ಆ್ಯಪ್ನಗರ

ಹೈಗ್ರೌಂಡ್ಸ್‌ ಜಂಕ್ಷನ್‌ನಲ್ಲಿ ಹೈ ರಿಸ್ಕ್‌

ಮುಖ್ಯಮಂತ್ರಿ, ರಾಜ್ಯಪಾಲರು, ಕೇಂದ್ರ ಹಾಗೂ ರಾಜ್ಯದ ಸಚಿವರು ಹೀಗೆ ಗಣ್ಯಾತಿಗಣ್ಯರು ಹೆಚ್ಚಾಗಿ ಹೈಗ್ರೌಂಡ್ಸ್‌ ಜಂಕ್ಷನ್‌ ಮೂಲಕವೇ ಏರ್‌ಪೋರ್ಟ್‌ನತ್ತ ಪ್ರಯಾಣ ಬೆಳೆಸುತ್ತಾರೆ. ವಿದೇಶಿ ಗಣ್ಯರು ಕೂಡ ವಿಮಾನ ಹಿಡಿಯಲು ಇದೇ ಹಾದಿಯಲ್ಲಿ ಸಾಗಬೇಕು. ದಟ್ಟಣೆ ಅವಧಿಯಲ್ಲಿ ಆ್ಯಂಬುಲೆನ್ಸ್‌ ಕೂಡ ಸರಾಗವಾಗಿ ಸಾಗದಷ್ಟು ಇಲ್ಲಿ ಟ್ರಾಫಿಕ್‌ ಜಾಮ್‌ ಉಂಟಾಗುತ್ತದೆ.

Vijaya Karnataka 16 Jun 2019, 5:00 am
ಆರ್‌.ತುಳಸಿಕುಮಾರ್‌ ಬೆಂಗಳೂರು
Vijaya Karnataka Web BNG-1506-2-2-156


ನಗರದ ಹೃದಯಭಾಗದಿಂದ ಏರ್‌ಪೋರ್ಟ್‌ನತ್ತ ತೆರಳುವಾಗ ಇಲ್ಲವೇ ಅಲ್ಲಿಂದ ನಗರದತ್ತ ಬರುವಾಗ ಹೈಗ್ರೌಂಡ್‌ ಜಂಕ್ಷನ್‌ನಲ್ಲಿ ಆಗಾಗ್ಗೆ ಟ್ರಾಫಿಕ್‌ ಜಾಮ್‌ ಉಂಟಾಗಿ ವಾಹನ ಸವಾರರು ಪರದಾಡುವಂತಾಗುತ್ತದೆ.

ಮುಖ್ಯಮಂತ್ರಿ, ರಾಜ್ಯಪಾಲರು, ಕೇಂದ್ರ ಹಾಗೂ ರಾಜ್ಯದ ಸಚಿವರು ಹೀಗೆ ಗಣ್ಯಾತಿಗಣ್ಯರು ಹೆಚ್ಚಾಗಿ ಹೈಗ್ರೌಂಡ್ಸ್‌ ಜಂಕ್ಷನ್‌ ಮೂಲಕವೇ ಏರ್‌ಪೋರ್ಟ್‌ನತ್ತ ಪ್ರಯಾಣ ಬೆಳೆಸುತ್ತಾರೆ. ವಿದೇಶಿ ಗಣ್ಯರು ಕೂಡ ವಿಮಾನ ಹಿಡಿಯಲು ಇದೇ ಹಾದಿಯಲ್ಲಿ ಸಾಗಬೇಕು. ದಟ್ಟಣೆ ಅವಧಿಯಲ್ಲಿ ಆ್ಯಂಬುಲೆನ್ಸ್‌ ಕೂಡ ಸರಾಗವಾಗಿ ಸಾಗದಷ್ಟು ಇಲ್ಲಿ ಟ್ರಾಫಿಕ್‌ ಜಾಮ್‌ ಉಂಟಾಗುತ್ತದೆ.

ವರ್ಷಗಳ ಹಿಂದೆ ಬೆಂಗಳೂರು ಸಿಟಿ ಪೊಲೀಸ್‌ ವಿಭಾಗವು ಹೈಗ್ರೌಂಡ್ಸ್‌ ಜಂಕ್ಷನ್‌ನಲ್ಲಿ ಸರಾಗ ಸಂಚಾರಕ್ಕಾಗಿ 'ಯೀಲ್ಡ್‌' ಮಾದರಿಯ ಟ್ರಾಫಿಕ್‌ ವ್ಯವಸ್ಥೆಯನ್ನು ಪರಿಚಯಿಸಿತು. ರಸ್ತೆ ಮಧ್ಯ ಸಣ್ಣ ವರ್ತುಲ ಸೃಷ್ಟಿಸಿ ಅದರ ಮೂಲಕ ಸವಾರರು ಸ್ವಯಂ ಟ್ರಾಫಿಕ್‌ ಶಿಸ್ತಿನಿಂದ ಸಾಗಲು ಅವಕಾಶ ಮಾಡಿಕೊಡಲಾಗಿತ್ತು. ಕ್ರಮೇಣ ವಾಹನಗಳ ಸಂಖ್ಯೆ ಹೆಚ್ಚುತ್ತಿದ್ದಂತೆ ಯೀಲ್ಡ್‌ ವ್ಯವಸ್ಥೆ ನಿರುಪಯುಕ್ತವಾಯಿತು. ಎರಡು ವರ್ಷದಿಂದೀಚಿಗೆ ಸಿಗ್ನಲ್‌ ದೀಪವನ್ನು ಅಳವಡಿಸಿ ಮತ್ತೆ ಹಳೇ ವ್ಯವಸ್ಥೆಯನ್ನು ಪರಿಚಯಿಸಲಾಗಿದೆ. ಇದು ಕೂಡ ಟ್ರಾಫಿಕ್‌ ಜಾಮ್‌ಗೆ ಕಾರಣವಾಗಿದ್ದು, ಇಲ್ಲೀಗ ಸಂಚಾರ ಅಯೋಮಯವಾಗಿದೆ.

ದಟ್ಟಣೆ ಅವಧಿಯಲ್ಲಿ ಮಾತ್ರ ಟ್ರಾಫಿಕ್‌ ಜಾಮ್‌ ಕಾಣುತ್ತಿದ್ದ ಇಲ್ಲೀಗ ಇಡೀ ದಿನ ವಾಹನಗಳ ಪ್ರವಾಹ ಕಂಡುಬರುತ್ತಿದೆ. ಅರಮನೆ ರಸ್ತೆ, ರೇಸ್‌ಕೋರ್ಸ್‌ ರಸ್ತೆ ಹಾಗೂ ವಿಧಾನಸೌಧ ರಸ್ತೆಗಳು ಬಸವೇಶ್ವರ ವೃತ್ತದಲ್ಲಿ ಕೂಡಿಕೊಳ್ಳುತ್ತವೆ. ಇಲ್ಲಿಂದ ಹೈಗ್ರೌಂಡ್ಸ್‌ನತ್ತ ಸಾಗಿ ಬಳ್ಳಾರಿ ರಸ್ತೆಗೆ ಮುಕ್ತ ಎಡ ತಿರುವು ಇದೆ. ಆದರೆ, ರಾಜಭವನ ಹಾಗೂ ಮೌಂಟ್‌ ಕಾರ್ಮಲ್‌ ಕಾಲೇಜ್‌ನತ್ತ ಸಾಗಲು ಎರಡು ಪ್ರತ್ಯೇಕ ಸಿಗ್ನಲ್‌ಗಳಿದ್ದು, ಇಲ್ಲಿಯೇ ವಾಹನಗಳು ಹೆಚ್ಚಿನ ಸಮಯ ಜಾಮ್‌ನಲ್ಲಿ ಸಿಲುಕುತ್ತಿವೆ. ಈ ಎರಡೂ ರಸ್ತೆಗಳು ತಲಾ ಎರಡು ಪಥ ಮಾತ್ರವಿದ್ದು, ವಾಹನಗಳು ನಿಧಾನವಾಗಿ ಸಾಗಬೇಕಿದೆ. ವಾಹನಗಳು ಹೆಚ್ಚಾದಲ್ಲಿ ಚಾಲುಕ್ಯ ವೃತ್ತದ ಆಚೆಗೂ ಟ್ರಾಫಿಕ್‌ ಬಿಸಿ ತಟ್ಟುವುದುಂಟು.

ಶಾಲೆ ಬಳಿ ವಾಹನ ನಿಲುಗಡೆ ತಡೆಗೆ ಹಿಂದೇಟು:

ಹೈಗ್ರೌಂಡ್ಸ್‌ ಬಳಿಯಿರುವ ಸೋಫಿಯಾ ಶಾಲೆ ಇಲ್ಲಿನ ಟ್ರಾಫಿಕ್‌ ಹಳಿ ತಪ್ಪಲು ಕಾಣಿಕೆ ನೀಡುತ್ತಿದೆ. ವಿದ್ಯಾರ್ಥಿಗಳನ್ನು ಕರೆತರುವ ಕಾರು, ಆಟೊ, ವ್ಯಾನ್‌, ಬಿಎಂಟಿಸಿ ಬಸ್‌(ಗುತ್ತಿಗೆ ಅಡಿ ಸಂಚಾರ)ಗಳು ರಸ್ತೆ ಮಧ್ಯೆ ನಿಲ್ಲುತ್ತವೆ. ಮಧ್ಯಾಹ್ನದ ವೇಳೆ ಶಾಲೆ ಬಿಡುವ ಅರ್ಧ ಗಂಟೆ ಮುಂಚೆ ಆಗಮಿಸುವ ವಾಹನಗಳು ರಸ್ತೆಯಲ್ಲೇ ನಿಲುಗಡೆ ಮಾಡಿರುತ್ತವೆ. ಶಾಲೆ ಒಳಗೆ ಸ್ಥಳಾವಕಾಶ ಇದ್ದರೂ, ನಿಲುಗಡೆಗೆ ಅವಕಾಶ ನೀಡುತ್ತಿಲ್ಲ. ಪೊಲೀಸರು ಈ ಎಲ್ಲ ಅವಸ್ಥೆಯನ್ನು ನೋಡಿಕೊಂಡು ಸುಮ್ಮನಿರುವುದೇ ದಟ್ಟಣೆಗೆ ನೈಜ ಕಾರಣ ಎಂಬ ಆಕ್ಷೇಪ ಸಾರ್ವಜನಿಕರಿಂದ ವ್ಯಕ್ತವಾಗಿದೆ.


100 ಮೀ. ಅಂತರದಲ್ಲಿ 3 ಸಿಗ್ನಲ್‌ ಏಕೆ?


ಹೈಗ್ರೌಂಡ್ಸ್‌ ಜಂಕ್ಷನ್‌ ಮಾರ್ಗದ 100 ಮೀ. ಅಂತರದಲ್ಲಿ ಮೂರು ಸಿಗ್ನಲ್‌ಗಳಿರುವುದು ಇಲ್ಲಿನ ಟ್ರಾಫಿಕ್‌ ಸಮಸ್ಯೆಯನ್ನು ಹೆಚ್ಚಿಸಿವೆ. ಜತೆಗೆ ಮುಖ್ಯ ರಸ್ತೆಗೆ ಅಡ್ಡಲಾಗಿ ಎರಡು ರಸ್ತೆಗಳಲ್ಲಿ ಸಂಚಾರಕ್ಕೆ ಅವಕಾಶ ಕಲ್ಪಿಸಿದ್ದು, ಒಂದು ಸಿಗ್ನಲ್‌ ಬಿಟ್ಟು ಮತ್ತೊಂದರತ್ತ ಧಾವಿಸುತ್ತಿದ್ದಂತೆ ಕೆಂಪು ದೀಪ ಹೊತ್ತಿರುತ್ತದೆ. ಸಾವಿರಾರು ವಾಹನಗಳು ಸಂಚರಿಸುವ ಇಲ್ಲಿ ಒಮ್ಮೆ ನೂರು ವಾಹನಗಳು ಮಾತ್ರ ತೆರಳಲು ಸಾಧ್ಯ. ಉಳಿದವು ಸಾಲುಗಟ್ಟಿ ನಿಲ್ಲಬೇಕಿದ್ದು, ಕೆಲವೊಮ್ಮೆ ವಿಂಡರ್ಸ್‌ ಮ್ಯಾನರ್‌ವರೆಗೂ ಜಾಮ್‌ ಆಗಿರುತ್ತದೆ. ಇನ್ನೊಂದು ಭಾಗದಲ್ಲಿ ರಾಜಭವನ ರಸ್ತೆ ಹಾಗೂ ಏಟ್ರಿಯಾ ಹೋಟೆಲ್‌ವರೆಗೂ ಟ್ರಾಫಿಕ್‌ ಜಾಮ್‌ ಹಿಗ್ಗಿರುತ್ತದೆ. ಹಾಲಿ ಸಿಗ್ನಲ್‌ ವ್ಯವಸ್ಥೆ ಬದಲಿಸಿ ಸರಾಗ ಸಂಚಾರಕ್ಕಾಗಿ ಪೊಲೀಸ್‌ ಇಲಾಖೆ ಚಿಂತನೆ ನಡೆಸಬೇಕಿದೆ.


ಸರಾಗ ಸಂಚಾರಕ್ಕೆ ಕೈಗೊಳ್ಳಬೇಕಿರುವ ಕ್ರಮ

* ಹೈಗ್ರೌಂಡ್ಸ್‌ ಜಂಕ್ಷನ್‌ನಲ್ಲಿ ಸಿಗ್ನಲ್‌ ಸಂಖ್ಯೆಗಳನ್ನು ಕಡಿಮೆ ಮಾಡಬೇಕು

* ಹೈಗ್ರೌಂಡ್ಸ್‌ನಿಂದ ಅರಮನೆ ರಸ್ತೆಯತ್ತ ಸಂಚಾರ ನಿರ್ಬಂಧ

* ವಸಂತನಗರ-ಬಸವ ಭವನ ರಸ್ತೆಯತ್ತ ಸಂಚಾರ ನಿರ್ಬಂಧ

* ಸೋಫಿಯಾ ಶಾಲೆ ಬಳಿ ವಾಹನಗಳ ನಿಲುಗಡೆಗೆ ತಡೆಯೊಡ್ಡುವುದು

* ದಟ್ಟಣೆ ವೇಳೆ ಹೆಚ್ಚು ಸಂಚಾರ ಪೊಲೀಸರ ನಿಯೋಜನೆ

* ರಸ್ತೆ ದಾಟಲು ಅಂಡರ್‌ಪಾಸ್‌/ಸ್ಕೈವಾಕ್‌ ಬಳಕೆ ಕಡ್ಡಾಯಗೊಳಿಸುವುದು

ಹೈಗ್ರೌಂಡ್ಸ್‌ ಬಳಿ ಟ್ರಾಫಿಕ್‌ ವ್ಯವಸ್ಥೆ ಸರಿಯಾಗಿಲ್ಲ. ಈಗಿನ ಸಿಗ್ನಲ್‌ ವ್ಯವಸ್ಥೆಯನ್ನು ಬದಲಾಯಿಸಬೇಕು. ವಿಧಾನಸೌಧ ಮಾರ್ಗವಾಗಿ ಏರ್‌ಪೋರ್ಟ್‌ ತೆರಳುವಾಗ ಬಳ್ಳಾರಿ ರಸ್ತೆಯಲ್ಲಿ ಸಿಲುಕಿ ಪರದಾದಬೇಕಿದೆ.

- ಬಿ.ಎಸ್‌.ರಾಜಶೇಖರ್‌, ವಕೀಲ

ಏರ್‌ಪೋರ್ಟ್‌ ರಸ್ತೆಯಲ್ಲಿ ಸಂಚರಿಸುವುದು ಟ್ಯಾಕ್ಸಿ ಚಾಲಕರಿಗೆ ದೊಡ್ಡ ತಲೆನೋವು. ಹೈಗ್ರೌಂಡ್ಸ್‌ ಜಂಕ್ಷನ್‌ನಲ್ಲಿ ದಟ್ಟಣೆಯಿಂದ ವಾಹನ ಚಾಲನೆ ಕಷ್ಟವಾಗಿದ್ದು, ಪೊಲೀಸರು ಬದಲಿ ವ್ಯವಸ್ಥೆ ಕೈಗೊಳ್ಳಲಿ.

- ಅನಿಲ್‌ಕುಮಾರ್‌, ಟ್ಯಾಕ್ಸಿ ಚಾಲಕ


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ