ಆ್ಯಪ್ನಗರ

ಯತ್ನಾಳ್‌ರದ್ದು ಬೇಜವಾಬ್ದಾರಿ ಹೇಳಿಕೆ, ಸದನದಲ್ಲಿಯೂ ಹೋರಾಟ: ಸಿದ್ದರಾಮಯ್ಯ

ಹಿರಿಯ ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ ವಿರುದ್ಧ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ನೀಡಿದ್ದ ಹೇಳಿಕೆಯನ್ನು ಮಾಜಿ ಸಿಎಂ ಸಿದ್ದರಾಮಯ್ಯ ಖಂಡಿಸಿದ್ದಾರೆ. ಇದು ಸಾಂಕೇತಿಕ ಪ್ರತಿಭಟನೆ ಮಾತ್ರ. ನಮ್ಮ ಹೋರಾಟ ಸದನದಲ್ಲಿಯೂ ಮುಂದುವರೆಯುತ್ತದೆ ಎಂದರು.

Vijaya Karnataka Web 26 Feb 2020, 7:20 pm
ಬೆಂಗಳೂರು: ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್ ನಿನ್ನೆ ವಿಜಯಪುರದಲ್ಲಿ ಅತ್ಯಂತ ಬೇಜವಾಬ್ದಾರಿತನದ ಹೇಳಿಕೆ ನೀಡಿದ್ದಾರೆ. ಇದರಿಂದ ನಮ್ಮೆಲ್ಲರಿಗೂ ನೋವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಹಿರಿಯ ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ ಅವರ ಬಗ್ಗೆ ಯತ್ನಾಳ್‌ ನೀಡಿದ್ದ ಹೇಳಿಕೆ ವಿರೋಧಿಸಿ ವಿಧಾನಸೌಧದಲ್ಲಿ ನಡೆದ ಪ್ರತಿಭಟನೆಯಲ್ಲಿ ಸಿದ್ದರಾಮಯ್ಯ ಮಾತನಾಡಿ ಯತ್ನಾಳ್‌ ಹೇಳಿಕೆಯನ್ನು ಖಂಡಿಸಿದ್ದಾರೆ.
Vijaya Karnataka Web SIDDARAMIH


ದೊರೆಸ್ವಾಮಿ ಅವರು ಇಡೀ ಬದುಕು ಸಮಾಜ, ನಾಡಿಗಾಗಿ ಹೋರಾಡಿದ್ದಾರೆ. ಇಳಿ ವಯಸ್ಸಿನಲ್ಲೂ ಮನೆಯಲ್ಲಿ ಕುಳಿತವರಲ್ಲ. ಯಾವುದೇ ಜನಪರ ಹೋರಾಟದ ಮುಂದಾಳತ್ವ ವಹಿಸುತ್ತಾರೆ. ಯುವಕರಿಗೆ ಸ್ಫೂರ್ತಿ, ನಮ್ಮೆಲ್ಲರಿಗೂ ಮಾರ್ಗದರ್ಶಕರು ಎಂದು ಅವರು ಹೇಳಿದರು.

ಇಂತಹವರ ಹೋರಾಟ, ತ್ಯಾಗ, ಬಲಿದಾನಗಳಿಂದ ಯತ್ನಾಳ್‌ಗೆ ಮಾತನಾಡುವ ಸ್ವಾತಂತ್ರ್ಯ ಸಿಕ್ಕಿದೆ. ಬ್ರಿಟಿಷರನ್ನು ದೇಶ ಬಿಟ್ಟು ಕಳುಹಿಸಲು, ನಿಸ್ವಾರ್ಥದಿಂದ ಹೋರಾಡದೇ ಇದ್ದಿದ್ದರೆ, ಈ ಸ್ವಾತಂತ್ರ್ಯ ಸಿಗುತ್ತಿತ್ತೇ ಎಂದು ಯತ್ನಾಳ್‌ ಅವರನ್ನು ಮಾಜಿ ಸಿಎಂ ಪ್ರಶ್ನಿಸಿದರು.

ಯತ್ನಾಳ್ ಮನುಷ್ಯ ಜಾತಿಗೆ ಸೇರಿದವರಲ್ಲ: ಈಶ್ವರ್‌ ಖಂಡ್ರೆ ಆಕ್ರೋಶ

ಗೊತ್ತಿದ್ದು ಮಾತನಾಡಿದ್ದಾರೆ
ಯತ್ನಾಳ್ ಏನೂ ಗೊತ್ತಿಲ್ಲದೆ ಮಾತಾಡಿಲ್ಲ. ಗೊತ್ತಿದ್ದೂ ಮಾತನಾಡಿದ್ದಾರೆ. ಇದರ ಹಿಂದೆ ಸಂಘ ಪರಿವಾರದವರ ಚಿತಾವಣೆ ಇದೆ. ಇಲ್ಲದಿದ್ದರೆ ಹೀಗೆ ಮಾತನಾಡುತ್ತಿರಲಿಲ್ಲ. ಸಂವಿಧಾನದ ಬಗ್ಗೆ, ಗೌರವ, ನಂಬಿಕೆ, ನಿಷ್ಠೆಯಿಲ್ಲ. ಸಂವಿಧಾನಕ್ಕೆ ಚ್ಯುತಿ ತಂದವರು ಶಾಸಕರಾಗಿ ಇರಲು ಯೋಗ್ಯರಾ? ಎಂದು ಯತ್ನಾಳ್‌ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ದೊರೆಸ್ವಾಮಿ ‘ಪಾಕ್ ಏಜೆಂಟ್’ ಹೇಳಿಕೆ, ಯತ್ನಾಳ್ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ

ಹೋರಾಟದ ಪರಂಪರೆ ಕಾಂಗ್ರೆಸ್‌ಗಿದೆ
ಹೋರಾಟದಲ್ಲಿ ಭಾಗವಹಿಸಲ್ಲ ಅಂತ ಮುಚ್ಚಳಿಕೆ ಬರೆದುಕೊಟ್ಟ ಗೋಡ್ಸೆ ಸಂತತಿ ಇವರೆಲ್ಲ. ಬಿಜೆಪಿ ಮಂತ್ರಿಗಳೂ ಸಂವಿಧಾನ, ನೆಹರು, ಗಾಂಧಿ, ಅಂಬೇಡ್ಕರ್, ಮೌಲಾನಾ ಆಜಾದ್ ವಿರುದ್ಧ ಮಾತನಾಡುತ್ತಾರೆ. ಬ್ರಿಟಿಷರ ಆಡಳಿತವೇ ಇರಲಿ ಅಂತಿದ್ದವರು ಇವರು. ಸ್ವಾತಂತ್ರ್ಯ ಹೋರಾಟದ ಪರಂಪರೆ ಏನಿದ್ದರೂ ಕಾಂಗ್ರೆಸ್‌ಗಿದೆ. ಶತಾಯುಷಿಗಳಾಗಿ ದೊರೆಸ್ವಾಮಿ ಮಾರ್ಗದರ್ಶನ ಮಾಡುತ್ತಿರುವುದೇ ನಮ್ಮೆಲ್ಲರ ಸೌಭಾಗ್ಯ ಎಂದು ಹೇಳಿದರು.

ನಾವು ಹೋರಾಟ ಅರಿತವರು
ಹೋರಾಟದಲ್ಲಿ ನಾನೂ ಭಾಗವಹಿಸಿಲ್ಲ. ನರೇಂದ್ರ ಮೋದಿಯೂ ಪಾಲ್ಗೊಂಡಿಲ್ಲ. ನಾವು ಹೋರಾಟ ಅರಿತವರು. ಇವರು ಹೋರಾಡದೇ ಫಲ ಅನುಭವಿಸುತ್ತಿದ್ದಾರೆ. ಎಲ್ಲ ಸ್ವಾತಂತ್ರ್ಯ ಹೋರಾಟಗಾರ ಸಮೂಹಕ್ಕೆ ಮಾಡಿದ ಅವಮಾನ ಇದು ಎಂದು ಬೇಸರ ವ್ಯಕ್ತಪಡಿಸಿದರು.

ದೊರೆಸ್ವಾಮಿ ಪಾಕಿಸ್ತಾನದ ಏಜೆಂಟ್‌! ಯತ್ನಾಳ್ ವಿವಾದಾತ್ಮಕ ಹೇಳಿಕೆ

ಸದನದಲ್ಲಿಯೂ ಹೋರಾಟ
ಸಂವಿಧಾನದ ಮೇಲೆ ನಂಬಿಕೆಯಿಲ್ಲ. ಚಾತುರ್ವರ್ಣ್ಯ ಹೇಳುವ ಮನುಸ್ಮೃತಿ ಮೇಲೆ ಅವರಿಗೆನಂಬಿಕೆಯಿದೆ. ನಾವು ಅಧಿಕಾರಕ್ಕೇ ಬಂದಿರುವುದೇ ಸಂವಿಧಾನ ಬದಲಿಸಲು ಅಂತ ಅನಂತಕುಮಾರ್ ಹೆಗಡೆ ಹೇಳುತ್ತಾರೆ. ಇದು ಸಾಂಕೇತಿಕ ಅಷ್ಟೇ. ಸದನದಲ್ಲೂ ಹೋರಾಟ ಮುಂದುವರಿಯಲಿದೆ ಎಂದು ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ