ಆ್ಯಪ್ನಗರ

ಆಗಸ್ಟ್ 1 ರಿಂದ ಪ್ಲಾಸ್ಟಿಕ್ ಬ್ಯಾಗ್ ವಿತರಿಸುವ ಅಂಗಡಿಗಳಿಗೆ ಐದು ಪಟ್ಟು ದಂಡ, ಅಂಗಡಿ ಪರವಾನಗಿ ರದ್ದು

ಸೆಪ್ಟೆಂಬರ್ 1 ರಿಂದ ಪ್ರತಿಯೊಂದು ಮನೆಗಳಲ್ಲೂ ಕಸ ವಿಂಗಡಿಸಿ ನೀಡಬೇಕು. ಇಲ್ಲದಿದ್ದರೆ ದಂಡು ವಿಧಿಸುವ ಪದ್ಧತಿ ಜಾರಿಗೆ ಬರಲಿದೆ. ಎಲ್ಲೆಂದರಲ್ಲಿ ಕಸ ಎಸೆಯುವವರನ್ನು ಪತ್ತೆ ಮಾಡಿ ದಂಡ ವಿಧಿಸಲಾಗುವುದು ಎಂದು ಬೆಂಗಳೂರು ಮೇಯರ್‌ ಹೇಳಿದ್ದಾರೆ.

Vijaya Karnataka Web 20 Jul 2019, 9:44 pm
ಬೆಂಗಳೂರು: ಉದ್ಯಾನ ನಗರಿ ಬೆಂಗಳೂರಿನಲ್ಲಿ ಆಗಸ್ಟ್ 1 ರಿಂದ ಪ್ಲಾಸ್ಟಿಕ್ ಚೀಲ ಬಳಸುವ ಅಂಗಡಿಗಳ ಮೇಲೆ ಐದು ಪಟ್ಟು ದಂಡ ಮತ್ತು ಅಂಗಡಿ ಪರವಾನಗಿ ರದ್ದುಪಡಿಸುವುದಾಗಿ ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದಾರೆ.
Vijaya Karnataka Web ಗಂಗಾಂಬಿಕೆ ಮಲ್ಲಿಕಾರ್ಜುನ್
ಗಂಗಾಂಬಿಕೆ ಮಲ್ಲಿಕಾರ್ಜುನ್


ಜಯನಗರದ ಭೈರಸಂದ್ರ ವಾರ್ಡ್ ನಲ್ಲಿ ಸುಮಾರು ಒಂದು ಸಾವಿರ ಶಾಲಾ ಮಕ್ಕಳೊಂದಿಗೆ “ ನಮ್ಮ ಕಸ ನಮ್ಮ ಜವಾಬ್ದಾರಿ, ಬೇಡ ಬೇಡ ಪ್ಲಾಸ್ಟಿಕ್ ಬೇಡ. ಬೇಕು ಬೇಕು ಬಟ್ಟೆ ಬ್ಯಾಗ್ ಬೇಕು. ಪಿಓಪಿ ಬೇಡ, ಮಣ್ಣಿನ ಗಣಪತಿ ಬೇಕು “ ಎಂಬ ಘೋಷಣೆಯೊಂದಿಗೆ ಆಯೋಜಿಸಿದ್ದ ಬೃಹತ್ ಜಾಗೃತಿ ಜಾಥಾಗೆ ಚಾಲನೆ ನೀಡಿ ಮಾತನಾಡಿದರು

ಪ್ಲಾಸ್ಟಿಕ್ ವಿರುದ್ಧ ಕಳೆದ ಹದಿನೈದು ದಿನಗಳಿಂದ ದೊಡ್ಡ ಮಟ್ಟದಲ್ಲಿ ದಾಳಿ ನಡೆಸಲಾಗುತ್ತಿದೆ. ಜತೆಗೆ ಪ್ಲಾಸ್ಟಿಕ್‌ನಿಂದಾಗುವ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಲಾಗುತ್ತಿದೆ. ಪ್ಲಾಸ್ಟಿಕ್ ಚೀಲ ಇಟ್ಟುಕೊಂಡಿರುವ ಅಂಗಡಿಗಳ ಮೇಲೆ ದಾಳಿ ಮಾಡಿ ಜಪ್ತಿ ಮಾಡುತ್ತಿದ್ದೇವೆ. ಆಗಸ್ಟ್ 1 ರಿಂದ ದಂಡದ ಪ್ರಮಾಣವನ್ನು ಐದು ಪಟ್ಟು ಹೆಚ್ಚಿಸಲಾಗುವುದು. ಅದಕ್ಕೂ ಜಗ್ಗದಿದ್ದರೆ ನೋಟಿಸ್ ನೀಡಿ, ಅಂಗಡಿ ಪರವಾನಗಿಯನ್ನೇ ರದ್ದು ಪಡಿಸುತ್ತೇವೆ ಎಂದು ಮೇಯರ್‌ ಎಚ್ಚರಿಕೆ ನೀಡಿದರು.

ಸಣ್ಣ ಪುಟ್ಟ ಅಂಗಡಿಗಳು, ಬೀದಿ ಬದಿ ವ್ಯಾಪಾರಿಗಳಿಗೂ ಸಹ ಇದು ಅನ್ವಯವಾಗಲಿದೆ. ಹಣ್ಣು, ತರಕಾರಿ ಮಾರಾಟ ಮಾಡುವವರು ಸಹ ಈ ಬಗ್ಗೆ ಎಚ್ಚರಿಕೆಯಿಂದ ಇರಬೇಕು. ಪ್ಲಾಸ್ಟಿಕ್ ಚೀಲ ಬಳಕೆ ಮಾಡಿದ್ದೇ ಆದಲ್ಲಿ ಅವರು ಮಾರಾಟ ಮಾಡುತ್ತಿರುವ ವಸ್ತುಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಎಂದರು.

ಕಾನೂನು ಬಾಹಿರವಾಗಿ ಪ್ಲಾಸ್ಟಿಕ್ ವಿತರಣೆ ಮಾಡಲಾಗುತ್ತಿದ್ದು, ಜನತೆ ಕೂಡ ಪ್ಲಾಸ್ಟಿಕ್ ಬಳಕೆಯಿಂದ ದೂರ ಇರಬೇಕು. ಬಟ್ಟೆ ಬ್ಯಾಗ್ ಬಳಕೆಗೆ ಆದ್ಯತೆ ನೀಡಬೇಕು. ಎಲ್ಲರ ಸಹಕಾರದಿಂದ ಮಾತ್ರ ಪ್ಲಾಸ್ಟಿಕ್ ನಿಯಂತ್ರಣ ಸಾಧ್ಯ ಎಂದು ಅವರು ಪ್ರತಿಪಾದಿಸಿದರು.

ಸೆಪ್ಟೆಂಬರ್ 1 ರಿಂದ ಕಸ ವಿಂಗಡನೆ ಕಡ್ಡಾಯವಾಗಿದೆ. ಬುಧವಾರ ಮತ್ತು ಶನಿವಾರ ಮಾತ್ರ ಒಣ ಕಸ ಸ್ವೀಕರಿಸಲಾಗುವುದು. ಉಳಿದ ದಿನಗಳಲ್ಲಿ ಹಸಿ ಕಸ ಸಂಗ್ರಹಿಸಲು ತೀರ್ಮಾನಿಸಲಾಗಿದೆ. ಕಸ ವಿಂಗಡಿಸಿ ನೀಡದಿದ್ದರೆ ಅಂತಹ ಕುಟುಂಬದವರಿಗೂ ಸಹ ದಂಡ ವಿಧಿಸಲಾಗುವುದು ಎಂದು ಮೇಯರ್ ಎಚ್ಚರಿಸಿದರು.

ಗಣಪತಿ ಹಬ್ಬ ಬರುತ್ತಿದ್ದು, ಈ ಬಾರಿಯೂ ಸಹ ಪಿಓಪಿ ಗಣಪತಿ ಮೂರ್ತಿ ಪ್ರತಿಷ್ಠಾಪನೆ ಬೇಡ. ಇದರಿಂದ ಜಲಮೂಲಗಳು ಹಾಳಾಗಲಿದ್ದು, ಪರಿಸರ ಮಾಲಿನ್ಯಕ್ಕೆ ಕಾರಣವಾಗುತ್ತವೆ. ಹಾಗಾಗಿ ಪಿಓಪಿ ಗಣಪತಿ ಬಿಟ್ಟು ಮಣ್ಣಿನ ಗಣಪತಿ ಪ್ರತಿಷ್ಠಾಪಿಸಿ. ಬೆಂಗಳೂರು ನಗರವನ್ನು ಸ್ವಚ್ಛ ಸುಂದರಗೊಳಿಸಲು ಎಲ್ಲಾ ನಾಗರಿಕರು ಸಹಕಾರ ನೀಡಬೇಕು ಎಂದು ಮೇಯರ್‌ ಗಂಗಾಂಬಿಕೆ ಮಲ್ಲಿಕಾರ್ಜುನ್ ಮನವಿ ಮಾಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ