ಆ್ಯಪ್ನಗರ

ಸಪ್ತ ಚಿನ್ನದ ಪದಕ ವಿಜೇತೆಗೆ ಅಧ್ಯಾಪಕಿಯಾಗುವ ಕನಸು

ಬೆಂಗಳೂರು ವಿಶ್ವವಿದ್ಯಾಲಯದ 54ನೇ ಘಟಿಕೋತ್ಸವದಲ್ಲಿ ಉಪ ರಾಷ್ಟ್ರಪತಿಯವರಿಂದ ಅತಿ ಹೆಚ್ಚು ಚಿನ್ನದ ಪದಕಗಳನ್ನು ಸ್ವೀಕರಿಸಿದ ವಿದ್ಯಾರ್ಥಿನಿ ಕೆವಿ. ವಿನೂತ ಅವರು ಉಪನ್ಯಾಸಕಿಯಾಗುವ ಕನಸು ಕಂಡಿದ್ದು, ತನ್ನಂತೆ ಹಲವು ಮಂದಿ ಸಾಧಕರನ್ನು ತಯಾರು ಮಾಡುವ ಮಹತ್ವಾಕಾಂಕ್ಷೆ ಹೊಂದಿದ್ದಾರೆ.

Vijaya Karnataka 23 Apr 2019, 5:00 am
ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದ 54ನೇ ಘಟಿಕೋತ್ಸವದಲ್ಲಿ ಉಪ ರಾಷ್ಟ್ರಪತಿಯವರಿಂದ ಅತಿ ಹೆಚ್ಚು ಚಿನ್ನದ ಪದಕಗಳನ್ನು ಸ್ವೀಕರಿಸಿದ ವಿದ್ಯಾರ್ಥಿನಿ ಕೆವಿ. ವಿನೂತ ಅವರು ಉಪನ್ಯಾಸಕಿಯಾಗುವ ಕನಸು ಕಂಡಿದ್ದು, ತನ್ನಂತೆ ಹಲವು ಮಂದಿ ಸಾಧಕರನ್ನು ತಯಾರು ಮಾಡುವ ಮಹತ್ವಾಕಾಂಕ್ಷೆ ಹೊಂದಿದ್ದಾರೆ.
Vijaya Karnataka Web 2204-2-2-KSG_16


ಪದವಿಯೊಂದಿಗೆ ಚಿನ್ನದ ಪದಕಗಳನ್ನು ಸ್ವೀಕರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ವಿನೂತ ''ಎಂ.ಎಸ್ಸಿ. ರಸಾಯನಶಾಸ್ತ್ರ ವಿಭಾಗದಲ್ಲಿ ಏಳು ಚಿನ್ನದ ಪದಕಗಳು ಸಿಕ್ಕಿರುವುದು ಸಂತಸ ತಂದಿದೆ. ಮುಂದೆ ಕಾಲೇಜೊಂದರಲ್ಲಿ ಅಧ್ಯಾಪಕಿಯಾಗಿ ಶಿಷ್ಯ ವೃಂದಕ್ಕೆ ಮಾರ್ಗದರ್ಶನ ಮಾಡುವ ಮಹದಾಸೆ ಇದೆ. ನನ್ನೀ ಸಾಧನೆಗೆ ಪಾಲಕರು ಪ್ರೇರಣೆಯಾಗಿದ್ದು, ತಂದೆ ಪಿಎಚ್‌ಡಿ ಮಾಡು ಎನ್ನುತ್ತಿದ್ದಾರೆ. ಪಿಎಚ್‌ಡಿ ಮಾಡಿದರೂ ಬೋಧನಾ ವೃತ್ತಿ ಇಷ್ಟ,'' ಎಂದರು.

ರೈತನ ಮಗಳಿಗೆ 6 ಪದಕ: ಹಾಸನದ ಕಲ್ಲಹಳ್ಳಿ ಗ್ರಾಮದ ಆಶಾ ಕೆ.ಎನ್‌. ರೈತನ ಮಗಳಾಗಿ ಆರು ಚಿನ್ನದ ಪದಕಗಳಿಗೆ ಕೊರಳೊಡ್ಡಿದ್ದಾರೆ. ಎಂಎ ಕನ್ನಡ ವಿಭಾಗದಲ್ಲಿ ಈ ಸಾಧನೆ ಮಾಡಿರುವ ಈಕೆಗೂ ಶಿಕ್ಷಕಿಯಾಗುವ ಹಂಬಲ ಇದೆ. ''ನಮ್ಮ ತಂದೆಗೆ ಅರ್ಧ ಎಕರೆ ಜಮೀನು ಇದ್ದು, ಅದರಿಂದ ಬಂದಂತಹ ಆದಾಯದಿಂದಲೇ ಕಲಿಕೆ ಮಾಡುವ ಅನಿವಾರ್ಯ ಇತ್ತು. ಕಷ್ಟಪಟ್ಟು ಓದಿದ್ದಕ್ಕೆ ಚಿನ್ನದ ಪದಕ ಪಡೆದಿರುವೆ. ಪದವಿ ಮುಗಿದ ಬಳಿಕ ಕೆಲ ಕಾಲ ಗಾರ್ಮೆಂಟ್ಸ್‌ನಲ್ಲಿ ಕೆಲಸ ಮಾಡಿದ್ದೆ. ಕೆಎಎಸ್‌ ಅಧಿಕಾರಿಯಾಗುವ ಆಸೆಯೂ ಇದೆ,'' ಎಂದರು.

ಕೋಲಾರದ ಬಡ ರೈತ ಕುಟುಂಬದಲ್ಲಿ ಜನಿಸಿರುವ ರಾಘವೇಂದ್ರ ಕೆ.ಎಂ. ಎಂಎ ಅರ್ಥಶಾಸ್ತ್ರದಲ್ಲಿ ಐದು ಚಿನ್ನದ ಪದಕಗಳನ್ನು ಗಳಿಸಿದ್ದಾರೆ. ''ಎಸ್‌ಎಸ್‌ಎಲ್‌ಸಿಯಲ್ಲಿ ಕಡಿಮೆ ಅಂಕಗಳು ಬಂದರೂ, ಧೃತಿಗೆಡದೆ ಶ್ರದ್ಧೆಯಿಂದ ವ್ಯಾಸಂಗ ಮುಂದುವರಿಸಿದ್ದಕ್ಕೆ ಪದವಿಯಲ್ಲಿ ಚಿನ್ನದ ಪದಕ ಗಳಿಸಿರುವುದು ಸಂತಸ ಮೂಡಿಸಿದೆ. ಮುಂದೆ ಐಎಎಸ್‌ ಅಧಿಕಾರಿಯಾಗುವ ಆಸೆ ಇದೆ,'' ಎಂದರು.

''ಎಲ್‌ಎಲ್‌ಬಿ ಪದವಿ ಬಳಿಕ ಬಡ, ತುಳಿತಕ್ಕೆ ಒಳಗಾದವರಿಗೆ ನ್ಯಾಯ ದೊರಕಿಸಿಕೊಡಬೇಕು ಎಂಬ ಆಸೆ ಹೊಂದಿರುವೆ. ಐಎಎಸ್‌ ಅಧಿಕಾರಿಯಾಗುವ ಗುರಿ ಹೊಂದಿರುವೆ''.
- ವರ್ಧನ್‌ ಶೆಣೈ, 5 ಚಿನ್ನದ ಪದಕ ವಿಜೇತ ವಿದ್ಯಾರ್ಥಿ

''ಉನ್ನತ ವ್ಯಾಸಂಗ ಮಾಡಲು ರಾಯಚೂರಿನಲ್ಲಿ ಅವಕಾಶ ಸಿಗದೆ ಬೆಂಗಳೂರಿಗೆ ಬಂದು ಕಠಿಣ ಪರಿಶ್ರಮದಿಂದ ಓದಿದ್ದಕ್ಕೆ ಎಂಎಸ್ಸಿಯಲ್ಲಿ 5 ಚಿನ್ನದ ಪದಕ ಗಳಿಸಲು ಸಾಧ್ಯವಾಯಿತು. ಪಾಲಕರು ಹಾಗೂ ಗುರುಗಳ ಮಾರ್ಗದರ್ಶನ ನನ್ನ ಯಶಸ್ಸಿಗೆ ಕಾರಣ''.
- ಅನುಷಾ ಯರಮರಸ್‌, 5 ಚಿನ್ನದ ಪದಕ ವಿಜೇತ ವಿದ್ಯಾರ್ಥಿನಿ

''ಇಷ್ಟದ ಸಬ್ಜೆಕ್ಟ್ ವಾಣಿಜ್ಯ ಆಗಿದ್ದರಿಂದ ಸತತ ಪ್ರಯತ್ನದೊಂದಿದೆ ವ್ಯಾಸಂಗ ಮಾಡಿದೆ. ನನ್ನ ಸಾಧನೆಗೆ ಕುಟುಂಬದವರು ಹಾಗೂ ಗುರುಗಳು ಕಾರಣ. ಮುಂದೆ ಲೆಕ್ಕಪರಿಶೋಧಕನಾಗುವ ಆಸೆ ಇದೆ''.
- ಶಂಕರ ಭಾಷ್ಯಂ ಓ., ಐದು ಚಿನ್ನದ ಪದಕ ವಿಜೇತ ವಿದ್ಯಾರ್ಥಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ