ಆ್ಯಪ್ನಗರ

ಈಶಾ ಫೌಂಡೇಷನ್‌ ‘ಕಾವೇರಿ ಕೂಗು’ ದೇಣಿಗೆ ಸಂಗ್ರಹಕ್ಕೆ ಹೈಕೋರ್ಟ್‌ ಚಾಟಿ..! ಚಂದಾ ಎತ್ತಲು ಅನುಮತಿ ಕೊಟ್ಟಿಲ್ಲ ಎಂದ ಸರ್ಕಾರ

‘ಈಶಾ ಫೌಂಡೇಷನ್‌ ಸರಕಾರಿ ಜಮೀನಿನಲ್ಲಿ ಸಸಿಗಳನ್ನು ನೆಡಲು ಸಾರ್ವಜನಿಕರಿಂದ ಒಂದು ಸಸಿಗೆ 42 ರೂ.ಗಳಂತೆ ಕೋಟ್ಯಂತರ ರೂಪಾಯಿ ವಸೂಲಿ ಮಾಡುತ್ತಿದೆ’ - ಇದು ಹೈಕೋರ್ಟ್‌ನಲ್ಲಿ ಈಶಾ ಫೌಂಡೇಷನ್ ವಿರುದ್ಧ ಇರುವ ಆರೋಪ

Vijaya Karnataka Web 7 Jan 2020, 10:16 pm
ಬೆಂಗಳೂರು: ಕಾವೇರಿ ನದಿ ಸಂರಕ್ಷಣೆಗಾಗಿ ಕೈಗೊಂಡಿರುವ ‘ಕಾವೇರಿ ಕೂಗು’ ಅಭಿಯಾನದ ಹೆಸರಲ್ಲಿ ಸಾರ್ವಜನಿಕರಿಂದ ಹಣ ಸಂಗ್ರಹ ಮಾಡುವ ವಿಚಾರ ಸಂಬಂಧ ಈಶಾ ಫೌಂಡೇಷನ್‌ಗೆ ಹೈಕೋರ್ಟ್‌ ಚಾಟಿ ಬೀಸಿದೆ. ಫೌಂಡೇಷನ್‌ ಈವರೆಗೆ ಯಾವ ವಿಧಾನದಿಂದ ಎಷ್ಟು ಹಣ ಸಂಗ್ರಹ ಮಾಡಿದೆ ಎಂಬ ಬಗ್ಗೆ ಮಾಹಿತಿ ಒದಗಿಸುವಂತೆಯೂ ನಿರ್ದೇಶನ ನೀಡಿದೆ. ಇತ್ತ ರಾಜ್ಯ ಸರ್ಕಾರ, ತಾನು ಹಣ ಸಂಗ್ರಹಿಸಲು ಯಾವುದೇ ಸಂಸ್ಥೆಗಳಿಗೆ ಅನುಮತಿ ಕೊಟ್ಟಿಲ್ಲ ಎಂದು ಪ್ರಮಾಣ ಪತ್ರವನ್ನೂ ಹೈಕೋರ್ಟ್‌ಗೆ ಸಲ್ಲಿಸಿದೆ.
Vijaya Karnataka Web sadguru with cm
ಈಶಾ ಫೌಂಡೇಷನ್‌ ‘ಕಾವೇರಿ ಕೂಗು’ ದೇಣಿಗೆ ಸಂಗ್ರಹಕ್ಕೆ ಹೈಕೋರ್ಟ್‌ ಚಾಟಿ..! ಚಂದಾ ಎತ್ತಲು ಅನುಮತಿ ಕೊಟ್ಟಿಲ್ಲ ಎಂದ ಸರ್ಕಾರ


ವಕೀಲ ಎ.ವಿ. ಅಮರನಾಥನ್‌ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್‌. ಓಕ್‌ ಹಾಗೂ ನ್ಯಾ. ಹೇಮಂತ್‌ ಚಂದನಗೌಡರ್‌ ಅವರಿದ್ದ ವಿಭಾಗೀಯಪೀಠ, ಈಶಾ ಫೌಂಡೇಷನ್‌ಗೆ ಬಿಸಿ ಮುಟ್ಟಿಸಿದೆ. ‘ಲಾಭರಹಿತ ಆಧ್ಯಾತ್ಮಿಕ ಸಂಸ್ಥೆ ಎಂದು ಹೇಳುತ್ತೀರಿ. ಹಾಗಿದ್ದರೆ ಹಣ ಏಕೆ ಸಂಗ್ರಹ ಮಾಡುತ್ತೀರಿ? ಯಾವ ಅಧಿಕಾರದಲ್ಲಿ ಸಾರ್ವಜನಿಕರಿಂದ ಹಣ ಸಂಗ್ರಹ ಮಾಡುತ್ತಿದ್ದೀರಿ? ಸುಪ್ರೀಂಕೋರ್ಟ್‌ ನಿವೃತ್ತ ನ್ಯಾಯಮೂರ್ತಿಯೊಬ್ಬರನ್ನು ಸಂಸ್ಥೆಗೆ ಸೇರಿಸಿಕೊಂಡಿದ್ದೀರಲ್ಲಾ, ಅವರನ್ನು ನೇಮಕ ಮಾಡಿದ್ದು ಯಾರು? ನೀವು ಹಣ ಸಂಗ್ರಹ ಮಾಡುತ್ತಿರುವ ವಿಚಾರ ಆ ನ್ಯಾಯಮೂರ್ತಿಗಳಿಗೆ ಗೊತ್ತಿದೆಯೇ?’ ಎಂದು ಫೌಂಡೇಷನ್‌ ಪರ ವಕೀಲರನ್ನು ಕೋರ್ಟ್‌ ಪ್ರಶ್ನಿಸಿತು.

ಹೈಕೋರ್ಟ್‌ಗೆ ಉತ್ತರಿಸಿದ ವಕೀಲರು, ‘ನದಿ ಪುನಶ್ಚೇತನ ಹಾಗೂ ಪರಿಸರದ ಬಗ್ಗೆ ರೈತರಲ್ಲಿ ಅರಿವು ಮೂಡಿಸುವ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಸಾರ್ವಜನಿಕರಿಂದ ಬಲವಂತವಾಗಿ ಹಣ ಸಂಗ್ರಹ ಮಾಡುತ್ತಿಲ್ಲ, ಜನರೇ ಸ್ವಯಂಪ್ರೇರಣೆಯಿಂದ ದೇಣಿಗೆ ನೀಡುತ್ತಿದ್ದಾರೆ’ ಎಂದು ಸಮಜಾಯಿಷಿ ನೀಡಿದರು.

ಕಾವೇರಿ ಕೂಗು ಅಭಿಯಾನ ವಿಚಾರಣೆಯಿಂದ ಹಿಂದೆ ಸರಿದ ನ್ಯಾಯಾಧೀಶ

ಪ್ರಮಾಣಪತ್ರ ಸಲ್ಲಿಸಿದ ಸರಕಾರಿ ವಕೀಲರು ‘ಹಣ ಸಂಗ್ರಹಕ್ಕೆ ಸರಕಾರ ಅನುಮತಿ ನೀಡಿಲ್ಲ ಎಂದು ಸ್ಪಷ್ಟನೆ ನೀಡಿದೆ. ಹಣ ಸಂಗ್ರಹದ ಬಗ್ಗೆ ಯಾವುದೇ ದೂರು ಅಥವಾ ಆರೋಪಗಳು ಕೇಳಿ ಬಂದಿಲ್ಲ’ ಎಂದು ಹೇಳಿದರು.

‘ಕಾವೇರಿ ಕೂಗು’ -ಸದ್ಗುರು ಅಭಿಯಾನಕ್ಕೆ ಸಿಎಂ ಮೆಚ್ಚುಗೆ

ಅರ್ಜಿದಾರರ ವಕೀಲರು ಮಾತನಾಡಿ ‘ಈಶಾ ಫೌಂಡೇಷನ್‌ ಸರಕಾರಿ ಜಮೀನಿನಲ್ಲಿ ಸಸಿಗಳನ್ನು ನೆಡಲು ಸಾರ್ವಜನಿಕರಿಂದ ಒಂದು ಸಸಿಗೆ 42 ರೂ.ಗಳಂತೆ ಕೋಟ್ಯಂತರ ರೂಪಾಯಿ ವಸೂಲಿ ಮಾಡುತ್ತಿದೆ’ ಎಂದು ಆರೋಪಿಸಿದರು.

ಕಾವೇರಿ ರಕ್ಷಣೆಗೆ ಬೈಕ್‌ ಹತ್ತಿದ ಸದ್ಗುರು: ಇಶಾ ಫೌಂಡೇಷನ್‌ನಿಂದ ಕಾವೇರಿ ಕೂಗು ಆಂದೋಲನ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ