ್ರಗಳು ಡಿಜಿಲಾಕರ್‌ನಿಂದ ತೋರಿಸಿದರೆ ಸಾಕಾಗುತ್ತದೆ. ಒಂದು ವೇಳೆ ವಾಹನದ ಮುಟ್ಟುಗೋಲಿನ ಸಂದರ್ಭ ಬಂದರೆ ಆಗ ಡಿಎಲ್‌ ಮೂಲ ದಾಖಲೆಯನ್ನೇ ತೋರಿಸಬೇಕಾಗುತ್ತದೆ ಎಂದು ಟ್ರಾಫಿಕ್ ಪೊಲೀಸರು ತಿಳಿಸಿದರು.

ಒಂದೇ ಬಾರಿಗೆ, ಒಬ್ಬನೇ ವ್ಯಕ್ತಿಗೆ 17,000 ರೂ. ದಂಡ!: ಟ್ರಾಫಿಕ್ ಪೊಲೀಸರ ದಾಖಲೆ

ನೂತನ ಮೋಟಾರ್ ವಾಹನ ಕಾಯ್ದೆ ಜಾರಿಯನ್ನು ಮಂಗಳವಾರ ಸಂಜೆ ಅಧಿಕೃತವಾಗಿ ಘೋಷಿಸಿದ ಬಳಿಕ ಮೊದಲ 37 ಗಂಟೆಗಳಲ್ಲಿ ಸಂಚಾರ ಪೊಲೀಸರು ಒಟ್ಟು 2,978 ಕೇಸುಗಳನ್ನು ದಾಖಲಿಸಿದ್ದಾರೆ. ಒಟ್ಟು 30.1 ಲಕ್ಷ ರೂ ದಂಡವನ್ನೂ ವಿಧಿಸಿದ್ದಾರೆ. ಇನ್ಶೂರೆನ್ಸ್ ರಹಿತ ವಾಹನಗಳಿಗೆ ಸಂಬಂಧಿಸಿದಂತೆ 24 ಕೇಸುಗಳನ್ನು ದಾಖಲಿಸಿ ಚಾಲಕರಿಂದ 26,000 ರೂ ದಂಡ ಸ್ವೀಕರಿಸಲಾಗಿದೆ. ನೂತನ ಕಾಯಿದೆ ಜಾರಿಗೆ ಮೊದಲು ಪೊಲೀಸರು ಪ್ರತಿದಿನ ಸರಾಸರಿ 26 ಲಕ್ಷ ರೂ ದಂಡ ಸಂಗ್ರಹಿಸುತ್ತಿದ್ದರು.

ಕೇಂದ್ರ ಸರಕಾರದ ಅಧಿಸೂಚನೆ ಪ್ರಕಾರ, ಮೊದಲ ಬಾರಿ ತಪ್ಪು ಮಾಡಿದವರಿಗೆ (ಇನ್ಶೂರೆನ್ಸ್‌ ರಹಿತ ಚಾಲನೆ) 2,000 ರೂ, ಎರಡನೇ ಸಲ ತಪ್ಪು ಮಾಡಿದವರಿಗೆ 4,000 ರೂ ದಂಡ ವಿಧಿಸಲಾಗುತ್ತಿದೆ.

ಈ ಮಧ್ಯೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪೊಲೀಸ್ ಕಮಿನಷರ್ ಭಾಸ್ಕರ್ ರಾವ್, ದಂಡ ಹೆಚ್ಚಳದ ಉದ್ದೇಶ ಅಧಿಕ ಆದಾಯ ಸಂಗ್ರಹಣೆಯಲ್ಲ; ಬದಲಿಗೆ ಸಂಚಾರ ಶಿಸ್ತು ಮೂಡಿಸುವುದಷ್ಟೇ ಆಗಿದೆ ಎಂದು ತಿಳಿಸಿದರು. ಬದಲಾವಣೆಯನ್ನು ಒಪ್ಪಿಕೊಳ್ಳಲು ಸ್ವಲ್ಪ ಕಾಲಾವಕಾಶ ಬೇಕಾಗಬಹುದು ಎಂದು ಹೆಚ್ಚುವರಿ ಆಯುಕ್ತ (ಟ್ರಾಫಿಕ್) ರವಿಕಾಂತೇ ಗೌಡ ಬಿ.ಆರ್ ತಿಳಿಸಿದರಯ.

ಟ್ರಾಫಿಕ್ ಪೊಲೀಸರ ಕೈಯ್ಯಲ್ಲಿರುವ ಎಲೆಕ್ಟ್ರಾನಿಕ್ ಸಾಧನಗಳು ನೂತನ ಸಾಫ್ಟ್‌ವೇರ್ ಜತೆಗೆ ಅಪ್‌ಡೇಟ್ ಆಗಬೇಕಿದೆ. ಹೀಗಾಗಿ ಕೆಲವೆಡೆ ಹಳೆಯ ಪ್ರಮಾಣದ ದಂಡವನ್ನೇ ವಿಧಿಸಲಾಗುತ್ತಿದೆ. 280 ಪೊಲೀಸ್ ಸಿಬ್ಬಂದಿಗೆ ಬಾಡಿ ಕ್ಯಾಮೆರಾಗಳನ್ನು ನೀಡಲಾಗಿದೆ. ಶೀಘ್ರವೇ 600 ಮಂದಿಗೆ ಇದನ್ನು ಒದಗಿಸಲಾಗುವುದು ಎಂದು ರಾವ್ ವಿವರಿಸಿದರು.

ಒನ್‌ ವೇ ಉಲ್ಲಂಘನೆಗೆ ಕೊಲೆ ಯತ್ನ ಕೇಸ್‌?
ಏಕಮುಖ ಸಂಚಾರದ ನಿಯಮ ಉಲ್ಲಂಘಿಸಿದವರ ವಿರುದ್ಧ ಕೊಲೆ ಯತ್ನದ ಕೇಸು ದಾಖಲಾಗುವುದು ಎಂದು ಪೊಲೀಸ್ ಆಯುಕ್ತರು ಎಚ್ಚರಿಕೆ ನೀಡಿದ್ದಾರೆ. ಕರ್ತವ್ಯದಲ್ಲಿರುವ ಟ್ರಾಫಿಕ್ ಪೊಲೀಸ್ ಸಿಬ್ಬಂದಿಯೊಬ್ಬರು ಅಪಘಾತದಲ್ಲಿ ಮೃತಪಟ್ಟ ಹಿನ್ನೆಲೆಯಲ್ಲಿ ಕಳವಳ ವ್ಯಕ್ತಪಡಿಸಿದ ಅವರು, ತಮ್ಮ ಸಿಬ್ಬಂದಿಯನ್ನು ರಕ್ಷಿಸಿಕೊಳ್ಳಲಾಗದ್ದಕ್ಕೆ ವಿಷಾದಿಸಿದರು. ಏಕಮುಖ ಸಂಚಾರ ನಿಯಮವನ್ನು ಗೊತ್ತಿದ್ದೂ ಉಲ್ಲಂಘಿಸುವ ಘನವಾಹನ ಚಾಲಕರ ವಿರುದ್ಧ ಕೊಲೆಯತ್ನದ ಕೇಸು ದಾಖಲಿಸಲಾಗುವುದು. ತಮ್ಮ ಕೃತ್ಯದ ಪರಿಣಾಮದ ಅರಿವಿದ್ದೂ ನಿಯಮ ಉಲ್ಲಂಘಿಸುವವರನ್ನು ದಾರಿಗೆ ತರಲು ಈ ಕ್ರಮ ಅನಿವಾರ್ಯ ಎಂದು ಆಯುಕ್ತರು ನುಡಿದರು.

ಮಂಗಳವಾರ ರಾತ್ರಿ ದೇವನಹಳ್ಳಿ ಟ್ರಾಫಿಕ್‌ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕರ್ತವ್ಯ ನಿರತ ಸಿಬ್ಬಂದಿ ವೆಂಕಟರಾಮು ಅವರು ರಾಂಗ್ ಸೈಡಿನಲ್ಲಿ ಬಂದ ಕೆಎಂಎಫ್ ಟ್ರಕ್ ಡಿಕ್ಕಿ ಹೊಡೆದು ಮೃತಪಟ್ಟಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ