ಆ್ಯಪ್ನಗರ

ಏರ್‌ ಶೋನಲ್ಲಿ ಬೆಂಕಿ ದುರಂತ: ಭಸ್ಮವಾದ ಕಾರುಗಳ ರೋಡ್‌ ಟ್ಯಾಕ್ಸ್‌ ವಾಪಸ್‌

ಯಲಹಂಕ ವಾಯುನೆಲೆಯಲ್ಲಿ ನಡೆದ ಏರ್‌ ಶೋ ಸಂದರ್ಭದಲ್ಲಿ ಸಂಭವಿಸಿದ ಬೆಂಕಿ ಅವಘಡದಲ್ಲಿ ಸುಟ್ಟು ಕರಕಲಾದ ಕಾರುಗಳ ಮಾಲೀಕರಿಗೆ ಸಾರಿಗೆ ಇಲಾಖೆಯು ರಸ್ತೆ ತೆರಿಗೆಯನ್ನು ವಾಪಸ್‌ ನೀಡಲು ನಿರ್ಧರಿಸಿದೆ.

Vijaya Karnataka 27 Feb 2019, 10:45 am
ಬೆಂಗಳೂರು: ಯಲಹಂಕ ವಾಯುನೆಲೆಯಲ್ಲಿ ನಡೆದ ಏರ್‌ ಶೋ ಸಂದರ್ಭದಲ್ಲಿ ಸಂಭವಿಸಿದ ಬೆಂಕಿ ಅವಘಡದಲ್ಲಿ ಸುಟ್ಟು ಕರಕಲಾದ ಕಾರುಗಳ ಮಾಲೀಕರಿಗೆ ಸಾರಿಗೆ ಇಲಾಖೆಯು ರಸ್ತೆ ತೆರಿಗೆಯನ್ನು ವಾಪಸ್‌ ನೀಡಲು ನಿರ್ಧರಿಸಿದೆ.
Vijaya Karnataka Web fire mishap road tax refund
ಏರ್‌ ಶೋನಲ್ಲಿ ಬೆಂಕಿ ದುರಂತ: ಭಸ್ಮವಾದ ಕಾರುಗಳ ರೋಡ್‌ ಟ್ಯಾಕ್ಸ್‌ ವಾಪಸ್‌


ಸುಟ್ಟು ಹೋಗಿರುವ ಕಾರುಗಳ ನೋಂದಣಿ ಸಂಖ್ಯೆಯನ್ನು ರದ್ದುಪಡಿಸಲಾಗುತ್ತದೆ. ಹೀಗಾಗಿ ಕಾರುಗಳ ಬಾಕಿ ಉಳಿದ ಅವಧಿಯ ರಸ್ತೆ ತೆರಿಗೆಯನ್ನು ಮಾಲೀಕರಿಗೆ ಹಿಂದಿರುಗಿಸಲಾಗುತ್ತದೆ. ಅಂದರೆ, ಕಾರು ಖರೀದಿಸುವಾಗ 15 ವರ್ಷಗಳ ಅವಧಿಗೆ ರಸ್ತೆ ತೆರಿಗೆಯನ್ನು ಸಂಗ್ರಹಿಸಲಾಗಿರುತ್ತದೆ. ಕಾರು ಖರೀದಿಸಿ ಮೂರು ವರ್ಷವಾಗಿದ್ದರೆ ಬಾಕಿ ಉಳಿದ ವರ್ಷಗಳ ತೆರಿಗೆಯನ್ನು ವಾಪಸ್‌ ಕೊಡಲಾಗುತ್ತದೆ. ಇಂತಿಷ್ಟು ವರ್ಷವಾಗಿದ್ದರೆ ಇಷ್ಟು ಪ್ರಮಾಣದ ತೆರಿಗೆ ವಾಪಸ್‌ ಮಾಡಲು ನಿಯಮವಿದೆ. ಅದರಂತೆ ನೀಡಲಾಗುವುದು ಎಂದು ಯಲಹಂಕದ ಪ್ರಾದೇಶಿಕ ಸಾರಿಗೆ ಅಧಿಕಾರಿ ಪತ್ರಿಕೆಗೆ ತಿಳಿಸಿದರು.

ಬೆಂಕಿ ದುರಂತದಲ್ಲಿ ಒಟ್ಟು 277 ಕಾರುಗಳು ಸುಟ್ಟು ಹೋಗಿವೆ. ಇದರಲ್ಲಿ 119 ವಾಹನಗಳನ್ನು ಮಾಲೀಕರು ಗುರುತಿಸಿದ್ದರು. ಮಂಗಳವಾರ ಮತ್ತೆ 10 ಕಾರುಗಳನ್ನು ಗುರುತಿಸಲಾಗಿದೆ. ಈ ಕಾರುಗಳ ಮಾಹಿತಿಯೊಂದಿಗೆ ವರದಿಯನ್ನು ಯಲಹಂಕ ಸಾರಿಗೆ ಅಧಿಕಾರಿ ಪೊಲೀಸರಿಗೆ ಮಂಗಳವಾರ ಸಲ್ಲಿಸಿದ್ದಾರೆ. ಇನ್ನು ಎರಡು ದಿನದಲ್ಲಿ ಉಳಿದ ಕಾರುಗಳ ಮಾಹಿತಿಯನ್ನು ಸಲ್ಲಿಸಲಿದ್ದಾರೆ.

ಕಾರುಗಳನ್ನು ಹೇಗೆ ಗುರುತಿಸಲಾಗುತ್ತಿದೆ: ಸುಟ್ಟು ಕರಕಲಾಗಿರುವ ಕಾರುಗಳಲ್ಲಿ ಚಾಸಿ ನಂಬರ್‌ ಕೂಡ ಕಾಣಿಸುತ್ತಿಲ್ಲ. ಹೀಗಾಗಿ ಮಾಲೀಕರಿಗೆ ತಮ್ಮ ಕಾರು ಗುರುತಿಸುವುದು ಕಷ್ಟವಾಗಿದೆ. ಹೀಗಾಗಿ ಮಾರುತಿ, ಹುಂಡೈ, ಟಾಟಾ ಕಾರು ಕಂಪನಿಗಳ ಶೋರೂಂ ಸಿಬ್ಬಂದಿಯನ್ನು ಸ್ಥಳಕ್ಕೆ ಕರೆತಂದು ಪರಿಶೀಲನೆ ನಡೆಸಿ, ಆಯಾ ಕಂಪನಿಯ ಕಾರುಗಳ ಮಾದರಿ ನೋಡಿ ಗುರುತಿಸಲಾಗುತ್ತಿದೆ. ಮಂಗಳವಾರವೂ ಇದೇ ಪ್ರಕ್ರಿಯೆ ನಡೆಯಿತು. ಇನ್ನು ಎರಡು ದಿನಗಳಲ್ಲಿ ಈ ಕಾರ್ಯ ಮುಗಿಯುವ ಸಾಧ್ಯತೆ ಇದೆ ಎಂದು ಸಾರಿಗೆ ಅಧಿಕಾರಿ ತಿಳಿಸಿದರು.

ಗುರುತಿಸಲಾಗಿರುವ ಕಾರುಗಳ ಮಾಲೀಕರಿಗೆ ದಾಖಲೆಗಳ ನಕಲು ವಿತರಣೆ ಮಾಡಲಾಗಿದೆ. ಅವುಗಳ ಆಧಾರದ ಮೇಲೆ ಅವರಿಗೆ ವಿಮೆ ಹಣ ಸಿಗಲಿದೆ. ಇದಕ್ಕೆ ಅನುಕೂಲವಾಗಲೆಂದು ಪೊಲೀಸರಿಗೆ ಗುರುತು ಪತ್ತೆಯಾಗಿರುವ ಕಾರುಗಳ ವರದಿಯನ್ನು ಪೊಲೀಸರಿಗೆ ಸಲ್ಲಿಸಲಾಗಿದೆ ಎಂದು ಹೇಳಿದರು.

''ಸುಟ್ಟು ಹೋಗಿರುವ ಕಾರಿನ ನೋಂದಣಿ ರದ್ದಾಗಲಿದೆ. ಹೊಸ ಕಾರು ಖರೀದಿಸಿದಾಗ ಅದೇ ನೋಂದಣಿ ನಂಬರ್‌ ವಿತರಣೆ ಮಾಡಬೇಕೆಂದು ಕೆಲವರು ಕೇಳಿದ್ದಾರೆ. ಆದರೆ ಸಾರಿಗೆ ನಿಯಮದಲ್ಲಿ ಇದಕ್ಕೆ ಅವಕಾಶವಿಲ್ಲ. ಕಾರು ಖರೀದಿಸಿದಾಗ ಹೊಸ ನಂಬರ್‌ ನೀಡಲಾಗುವುದು ಎಂದು ಯಲಹಂಕ ಸಾರಿಗೆ ಅಧಿಕಾರಿ ತಿಳಿಸಿದರು.

ಜೀವದ ಹಂಗು ತೊರೆದು ಮಾಲೀಕರ ಕಾರು ಬಚಾವ್‌ ಮಾಡಿದ ಚಾಲಕ

ಬೆಂಗಳೂರು: ಯಲಹಂಕದ ಏರ್‌ ಶೋ ವೇಳೆ ಚಾಲಕನೊಬ್ಬ ತನ್ನ ಸಮಯಪ್ರಜ್ಞೆಯಿಂದ ಮಾಲೀಕರ ಕಾರನ್ನು ರಕ್ಷಿಸಿ ಅಪಾರ ಮೆಚ್ಚುಗೆ ಗಳಿಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

'ಡ್ರೈವ್‌-ಯು' ಸಂಸ್ಥೆ ಮಾಲೀಕರುಗಳ ಅಗತ್ಯಕ್ಕೆ ತಕ್ಕಂತೆ ಗಂಟೆ ಮತ್ತು ದಿನದ ಲೆಕ್ಕದಲ್ಲಿ ಚಾಲಕರನ್ನು ಒದಗಿಸುತ್ತದೆ. ಈ ಸಂಸ್ಥೆಯಿಂದ ಏರ್‌ ಶೋ ನಡೆಯುವ ದಿನ ಟ್ವಿಂಕಲ್‌ ಜುಂಜುನ್‌ವಾಲಾ ಎನ್ನುವವರು ಈಸೈಅರಸನ್‌ (31) ನನ್ನು ತಮ್ಮ ಕಾರಿನ ಚಾಲಕನಾಗಿ ಕರೆದುಕೊಂಡು ಹೋಗಿದ್ದರು. ಈತನೇ ಮಾಲೀಕರ ಕಾರನ್ನು ರಕ್ಷಿಸಿ ಮೆಚ್ಚುಗೆ ಗಳಿಸಿದ್ದಾನೆ.

ನಡೆದದ್ದೇನು?: ಟ್ವಿಂಕಲ್‌ ಅವರು ಫೆ.23 ರಂದು ಬೆಳಗ್ಗೆ 8 ಗಂಟೆಗೇ ಯಲಹಂಕ ವಾಯು ನೆಲೆ ತಲುಪಿದ್ದರು. ಗೇಟ್‌ ನಂಬರ್‌ 5 ರಲ್ಲಿ ಪಾರ್ಕಿಂಗ್‌ ಸ್ಥಳ ದೊರಕಿತ್ತು. ಹೊರಗೇ ನಿಂತಿದ್ದ ಈಸೈ ಅರಸನ್‌ ಸ್ವಲ್ಪ ಸಮಯದ ಬಳಿಕ ಕಾರು ಬಿಟ್ಟು ಏರ್‌ ಶೋ ನೋಡಲು ಹೋದರು. ಸುಮಾರು ಒಂದೂಕಾಲು ಗಂಟೆ ಶೋ ನೋಡಿದ ನಂತರ ವಾಪಸ್‌ ಬರುತ್ತಿರುವಾಗ ಕೆಲವರು ಓಡುತ್ತಿದ್ದುದು ಕಂಡುಬಂತು. ಯಾಕೆಂದು ವಿಚಾರಿಸಿದಾಗ 'ಪಾರ್ಕಿಂಗ್‌ ಜಾಗದಲ್ಲಿ ಕಾರುಗಳಿಗೆ ಬೆಂಕಿ ಬಿದ್ದಿದೆ' ಎನ್ನುವ ಉತ್ತರ ಬಂತು. ಗಾಬರಿಯಿಂದ ಈಸೈಅರಸನ್‌ ಕೂಡ ಅಲ್ಲಿಗೆ ಓಡಿದರು. ಅಷ್ಟರಲ್ಲಾಗಲೇ ಇವರು ಕಾರು ನಿಲ್ಲಿಸಿದ್ದ ಸಾಲಿನಲ್ಲಿ ಬೆಂಕಿಯ ಕೆನ್ನಾಲಿಗೆ ಚಾಚಿಕೊಂಡಿತ್ತು. ಆ ಸಾಲಿನಲ್ಲಿದ್ದ ಎಲ್ಲಾ ಕಾರುಗಳಿಗೂ ಬೆಂಕಿ ತಗುಲಿ ಇನ್ನು ಐದು ಕಾರುಗಳು ಮಾತ್ರ ಬಾಕಿ ಉಳಿದಿದ್ದವು. ಬೆಂಕಿಯ ಕೆನ್ನಾಲಿಗೆಯ ನಡುವೆಯೂ ಧೃತಿಗೆಡದ ಈಸೈ ಧೈರ್ಯವಾಗಿ ತಮ್ಮ ಕಾರನ್ನು ಅಲ್ಲಿಂದ ಹೊರಗೆ ತೆಗೆದು ಸುರಕ್ಷಿತವಾಗಿ ದೂರಕ್ಕೆ ತೆಗೆದುಕೊಂಡು ಹೋಗಿ ನಿಲ್ಲಿಸಿದರು.

ಕಾರು ಬಿಟ್ಟು ಓಡಲಿಲ್ಲ: ಈಸೈ ಬಾಡಿಗೆಗೆ ಚಾಲಕರಾಗಿ ಬಂದಿದ್ದರೂ ಯಾರಿಗೋ ಸೇರಿದ್ದ ಕಾರನ್ನು ಬೆಂಕಿಯ ಕೆನ್ನಾಲಿಗೆಯಿಂದ ರಕ್ಷಿಸಿದ್ದರು. ಅಗ್ನಿ ಅವಘಡದ ಸುದ್ದಿ ಕೇಳಿ ಗಾಬರಿಯಿಂದ ಓಡಿ ಬಂದ ಟ್ವಿಂಕಲ್‌ ಅವರು ತಮ್ಮ ಕಾರು ಕಾಣದಾದಾಗ ಅದು ಕೂಡ ಸುಟ್ಟುಹೋಗಿದೆ ಎಂದೇ ಭಾವಿಸಿ ದುಃಖಿತರಾಗಿದ್ದರು. ಅಷ್ಟರಲ್ಲೇ ಈಸೈ ಅರಸನ್‌ ಬಂದು ಅವರನ್ನು ಕರೆದುಕೊಂಡು ಹೋಗಿ ಕಾರಿಗೆ ಹತ್ತಿಸಿದ. ಆ ಕ್ಷಣ ಟ್ವಿಂಕಲ್‌ ಅವರಿಗೆ ತಮ್ಮ ಕಾರಿಗಿಂತ ಚಾಕಲನ ಮೌಲ್ಯ ದೊಡ್ಡದೆನಿಸಿತು. ತುಂಬು ಹೃದಯದಿಂದ ಅಭಿನಂದನೆ ಸಲ್ಲಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ