ಗಿರೀಶ್ ಕೋಟೆ
ಬೆಂಗಳೂರು: ಬೆಂಗಳೂರಿನಲ್ಲಿರುವ ಸಿದ್ಧ ಉಡುಪು ಕಾರ್ಖಾನೆಗಳ ಕಾರ್ಮಿಕರ ಜೀವನ ಅತಂತ್ರ ಸ್ಥಿತಿಗೆ ತಲುಪಿದೆ. ಒಂದು ಕಡೆ ಏಕಾಏಕಿ ಕಂಪನಿ ಬಾಗಿಲು ಮುಚ್ಚಿದರೆ, ಮತ್ತೊಂದು ಕಡೆ ಇಡೀ ಫ್ಯಾಕ್ಟರಿಗೆ ಬೆಂಕಿ ಬೀಳುತ್ತದೆ. ಇವೆಲ್ಲ ಕಾರ್ಮಿಕರ ಜೀವನವನ್ನು ಸಂಕಷ್ಟಕ್ಕೆ ದೂಡಿದೆ. 'ಮುಂದೇನು?'ಎನ್ನುವ ಉತ್ತರವಿಲ್ಲದ ಪ್ರಶ್ನೆಗಳು ಅವರನ್ನು ನಿರಂತವಾಗಿ ಕಾಡುತ್ತಿವೆ.
ಕಳೆದ ಶುಕ್ರವಾರದಿಂದ ಕಗ್ಗಲೀಪುರದ ಶಾಹಿ ಗಾರ್ಮೆಂಟ್ಸ್ನ ಕಾರ್ಮಿಕರು ಕಾರ್ಖಾನೆ ಬಾಗಿಲಲ್ಲೇ ಪ್ರತಿಭಟನೆ ನಡೆಸುತ್ತಿದ್ದಾರೆ. ಯಾವುದೇ ಮುನ್ಸೂಚನೆ ಇಲ್ಲದೆ ಕಂಪನಿ ಮುಚ್ಚುವ ತೀರ್ಮಾನಕ್ಕೆ ವಿರೋಧಿಸುತ್ತಿದ್ದಾರೆ. ನ್ಯಾಯ ಬದ್ಧ ರೀತಿಯಲ್ಲೇ ಮುಚ್ಚಿ ಎಂದು ಹೊಲಿಗೆ ಯಂತ್ರಗಳನ್ನು ಹೊರಗೆ ಸಾಗಿಸುತ್ತಿರುವುದನ್ನು ತಡೆಯಲು ಯತ್ನಿಸುತ್ತಿದ್ದಾರೆ. ಈ ಪ್ರಯತ್ನಕ್ಕೆ ಐದು ದಿನಗಳಾದರೂ, ಯಾವುದೇ ಪ್ರಯೋಜನ ಆಗಿಲ್ಲ,. ಇವರ ಬೆಂಬಲಕ್ಕೆ ನಿಂತ ಕಾರ್ಮಿಕ ಸಂಘಟನೆಗಳಿಗೂ ಮಾಲೀಕರು ಮನ್ನಣೆ ನೀಡುತ್ತಿಲ್ಲ. ಹೀಗಾಗಿ ಪರಿಸ್ಥಿತಿ ದಿನದಿಂದ ದಿನಕ್ಕೆ ಬಿಗಡಾಯಿಸುತ್ತಿದೆ.
ಇದೇ ಹೊತ್ತಿನಲ್ಲಿ ಕೋಣನಕುಂಟೆ ಸಮೀಪದ ಲೊವಬಲ್ ಲಾಂಜರಿ ಗಾರ್ಮೆಂಟ್ಸ್ಗೆ ಭಾನುವಾರ ಬೆಂಕಿ ಬಿದ್ದು, ಸಂಪೂರ್ಣ ನಾಶವಾಗಿದೆ. ಅಲ್ಲಿನ ಕಾರ್ಮಿಕರಿಗೂ ಈಗ ಕೆಲಸವಿಲ್ಲ. ಆದರೆ, ಅವರೆಲ್ಲರೂ, ಮಾಲೀಕರ ಬಗ್ಗೆ ಅನುಕಂಪ ವ್ಯಕ್ತಪಡಿಸುತ್ತಿದ್ದಾರೆ. ಮಾಲೀಕರು ನಮ್ಮ ಕೈ ಬಿಡಲಾರರು, ವಿಮೆ ಹಣ ಪಡೆದು ಕಂಪನಿ ವಾಪಸ್ ಶುರು ಮಾಡುತ್ತಾರೆ ಎಂದು ಹೇಳುತ್ತಾರೆ.
ಕಾರ್ಮಿಕರ ಸ್ಥಿತಿ ಇಷ್ಟೊಂದು ಬಿಗಡಾಯಿಸಿದ್ದರೂ, ಕಾರ್ಮಿಕ ಇಲಾಖೆ ಅಧಿಕಾರಿಗಳು ಮಾತ್ರ ಇದುವರೆಗೆ ಯಾವುದೇ ಕಾರ್ಮಿಕರನ್ನು ಮಾತನಾಡಿಸಿಲ್ಲ. ಮಾಲೀಕರ ಜತೆಯೂ ಚರ್ಚಿಸಿಲ್ಲ. ಈ ಬಗ್ಗೆ ಗಾರ್ಮೆಂಟ್ಸ್ ಕಾರ್ಮಿಕರ ಸಂಘಟನೆಗಳ ಪ್ರತಿನಿಧಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಂಜೆ ನೈತಿಕತೆ ಪಾಠ: ಪ್ರತಿಭಟನೆಯ ಹಿನ್ನೆಲೆಯಲ್ಲಿ ಶಾಹಿ ಎಕ್ಸ್ಪೋರ್ಟ್ ಗಾರ್ಮೆಂಟ್ಸ್ನ ಮಲಗಿರುವ ಮಹಿಳೆಯರಿಗೆ ಕಂಪನಿ ಪರವಾಗಿರುವ ಕೆಲವರು ನೈತಿಕ ಪಾಠ ಹೇಳುತ್ತಿದ್ದಾರೆ. ''ರಾತ್ರಿ ಹೊತ್ತಲ್ಲಿ ಹೆಣ್ಣು ಮಕ್ಕಳು ಕಂಪನಿ ಬಾಗಿಲಿನಲ್ಲಿ ಮಲಗುವುದು ಸರಿಯಲ್ಲ. ಅದರಿಂದ ಚಾರಿತ್ರ್ಯಕ್ಕೆ ಕೆಟ್ಟ ಹೆಸರು ಬರುತ್ತದೆ,'' ಎಂದು ಪಾಠ ಮಾಡುತ್ತಿದ್ದಾರೆ. ಇದಕ್ಕೆ ನೌಕರರಾದ ರೂಪಾ ಮತ್ತು ಪದ್ಮಾ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
''ಕಾರ್ಮಿಕರ ಪರ ಇರುವ ಸಂಘಟನೆಗಳು ಪ್ರತಿಭಟನಾ ಸ್ಥಳಕ್ಕೆ ಬಂದರೆ ಅವರಿಗೆ ಗೇಟ್ ಒಳಗೆ ಹೋಗಲು ಅವಕಾಶ ಕೊಡುವುದಿಲ್ಲ. ಇನ್ನೂ ಕೆಲವರು ಕಂಪನಿಯ ಒಳಗೆ ಹೋಗಿ ರಾಜಾತಿಥ್ಯ ಪಡೆದುಕೊಂಡು ಬರುತ್ತಾರೆ,'' ಎಂದು ಕಾರ್ಮಿಕರು ದೂರಿದ್ದಾರೆ.
ಕಡಿಮೆ ಕೂಲಿಯ ಜಾಗತಿಕ ಪೈಪೋಟಿ: ಜಾಗತಿಕ ಪೈಪೋಟಿಯೇ ನಗರದ ಕಾರ್ಮಿಕರ ಈ ಸ್ಥಿತಿಗೆ ಕಾರಣ ಎನ್ನುತ್ತಾರೆ ಗಾರ್ಮೆಂಟ್ಸ್ ಕಾರ್ಮಿಕರ ಸಂಘದ ಜಯರಾಮ್. ''ಪಾಕಿಸ್ತಾನ, ಬಾಂಗ್ಲಾದೇಶ, ವಿಯೆಟ್ನಾಂ ದೇಶಗಳ ಪ್ರಜೆಗಳು ಇಲ್ಲಿಗಿಂತ ಶೇ. 60 ರಷ್ಟು ಕಡಿಮೆ ಸಂಬಳಕ್ಕೆ ದುಡಿಯುತ್ತಾರೆ. ಹೀಗಾಗಿ ಬಂಡವಾಳ ಹಾಕುವ ಜನ ಅಲ್ಲಿಗೆ ಹೋಗುತ್ತಾರೆ,'' ಎಂದು ಹೇಳುತ್ತಾರೆ.
ನೋಟು ಬ್ಯಾನ್-ಜಿಎಸ್ಟಿಯಿಂದ ತೊಂದರೆ: ನೋಟ್ ಬ್ಯಾನ್ ಹಾಗೂ ಜಿಎಸ್ಟಿಯಿಂದ ಗಾರ್ಮೆಂಟ್ಸ್ ರಫ್ತುದಾರರಿಗೆ ಕಷ್ಟವಾಗಿದೆ. ಆದರೆ, ಸ್ಥಳೀಯ ಮಾರುಕಟ್ಟೆ ವಿಸ್ತರಣೆಯಾಗುತ್ತಿದೆ. ಆದರೆ, ಇವುಗಳ ನಡುವೆ ಚೀನಾ, ಲ್ಯಾಟಿನ್ ಅಮೆರಿಕ, ವಿಯೆಟ್ನಾಂ ದೇಶದಿಂದ ಆಮದಾಗಿರುವ ಬಟ್ಟೆಗಳು ದೇಸಿ ಮಾರುಕಟ್ಟೆಗೆ ಪೈಪೋಟಿ ನೀಡುತ್ತಿದೆ,'' ಎಂದು ಹೇಳುತ್ತಾರೆ ಅಗ್ನಿ ಅನಾಹುತಕ್ಕೆ ತುತ್ತಾದ ಲೊವಬಲ್ ಲಾಂಜರಿ ಗಾರ್ಮೆಂಟ್ಸ್ನ ಜನರಲ್ ಮ್ಯಾನೇಜರ್ ಶ್ರೀನಿವಾಸನ್.
''ನಮ್ಮ ಕಾರ್ಖಾನೆ ಸದ್ಯಕ್ಕೆ 15 ದಿನ ಕೆಲಸ ಮಾಡುವುದಿಲ್ಲ. ಕಟ್ಟಡ ಬಳಕೆಗೆ ಅರ್ಹವಾಗಿದೆಯೇ ಎಂದು ತಜ್ಞರ ವರದಿ ಬಂದ ಬಳಿಕ ತೀರ್ಮಾನ ಮಾಡುತ್ತೇವೆ. ಹೊಲಿಗೆ ಯಂತ್ರ ವಿದೇಶದಿಂದ ಬರಲು ಐದಾರು ವರ್ಷ ಬೇಕಾಗುತ್ತದೆ. ಅಲ್ಲಿವರೆಗೆ ಕಾರ್ಮಿಕರನ್ನು ನಮ್ಮದೇ ಬೇರೆ ಕೇಂದ್ರಗಳಿಗೆ ಕಳುಹಿಸಲಾಗುವುದು,'' ಎಂದು ಹೇಳಿದ್ದಾರೆ.
ಆದರೆ, ಕಾರ್ಮಿಕರು ಇಲ್ಲದ ಭಾನುವಾರ ರಾತ್ರಿ ಲೊವಬಲ್ ಲಾಂಜರಿ ಕಾರ್ಖಾನೆಗೆ ಬೆಂಕಿ ಬಿದ್ದಿರುವುದಕ್ಕೆ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಸುರಕ್ಷತೆಗೆ ಸಂಬಂಧಿಸಿದ ಹಲವು ದಾಖಲೆಗಳನ್ನು ಕೊಡುವಂತೆ ಕಂಪನಿಗೆ ಸೂಚನೆ ನೀಡಿದ್ದಾರೆ.
ನಾನು ಇಲ್ಲಿ 18 ವರ್ಷದಿಂದ ಕೆಲಸ ಮಾಡುತ್ತಿದ್ದೇನೆ. ಈಗ ಅಗ್ನಿ ಆಕಸ್ಮಿಕ ಸಂಭವಿಸಿದೆ. ಮತ್ತೆ ಕಂಪನಿ ಶುರುವಾಗಲು ಎಷ್ಟು ತಿಂಗಳು ಬೇಕೋ ಗೊತ್ತಿಲ್ಲ. ಇಷ್ಟು ವರ್ಷ ಮಾಲೀಕರು ನಮ್ಮನ್ನು ನೋಡಿಕೊಂಡಿರುವ ರೀತಿ ನೋಡಿದರೆ ಈಗಲೂ ಅವರು ನಮ್ಮನ್ನು ಕೈ ಬಿಡುವುದಿಲ್ಲ ಎನ್ನುವ ನಂಬಿಕೆ ಇದೆ.
-ಸಿದ್ದರಮೇಶ್, ಲೊವಬಲ್ ಲಾಂಜರಿ ಕಾರ್ಮಿಕ
ಇಲ್ಲಿ 1996ರಿಂದ ಕೆಲಸ ಮಾಡುತ್ತಿದ್ದೇನೆ. ಇಂಥ ಕಂಪನಿ ಮತ್ತೆ ನಮಗೆ ಸಿಗುವುದಿಲ್ಲ. ಕೆಲಸ ಮಾಡುವಾಗ ಯಾವತ್ತೂ ತೊಂದರೆ ಕೊಟ್ಟಿಲ್ಲ. ಈ ಕಂಪನಿ 22 ವರ್ಷದಿಂದ ನನ್ನ ಸಂಸಾರವನ್ನು ಸಾಕಿದೆ.
-ಸಾವಿತ್ರಿ, ಲೊವಬಲ್ ಲಾಂಜರಿ ಕಾರ್ಮಿಕ ಮಹಿಳೆ
ಅಗ್ನಿ ಅನಾಹುತ ಆದ ನಂತರ ಕಂಪನಿಯಿಂದ ಯಾರೂ ಇದುವರೆಗೂ ಕಾರ್ಮಿಕರ ಜತೆ ಮಾತನಾಡಿಲ್ಲ. ಅವರು ಅವರದೇ ತೊಂದರೆಯಲ್ಲಿ ಇದ್ದಾರೆ. ಕೆಲವು ದಿನಗಳ ನಂತರ ನಮ್ಮನ್ನು ಕರೆದು ಮಾತಾಡುತ್ತಾರೆ ಎನ್ನುವ ನಂಬಿಕೆ ಇದೆ
-ಉಮೇಶ್, ಲೊವಬಲ್ ಲಾಂಜರಿ ಕಾರ್ಮಿಕ
ನಾವೆಲ್ಲ ಕಂಪನಿ ಬಾಗಿಲಿನಲ್ಲೇ ಪ್ರತಿಭಟನೆಗೆ ಕುಳಿತಿದ್ದೇವೆ. ಯಾವ ಅಧಿಕಾರಿಯೂ ಸ್ಥಳಕ್ಕೆ ಬಂದಿಲ್ಲ. ಕಾರ್ಮಿಕರ ಗೋಳು ಕೇಳುತ್ತಿಲ್ಲ. ಕಾನೂನು ಪ್ರಕಾರ ಸಮಸ್ಯೆ ಬಗೆಹರಿಯುವರೆಗೂ ಪ್ರತಿಭಟನೆ ನಿಲ್ಲಿಸುವುದಿಲ್ಲ.
-ರತ್ನ, ಗಾರ್ಮೆಂಟ್ಸ್ ಕಾರ್ಮಿಕರ ಮಹಿಳಾ ಮುನ್ನಡೆ ಸಂಘಟನೆ ನಾಯಕಿ
ಕಳೆದ ಆಯುಧ ಪೂಜೆ ಬಳಿಕ ಏಕಾಏಕಿ ಕಂಪನಿಯ ಬಸ್ಗಳನ್ನು ನಿಲ್ಲಿಸಿದರು. ಈ ವೇಳೆ 1000 ಮಂದಿ ಕೆಲಸ ಬಿಟ್ಟರು. ಉಳಿದಿದ್ದ 500 ಮಂದಿ ಕೆಲಸ ಮಾಡಿಕೊಂಡು ಹೊಗುತ್ತಿದ್ದೆವು. ಈಗ ಕಂಪನಿ ಮುಚ್ಚುವುದಾಗಿ ಹೇಳುತ್ತಾರೆ. ಆದರೆ, ಎಲ್ಲವನ್ನು ಕಾನೂನು ಬದ್ಧವಾಗಿ ಮಾಡಲಿ.
-ರೂಪ, ಶಾಹಿ ಗಾರ್ಮೆಂಟ್ಸ್ ಮಹಿಳೆ
ಪ್ರತಿಭಟನಾ ನಿರತ ಕಾರ್ಮಿಕರ ನಡುವೆ ಒಡಕು ತರಲು ಕೆಲವರು ಪಿತೂರಿ ಮಾಡುತ್ತಿದ್ದಾರೆ. ಕಾರ್ಮಿಕರನ್ನು ಕಾರ್ಮಿಕರ ವಿರುದ್ಧ ಎತ್ತಿ ಕಟ್ಟುವ ಪ್ರಯತ್ನ ಮಾಡುತ್ತಿದ್ದಾರೆ.
-ಪದ್ಮ, ಶಾಹಿ ಕಾರ್ಮಿಕ ಮಹಿಳೆ
ಕಾರ್ಮಿಕರ ಶ್ರಮದಿಂದಲೇ ಬೆಳೆದ, ಲಾಭ ಗಳಿಸಿದ ಕಂಪನಿಯವರು ಸೌಜನ್ಯಕ್ಕಾದರೂ ಸಮಸ್ಯೆ ಬಗೆಹರಿಸುವ ಭರವಸೆ ನೀಡುತ್ತಿಲ್ಲ. ಕಾರ್ಮಿಕರನ್ನು ಕಾಲ ಕಸದಂತೆ ಕಾಣುವ ಧೋರಣೆ ಸರಿಯಲ್ಲ.
-ಪ್ರತಿಭಾ, ಗಾರ್ಮೆಂಟ್ಸ್ ಕಾರ್ಮಿಕರ ಸಂಘದ ನಾಯಕಿ