ಆ್ಯಪ್ನಗರ

ಬಾಗಲೂರಿಗೆ ಕಸ: ಬಿಬಿಎಂಪಿಗೆ ಬಿಸಿ

ಬೆಂಗಳೂರು ಹೊರವಲಯದ ಬಾಗಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅಕ್ರಮವಾಗಿ ತ್ಯಾಜ್ಯ ಸುರಿಯುವ ಮೂಲಕ ಸುತ್ತಲಿನ ಜನರ ಬದುಕನ್ನು ಬಿಬಿಎಂಪಿ ಅಸಹನೀಯವಾಗಿಸಿದೆ ಎಂದು ಆಕ್ಷೇಪಿಸಿ ಗ್ರಾಮಸ್ಥರು, ಬೆಮೆಲ್‌ ಲೇಔಟ್‌ ನಿವಾಸಿಗಳು ಮತ್ತು ನವೋದಯ ಶಾಲೆಯ ವಿದ್ಯಾರ್ಥಿಗಳ ಪಾಲಕರು ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ (ಎನ್‌ಜಿಟಿ) ಮೊರೆ ಹೋಗಿದ್ದಾರೆ.

Vijaya Karnataka Web 7 Jul 2017, 4:00 am

* ಅಕ್ರಮವಾಗಿ ತ್ಯಾಜ್ಯ ಸುರಿದಿದ್ದನ್ನು ಪ್ರಶ್ನಿಸಿ ಎನ್‌ಜಿಟಿ ಮೆಟ್ಟಿಲೇರಿದ ಸ್ಥಳೀಯರು

ವಿಕ ಸುದ್ದಿಲೋಕ ಹೊಸದಿಲ್ಲಿ

ಬೆಂಗಳೂರು ಹೊರವಲಯದ ಬಾಗಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅಕ್ರಮವಾಗಿ ತ್ಯಾಜ್ಯ ಸುರಿಯುವ ಮೂಲಕ ಸುತ್ತಲಿನ ಜನರ ಬದುಕನ್ನು ಬಿಬಿಎಂಪಿ ಅಸಹನೀಯವಾಗಿಸಿದೆ ಎಂದು ಆಕ್ಷೇಪಿಸಿ ಗ್ರಾಮಸ್ಥರು, ಬೆಮೆಲ್‌ ಲೇಔಟ್‌ ನಿವಾಸಿಗಳು ಮತ್ತು ನವೋದಯ ಶಾಲೆಯ ವಿದ್ಯಾರ್ಥಿಗಳ ಪಾಲಕರು ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ (ಎನ್‌ಜಿಟಿ) ಮೊರೆ ಹೋಗಿದ್ದಾರೆ.

Vijaya Karnataka Web garbage dumping bagaluru resident aproach
ಬಾಗಲೂರಿಗೆ ಕಸ: ಬಿಬಿಎಂಪಿಗೆ ಬಿಸಿ


ಗ್ರಾಮ ಪಂಚಾಯಿತಿ ಮತ್ತು ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಅನುಮತಿಯನ್ನೂ ಪಡೆಯದೇ ಬಾಗಲೂರು ವ್ಯಾಪ್ತಿಯಲ್ಲಿ ದೊಡ್ಡ ದೊಡ್ಡ ಗುಂಡಿಗಳಲ್ಲಿ ವರ್ಗೀಕರಿಸದ ಘನತ್ಯಾಜ್ಯವನ್ನು ಸುರಿಯಲಾಗುತ್ತಿದೆ. ಈ ತ್ಯಾಜ್ಯದ ದುರ್ವಾಸನೆಯಿಂದ ಸುತ್ತಮುತ್ತಲಿನ ಜನರ ಬದುಕು ಅಸಹನೀಯವಾಗಿದೆ. ಅಷೇ ಅಲ್ಲ, ಇದರಿಂದಾಗಿ ಗ್ರಾಮದ ವ್ಯಾಪ್ತಿಯಲ್ಲಿ ಅಂತರ್ಜಲವೂ ಕಲುಷಿತಗೊಂಡಿದ್ದು, ಕೊಳವೆ ಬಾವಿಗಳಲ್ಲಿ ಕಲುಷಿತ ನೀರೇ ಬರುತ್ತಿದೆ ಎಂದು 12 ಜನ ಅರ್ಜಿದಾರರು ದೂರಿದ್ದಾರೆ.

ನ್ಯಾಯಮೂರ್ತಿ ಸ್ವತಂತ್ರಕುಮಾರ್‌ ನೇತೃತ್ವದ ಪೀಠ ಈ ಅರ್ಜಿಗಳ ವಿಚಾರಣೆ ನಡೆಸಿ ಮುಂದಿನ ವಿಚಾರಣೆ (ಆಗಸ್ಟ್‌ 2ಕ್ಕೆ) ವೇಳೆ ಇದಕ್ಕೆ ಉತ್ತರಿಸುವಂತೆ ಬಿಬಿಎಂಪಿಗೆ ಸೂಚನೆ ನೀಡಿದೆ.

ನ್ಯಾಯಾಧಿಕರಣದ ವಿಚಾರಣೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅರ್ಜಿದಾರ ರಮೇಶ್‌ ಮತ್ತು ವಕೀಲ ವಿವೇಕ್‌ ರೆಡ್ಡಿ, ''ಮಾಲಿನ್ಯ ನಿಯಂತ್ರಣ ಮಂಡಳಿ ಈಗಾಗಲೇ ಈ ಬಗ್ಗೆ ತನಿಖೆ ನಡೆಸಿ ಈ ತ್ಯಾಜ್ಯದಿಂದ ಅಂತರ್ಜಲ ಕಲುಷಿತಗೊಳ್ಳುತ್ತಿದೆ ಎಂದು ವರದಿ ಮಾಡಿದೆ. ಕಸದ ಶೇಖರಣೆಯಿಂದಾಗಿ ಅದರ ಮೇಲ್ಗಡೆ ಪಕ್ಷಿಗಳ ಹಾರಾಟ ಹೆಚ್ಚಾಗಿ ಯಲಹಂಕ ವಾಯುನೆಲೆಯ ವಿಮಾನಗಳ ಹಾರಾಟಕ್ಕೂ ಆತಂಕ ಸೃಷ್ಟಿಸಿದೆ,'' ಎಂದು ಹೇಳಿದರು.

''ಆ ಜಾಗದಲ್ಲಿ ಕಸ ಸುರಿಯಬೇಡಿ ಎಂದು ಮಾಲಿನ್ಯ ನಿಯಂತ್ರಣ ಮಂಡಳಿ ಹೇಳಿದರೂ ಬಿಬಿಎಂಪಿ ಕ್ಯಾರೆ ಅನ್ನುತ್ತಿಲ್ಲ. ಅದಕ್ಕಾಗಿ ಈ ಬಗ್ಗೆ ಬಿಬಿಎಂಪಿಗೆ ಸೂಕ್ತ ನಿರ್ದೇಶನ ನೀಡಿ ಬಾಗಲೂರು ವ್ಯಾಪ್ತಿಯಲ್ಲಿ ಕಸ ಸುರಿಯದಂತೆ ಮತ್ತು ಈಗಾಗಲೇ ಸುರಿದಿರುವ ಕಸವನ್ನು ಅಲ್ಲಿಂದ ಬೇರೆಡೆ ಸಾಗಿಸುವಂತೆ ಸೂಚಿಸಬೇಕು,''ಎಂದು ಅರ್ಜಿದಾರರು ಕೋರಿದ್ದಾರೆ.

ಆ.2 ವಿಚಾರಣೆ ವೇಳೆ ಈ ಎಲ್ಲ ಆರೋಪಗಳಿಗೆ ಬಿಬಿಎಂಪಿ ಸೂಕ್ತ ಉತ್ತರ ನೀಡದಿದ್ದರೆ ಪ್ರಕರಣದ ಕುರಿತು ತೀರ್ಪು ಪ್ರಕಟಿಸುವುದಾಗಿ ನ್ಯಾಯಮೂರ್ತಿ ಸ್ವತಂತ್ರಕುಮಾರ್‌ ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ