ಆ್ಯಪ್ನಗರ

ಬೆಂಗಳೂರಿನಲ್ಲೇ ನಿರ್ಮಾಣಗೊಳ್ಳಲಿದೆ ವಿಶ್ವ ದರ್ಜೆಯ ಫಿಲ್ಮ್‌ ಸಿಟಿ

ದಶಕಗಳಿಂದ ಫಿಲ್ಮ್‌ ಸಿಟಿ ನಿರ್ಮಾಣದ ಕುರಿತು ಚರ್ಚೆಗಳು ನಡೆಯುತ್ತಲೇ ಇವೆ. ಹೆಸರಘಟ್ಟ, ಮೈಸೂರು, ರಾಮನಗರ ಹಾಗೂ ಕನಕಪುರ ರಸ್ತೆಯ ರೋರಿಚ್ ಎಸ್ಟೇಟ್‌ ಸುತ್ತಿ ಇದೀಗ ಬೆಂಗಳೂರಿನ ಹೊರ ವಲಯದಲ್ಲಿ ಫಿಲ್ಮ್‌ ಸಿಟಿ ನಿರ್ಮಿಸಲು ರಾಜ್ಯ ಸರಕಾರ ನಿರ್ಧಾರಕ್ಕೆ ಬಂದಿದೆ.

Vijaya Karnataka Web 9 Jan 2020, 6:58 am
ಬೆಂಗಳೂರು: ರಾಜ್ಯದಲ್ಲಿ ಚಿತ್ರ ನಗರಿ (ಫಿಲ್ಮ್‌ ಸಿಟಿ) ನಿರ್ಮಿಸುವ ದಶಕಗಳ ಕನಸಿಗೆ ಮರುಚಾಲನೆ ದೊರೆತಿದೆ. ಚಿತ್ರ ನಿರ್ಮಾಣ ಸೌಲಭ್ಯ, ಆ್ಯನಿಮೇಷನ್‌ ಕೇಂದ್ರವನ್ನೂ ಒಳಗೊಂಡು ಪ್ರವಾಸಿ ಆಕರ್ಷಣೆಯಿರುವ ವಿಶ್ವ ದರ್ಜೆಯ ಫಿಲ್ಮ್‌ ಸಿಟಿಯನ್ನು ಬೆಂಗಳೂರು ನಗರದ ಹೊರವಲಯದಲ್ಲಿ ನಿರ್ಮಿಸಲು ಸರಕಾರ ನಿರ್ಧರಿಸಿದೆ.
Vijaya Karnataka Web Bengaluru Film City


ಮೊದಲಿಗೆ ಹೆಸರಘಟ್ಟ, ಸಿದ್ದರಾಮಯ್ಯ ಸಿಎಂ ಆಗಿದ್ದ ಅವಧಿಯಲ್ಲಿ ಮೈಸೂರು, ಎಚ್‌.ಡಿ.ಕುಮಾರಸ್ವಾಮಿ ಅಧಿಕಾರಾವಧಿಯಲ್ಲಿ ರಾಮನಗರ ಹಾಗೂ ನಂತರ ಕನಕಪುರ ರಸ್ತೆಯ ರೋರಿಚ್‌ ಎಸ್ಟೇಟ್‌ನಲ್ಲಿ ಫಿಲ್ಮ್‌ ಸಿಟಿ ನಿರ್ಮಿಸುವ ಘೋಷಣೆ ಮಾಡಲಾಗಿತ್ತು. ಇದೀಗ, ಬೆಂಗಳೂರು ನಗರದ ಹೊರವಲಯದ ಸೂಕ್ತ ಜಾಗದಲ್ಲಿ ಚಿತ್ರ ನಗರಿ ನಿರ್ಮಿಸುವ ತೀರ್ಮಾನಕ್ಕೆ ಸರಕಾರ ಬಂದಿದೆ.

ಸಿಎಂ ಗೃಹ ಕಚೇರಿ 'ಕೃಷ್ಣಾ'ದಲ್ಲಿ ಬುಧವಾರ ಡಿಸಿಎಂ ಡಾ.ಅಶ್ವತ್ಥನಾರಾಯಣ ಅಧ್ಯಕ್ಷತೆಯಲ್ಲಿ ಈ ಸಂಬಂಧ ಸಭೆ ನಡೆಯಿತು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ''ಬೆಂಗಳೂರು ಹೊರವಲಯದಲ್ಲಿ ಫಿಲ್ಮ್‌ ಸಿಟಿಯನ್ನು ನಿರ್ಮಿಸುವುದು ನಿಶ್ಚಿತ. ಸಿಎಂ ಜತೆಗೆ ಸಮಾಲೋಚನೆ ನಡೆಸಿದ ಬಳಿಕ ಸ್ಥಳ ನಿಗದಿಪಡಿಸಲಾಗುವುದು'' ಎಂದು ತಿಳಿಸಿದರು.

ರಾಜಧಾನಿಯಲ್ಲೇ ಫಿಲ್ಮ್‌ ಸಿಟಿ, ಡಿಸ್ನಿಲ್ಯಾಂಡ್‌ ಮಾದರಿಯಲ್ಲಿ ಚಿತ್ರ ನಗರಿ ನಿರ್ಮಾಣ: ಡಿಸಿಎಂ

''ಚಲನಚಿತ್ರರಂಗಕ್ಕೆ ಅಗತ್ಯವಾದ ಎಲ್ಲ ಸೌಲಭ್ಯಗಳು ಫಿಲ್ಮ್‌ ಸಿಟಿಯಲ್ಲಿ ಇರಲಿವೆ. ಡಿಸ್ನಿ ಲ್ಯಾಂಡ್‌ ಸೇರಿ ದೇಶ, ವಿದೇಶದ ಹಲವು ಫಿಲ್ಮ್‌ ಸಿಟಿಗಳನ್ನು ಅಧ್ಯಯನ ಮಾಡಿ ಉತ್ತಮ ಹಾಗೂ ವಿಭಿನ್ನವಾದ ಫಿಲ್ಮ್‌ಸಿಟಿ ಮಾಡಲು ನಿರ್ಧರಿಸಲಾಗಿದೆ. ಇದು ಪ್ರವಾಸೋದ್ಯಮ ಚಟುವಟಿಕೆಗಳಿಗೂ ಪೂರಕವಾಗಿರಬೇಕು. ಆ್ಯನಿಮೇಷನ್‌ ರಂಗದಲ್ಲಿ ಬೆಂಗಳೂರು ಹೆಸರು ಮಾಡಿದ್ದು, ಈ ವಲಯಕ್ಕೆ ಚಿತ್ರ ನಗರಿ ನಿರ್ಮಾಣದಿಂದ ಇನ್ನಷ್ಟು ಉತ್ತೇಜನ ಸಿಗಲಿದೆ. ಎಲ್ಲಿಮತ್ತು ಎಷ್ಟು ವಿಸ್ತೀರ್ಣದಲ್ಲಿ ಫಿಲ್ಮ್‌ ಸಿಟಿ ನಿರ್ಮಾಣವಾಗಲಿದೆ ಎಂಬ ಬಗ್ಗೆ ಸದ್ಯದಲ್ಲೇ ನಿರ್ಧಾರ ಕೈಗೊಳ್ಳಲಾಗುವುದು'' ಎಂದು ಅಶ್ವತ್ಥನಾರಾಯಣ ಹೇಳಿದರು.

ರೋರಿಚ್‌ ಎಸ್ಟೇಟ್‌ಗೆ ಫಿಲಂ ಸಿಟಿ ಸ್ಥಳಾಂತರ ಬಿಎಸ್‌ವೈ ದ್ವೇಷ ರಾಜಕಾರಣ :ಎಚ್ಡಿಕೆ ಕಿಡಿ

ಆರ್ಟ್‌ ವಿಲೇಜ್‌ ಆಗಿ ರೋರಿಚ್‌ ಎಸ್ಟೇಟ್‌: ''ಬೆಂಗಳೂರು ಹೊರವಲಯದ ರೋರಿಚ್‌ ಮತ್ತು ದೇವಿಕಾರಾಣಿ ಎಸ್ಟೇಟ್‌ನಲ್ಲಿ 'ಆರ್ಟ್‌ ಆ್ಯಂಡ್‌ ಕ್ರಾಫ್ಟ್‌ ವಿಲೇಜ್‌' ಸ್ಥಾಪನೆ ಮಾಡುವ ನಿರ್ಧಾರ ಮಾಡಲಾಗಿದೆ. ಇಲ್ಲಿ ಫಿಲ್ಮ್‌ ಸಿಟಿ ನಿರ್ಮಿಸುವ ಪ್ರಸ್ತಾವನೆ ಕೈಬಿಡಲಾಗಿದೆ. ಪ್ರಕೃತಿ ಸೌಂದರ್ಯದ ಅದ್ಭುತ ತಾಣವಾಗಿರುವ ಈ ಎಸ್ಟೇಟ್‌ ಅನ್ನು ದೇಶವೇ ಹೆಮ್ಮೆಪಡುವ ಸಾಂಸ್ಕೃತಿಕ ತಾಣವಾಗಿ ಅಭಿವೃದ್ಧಿ ಮಾಡಲಾಗುವುದು,'' ಎಂದು ಅಶ್ವತ್ಥ ನಾರಾಯಣ ತಿಳಿಸಿದರು.

ಬೆಂಗಳೂರಿನಲ್ಲೇ ಫಿಲಂ ಸಿಟಿ ನಿರ್ಮಾಣ; ಸ್ಯಾಂಡಲ್‌ವುಡ್‍ನಲ್ಲಿ ಮುಗಿಲು ಮುಟ್ಟಿದ ಸಂಭ್ರಮ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ