ಆ್ಯಪ್ನಗರ

ಗುರು ರಾಘವೇಂದ್ರ ಬ್ಯಾಂಕ್‌ ಹಗರಣ: 45.32 ಕೋಟಿ ರೂ. ಸ್ಥಿರಾಸ್ತಿ, ಚರಾಸ್ತಿ ಜಪ್ತಿ

2015ರಲ್ಲಿ ಕೆ.ರಾಮಕೃಷ್ಣ ಸ್ಥಾಪಿಸಿದ್ದ ಸಹಕಾರ ಸೊಸೈಟಿ ಮತ್ತು ಬ್ಯಾಂಕ್‌ಗಳಿಗೆ ಕೆ.ರಾಮಕೃಷ್ಣ ಮತ್ತು ಟಿ.ಎಸ್‌.ಸತ್ಯನಾರಾಯಣ ಅವರು ಅಧ್ಯಕ್ಷ ಮತ್ತು ಉಪಾಧ್ಯಕ್ಷರಾಗಿದ್ದರು. ಆದರೆ, ಆದಾಯ ತೆರಿಗೆ ಕಾಯಿದೆಯಡಿ ಪಾವತಿ ಮಾಡಬೇಕಿದ್ದ ಟಿಡಿಎಸ್‌ ಪಾವತಿ ಮಾಡುತ್ತಿರಲಿಲ್ಲ.

Vijaya Karnataka Web 19 Sep 2020, 1:08 pm
ಬೆಂಗಳೂರು: ಶ್ರೀ ಗುರು ರಾಘವೇಂದ್ರ ಸಹಕಾರ ಬ್ಯಾಂಕ್‌ ನಿಯಮಿತ ಮತ್ತು ಶ್ರೀ ಗುರು ಸಾರ್ವಭೌಮ ಕ್ರೆಡಿಟ್‌ ಕೋ ಆಪರೇಟಿವ್‌ ಲಿಮಿಟೆಡ್‌ನ ಬಹುಕೋಟಿ ರೂ.ಗಳ ಹಗರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯ, 45.32 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಮತ್ತು ಚರಾಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿದೆ.
Vijaya Karnataka Web ಗುರು ರಾಘವೇಂದ್ರ ಬ್ಯಾಂಕ್‌
ಗುರು ರಾಘವೇಂದ್ರ ಬ್ಯಾಂಕ್‌


ಬ್ಯಾಂಕ್‌ನ ಅಧ್ಯಕ್ಷ, ಮಾಜಿ ಉಪಾಧ್ಯಕ್ಷ, ಮಾಜಿ ಸಿಇಒ, ಹಾಲಿ ಸಿಇಒ ಮತ್ತು ಅವರ ಸಹಚರರಿಗೆ ಸೇರಿದ ಬ್ಯಾಂಕ್‌ ಬ್ಯಾಲನ್ಸ್‌, ನಿಶ್ಚಿತ ಠೇವಣಿ ರೂಪದಲ್ಲಿದ್ದ 7.16 ಕೋಟಿ ರೂ. ಮತ್ತು 38.16 ಕೋಟಿ ರೂ. ಮೌಲ್ಯದ 29 ಸ್ಥಿರಾಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.

ಸ್ಥಿರಾಸ್ತಿಗಳು ಮಾಜಿ ಅಧ್ಯಕ್ಷ ಕೆ.ರಾಮಕೃಷ್ಣ, ದಿ. ಟಿ.ಎಸ್‌.ಸತ್ಯನಾರಾಯಣ, ದಿ. ಎಂ.ವಿ.ಮಯ್ಯ, ಎ.ಸಂತೋಷ್‌ ಕುಮಾರ್‌ ಸೇರಿದಂತೆ ಇನ್ನಿತರ ಉದ್ಯೋಗಿಗಳ ಹೆಸರಿನಲ್ಲಿಬೆಂಗಳೂರು ಹಾಗೂ ಇತರೆಡೆ ಕೃಷಿ ಜಮೀನು, ವಸತಿ ಅಪಾರ್ಟ್‌ಮೆಂಟ್‌ ಮತ್ತು ಮನೆಗಳು ರೂಪದಲ್ಲಿ ಇವೆ.

2015ರಲ್ಲಿ ಕೆ.ರಾಮಕೃಷ್ಣ ಸ್ಥಾಪಿಸಿದ್ದ ಸಹಕಾರ ಸೊಸೈಟಿ ಮತ್ತು ಬ್ಯಾಂಕ್‌ಗಳಿಗೆ ಕೆ.ರಾಮಕೃಷ್ಣ ಮತ್ತು ಟಿ.ಎಸ್‌.ಸತ್ಯನಾರಾಯಣ ಅವರು ಅಧ್ಯಕ್ಷ ಮತ್ತು ಉಪಾಧ್ಯಕ್ಷರಾಗಿದ್ದರು. ಆದರೆ, ಆದಾಯ ತೆರಿಗೆ ಕಾಯಿದೆಯಡಿ ಪಾವತಿ ಮಾಡಬೇಕಿದ್ದ ಟಿಡಿಎಸ್‌ ಪಾವತಿ ಮಾಡುತ್ತಿರಲಿಲ್ಲ. 2015-2019ರ ನಡುವೆ ಕೋಟ್ಯಂತರ ರೂ.ಗಳನ್ನು ಸಹಕಾರ ಸೊಸೈಟಿಯಿಂದ ಬ್ಯಾಂಕ್‌ ಖಾತೆಗೆ ವರ್ಗಾವಣೆ ಮಾಡಲಾಗಿದೆ.

ಬ್ಯಾಂಕ್‌ನಲ್ಲಿ ಸಾಲ ಮರುಪಾವತಿ ಮಾಡದೆ ಇರುವ ಖಾತೆಗಳ(ಎನ್‌ಪಿಎ) ಅಕ್ರಮವನ್ನು ಮುಚ್ಚಿಡಲು ಅಕ್ರಮವಾಗಿ ಸೊಸೈಟಿಯಿಂದ ಹಣ ವರ್ಗಾವಣೆ ಮಾಡಲಾಗಿದೆ ಎಂಬುದು ತನಿಖೆಯಲ್ಲಿ ಗೊತ್ತಾಗಿದೆ ಎಂದು ಇ.ಡಿ. ತಿಳಿಸಿದೆ.

ವಾರ್ಷಿಕ ಶೇ.12ರಿಂದ ಶೇ.16 ರವರೆಗೆ ಬಡ್ಡಿ ನೀಡುವುದಾಗಿ ಹೇಳಿ 1,500 ಕೋಟಿ ರೂ. ಸಂಗ್ರಹಿಸಿ ವಂಚಿಸಿದ್ದ ಎಂ.ವಿ.ಮಯ್ಯ ಮತ್ತಿತರರ ವಿರುದ್ಧ ಜಾರಿ ನಿರ್ದೇಶನಾಲಯ ದಾಖಲಿಸಿಕೊಂಡು ತನಿಖೆ ನಡೆಸುತ್ತಿದೆ.

ಆರೋಪಿಗಳು ಬ್ಯಾಂಕ್‌ನಲ್ಲಿ ನಕಲಿ ಹೆಸರಿನಲ್ಲಿ ಖಾತೆ ತೆರೆದು ಕೋಟ್ಯಂತರ ರೂ. ಸಾಲ ಪಡೆದಿದ್ದಾರೆ. ಬ್ಯಾಂಕ್‌ನ ಉದ್ಯೋಗಿಗಳ ಹೆಸರಲ್ಲೂ ಸಾಲ ತೆಗೆದುಕೊಳ್ಳಲಾಗಿದೆ. ಆದರೆ, ಅದನ್ನು ಮರುಪಾವತಿ ಮಾಡದೆ ನೈಜ ಖಾತೆದಾರರಿಗೆ ನಂಬಿಕೆ ದ್ರೋಹ ಎಸಗಿದ್ದಾರೆ. ಅಧ್ಯಕ್ಷ ಮತ್ತು ಅವರ ಕುಟುಂಬ ಸದಸ್ಯರು ಸದ್ಯ ತಲೆಮರೆಸಿಕೊಂಡಿದ್ದು, ಬ್ಯಾಂಕಿನ ಮಾಜಿ ಸಿಇಒ ಎಂ.ವಿ.ಮಯ್ಯ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಸಾರ್ವಭೌಮ ಕ್ರೆಡಿಟ್‌ ಕೋ ಅಪರೇಟಿವ್‌ ಲಿ.ನ ಹಣವನ್ನು 'ಮುಖ್ಯಪ್ರಾಣ ಆಗ್ರೋ ಫಾರ್ಮಿಂಗ್‌ ಆ್ಯಂಡ್‌ ರೀಸರ್ಚ್ ಇಮ್ಫೋ ಪ್ರೈ.ಲಿ'ಗೆ ಅಕ್ರಮವಾಗಿ ವರ್ಗಾವಣೆ ಮಾಡಲಾಗಿದೆ. ಇದಕ್ಕೆ ಕೆ.ರಾಮಕೃಷ್ಣ ಮತ್ತು ಅವರ ಕುಟುಂಬದವರು ನಿರ್ದೇಶಕರಾಗಿದ್ದಾರೆ.

ಬ್ಯಾಂಕ್‌ ಮತ್ತು ಸೊಸೈಟಿಯ ಹಣವನ್ನು ಸ್ಥಿರಾಸ್ತಿ ಖರೀದಿಸಲು ಮಾಜಿ ಸಿಇಒ ಎಂ.ವಿ.ಮಯ್ಯ ಅವರು ಅಕ್ರಮವಾಗಿ ವರ್ಗಾವಣೆ ಮಾಡಿಕೊಂಡಿದ್ದಾರೆ. ಬ್ಯಾಂಕ್‌ ಮತ್ತು ಸೊಸೈಟಿಯ ಇತರ ಉದ್ಯೋಗಿಗಳು ಮತ್ತು ಅವರ ಆಪ್ತರು ಸೇರಿ ನಕಲಿ ಸಾಲದ ಖಾತೆಗಳನ್ನು ತೆರೆದು ಆಸ್ತಿ ಖರೀದಿ ಮಾಡಿದ್ದಾರೆ ಎಂದು ಇ.ಡಿ. ತಿಳಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ