ಆ್ಯಪ್ನಗರ

ಬಿಬಿಎಂಪಿ ಆಯುಕ್ತರಿಂದ ಎಲಿವೇಟೆಡ್ ಕಾರಿಡಾರ್ ಕಾಮಗಾರಿ ವೀಕ್ಷಣೆ, ಶಾಸಕ ರಾಮಲಿಂಗಾ ರೆಡ್ಡಿ ಸಾಥ್

2.5 ಕಿ.ಮಿ ಉದ್ದದ ಮೇಲ್ಸೇತುವೆಯನ್ನು 203 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತಿದ್ದು, ಶೇ. 45ರಷ್ಟು ಕಾಮಗಾರಿ ಮುಗಿದಿದೆ. ಶೇ. 32 ರಷ್ಟು ಹಣ ಗುತ್ತಿಗೆದಾರರಿಗೆ ಬಿಡುಗಡೆಗೊಳಿಸಲಾಗಿದೆ.

Vijaya Karnataka Web 18 Sep 2020, 3:26 pm
ಬೆಂಗಳೂರು: ಕೋರಮಂಗಲ ಸೋನಿ ವರ್ಲ್ಡ್ ಜಂಕ್ಷನ್ ಬಳಿ ನಡೆಯುತ್ತಿರುವ ಮೇಲ್ಸೇತುವೆ (ಎಲಿವೇಟೆಡ್ ಕಾರಿಡಾರ್) ಪ್ರಗತಿ ಕಾಮಗಾರಿಯನ್ನು ಇಂದು ಬಿಬಿಎಂಪಿ ಕಮೀಷನರ್‌ ಮಂಜುನಾಥ್ ಪ್ರಸಾದ್ ತಪಾಸಣೆ ನಡೆಸಿದರು.
Vijaya Karnataka Web elevated corridor


ಕೋರಮಂಗಲದಲ್ಲಿ 100 ಅಡಿ ಮುಖ್ಯ ರಸ್ತೆಯಲ್ಲಿ ಸಂಚಾರ ದಟ್ಟಣೆ ಕಡಿಮೆ ಮಾಡುವ ಉದ್ದೇಶದಿಂದ ಈಜೀಪುರ ಸಿಗ್ನಲ್‌ನಿಂದ ಕೇಂದ್ರೀಯ ಸದನ ಜಂಕ್ಷನ್‌ನವರೆಗಿನ ಎಲಿವೇಟೆಡ್ ಕಾರಿಡಾರ್ ಕಾಮಗಾರಿ ಪ್ರಗತಿಯಲ್ಲಿದ್ದು, ಕಾಮಗಾರಿಗೆ ವೇಗ ನೀಡಿ ತ್ವರಿತವಾಗಿ ಪೂರ್ಣಗೊಳಿಸುವಂತೆ ಆಯುಕ್ತರು ಅಧಿಕಾರಿಗಳಿಗೆ ಸೂಚನೆ ನೀಡಿದರು. ಈ ವೇಳೆ ಶಾಸಕರಾದ ಶ್ರೀ ರಾಮಲಿಂಗಾರೆಡ್ಡಿ, ಯೋಜನಾ ವಿಭಾಗದ ಮುಖ್ಯ ಅಭಿಯಂತರರು ಶ್ರೀ ಎನ್.ರಮೇಶ್, ಅಧೀಕ್ಷಕ ಅಭಿಯಂತರರು ಶ್ರೀ ಎಂ.ಲೋಕೇಶ್ ಹಾಗೂ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.

2.5 ಕಿ.ಮಿ ಉದ್ದದ ಮೇಲ್ಸೇತುವೆಯನ್ನು 203 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತಿದ್ದು, ಶೇ. 45ರಷ್ಟು ಕಾಮಗಾರಿ ಮುಗಿದಿದೆ. ಶೇ. 32 ರಷ್ಟು ಹಣ ಗುತ್ತಿಗೆದಾರರಿಗೆ ಬಿಡುಗಡೆಗೊಳಿಸಲಾಗಿದ್ದು, ಉಳಿದ ಮೊತ್ತವನ್ನು ಬಿಡುಗಡೆಗೊಳಿಸಲು ಕ್ರಮ ವಹಿಸಲಾಗುವುದು. ಸೆಂಟ್ ಜಾನ್ಸ್ ರೀಸರ್ಚ್ ಇನ್ಸ್ಟಿಟ್ಯೂಟ್ ಕಾಲೇಜಿನ ಬಳಿ 1 ರ‍್ಯಾಂಪ್ ಬರಲಿದ್ದು, ಸೆಂಟ್ ಜಾನ್ಸ್ ಕಾಲೇಜಿಗೆ ಜಾಗ ನೀಡುವಂತೆ ಕೋರಲಾಗಿತ್ತು. ಆದರೆ ಇದುವರೆಗೆ ಜಾಗವನ್ನು ಹಸ್ತಾಂತರ ಮಾಡಿರುವುದಿಲ್ಲ. ಈ ಸಂಬಂಧ ಸೆಂಟ್ ಜಾನ್ಸ್ ಮುಖ್ಯಸ್ಥರ ಜೊತೆ ಸಭೆ ನಡೆಸಿ ಜಾಗ ಪಡೆದು ಕಾಮಗಾರಿಗೆ ವೇಗ ನೀಡಲಾಗುವುದು. ಕಾಮಗಾರಿಯನ್ನು ತ್ವರಿತವಾಗಿ ಮುಗಿಸಲು ಪ್ರತಿ ತಿಂಗಳಿಗೊಮ್ಮೆ ಗುತ್ತಿಗೆದಾರರ ಜೊತೆ ಪರಿಶೀಲನಾ ಸಭೆ ನಡೆಸಲಾಗುವುದು ಎಂದರು.

ಹಿರಿಯ ಪತ್ರಕರ್ತ ನಾಗರಾಜ್ ದೀಕ್ಷಿತ್ ನಿಧನಕ್ಕೆ ಬಿಎಸ್‌ವೈ, ಡಿಸಿಎಂ ಅಶ್ವತ್ಥ ನಾರಾಯಣ ಸಂತಾಪ

ಮೇಲ್ಸೇತುವೆಗೆ ಒಟ್ಟು 81 ಪಿಲ್ಲರ್‌ಗಳು ಬರಲಿದ್ದು, ಈಗಾಗಲೇ 67 ಪಿಲ್ಲರ್‌ಗಳನ್ನು ಅಳವಡಿಸಲಾಗಿದೆ. ಮೇಲ್ಸೇತುವೆ ಮಾರ್ಗದಲ್ಲಿ 7 ಜಂಕ್ಷನ್‌ಗಳು ಬರಲಿದ್ದು, 4 ರ‍್ಯಾಂಪ್‌ಗಳನ್ನು ಅಳವಡಿಸಲಾಗುತ್ತಿದೆ. ರಸ್ತೆಯ ಎರಡು ಬದಿಯಲ್ಲಿ ತಲಾ ಎರಡು ಪಥಗಳು ಬರಲಿವೆ. ಮೇಲುಸೇತುವೆ ಮಾರ್ಗ(Defence Land)ದಲ್ಲಿ 25 ಮರಗಳನ್ನು ಸ್ಥಳಾಂತರಿಸಲಾಗುವುದು. ಜೊತೆಗೆ ರಸ್ತೆ ಮಾರ್ಗದಲ್ಲಿ ಬರುವ 83 ಮರಗಳಲ್ಲಿ ರೆಂಬೆ-ಕೊಂಬೆಗಳನ್ನು ಕಟಾವು ಮಾಡಲಾಗುತ್ತದೆ. ಮೇಲ್ಸೇತುವೆ ಕೇಂದ್ರೀಯ ಸದನ ಜಂಕ್ಷನ್ ಮತ್ತು ಸೋನಿ ವರ್ಲ್ಡ್ ಜಂಕ್ಷನ್‌ಗಳ ಮೂಲಕ ಹಾದು ಹೋಗಲಿದ್ದು, ಕೇಂದ್ರೀಯ ಸದನ ಜಂಕ್ಷನ್ ಮೂಲಕ ತಾವರೆಕರೆ, ಎಂ.ಜಿ.ರಸ್ತೆ, ಹೊಸೂರು ರಸ್ತೆ, ಅಗರ, ಬಿಟಿಎಂ ಲೇಔಟ್, ಕೋರಮಂಗಲ, ಬಿಡಿಎ ಕಾಂಪ್ಲೆಕ್ಸ್, ಸರ್ಜಾಪುರ ಮುಖ್ಯರಸ್ತೆ ಹಾಗೂ ವಿವೇಕನಗರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳು ಹಾದು ಹೋಗುತ್ತವೆ. ಸೋನಿ ವರ್ಲ್ಡ್ ಜಂಕ್ಷನ್ ಮೂಲಕ ಇಂದಿರಾನಗರ, ಕೇಂದ್ರೀಯ ಸದನ, ವಿವೇಕನಗರ, ಜಕ್ಕಸಂದ್ರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳು ಹಾದು ಹೋಗುತ್ತವೆ.

ರಾಜ್ಯದ ಅಭಿವೃದ್ಧಿಗಾಗಿ ಚರ್ಚಿಸಲು ಪ್ರಧಾನಿ, ಕೇಂದ್ರ ಸಚಿವರನ್ನು ಭೇಟಿಯಾಗುತ್ತಿದ್ದೇನೆ ; ಬಿಎಸ್‌ವೈ

ಮೇಲ್ಸೇತುವೆ ನಿರ್ಮಾಣದಿಂದಾಗಿ ಈ ಭಾಗದಲ್ಲಿ ಶೇ.39.69ರಷ್ಟು ವಾಹನ ದಟ್ಟಣೆ ಕಡಿಮೆಯಾಗಲಿದ್ದು, ಕನಿಷ್ಠ 30 ನಿಮಿಷಗಳಷ್ಟು ಸಮಯ ಉಳಿತಾಯವಾಗಲಿದೆ. ಮೇಲ್ಸೇತುವೆ ಕಾಮಗಾರಿ ತ್ವರಿತವಾಗಿ ಮುಗಿದರೆ ಈ ಭಾಗದಲ್ಲಾಗುವ ಸಂಚಾರ ದಟ್ಟಣೆ ಬಹುತೇಕ ಕಡಿಮೆಯಾಗಲಿದ್ದು, ವಾಹನ ಸವಾರರಿಗೆ ಸಂಚಾರದಟ್ಟಣೆಯಿಂದ ಮುಕ್ತಿ ಸಿಗಲಿದೆ.

ಇದೇ ವೇಳೆ ಮೇಲ್ಸೇತುವೆ ಕಾಮಗಾರಿ ನಡೆಯುತ್ತಿರುವ ರಸ್ತೆಯನ್ನು ದುರಸ್ತಿ ಮಾಡಬೇಕು. ಜೊತೆಗೆ ಪಾದಚಾರಿ ಮಾರ್ಗ, ರಸ್ತೆ ಇಕ್ಕೆಲಗಳಲ್ಲಿರುವ ಮೋರಿಯಲ್ಲಿ ಹೂಳು ತೆಗೆಯುವುದು ಹಾಗೂ ವಿದ್ಯುತ್ ದೀಪಗಳನ್ನು ಅಳವಡಿಸಬೇಕು ಎಂದು ಶಾಸಕರು ಶ್ರೀ ರಾಮಲಿಂಗಾರೆಡ್ಡಿ ಆಯುಕ್ತರಿಗೆ ತಿಳಿಸಿದರು. ದುರಸ್ತಿ ಕಾಮಗಾರಿ ಹಾಗೂ ವಿದ್ಯುತ್ ದೀಪಗಳನ್ನು ಅಳವಡಿಸುವಂತೆ ಆಯುಕ್ತರು ಗುತ್ತಿಗೆದಾರರಿಗೆ ಸೂಚನೆ ನೀಡಿದರು.

‘ನಿಮ್ಮ ನಾಯಕರ ಎದೆಯಳತೆಯ ಮುಂದೆ ಮಣಿಯದೆ ಧೈರ್ಯದಿಂದ ರಾಜ್ಯದ ಪಾಲು ಕೇಳಿ’; ಸಿಎಂಗೆ ಸಿದ್ದರಾಮಯ್ಯ ಆಗ್ರಹ

ಎಲಿವೇಟೆಡ್ ಕಾರಿಡಾರ್ ನಲ್ಲಿ ಬರುವ 7 ಜಂಕ್ಷನ್ ಗಳು:

1. ಈಜೀಪುರ ಮುಖ್ಯರಸ್ತೆ- ಒಳವರ್ತುಲ ರಿಂಗ್ ರಸ್ತೆ ಜಂಕ್ಷನ್
2. ಸೋನಿ ವರ್ಲ್ಡ್ ಜಂಕ್ಷನ್
3. ಕೇಂದ್ರೀಯ ಸದನ ಜಂಕ್ಷನ್
4. ಕೋರಮಂಗಲ 8ನೇ ಮುಖ್ಯ ರಸ್ತೆ ಜಂಕ್ಷನ್
5. ಕೋರಮಂಗಲ 60 ಅಡಿ ರಸ್ತೆ ಜಂಕ್ಷನ್
6. ಕೋರಮಂಗಲ ಐದನೇ ಬ್ಲಾಕ್ 1ಎ ಕ್ರಾಸ್ ರಸ್ತೆ ಜಂಕ್ಷನ್
7. ಕೋರಮಂಗಲ ಬಿಡಿಎ ಜಂಕ್ಷನ್

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ