ಆ್ಯಪ್ನಗರ

ಪೇಂಟರ್‌ಗಳ ಜೀವ ಉಳಿಸಿದ ಅಗ್ನಿಶಾಮಕ ಸಿಬ್ಬಂದಿ

ಆರ್‌ಪಿಸಿ ಲೇಔಟ್‌ ಅತ್ತಿಗುಪ್ಪೆಯಲ್ಲಿರುವ ಅಪಾರ್ಟ್‌ಮೆಂಟ್‌ನಲ್ಲಿರುವ ನೀರಿನ ಸಂಪ್‌ಗೆ ಬಣ್ಣ ಬಳಿಯಲು ಇಳಿದು ಅಸ್ವಸ್ಥಗೊಂಡಿದ್ದ ಇಬ್ಬರು ಕಾರ್ಮಿಕರನ್ನು ಸಮಯಕ್ಕೆ ಸರಿಯಾಗಿ ತೆರಳಿದ ಅಗ್ನಿಶಾಮಕ ಇಲಾಖೆ ಸಿಬ್ಬಂದಿ ರಕ್ಷಣೆ ಮಾಡಿ ಜೀವ ಉಳಿಸಿದ್ದಾರೆ.

Vijaya Karnataka 5 Jul 2018, 10:52 am
ಬೆಂಗಳೂರು: ಆರ್‌ಪಿಸಿ ಲೇಔಟ್‌ ಅತ್ತಿಗುಪ್ಪೆಯಲ್ಲಿರುವ ಅಪಾರ್ಟ್‌ಮೆಂಟ್‌ನಲ್ಲಿರುವ ನೀರಿನ ಸಂಪ್‌ಗೆ ಬಣ್ಣ ಬಳಿಯಲು ಇಳಿದು ಅಸ್ವಸ್ಥಗೊಂಡಿದ್ದ ಇಬ್ಬರು ಕಾರ್ಮಿಕರನ್ನು ಸಮಯಕ್ಕೆ ಸರಿಯಾಗಿ ತೆರಳಿದ ಅಗ್ನಿಶಾಮಕ ಇಲಾಖೆ ಸಿಬ್ಬಂದಿ ರಕ್ಷಣೆ ಮಾಡಿ ಜೀವ ಉಳಿಸಿದ್ದಾರೆ.
Vijaya Karnataka Web painter


ಪೇಂಟರ್‌ಗಳಾದ ಸಂದೀಪ್‌ (28) ಮತ್ತು ಸಂತೋಷ್‌ (35) ಪ್ರಾಣಾಪಾಯದಿಂದ ಪಾರಾದವರು. ಆರ್‌ಪಿಸಿ ಲೇಔಟ್‌ 8ನೇ ಎ ಕ್ರಾಸ್‌ನಲ್ಲಿರುವ ಹರಿಕುಂಜ್‌ ನಿಲಯದಲ್ಲಿರುವ ನೀರಿನ ಸಂಪ್‌ಗೆ ಪೇಂಟ್‌ ಮಾಡಲು ಸಂದೀಪ್‌ ಹಾಗೂ ಸಂತೋಷ್‌ ಅವರನ್ನು ಕರೆಸಲಾಗಿತ್ತು. ಸಂಜೆ 6 ಗಂಟೆ ಸುಮಾರಿಗೆ ಮೇಲ್ಭಾಗ ಪೇಂಟ್‌ ಮಾಡಿದ ನಂತರ ಒಳಭಾಗವನ್ನು ಪೇಂಟ್‌ ಮಾಡಲು ಒಬ್ಬಾತ ಇಳಿದಿದ್ದಾನೆ. ಕೆಲವೇ ಕ್ಷಣಗಳಲ್ಲಿ ಅಸ್ವಸ್ಥಗೊಂಡು ಕುಸಿದು ಬಿದ್ದಿದ್ದಾನೆ. ಕೆಳಗೆ ಬಿದ್ದವನನ್ನು ಉಳಿಸಲು ಮತ್ತೊಬ್ಬ ಇಳಿದಿದ್ದಾನೆ. ಇಬ್ಬರು ಕೂಡಾ ಅಸ್ವಸ್ಥಗೊಂಡು ಬಿದ್ದಿದ್ದಾರೆ. ಕೂಡಲೇ ಅಲ್ಲಿದ್ದ ವ್ಯಕ್ತಿಗಳು ಅಗ್ನಿಶಾಮಕ ಇಲಾಖೆಗೆ ಕರೆ ಮಾಡಿ ಮಾಹಿತಿ ನೀಡಿದ್ದರು.

‘‘ಸಂಜೆ 6 ಗಂಟೆ 6 ನಿಮಿಷಕ್ಕೆ ರಕ್ಷಣೆ ಕರೆ ಬಂದಿತ್ತು. ರಾಜಾಜಿನಗರ ಫೈರ್‌ ಸ್ಟೇಷನ್‌ನಿಂದ ಒಂದು ರಕ್ಷಣಾ ವಾಹನ ಹಾಗೂ ಸಿಬ್ಬಂದಿ ಹೊರಟರು 6 ಗಂಟೆ 19 ನಿಮಿಷಕ್ಕೆ ಸ್ಥಳದಲ್ಲಿದ್ದರು. ಸುಮಾರು 8 ಅಡಿ ಆಳ ಹಾಗೂ ಆರು ಅಡಿ ಅಗಲದ ಸಂಪಿನಲ್ಲಿ ಬಿದ್ದಿದ್ದ ಇಬ್ಬರನ್ನು ಮೇಲಕ್ಕೆತ್ತಿ ಕೂಡಲೇ ಸಮೀಪದ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಇಬ್ಬರಿಗೆ ಚಿಕಿತ್ಸೆ ಕೊಟ್ಟ ನಂತರ ಅವರು ಮನೆಗೆ ಮರಳಿದ್ದಾರೆ’’ ಎಂದು ಅಗ್ನಿಶಾಮಕ ಇಲಾಖೆ ಸಿಬ್ಬಂದಿ ಮಾಹಿತಿ ನೀಡಿದ್ದರು.
ಸಂಪಿನಲ್ಲಿ ಆಮ್ಲಜನಕದ ಕೊರತೆಯ ಕಾರಣ ಇಬ್ಬರು ಅಸ್ವಸ್ಥಗೊಂಡಿದ್ದಾರೆ. ‘‘ಸಂಪಿನೊಳಗೆ ಬಿದ್ದ ಇಬ್ಬರಿಗೆ ಯಾವುದೇ ಸಮಸ್ಯೆಯಾಗಿಲ್ಲ. ಇಬ್ಬರು ಆರೋಗ್ಯವಾಗಿದ್ದಾರೆ. ಹೀಗಾಗಿ, ಕೇಸ್‌ ದಾಖಲಿಸಿಕೊಂಡಿಲ್ಲ’’ ಎಂದು ಚಂದ್ರ ಲೇಔಟ್‌ ಠಾಣೆ ಪೊಲೀಸರು ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ