ಬೆಂಗಳೂರು : 11ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಭಾನುವಾರ ಅಕ್ಷರಶಃ ಜನ ಜಾತ್ರೆಯೇ ನಡೆದು ಹೋಯಿತು. ನಗರದ ಒರಾಯನ್ ಮಾಲ್ನಲ್ಲಿ ಕಳೆದ ಮೂರು ದಿನಗಳಿಂದ ನಡೆಯುತ್ತಿರುವ ಚಿತ್ರೋತ್ಸವಕ್ಕೆ ಭಾನುವಾರ ಎಂಬ ಕಾರಣಕ್ಕೋ ಏನೋ ನಿರೀಕ್ಷೆಗೂ ಮೀರಿ ಜನ ಸೇರಿದ್ದರು.
ಭಾನುವಾರ ಜನಸಾಗರ ಹೇಗಿತ್ತು ಎಂದರೆ ಒಂದೊಂದು ಆಡಿಟೋರಿಯಂ ಮುಂದೆ ನೂರಾರು ಜನ ಸಿನಿಮಾ ಆರಂಭಕ್ಕೆ ಒಂದು ಗಂಟೆ ಕ್ಯೂ ನಿಂತು ಸಿನಿಮಾ ವೀಕ್ಷಿಸಿದರು. ಈ ಸಾಲಿನಲ್ಲಿ ಸ್ಯಾಂಡಲ್ವುಡ್ನ ಖ್ಯಾತ ನಿರ್ದೇಶಕರಾದ ದಿನಕರ್ ತೂಗುದೀಪ, ಚಿಂತನ್, ಮಂಸೋರೆ ಸಹ ನಿಂತಿದ್ದು ವಿಶೇಷವಾಗಿತ್ತು. ರಿಷಬ್ ಶೆಟ್ಟಿ ನಿರ್ದೇಶನದ 'ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು,' ಚಿತ್ರವನ್ನು ಜನ ನಿಂತು ನೋಡಿ ಸಂಭ್ರಮಿಸಿದರು.
ನೀರಿನ ಮಹತ್ವ ತಿಳಿಸಿದ ಸೌರವ್ ಸಾರಂಗಿ
ಭಾನುವಾರ ಬೆಳಗ್ಗೆ ನಡೆದ ಸುದ್ದಿಗೋಷ್ಠಿಯಲ್ಲಿ 'ಚಾರ್ ನೋ ಮ್ಯಾನ್ಸ್ ಐಲ್ಯಾಂಡ್' ಸಿನಿಮಾದ ನಿರ್ದೇಶಕ ಸೌರವ್ ಸಾರಂಗಿ ನೀರು ಮತ್ತು ಅಕ್ಕಿಯ ಮಹತ್ವವನ್ನು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ 'ಬರ್ಡ್ ಆಫ್ ಡಸ್ಟ್' ನಿರ್ದೇಶಕಿ ಸಂಗೀತ ದತ್ತ, ಕೋರಲ್ ವುಮನ್ ಪ್ರಿಯಾ, ದಿ ಜಂಗಲ್ ಮ್ಯಾನ್ ನಿರ್ದೇಶಕಿ ಫರ್ಹಾ ಖಾನ್ ಸಹ ಪಾಲ್ಗೊಂಡಿದ್ದರು.
ರಂಗನಾಯಕಿ ಮೂಲಕ ಅಂಬಿ ನೆನಪು
ಇತ್ತೀಚೆಗೆ ನಿಧನರಾದ ಹಿರಿಯ ನಟ ಅಂಬರೀಷ್ ನೆನಪಿನಲ್ಲಿ ಪ್ರತಿ ದಿನ ಅವರು ನಟಿಸಿದ ಸಿನಿಮಾಗಳ ಪ್ರದರ್ಶನ ನಡೆಯುತ್ತಿದೆ. ಭಾನುವಾರ ಸಹ 'ರಂಗನಾಯಕಿ' ಸಿನಿಮಾ ಪ್ರದರ್ಶನಗೊಂಡಿತು. ಇಡೀ ಆಡಿಟೋರಿಯಂ ಹೌಸ್ ಫುಲ್ ಆಗಿದ್ದು, ಈ ಸಿನಿಮಾದ ವಿಶೇಷವಾಗಿತ್ತು.
ಗೊಂದಲ, ವಾದ ವಿವಾದ
ಚಿತ್ರೋತ್ಸವಕ್ಕೆ ಭೇಟಿ ನೀಡಿದ ಜನರ ಸಂಖ್ಯೆ ಹೆಚ್ಚಾಗಿದ್ದ ಕಾರಣ ಎಲ್ಲ ಸಿನಿಮಾ ಹಾಲ್ಗಳು ಹೌಸ್ಫುಲ್ ಆಗಿದ್ದವು. ಲೇಟಾಗಿ ಬಂದ ಪ್ರೇಕ್ಷಕರನ್ನು ಸೀಟುಗಳಿಲ್ಲದ ಕಾರಣಕ್ಕೆ ಸ್ವಯಂ ಸೇವಕರು ಹಾಲ್ ಒಳಗೆ ಸೇರಿಸಲಿಲ್ಲ. ಈ ಕಾರಣಕ್ಕೆ ಪ್ರೇಕ್ಷಕರು ಮತ್ತು ಸ್ವಯಂ ಸೇವಕರ ನಡುವೆ ವಾದ- ವಿವಾದ ಏರ್ಪಟ್ಟು ದೊಡ್ಡ ಗಲಾಟೆಯೇ ನಡೆಯಿತು. ಅಲ್ಲಿಯೇ ಇದ್ದ ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು.
ಕೆಜಿಎಫ್ಗೆ ರಾಜಮೌಳಿ ಸಲಹೆ
ಕೆಜಿಎಫ್ ಸಿನಿಮಾವನ್ನು ಐದು ಭಾಷೆಗಳಲ್ಲಿ ಬಿಡುಗಡೆ ಮಾಡಲು ಖ್ಯಾತ ಚಿತ್ರ ನಿರ್ದೇಶಕ ರಾಜಮೌಳಿಯವರ ಸಲಹೆ ಮುಖ್ಯ ಕಾರಣ ಎಂದು ಚಿತ್ರ ತಂಡ ಭಾನುವಾರ ಹೇಳಿದೆ.
11ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ನಡೆದ 'ಕೆಜಿಎಫ್ ಸಕ್ಸಸ್ ಸ್ಟೋರಿ' ಸಂವಾದದಲ್ಲಿ ಈ ಮಾತನ್ನು ಚಿತ್ರದ ಸಿನಿಮಾಟೋಗ್ರಫರ್ ಭುವನ್ಗೌಡ ಹೇಳಿದರು.
''ಕೆಜಿಎಫ್ ಸಿನಿಮಾವನ್ನು ನಾವು ಕನ್ನಡಕ್ಕಾಗಿ ಮಾತ್ರ ಮಾಡಿಕೊಂಡಿದ್ದೆವು. ಆದರೆ, ಅದನ್ನು ರಾಜಮೌಳಿಯವರೂ ಸೇರಿದಂತೆ ಒಂದಷ್ಟು ಜನಕ್ಕೆ ತೋರಿಸಿದೆವು. ಅದರಲ್ಲಿ ರಾಜಮೌಳಿಯವರು ಈ ಸಿನಿಮಾ ಟೆಕ್ನಿಕಲಿ ತುಂಬಾ ಸೌಂಡ್ ಮಾಡುತ್ತದೆ. ದಯವಿಟ್ಟು ಇದನ್ನು ಭಾರತೀಯ ಚಿತ್ರರಂಗಕ್ಕೆ ವಿಸ್ತರಣೆ ಮಾಡಿ ಎಂದು ಸಲಹೆ ನೀಡಿದರು. ಹಾಗಾಗಿ, ಅದನ್ನು ನಿರ್ಮಾಪಕರು ಐದು ಭಾಷೆಗೆ ತೆಗೆದುಕೊಂಡು ಹೋದರು,'' ಎಂದರು.
ಕಲಾ ನಿರ್ದೇಶಕ ಶಿವಕುಮಾರ್ ಮಾತನಾಡಿ, ''ಕೆಜಿಎಫ್ ಸಿನಿಮಾವನ್ನು ನನ್ನ ಮೊದಲ ಚಿತ್ರ ಎಂದುಕೊಂಡು ಕೆಲಸ ಮಾಡಿದೆ. ಸಾಕಷ್ಟು ಬಾರಿ ನಾವು ಹಾಕಿದ ಸೆಟ್ ಮಳೆ-ಗಾಳಿಗೆ ಹಾಳಾಗಿತ್ತು. ಆದರೂ ಎದೆಗುಂದದೆ ಸಿನಿಮಾ ಮುಗಿಸಿದೆವು,'' ಎಂದು ಹೇಳಿದರು.
''ಈ ಸಿನಿಮಾದಲ್ಲಿ ಹೊಸ ಹೊಸ ತಂತ್ರಜ್ಞಾನವನ್ನು ಬಳಸಿಕೊಂಡು ಸಂಗೀತ ಮಾಡಿದ್ದೇವೆ. ಒಂದು ಸಿನಿಮಾದ ಐದು ನಿಮಿಷದ ಹಾಡಿಗೆ ಅಷ್ಟೊಂದು ತಲೆಕೆಡಿಸಿಕೊಳ್ಳುವ ನಾವು ಎರಡೂವರೆ ಗಂಟೆಗಳ ಬ್ಯಾಗ್ರೌಂಡ್ ಮ್ಯೂಸಿಕ್ಗೆ ಯಾಕೆ ತಲೆಕೆಡಿಸಿಕೊಳ್ಳಬಾರದು ಎಂದು ಅನ್ನಿಸಿತು. ಖಳ ನಟನ ಎಂಟ್ರಿಗೆ ಕೆಲವೇ ಕೆಲವು ಸೆಕೆಂಡ್ಗಳ ಮ್ಯೂಸಿಕ್ಗೆ ನಾನು 80 ರಿಂದ 90 ಸಾವಿರ ರೂ. ಖರ್ಚು ಮಾಡಿದ್ದೇನೆ,'' ಎಂದು ಸಂಗೀತ ನಿರ್ದೇಶಕ ರವಿಬಸ್ರೂರು ಹೇಳಿದರು.
ಈ ಸಂವಾದದಲ್ಲಿ ಗರುಡ ಪಾತ್ರಧಾರಿ ರಾಮ್, ಚಲನಚಿತ್ರ ಅಕಾಡೆಮಿ ಅಧ್ಯಕ್ಷ ನಾಗತಿಹಳ್ಳಿ ಚಂದ್ರಶೇಖರ್, ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಚಿನ್ನೇಗೌಡ ಮತ್ತಿತರರು ಉಪಸ್ಥಿತರಿದ್ದರು.
ಏರ್ಪೋರ್ಟ್ನಲ್ಲಿ ನೋಡಿ ಆಯ್ಕೆ
ಕೆಜಿಎಫ್ನಲ್ಲಿ ಯಶ್ರಷ್ಟೇ ಫೇಮಸ್ ಆಗಿದ್ದು , ಗರುಡ ಪಾತ್ರಧಾರಿ ರಾಮ್. ಇವರನ್ನು ನಿರ್ದೇಶಕ ಪ್ರಶಾಂತ್ ನೀಲ್ ಆಯ್ಕೆ ಮಾಡಿದ್ದು ವಿಮಾನ ನಿಲ್ದಾಣದಲ್ಲಂತೆ. ನೋಡಿದ ತಕ್ಷಣ ಪಾತ್ರ ಮಾಡ್ತೀರ ಎಂದು ರಾಮ್ ಅವರನ್ನು ಕೇಳಿದ್ದಾರೆ. ಆಗ ರಾಮ್ ಹೌದು ಎಂದಿದ್ದಕ್ಕೆ ಯಾವುದೇ ಕಾರಣಕ್ಕೂ ಗಡ್ಡ ಮೀಸೆ, ಕೂದಲು ತೆಗೆಯಬೇಡ ಎಂದಿದ್ದರಂತೆ. ಅಂದಿನಿಂದ ಇಂದಿನವರೆಗೂ ಕಟಿಂಗ್ ಮತ್ತು ಶೇವಿಂಗ್ ಮಾಡಿಸಿಲ್ಲ ಎಂದು ಸ್ವತಃ ರಾಮ್ ಹೇಳಿದರು.