ಆ್ಯಪ್ನಗರ

ಕೊರೊನಾ ಭೀತಿ: ವಿ.ವಿ.ಪುರಂನಲ್ಲಿರುವ ಫುಡ್‌ಸ್ಟ್ರೀಟ್‌ ಒಂದು ವಾರ ಬಂದ್‌!

ಕೊರೊನಾ ಮತ್ತು ಕಾಲರಾ ಸೋಂಕು ಹರಡುವುದನ್ನು ನಿಯಂತ್ರಿಸುವ ಸಲುವಾಗಿ ವಿವಿ ಪುರದ ಫುಡ್‌ಸ್ಟ್ರೀಟ್‌ನ ಎಲ್ಲಅಂಗಡಿಗಳು, ಹೋಟೆಲ್‌ಗಳು ಮತ್ತೆ ಒಂದು ವಾರ ಬಂದ್ ಆಗಲಿದೆ. ಈ ಸಂಬಂಧ ಫುಡ್‌ಸ್ಟ್ರೀಟ್‌ನಲ್ಲಿ ಸೂಚನಾ ಫಲಕವನ್ನು ಅಳವಡಿಸಿ ಗ್ರಾಹಕರಿಗೆ ಮಾಹಿತಿ ನೀಡಲಾಗಿದೆ

Vijaya Karnataka Web 17 Mar 2020, 10:02 am
ಬೆಂಗಳೂರು: ಕೊರೊನಾ ಮತ್ತು ಕಾಲರಾ ಸೋಂಕು ಹರಡುವುದನ್ನು ನಿಯಂತ್ರಿಸುವ ಸಲುವಾಗಿ ವಿವಿ ಪುರದ ಫುಡ್‌ಸ್ಟ್ರೀಟ್‌ನ ಎಲ್ಲಅಂಗಡಿಗಳು, ಹೋಟೆಲ್‌ಗಳನ್ನು ಮತ್ತೆ ಒಂದು ವಾರ ಮುಚ್ಚಲು ಮಾಲೀಕರು ತೀರ್ಮಾನಿಸಿದ್ದಾರೆ. ಹೀಗಾಗಿ, ಫುಡ್‌ಸ್ಟ್ರೀಟ್‌ನಲ್ಲಿ ಶನಿವಾರದವರೆಗೆ ಊಟ, ತಿಂಡಿ ಸಿಗುವುದಿಲ್ಲ.
Vijaya Karnataka Web street food


ವಿವಿ ಪುರದ ಫುಡ್‌ಸ್ಟ್ರೀಟ್‌ ಮೇಲೆ ಇತ್ತೀಚೆಗೆ ದಾಳಿ ನಡೆಸಿದ್ದ ಬಿಬಿಎಂಪಿ ಆರೋಗ್ಯಾಧಿಕಾರಿಗಳು, ಸ್ವಚ್ಛತೆ ಕಾಯ್ದುಕೊಳ್ಳದ 13 ಹೋಟೆಲ್‌ಗಳಿಗೆ ನೋಟಿಸ್‌ ನೀಡಿ, ಬೀಗಮುದ್ರೆ ಹಾಕಿದ್ದರು. ಇದರಿಂದ ಎಚ್ಚೆತ್ತ ಇತರೆ ಹೋಟೆಲ್‌ಗಳ ಮಾಲೀಕರು, ಮಾ. 11ರಿಂದ ಎಲ್ಲ39 ಹೋಟೆಲ್‌ಗಳನ್ನು ಸ್ವಯಂಪ್ರೇರಿತವಾಗಿ ಬಂದ್‌ ಮಾಡಿದ್ದರು. ಹೋಟೆಲ್‌ಗಳನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿ, ಸೋಮವಾರದಿಂದ ವಹಿವಾಟು ಆರಂಭಿಸಲು ನಿರ್ಧರಿಸಿದ್ದರು. ಆದರೆ, ಬಿಬಿಎಂಪಿ ಆರೋಗ್ಯಾಧಿಕಾರಿಗಳು ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವುದರಿಂದ ಮತ್ತೆ ಒಂದು ವಾರ ಹೋಟೆಲ್‌ಗಳನ್ನು ಬಂದ್‌ ಮಾಡುವಂತೆ ಆದೇಶಿಸಿರುವ ಹಿನ್ನೆಲೆಯಲ್ಲಿ ಮಾಲೀಕರು ಶನಿವಾರದವರೆಗೆ ವಹಿವಾಟು ಸ್ಥಗಿತಗೊಳಿಸಲು ತೀರ್ಮಾನಿಸಿದ್ದಾರೆ. ಈ ಸಂಬಂಧ ಫುಡ್‌ಸ್ಟ್ರೀಟ್‌ನಲ್ಲಿ ಸೂಚನಾ ಫಲಕವನ್ನು ಅಳವಡಿಸಿ ಗ್ರಾಹಕರಿಗೆ ಮಾಹಿತಿ ನೀಡಲಾಗಿದೆ. ಹೋಟೆಲ್‌ಗಳ ಸ್ವಚ್ಛತೆ ಮತ್ತು ನವೀಕರಣ ಪೂರ್ಣಗೊಂಡ ಬಳಿಕ ಮತ್ತೆ ತೆರೆಯಲಾಗುವುದು ಎಂದು ಮಾಲೀಕರು ಮನವಿ ಮಾಡಿಕೊಂಡಿದ್ದಾರೆ.

''ಗ್ರಾಹಕರಿಗೆ ಗುಣಮಟ್ಟದ ಮತ್ತು ಶುಚಿಯಾದ ಊಟ, ತಿಂಡಿ ನೀಡಬೇಕೆಂಬ ಉದ್ದೇಶದಿಂದ ಎಲ್ಲಾ 39 ಹೋಟೆಲ್‌ಗಳನ್ನು ಮಾ. 11ರಿಂದ ಮುಚ್ಚಲಾಗಿತ್ತು. ಬಿಬಿಎಂಪಿ ಆರೋಗ್ಯಾಧಿಕಾರಿಗಳು ಮತ್ತೆ ಒಂದು ವಾರ ಅಂಗಡಿ, ಹೋಟೆಲ್‌ಗಳನ್ನು ತೆರೆಯದಂತೆ ಆದೇಶಿಸಿದ್ದಾರೆ. ಹೀಗಾಗಿ, ಶನಿವಾರದವರೆಗೆ ಹೋಟೆಲ್‌ಗಳನ್ನು ಮುಚ್ಚಲಾಗುತ್ತಿದೆ,'' ಎಂದು ಬೆಂಗಳೂರು ಫುಡ್‌ಸ್ಟ್ರೀಟ್‌ ವರ್ತಕರ ಒಕ್ಕೂಟದ ಅಧ್ಯಕ್ಷ ಮಣಿಕಂಠ ತಿಳಿಸಿದ್ದಾರೆ.

ಪಿಜಿ ಹಾಸ್ಟೆಲ್‌ಗಳಲ್ಲಿ ತಪಾಸಣೆ
ಈ ನಡುವೆ, ''ಕೊರೊನಾ ಸೋಂಕು ತಡೆಗೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ತುರ್ತು ಸಭೆ ನಡೆಸಿ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಈ ಹಿನ್ನೆಲೆಯಲ್ಲಿವಿಶೇಷ ಆಯುಕ್ತರು, ಜಂಟಿ ಆಯುಕ್ತರ ತಂಡವು ಹೋಟೆಲ್‌ಗಳು, ಹಾಸ್ಟೆಲ್‌ಗಳು ಮತ್ತು ಪಿಜಿಗಳಿಗೆ ಭೇಟಿ ನೀಡಿ ಸ್ವಚ್ಛತೆಯ ತಪಾಸಣೆ ನಡೆಸಿದೆ. ಅಲ್ಲದೆ, ಕಲ್ಯಾಣಮಂಟಪ, ಪಾರ್ಟಿ ಹಾಲ್‌ಗಳಲ್ಲಿ ಯಾವುದೇ ಸಮಾರಂಭ ನಡೆಸದಂತೆ ಸೂಚನೆ ನೀಡಿದೆ'' ಎಂದು ಪಾಲಿಕೆ ಆಯುಕ್ತ ಬಿ.ಎಚ್‌. ಅನಿಲ್‌ಕುಮಾರ್‌ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ