ಬೆಂಗಳೂರು: ದೇಶದೊಳಗೆ ಅಕ್ರಮವಾಗಿ ನುಸುಳಿರುವ ಪಾಕಿಸ್ತಾನ ಪ್ರಜೆಗಳು ಆಧಾರ್ ಕಾರ್ಡ್ ಪಡೆಯಲು ದೃಢೀಕರಿಸಿದ ಪ್ರಮಾಣಪತ್ರ ನೀಡಿದ ಆರೋಪದ ಮೇಲೆ ಜಯನಗರ ಸರಕಾರಿ ಆಸ್ಪತ್ರೆಯ ಹಿರಿಯ ವೈದ್ಯೆ ಸಿ.ಎಸ್.ನಾಗಲಕ್ಷ್ಮಮ್ಮ ಅವರನ್ನು ಬನಶಂಕರಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಕುಮಾರಸ್ವಾಮಿ ಲೇಔಟ್ನಲ್ಲಿ ಕಳೆದ ಎಂಟು ತಿಂಗಳಿಂದ ಅಕ್ರಮವಾಗಿ ನೆಲೆಸಿದ್ದ ಕೇರಳದ ಮೊಹಮ್ಮದ್ ಶಿಹಾಬ್ ಎಂಬಾತನ ಪಾಕಿಸ್ತಾನ ಮೂಲದ ಪತ್ನಿ ಸಮೀರಾ ಅಲಿಯಾಸ್ ನಜ್ಮಾ, ಮಹಮದ್ ಖಾಸಿಫ್ ಹಾಗೂ ಈತನ ಪತ್ನಿ ಕಿರಣ್ ಎಂಬುವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದರು. ಈ ವೇಳೆ ಪಾಕ್ ಪ್ರಜೆಗಳ ಬಳಿ ಆಧಾರ್ ಕಾರ್ಡ್ ಪತ್ತೆಯಾಗಿದ್ದವು.
ಆರೋಪಿ ಶಿಹಾಬ್ ವಿಚಾರಣೆ ನಡೆಸಿದಾಗ, ಜಯನಗರದ ಸರಕಾರಿ ಆಸ್ಪತ್ರೆಯ ಹಿರಿಯ ವೈದ್ಯೆ ಸಿ.ಎಸ್.ನಾಗಲಕ್ಷ್ಮಮ್ಮ ಅವರಿಂದ ಪ್ರಮಾಣ ಪತ್ರ ಪಡೆದು ಆಧಾರ್ ಕಾರ್ಡ್ ಪಡೆದಿರುವುದು ಬೆಳಕಿಗೆ ಬಂದಿತ್ತು. ಈ ವಿಷಯ ತಿಳಿದ ಯುಐಡಿ ಬೆಂಗಳೂರು ಪ್ರಾದೇಶಿಕ ಕಚೇರಿ ಉಪ ನಿರ್ದೇಶಕ ಅಶೋಕ್ ಲೆನಿನ್ ಅವರು ಬನಶಂಕರಿ ಠಾಣೆಗೆ ದೂರು ನೀಡಿದ್ದರು.
ಈ ಹಿನ್ನೆಲೆಯಲ್ಲಿ ನಾಗಲಕ್ಷ್ಮಮ್ಮ, ಸಮೀರಾ, ಮಹಮದ್ ಖಾಸಿಫ್, ಕಿರಣ್ ಮತ್ತು ಶಿಹಾಬ್ ವಿರುದ್ಧ ಅಪರಾಧಕ್ಕೆ ಕುಮ್ಮಕ್ಕು (ಐಪಿಸಿ 109), ಅಪರಾಧ ಸಂಚು(120ಬಿ), ವಂಚನೆ (419, 420), ನಕಲಿ ದಾಖಲೆ ಸೃಷ್ಟಿ (467, 468) ಹಾಗೂ ನಕಲಿ ದಾಖಲೆಗಳನ್ನು ಪ್ರಮಾಣೀಕರಿಸುವುದು (471) ಹಾಗೂ ಆಧಾರ್ ಕಾಯ್ದೆ ಕಲಂ 34 ಮತ್ತು 42ರ ಅಡಿ ಎಫ್ಐಆರ್ ದಾಖಲಾಗಿತ್ತು.
ವೈದ್ಯೆ ನಾಗಲಕ್ಷ್ಮಮ್ಮ ಅವರನ್ನು ಭಾನುವಾರ ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗೆ 2 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ.
''ಇಂತಹ ಪ್ರದೇಶದಲ್ಲಿ ವಾಸವಿರುವ ವ್ಯಕ್ತಿಗಳು ತನಗೆ ಪರಿಚಯ ಇದ್ದಾರೆ ಎಂದು ಅರ್ಜಿಯೊಂದರಲ್ಲಿ ಹೆಸರುಗಳನ್ನು ನಮೂದಿಸಿ ಅದರ ಮೇಲೆ ಗೆಜೆಟೆಡ್ ಅಧಿಕಾರಿಯಾಗಿರುವ ಡಾ.ನಾಗಲಕ್ಷ್ಮಿ ಸಹಿ ಮಾಡಿದ್ದರು. ವಿಳಾಸ ಹಾಗೂ ವಯಸ್ಸಿನ ಆಧಾರದ ಮೇಲೆ ಮೂವರಿಗೆ ಆಧಾರ್ ಸಂಖ್ಯೆಗಳನ್ನು ನೀಡಲಾಗಿತ್ತು. ಆದರೆ, ಗೆಜೆಟೆಡ್ ಅಧಿಕಾರಿಯಾಗಿ ಸಹಿ ಮಾಡುವಾಗ ಅವರ ಹಿನ್ನೆಲೆಯನ್ನು ಪರಿಶೀಲನೆ ಮಾಡಬೇಕಿತ್ತು. ವೈದ್ಯರು ಹಾಗೇ ಮಾಡದೆ ಲೋಪ ಎಸಗಿದ ಕಾರಣ ಬಂಧಿಸಲಾಗಿದೆ. ಪಾಕ್ ಪ್ರಜೆಗಳನ್ನು ವೈದ್ಯರ ಬಳಿ ಪರಿಚಯಿಸಿದ ಮಧ್ಯವರ್ತಿಗಳಿಗಾಗಿ ಶೋಧ ನಡೆದಿದೆ,'' ಎಂದು ದಕ್ಷಿಣ ವಿಭಾಗ ಡಿಸಿಪಿ ಶರಣಪ್ಪ 'ವಿಜಯ ಕರ್ನಾಟಕ'ಕ್ಕೆ ತಿಳಿಸಿದರು.
ವೈದ್ಯರು ಹೇಳುವುದೇನು?
ಆಧಾರ್ ಸಂಖ್ಯೆ ಪಡೆಯಲು ಗೆಜೆಟೆಡ್ ಅಧಿಕಾರಿ ಸಹಿ ಬೇಕೆಂದು ಶಿಹಾಬ್ 4 ತಿಂಗಳ ಹಿಂದೆ ಆಸ್ಪತ್ರೆಗೆ ಬಂದಿದ್ದ. ಬಾಡಿಗೆ ಮನೆ ಅಗ್ರಿಮೆಂಟ್ ಪ್ರತಿ ಸೇರಿ ಇನ್ನಿತರ ಜೆರಾಕ್ಸ್ ದಾಖಲೆಗಳನ್ನು ಪರಿಶೀಲಿಸಿ ಸಹಿ ಮಾಡಿ ಕೊಟ್ಟಿದ್ದೆ. ಹಣ ಸಂಪಾದನೆ ಮಾಡುವ ಉದ್ದೇಶ ಇರಲಿಲ್ಲ ಎಂದು ವೈದ್ಯೆ ಹೇಳಿಕೆ ನೀಡಿದ್ದಾರೆ. ಇದೇ ರೀತಿ ಬೇರೆಯವರಿಗೂ ಪ್ರಮಾಣ ಪತ್ರ ಕೊಟ್ಟಿರುವ ಬಗ್ಗೆ ಹಾಗೂ ಪರಿಶೀಲನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.