ಆ್ಯಪ್ನಗರ

ಸಾಮೂಹಿಕ ವಿವಾಹ ತಾಳಿ: ಆಭರಣ ಮಳಿಗೆಗಳಿಗೆ 1.68 ಕೋಟಿ ವಂಚನೆ

ಸಾಮೂಹಿಕ ವಿವಾಹ ಮಾಡಿಸುವ ಸೋಗಿನಲ್ಲಿ ಎರಡು ಆಭರಣ ಮಳಿಗೆಗಳಿಂದ ಸುಮಾರು 1.68 ಕೋಟಿ ರೂ. ಮೌಲ್ಯದ ತಾಳಿಗಳು ಹಾಗೂ ಚಿನ್ನದ ಬಿಸ್ಕತ್‌ ಮಾಡಿಸಿಕೊಂಡು ಹಣ ನೀಡದೆ ವಂಚನೆ ಬಯಲು.

Vijaya Karnataka Web 24 Feb 2018, 9:44 am
ಬೆಂಗಳೂರು: ಸಾಮೂಹಿಕ ವಿವಾಹ ಮಾಡಿಸುವ ಸೋಗಿನಲ್ಲಿ ಎರಡು ಆಭರಣ ಮಳಿಗೆಗಳಿಂದ ಸುಮಾರು 1.68 ಕೋಟಿ ರೂ. ಮೌಲ್ಯದ ತಾಳಿಗಳು ಹಾಗೂ ಚಿನ್ನದ ಬಿಸ್ಕತ್‌ ಮಾಡಿಸಿಕೊಂಡು ಹಣ ನೀಡದೆ ವಂಚಿಸಿದ ಆರೋಪದಲ್ಲಿಬಿಎಸ್‌ಆರ್‌ ಕಾಂಗ್ರೆಸ್‌ ಮುಖಂಡರಾಗಿದ್ದ ಉದ್ಯಮಿ ಎಲ್‌.ಸೋಮಣ್ಣ ಸೇರಿದಂತೆ ನಾಲ್ವರ ವಿರುದ್ಧ ಬಸವೇಶ್ವರನಗರ ಠಾಣೆಯಲ್ಲಿ ಎರಡು ಪ್ರತ್ಯೇಕ ಎಫ್‌ಐಆರ್‌ಗಳು ದಾಖಲಾಗಿವೆ.
Vijaya Karnataka Web fraud to jewellery shop
ಸಾಮೂಹಿಕ ವಿವಾಹ ತಾಳಿ: ಆಭರಣ ಮಳಿಗೆಗಳಿಗೆ 1.68 ಕೋಟಿ ವಂಚನೆ


ಎಲ್‌.ಸೋಮಣ್ಣ, ರೇಣುಕೇಶ, ಅಂಥೋಣಿ ಹಾಗೂ ಸಾಗರ್‌ ಎಂಬುವವರ ವಿರುದ್ಧ ಬಸವೇಶ್ವರ ನಗರ ನಿವಾಸಿಗಳಾದ ಸೂರಜ್‌ ಹಾಗೂ ಡಿ.ಎನ್‌ ಧೀರಜ್‌ ದೂರು ದಾಖಲಿಸಿದ್ದಾರೆ.

ಪ್ರಕರಣದ ವಿವರ

''ಕೆಲವು ವರ್ಷಗಳಿಂದ ರೇಣುಕೇಶ್‌ ಎಂಬಾತ ನನಗೆ ಪರಿಚಯವಾಗಿದ್ದ. 2017ರ ಜುಲೈ ತಿಂಗಳಲ್ಲಿಫೋನ್‌ ಮಾಡಿ ಮಾತನಾಡಿದ ರೇಣುಕೇಶ್‌, ಸ್ನೇಹಿತ ಎಲ್‌.ಸೋಮಣ್ಣ ಎಂಬುವವರು ರಾಜಕೀಯ ಮುಖಂಡನಾಗಿದ್ದು , ಅವರ ಹುಟ್ಟುಹಬ್ಬಕ್ಕೆ ಬಟ್ಟೆ ಬೇಕಾಗಿದೆ. ನಿಮ್ಮ ಅಂಗಡಿಗೆ ಕಳುಹಿಸುತ್ತೇನೆ ಎಂದು ಹೇಳಿದ್ದ. ಅದಕ್ಕೆ ಬನ್ನಿ ಎಂದು ಹೇಳಿದಾಗ 2017ರ ಜು.18ರಂದು ಎಲ್‌.ಸೋಮಣ್ಣ ಅವರ ಪತ್ನಿ ಹಾಗೂ ಮಕ್ಕಳೆಂದು ಹೇಳಿಕೊಂಡು ಮೂವರು ಬಂದು 30 ಸಾವಿರ ರೂ. ಕೊಟ್ಟುಬಟ್ಟೆ ಖರೀದಿಸಿದ್ದರು. ಸಹಕಾರ ನಗರದಲ್ಲಿನ ಲಾಡ್ಜ್ವೊಂದರಲ್ಲಿಉಳಿದುಕೊಂಡಿದ್ದ ಎಲ್‌.ಸೋಮಣ್ಣ ಅವರನ್ನು ಭೇಟಿ ಮಾಡಿ ಅವರ ಬಟ್ಟೆಯನ್ನು ಅಲ್ಲೇ ನೀಡಿದ್ದೆ. ಅಲ್ಲದೆ, ಚಳ್ಳಕೆರೆ ಬಳಿಯ ನಾಯಕನಹಟ್ಟಿಯಲ್ಲಿಅವರ ಹುಟ್ಟುಹಬ್ಬಕ್ಕೂ ಹೋಗಿದ್ದೆ. ಹೀಗೆ, ಸಂಪರ್ಕದಲ್ಲಿದ್ದ ಅವರು, ನಿಮ್ಮ ಅಂಗಡಿ ಚಿಕ್ಕದಾಗಿದೆ. ಶೋ ರೂಮ್‌ ಮಾಡಿಕೊಳ್ಳಿ , ನಾನು ನಡೆಸುತ್ತಿರುವ ಟ್ರಸ್ಟ್‌ನಿಂದ 3.5 ಕೋಟಿ ರೂ. ಸಾಲ ಕೊಡಿಸುವೆ ಎಂದರು. ನಾಲ್ಕು ಚೆಕ್‌, ಬಾಂಡ್‌ ಪೇಪರ್‌ ಹಾಗೂ ಗುರುತಿನ ಚೀಟಿ ಕೊಡಿ ಎಂದು ಹೇಳಿ ಮನೆಗೆ ಬಂದು ಎಲ್ಲವನ್ನೂ ತೆಗೆದುಕೊಂಡು ಹೋದರು'' ಎಂದು ದೂರಿನಲ್ಲಿಸೂರಜ್‌ ವಿವರಿಸಿದ್ದಾರೆ.

''ಮತ್ತೊಮ್ಮೆ ಬಂದು ತಮ್ಮ ಟ್ರಸ್ಟ್‌ ವತಿಯಿಂದ ಸಾಮೂಹಿಕ ವಿವಾಹ ಮಾಡಿಸುತ್ತಿದ್ದೇವೆ. 6 ಗ್ರಾಂ ತೂಕದ 187 ತಾಳಿಗಳು, 30 ಗ್ರಾಂ ತೂಕದ ಚಿನ್ನದ ಬಿಸ್ಕತ್‌ಗಳು, 50 ಗ್ರಾಂ ತೂಕದ 5 ಚಿನ್ನದ ಬಿಸ್ಕತ್‌ಗಳನ್ನು ನೀಡಿದರೆ ಶೋರೂಂ ಆರಂಭಕ್ಕೆ ಬೇಗ ಸಾಲ ಸಿಗುತ್ತದೆ ಎಂದು ಹೇಳಿದ್ದರು. ಅದರಂತೆ ಜೈಪುರದಲ್ಲಿರುವ ಪರಿಚಯದ ದರ್ಶನ್‌ ಜುವೆಲ್ಲರ್ಸ್‌ನಿಂದ ಸಾಲದ ರೂಪದಲ್ಲಿಆಭರಣವನ್ನು ತರಿಸಿಕೊಂಡಿದ್ದೆ. 2018ರ ಜ.22ರಂದು ಸೋಮಣ್ಣ ಹಾಗೂ ಅಂಥೋಣಿ ಅವರು ಮನೆಗೆ ಬಂದು ತಾಳಿ ಸೇರಿದಂತೆ ಇನ್ನಿತರ ಆಭರಣ ತೆಗೆದುಕೊಂಡು ಹೋದರು. ಹಣ ಕೇಳಿದಾಗ, 2 ತಾಸಿನಲ್ಲಿಆರ್‌ಟಿಜಿಎಸ್‌ ಮಾಡುವುದಾಗಿ ಹೇಳಿದ್ದರು. ಅವರು ಹೇಳಿದಂತೆ ಖಾತೆಗೆ ಹಣ ಬಾರದ ಕಾರಣ ಕೇಳಲು ಕರೆ ಮಾಡಿದಾಗ ಸ್ವಿಚ್‌ ಆಫ್‌ ಆಗಿತ್ತು. ಎಲ್‌. ಸೋಮಣ್ಣ ಅವರು ವಾಸವಿದ್ದ ಹೆಬ್ಟಾಳ ಬಳಿಯ ಅಪಾರ್ಟ್‌ಮೆಂಟ್‌ಗೆ ತೆರಳಿ ವಿಚಾರಿಸಿದಾಗ ಅವರು ಫ್ಲ್ಯಾಟ್‌ ಖಾಲಿ ಮಾಡಿಕೊಂಡು ಹೋಗಿದ್ದಾಗಿ ತಿಳಿಸಿದರು. ಸಾಲ ಕೊಡಿಸುವ ನೆಪದಲ್ಲಿಒಟ್ಟು94 ಲಕ್ಷ ರೂ. ಮೌಲ್ಯದ ಚಿನ್ನಾಭರಣ ತೆಗೆದುಕೊಂಡು ವಂಚಿಸಿರುವ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು'' ಎಂದು ದೂರಿನಲ್ಲಿಸೂರಜ್‌ ಕೋರಿದ್ದಾರೆ.

ಮತ್ತೊಂದು ಪ್ರಕರಣದಲ್ಲಿ68 ಲಕ್ಷ ರೂ. ಟೋಪಿ

ಈ ಮಧ್ಯೆ 94 ಲಕ್ಷ ರೂ. ಮೌಲ್ಯದ ಆಭರಣ ಕೊಟ್ಟುವೋಸ ಹೋಗಿರುವುದಾಗಿ ಧೀರಜ್‌ ಎಂಬುವರು ಬಸವೇಶ್ವರ ನಗರ ಠಾಣೆಗೆ ದೂರು ನೀಡಿದ್ದಾರೆ.

ಸಾಮೂಹಿಕ ವಿವಾಹಕ್ಕಾಗಿ ತಾಳಿ, ಅಲ್ಲಿಗೆ ಬರುವ ಸ್ವಾಮೀಜಿಗಳಿಗೆ ಚಿನ್ನದ ಬಿಸ್ಕತ್‌ ಗಿಫ್ಟ್‌ ಕೊಡಲು ಬೇಕಾಗುತ್ತದೆ ಎಂದು ಹೇಳಿ ಸುಮಾರು 94 ಲಕ್ಷ ರೂ. ಮೌಲ್ಯದ ಆಭರಣ ಆರ್ಡರ್‌ ಮಾಡಿ ಅದನ್ನು ತೆಗೆದುಕೊಂಡ ಸೋಮಣ್ಣ, 20 ಲಕ್ಷ ರೂ. ಮಾತ್ರ ನೀಡಿ ಉಳಿದ ಹಣವನ್ನು ಮರಳಿಸದೆ ವಂಚಿಸಿದ್ದಾರೆಂದು ದೂರಿನಲ್ಲಿಧೀರಜ್‌ ಆರೋಪಿಸಿದ್ದಾರೆ.

ನನ್ನ ಅಂಗಡಿಯಲ್ಲಿದ್ದ ಆಭರಣಗಳನ್ನು ಬೇರೆಡೆ ಅಡ ಇಟ್ಟು , ಸ್ನೇಹಿತರಿಂದ ಸಾಲ ಪಡೆದು ತಾಳಿ ಹಾಗೂ ಚಿನ್ನದ ಬಿಸ್ಕತ್‌ ಮಾಡಿಸಿಕೊಟ್ಟಿದ್ದೇನೆ. ಫೆ.19ರಂದು ನನ್ನ ಮನೆಗೆ ಬಂದ ಸೋಮಣ್ಣ ಆಭರಣ ತೆಗೆದುಕೊಂಡು, ಹಣವನ್ನು ಆರ್‌ಟಿಜಿಎಸ್‌ ಮಾಡುವುದಾಗಿ ಹೇಳಿ ಹಣ ನೀಡದೆ ವಂಚಿಸಿದ್ದಾರೆ.

ಈ ಬಗ್ಗೆ ಕೇಳಿದಾಗ, ''ನೀನು ನನಗೆ ಯಾವುದೇ ಚಿನ್ನ ಕೊಟ್ಟಿಲ್ಲ. ನೀನು ಯಾರು ಅಂತಲೂ ಗೊತ್ತಿಲ್ಲ. ಮೈಸೂರಿನ ಮುಂದಿನ ಎಂ.ಎಲ್‌.ಎ. ನಾನೇ. ನೀನು ಹಣ ಕೇಳಿದರೆ ಕತೆ ಮುಗಿಸಿ ಬಿಡುತ್ತೇನೆಂದು ಪ್ರಾಣ ಬೆದರಿಕೆ ಹಾಕಿದ್ದಾರೆ'' ಎಂದು ದೂರಿನಲ್ಲಿಧೀರಜ್‌ ಆರೋಪಿಸಿದ್ದಾರೆ.

ಆಭರಣ ಮಳಿಗೆ ಮಾಲೀಕರು ಆರೋಪಿಸಿರುವ ಎಲ್‌.ಸೋಮಣ್ಣ ಈ ಹಿಂದೆ ಬಿಎಸ್‌ಆರ್‌ ಕಾಂಗ್ರೆಸ್‌ನಲ್ಲಿದ್ದು , ಈಗ ಜೆಡಿಎಸ್‌ ಪಕ್ಷದಲ್ಲಿದ್ದಾರೆಂಬ ಮಾಹಿತಿ ಇದೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್‌ ಅಧಿಕಾರಿ ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ