ಆ್ಯಪ್ನಗರ

ಹೆಲಿಕಾಪ್ಟರ್‌ ಹಾರಾಟ ಮಾರ್ಗದಲ್ಲಿ ಡ್ರೋನ್‌

ಎಚ್‌ಎಎಲ್‌ನ ರುದ್ರ ಹೆಲಿಕಾಪ್ಟರ್‌ (ಎಎಲ್‌ಎಚ್‌-ಡಬ್ಲ್ಯುಎಸ್‌ಐ) ಹಾರಾಟದ ವೇಳೆ ನಿಯಮಬಾಹಿರವಾಗಿ ಸುಮಾರು 4 ಸಾವಿರ ಅಡಿ ಎತ್ತರದಲ್ಲಿ ಡ್ರೋನ್‌ ಹಾರಾಟ ನಡೆಸಿರುವ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಎಚ್‌ಎಎಲ್‌ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.

Vijaya Karnataka 23 Dec 2018, 5:00 am
ಬೆಂಗಳೂರು: ಎಚ್‌ಎಎಲ್‌ನ ರುದ್ರ ಹೆಲಿಕಾಪ್ಟರ್‌ (ಎಎಲ್‌ಎಚ್‌-ಡಬ್ಲ್ಯುಎಸ್‌ಐ) ಹಾರಾಟದ ವೇಳೆ ನಿಯಮಬಾಹಿರವಾಗಿ ಸುಮಾರು 4 ಸಾವಿರ ಅಡಿ ಎತ್ತರದಲ್ಲಿ ಡ್ರೋನ್‌ ಹಾರಾಟ ನಡೆಸಿರುವ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಎಚ್‌ಎಎಲ್‌ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.
Vijaya Karnataka Web dronecamera2


ಸಯ್ಯದ್‌ ಮತ್ತು ಭರತ್‌ ಬಂಧಿತರು. ವೈಟ್‌ಫೀಲ್ಡ್‌ ವ್ಯಾಪ್ತಿಯಲ್ಲಿ ಡಿ.14 ಮತ್ತು 15ರಂದು ಪ್ರತಿಷ್ಠಿತ ರಿಯಲ್‌ ಎಸ್ಟೇಟ್‌ ಏಜೆನ್ಸಿಯೊಂದರ ಕಟ್ಟಡ/ಆಸ್ತಿಯನ್ನು ಸ್ಟುಡಿಯೋವೊಂದು ವಿಡಿಯೋ ಶೂಟ್‌ ಮಾಡಿದ್ದು, ಅದಕ್ಕಾಗಿ ಡ್ರೋನ್‌ ಬಳಕೆ ಮಾಡಿತ್ತು. ಆದರೆ, ಡಿ.15ರಂದು ನಿಯಮಬಾಹಿರವಾಗಿ ನಿಗದಿಪಡಿಸಿದ ಎತ್ತರ ಮೀರಿ ಹಾರಾಟ ನಡೆಸಿದೆ. ಆ ದಿನ ಎಚ್‌ಎಎಲ್‌ನ ರುದ್ರ ಹೆಲಿಕಾಪ್ಟರ್‌ ಎಂದಿನಂತೆ ಹಾರಾಟ ನಡೆಸುತ್ತಿದ್ದಾಗ ಡ್ರೋನ್‌ ಹಾರಾಟ ನಡೆಸುತ್ತಿರುವುದನ್ನು ಗಮನಿಸಿದ ಪೈಲಟ್‌, ಎಚ್‌ಎಎಲ್‌ನ ಏರ್‌ ಟ್ರಾಫಿಕ್‌ ಕಂಟ್ರೋಲ್‌ಗೆ (ಎಟಿಸಿ) ಮಾಹಿತಿ ನೀಡಿದ್ದರು. ನಂತರ ಎಚ್‌ಎಎಲ್‌ನ ಅಧಿಕಾರಿಗಳು, ಈ ಮೇಲ್‌ ಮೂಲಕ ಎಚ್‌ಎಎಲ್‌ ಪೊಲೀಸರಿಗೆ ದೂರು ನೀಡಿದ್ದರು.

''ಎಟಿಸಿಯಿಂದ ಇ ಮೇಲ್‌ ಮೂಲಕ ಶುಕ್ರವಾರ ದೂರು ಬಂದಿದೆ. ಈ ಹಿನ್ನೆಲೆಯಲ್ಲಿ ದೂರಿನಲ್ಲಿ ತಿಳಿಸಿರುವ ವೈಟ್‌ಫೀಲ್ಡ್‌ ಪ್ರದೇಶಕ್ಕೆ ಹೋಗಿ ಪರಿಶೀಲನೆ ನಡೆಸಿದಾಗ ಡಿ.14 ಮತ್ತು 15ರಂದು ಡ್ರೋನ್‌ ಬಳಸಿ ಶೂಟಿಂಗ್‌ ಮಾಡಿರುವುದು ಖಚಿತವಾಗಿದೆ'' ಎಂದು ತನಿಖೆ ನಡೆಸುತ್ತಿರುವ ಎಚ್‌ಎಎಲ್‌ ಪೊಲೀಸರು ತಿಳಿಸಿದರು.

''ರಿಯಲ್‌ ಎಸ್ಟೇಟ್‌ ಕಂಪನಿ ತನ್ನ ಕಟ್ಟಡ/ಆಸ್ತಿಯ ಶೂಟಿಂಗ್‌ ಮಾಡಿಸಲು ಫೋಟೋ ಸ್ಟುಡಿಯೋವೊಂದಕ್ಕೆ ಆರ್ಡರ್‌ ನೀಡಿತ್ತು. ಅವರು ಶೂಟಿಂಗ್‌ ಮಾಡುವ ವೇಳೆ ನಿಯಮಬಾಹಿರವಾಗಿ, ಭಾರಿ ಎತ್ತರದಲ್ಲಿ ಡ್ರೋನ್‌ ಹಾರಾಟ ನಡೆಸಿದ್ದಾರೆ. ರಿಯಲ್‌ ಎಸ್ಟೇಟ್‌ ಕಂಪನಿಯ ಅಧಿಕಾರಿಗಳು ನೀಡಿದ ಮಾಹಿತಿ ಆಧರಿಸಿ ಫೋಟೋ ಶೂಟಿಂಗ್‌ ಮಾಡಿದ್ದ ಸ್ಟುಡಿಯೋದ ಸಿಬ್ಬಂದಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದೇವೆ. ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು'' ಎಂದು ಅಧಿಕಾರಿ ತಿಳಿಸಿದರು.

''ಪೊಲೀಸರು ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ,'' ಎಂದು ಎಚ್‌ಎಎಲ್‌ನ ಸಾರ್ವಜನಿಕ ಸಂಪರ್ಕ ವಿಭಾಗದ ಅಧಿಕಾರಿ 'ವಿಜಯ ಕರ್ನಾಟಕ'ಕ್ಕೆ ತಿಳಿಸಿದರು.

ಅಪಾಯದ ಸಾಧ್ಯತೆ ?: ಎಚ್‌ಎಎಲ್‌ನಲ್ಲಿ ಸೇನೆಯ ವಿಮಾನ, ಹೆಲಿಕಾಪ್ಟರ್‌ಗಳು ಹಾಗೂ ಅಭಿವೃದ್ಧಿ ಹಂತದಲ್ಲಿರುವ ವಿಮಾನ, ಹೆಲಿಕಾಪ್ಟರ್‌ಗಳು ಪರೀಕ್ಷೆಗಾಗಿ ಕಡಿಮೆ ಎತ್ತರದಲ್ಲೂ ಹಾರಾಟ ನಡೆಸುತ್ತಿರುತ್ತವೆ. ವಿಮಾನಗಳ ವೇಗ ಹೆಚ್ಚಾಗಿರುವ ಕಾರಣ ದಿಢೀರ್‌ ಎಂದು ಡ್ರೋನ್‌ಗಳು ಅಡ್ಡ ಬಂದರೆ ತಪ್ಪಿಸಿಕೊಳ್ಳಲು ಕಡಿಮೆ ಅವಕಾಶ ಇರುವ ಕಾರಣ ಡಿಕ್ಕಿಯಾಗುವ ಸಾಧ್ಯತೆ ಇರುತ್ತದೆ. ಆದರೆ, ಪೈಲಟ್‌ನ ಸಮಯಪ್ರಜ್ಞೆಯಿಂದ ಯಾವುದೇ ಅನಾಹುತ ಸಂಭವಿಸಿಲ್ಲ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ