ವಿಕ ಸುದ್ದಿಲೋಕ ಬೆಂಗಳೂರು
ಹೊಸಕೆರೆಹಳ್ಳಿ ವಿವೇಕಾನಂದ ಮುಖ್ಯರಸ್ತೆಯಲ್ಲಿರುವ ಒಳಾಂಗಣ ವಿನ್ಯಾಸ ಮತ್ತು ಶಾಮಿಯಾನ ವಸ್ತುಗಳನ್ನು ಸಂಗ್ರಹಿಸಿಟ್ಟಿದ್ದ ಗೋದಾಮಿಗೆ ಬೆಂಕಿ ಹೊತ್ತಿಕೊಂಡು ಲಕ್ಷಾಂತರ ರೂ. ಮೌಲ್ಯದ ವಸ್ತುಗಳು ಸುಟ್ಟು ಕರಕಲಾಗಿವೆ. ಗೋದಾಮಿನಲ್ಲಿ ಯಾರು ಇಲ್ಲದ ಕಾರಣ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಸೋಮವಾರ ರಾತ್ರಿ 10.30ರ ಸುಮಾರಿಗೆ ಗೋದಾಮಿನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ತೆರಳಿದ ಅಗ್ನಿಶಾಮಕ ಸಿಬ್ಬಂದಿ, ಸುಮಾರು ಐದು ತಾಸಿಗೂ ಹೆಚ್ಚು ಕಾಲ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ.
ಅಮಿತ್ ಎಂಬುವರಿಗೆ ಸೇರಿದ ಈ ಗೋದಾಮಿನಲ್ಲಿ ಒಳಾಂಗಣ ವಿನ್ಯಾಸ ವಸ್ತುಗಳು, ಫರ್ನಿಚರ್ಗಳು, ಕುರ್ಚಿ, ಟೇಬಲ್ಗಳು ಸೇರಿದಂತೆ ಇನ್ನಿತರ ವಸ್ತುಗಳನ್ನು ದೊಡ್ಡ ಪ್ರಮಾಣದಲ್ಲಿ ಸಂಗ್ರಹಿಸಲಾಗಿತ್ತು. ಶಾರ್ಟ್ ಸರ್ಕೂ್ಯಟ್ನಿಂದ ಬೆಂಕಿ ಹೊತ್ತಿಕೊಂಡಿರುವ ಶಂಕೆ ಇದೆ.
ಶಾಮಿಯಾನ ಮತ್ತು ಅಲಂಕಾರಿಕ ವಸ್ತುಗಳನ್ನು ಅರಮನೆ ಮೈದಾನ ಮತ್ತಿತರೆಡೆ ಜರುಗುವ ವಿವಾಹ ಕಾರ್ಯಕ್ರಮಗಳಲ್ಲಿ ವಿನ್ಯಾಸಕ್ಕೆ ಬಳಸಲಾಗುತ್ತಿತ್ತು. ಅಲ್ಲದೇ, ಕಳೆದ ವರ್ಷ ಟಗರು ಸಿನಿಮಾ ಶೂಟಿಂಗ್ ಕೂಡ ಈ ತಾತ್ಕಾಲಿಕ ಗೋದಾಮಿನಲ್ಲಿ ನಡೆದಿತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ.
ದಟ್ಟ ಹೊಗೆ, ಸ್ಫೋಟದ ಸದ್ದು
ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವ ವೇಳೆ ಮೂರು ಬಾರಿ ಸ್ಫೋಟದ ಸದ್ದು ಕೇಳಿಸಿದೆ. ಒಳಗೆ ಸಿಲಿಂಡರ್ಗಳನ್ನು ಸಂಗ್ರಹಿಸಿಟ್ಟಿದ್ದ ಕಾರಣ ಸಿಲಿಂಡರ್ಗಳು ಸೋರಿಕೆಯಾಗಿ ಸ್ಫೋಟ ಸಂಭವಿಸಿದೆ. ಭಾರಿ ಪ್ರಮಾಣದ ಬೆಂಕಿಯ ಜ್ವಾಲೆ ಹಾಗೂ ಸ್ಫೋಟದ ಸದ್ದಿನಿಂದ ಸುತ್ತಲಿನ ನಿವಾಸಿಗಳು ಆತಂಕಕ್ಕೆ ಒಳಗಾಗಿದ್ದರು.