ಆ್ಯಪ್ನಗರ

7 ವರ್ಷವಾದ್ರೂ ಕಂಪ್ಲೀಟ್‌ ಆಗದ ಈಜಿಪುರ-ಕೋರಮಂಗಲ ಫ್ಲೈಓವರ್‌; ಸರ್ಕಾರಕ್ಕೆ ಹೈಕೋರ್ಟ್‌ ನೋಟಿಸ್

ಈಜಿಪುರ ಮತ್ತು ಕೋರಮಂಗಲ ನಡುವಿನ ಮೇಲ್ಸೇತುವೆ ನಿರ್ಮಾಣ ಕಾರ‍್ಯ ಪೂರ್ಣಗೊಳಿಸದ ಕ್ರಮ ಪ್ರಶ್ನಿಸಿ ಬಿಬಿಎಂಪಿ, ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ, ಕೇಂದ್ರ ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿ ಹಾಗೂ ಮೇಲ್ಸೇತುವೆ ನಿರ್ಮಾಣದ ಟೆಂಡರ್‌ ಪಡೆದಿರುವ ಸಿಂಪ್ಲೆಕ್ಸ್‌ ಮೂಲಸೌಕರ‍್ಯ ಲಿಮಿಟೆಡ್‌ನ ನಿರ್ದೇಶಕರಿಗೆ ನೋಟಿಸ್‌ ಜಾರಿಗೊಳಿಸಿ ಆಕ್ಷೇಪಣೆ ಸಲ್ಲಿಸಲು ಸೂಚನೆ ನೀಡಿ ವಿಚಾರಣೆ ಮುಂದೂಡಿತು.

Vijaya Karnataka 30 Jul 2021, 7:52 am

ಹೈಲೈಟ್ಸ್‌:

  • 7 ವರ್ಷವಾದರೂ ಪೂರ್ಣಗೊಳ್ಳದ ಈಜಿಪುರ-ಕೋರಮಂಗಲ ಮೇಲ್ಸೇತುವೆ ನಿರ್ಮಾಣ
  • ಗುತ್ತಿಗೆ ಒಪ್ಪಂದದ ಪ್ರಕಾರ 2019 ನವೆಂಬರ್‌ಗೆ ಮುಗಿಯಬೇಕಿದ್ದ ಕಾಮಗಾರಿ
  • ಆಮೆಗತಿ ಕೆಲಸ ಪ್ರಶ್ನಿಸಿ ರಾಜ್ಯ ಸರಕಾರ, ಬಿಬಿಎಂಪಿಗೆ ಹೈಕೋರ್ಟ್‌ ನೋಟಿಸ್‌
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web Karnataka high court
ಬೆಂಗಳೂರು: ಕಾಮಗಾರಿ ಆರಂಭವಾಗಿ ಏಳು ವರ್ಷ ಕಳೆದರೂ ನಗರದ ಈಜಿಪುರ ಮತ್ತು ಕೋರಮಂಗಲ ನಡುವಿನ ಮೇಲ್ಸೇತುವೆ ನಿರ್ಮಾಣ ಕಾರ‍್ಯ ಪೂರ್ಣಗೊಳಿಸದ ಕ್ರಮ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿ ಸಂಬಂಧ ಹೈಕೋರ್ಟ್‌ ಗುರುವಾರ ರಾಜ್ಯ ಸರಕಾರ ಹಾಗೂ ಬಿಬಿಎಂಪಿಗೆ ನೋಟಿಸ್‌ ಜಾರಿ ಮಾಡಿದೆ.
ಕೋರಮಂಗಲದ ಆದಿನಾರಾಯಣ ಶೆಟ್ಟಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಮುಖ್ಯ ನ್ಯಾಯಮೂರ್ತಿ ಎ.ಎಸ್‌. ಓಕ್‌ ನೇತೃತ್ವದ ವಿಭಾಗೀಯ ಪೀಠದ ಮುಂದೆ ವಿಚಾರಣೆಗೆ ಬಂದಿತು. ಬಿಬಿಎಂಪಿ, ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ, ಕೇಂದ್ರ ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿ ಹಾಗೂ ಮೇಲ್ಸೇತುವೆ ನಿರ್ಮಾಣದ ಟೆಂಡರ್‌ ಪಡೆದಿರುವ ಸಿಂಪ್ಲೆಕ್ಸ್‌ ಮೂಲಸೌಕರ‍್ಯ ಲಿಮಿಟೆಡ್‌ನ ನಿರ್ದೇಶಕರಿಗೆ ನೋಟಿಸ್‌ ಜಾರಿಗೊಳಿಸಿ ಆಕ್ಷೇಪಣೆ ಸಲ್ಲಿಸಲು ಸೂಚನೆ ನೀಡಿ ವಿಚಾರಣೆ ಮುಂದೂಡಿತು.
ರಾಜ್ಯದ ಎಲ್ಲ ಜನರಿಗೆ ಲಸಿಕೆ ಹಾಕಲು ಯೋಜನೆ ರೂಪಿಸಲಾಗಿದೆಯೇ?; ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ಪ್ರಶ್ನೆ
ಅರ್ಜಿದಾರರ ಪರ ವಾದಿಸಿದ ವಕೀಲ ಎಚ್‌. ಸುನಿಲ್‌ಕುಮಾರ್‌, 2017ರ ಮೇ 4ರಂದು ಬಿಬಿಎಂಪಿ ಹಾಗೂ ಸಿಂಪ್ಲೆಕ್ಸ್‌ ಮೂಲಸೌಕರ‍್ಯ ಲಿಮಿಟೆಡ್‌ನ ನಡುವಿನ ಗುತ್ತಿಗೆ ಒಪ್ಪಂದದ ಪ್ರಕಾರ 2019ರ ನ.4ಕ್ಕೆ ಮೇಲ್ಸೇತುವೆ ನಿರ್ಮಾಣ ಕಾಮಗಾರಿ ಪೂರ್ಣಗೊಳ್ಳಬೇಕಿತ್ತು. ಆದರೆ, ಗುತ್ತಿಗೆ ಪಡೆದ ಸಂಸ್ಥೆ ಕಾಮಗಾರಿ ಪೂರ್ಣಗೊಳಿಸದೆ ಕಾಲಹರಣ ಮಾಡುತ್ತಿದೆ. ಇದರಿಂದ ಸಾರ್ವಜನಿಕರ ಹಣ ಪೋಲಾಗುತ್ತಿದೆ ಎಂದರು. ಹೆಚ್ಚುವರಿ ಕಾಲಾವಕಾಶ ನೀಡಿದರೂ ಕಾಮಗಾರಿ ಪೂರ್ಣಗೊಳಿಸದೆ ಮೇಲ್ಸೇತುವೆ ನಿರ್ಮಾಣಕ್ಕೆ ಕೇವಲ ಪಿಲ್ಲರ್‌ಗಳನ್ನಷ್ಟೇ ನಿರ್ಮಿಸಿದ್ದು, ಪ್ರಸ್ತುತ ಕಾಮಗಾರಿ ಸ್ಥಗಿತಗೊಂಡಿದೆ. ಇದರಿಂದಾಗಿ ವಾಹನಗಳ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಕಾಮಗಾರಿ ಪರಿಣಾಮ ಧೂಳಿನಿಂದ ಇಡೀ ಪ್ರದೇಶದಲ್ಲಿ ಮಾಲಿನ್ಯ ಹೆಚ್ಚಾಗಿದೆ ಎಂದು ನ್ಯಾಯಪೀಠಕ್ಕೆ ವಿವರಿಸಿದರು.

ಬೇರೊಂದು ಟೆಂಡರ್‌ ಕರೆದು ತ್ವರಿತವಾಗಿ ನಿರ್ಮಾಣ ಕಾರ‍್ಯ ಪೂರ್ಣಗೊಳಿಸಲು ಸರಕಾರ ಹಾಗೂ ಪಾಲಿಕೆಗೆ ನಿರ್ದೇಶಿಸಬೇಕು. ಈಗಿನ ಟೆಂಡರ್‌ ವಿವರಗಳನ್ನು ನ್ಯಾಯಾಲಯ ಪರಿಶೀಲಿಸಬೇಕು. ಕಾಮಗಾರಿ ತಡವಾಗಿರುವುದರಿಂದ ನಿರ್ಮಾಣ ವೆಚ್ಚವೂ ಹೆಚ್ಚಾಗಿದೆ. ಹಾಗಾಗಿ, ನಿರ್ಮಾಣ ವೆಚ್ಚ ಹೆಚ್ಚಾಗಲು ಕಾರಣವಾಗಿರುವ ಸಂಸ್ಥೆಯಿಂದ ನಷ್ಟ ಅಂದಾಜು ಮಾಡಿ ವಸೂಲಿ ಮಾಡಲು ತಜ್ಞರ ಸಮಿತಿ ರಚಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.

ಟ್ರಾಫಿಕ್‌ ಸಮಸ್ಯೆ ತಪ್ಪಿಸಲು ಬಿಬಿಎಂಪಿ ನಗರದ ಈಜಿಪುರ ಜಂಕ್ಷನ್‌ನಿಂದ ಕೋರಮಂಗಲದ ಕೇಂದ್ರೀಯ ಸದನದವರೆಗಿನ 2.5 ಕಿ.ಮೀ. ಮೇಲ್ಸೇತುವೆ ನಿರ್ಮಿಸಲು ಯೋಜನೆ ರೂಪಿಸಿತ್ತು. ಬಿಬಿಎಂಪಿ ಯೋಜನೆ ಜಾರಿ ಮಾಡಲು 157.66 ಕೋಟಿ ರೂ. ವೆಚ್ಚದ ಮೇಲ್ಸೇತುವೆ ಕಾಮಗಾರಿಗೆ 2014ರಲ್ಲಿ ಟೆಂಡರ್‌ ಕರೆದಿತ್ತು. ಬಳಿಕ ಈ ಟೆಂಡರ್‌ ಮೊತ್ತವನ್ನು 203.20 ಕೋಟಿ ರೂಪಾಯಿಗೆ ಹೆಚ್ಚಿಸಲಾಗಿದೆ ಎಂದು ಅರ್ಜಿದಾರರು ನ್ಯಾಯಾಲಯದ ಗಮನ ಸೆಳೆದಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ