ಆ್ಯಪ್ನಗರ

ಆಸ್ಪತ್ರೆಗೆ ದಾಖಲಾಗದೆ ಕಾರ್ಪೊರೇಟರ್‌ ಹೈಡ್ರಾಮಾ: ಮೊಬೈಲ್‌ ಸ್ವಿಚ್‌ ಆಫ್‌ ಮಾಡಿ ಸತಾಯಿಸಿದ ಇಮ್ರಾನ್‌ ಪಾಷಾ

ಕೊರೊನಾ ಸೋಂಕಿತ ಕಾರ್ಪೊರೇಟರ್‌ ಇಮ್ರಾನ್‌ ಪಾಷಾ ಅವರು ನಿಗದಿತ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗದೆ ಬಿಬಿಎಂಪಿ ಅಧಿಕಾರಿಗಳನ್ನು ಸತಾಯಿಸಿದ್ದಾರೆ. ಅವರ ವಿರುದ್ಧ ಸಾಂಕ್ರಾಮಿಕ ರೋಗಗಳ ನಿಯಂತ್ರಣ ಕಾಯ್ದೆಯನ್ವಯ ಪ್ರಕರಣ ದಾಖಲಿಸಲಾಗುವುದು ಎಂದು ಬಿಬಿಎಂಪಿ ಆಯುಕ್ತ ಬಿ.ಎಚ್‌. ಅನಿಲ್‌ಕುಮಾರ್‌ ತಿಳಿಸಿದ್ದಾರೆ.

Vijaya Karnataka Web 31 May 2020, 7:49 am
ಬೆಂಗಳೂರು: ಕೊರೊನಾ ಸೋಂಕಿತ ಕಾರ್ಪೊರೇಟರ್‌ ಇಮ್ರಾನ್‌ ಪಾಷಾ ಅವರು ನಿಗದಿತ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗದೆ ಬಿಬಿಎಂಪಿ ಅಧಿಕಾರಿಗಳನ್ನು ಶನಿವಾರ ಸತಾಯಿಸಿದರು. ಇದರಿಂದ ಅವರ ನಿವಾಸದ ಬಳಿ ಮಧ್ಯಾಹ್ನದವರೆಗೆ ಹೈಡ್ರಾಮಾವೇ ನಡೆದು ಹೋಯಿತು.
Vijaya Karnataka Web ಆಸ್ಪತ್ರೆಗೆ ದಾಖಲಾಗದೆ ಕಾರ್ಪೊರೇಟರ್‌ ಹೈಡ್ರಾಮಾ


ಪಾದರಾಯನಪುರ ವಾರ್ಡ್‌ನ ಜೆಡಿಎಸ್‌ ಕಾರ್ಪೊರೇಟರ್‌ ಇಮ್ರಾನ್‌ ಪಾಷಾ ಅವರಿಗೆ ಶುಕ್ರವಾರ ರಾತ್ರಿಯೇ ಕೊರೊನಾ ಸೋಂಕು ತಗಲಿರುವುದು ದೃಢಪಟ್ಟಿತ್ತು. ಆದರೆ, ಇಮ್ರಾನ್‌ ಪಾಷಾ ಅವರು ಪಾಲಿಕೆಯ ಆರೋಗ್ಯಾಧಿಕಾರಿಗಳ ಸಂಪರ್ಕಕ್ಕೆ ಸಿಕ್ಕಿರಲೇ ಇಲ್ಲ. ಮೊಬೈಲ್‌ ಸ್ವಿಚ್‌ ಆಫ್‌ ಮಾಡಿಕೊಂಡು ಮನೆಯಲ್ಲಿಯೇ ಇದ್ದರು.

ಪಾಲಿಕೆಯ ಆರೋಗ್ಯಾಧಿಕಾರಿಗಳು ಶನಿವಾರ ಬೆಳಗ್ಗೆಯೇ ಆ್ಯಂಬುಲೆನ್ಸ್‌ನೊಂದಿಗೆ ಇಮ್ರಾನ್‌ ಪಾಷಾ ಅವರ ಮನೆ ಬಳಿ ತೆರಳಿದರು. ಆದರೂ, ಅವರು ಮನೆಯಿಂದ ಹೊರಬರದೆ ಮಧ್ಯಾಹ್ನ 12.15ವರೆಗೆ ಸತಾಯಿಸಿದರು. ಇದರಿಂದ ಅಧಿಕಾರಿಗಳು ಕಾದು ಕಾದು ಸುಸ್ತು ಹೊಡೆದರು.

''ಕಾರ್ಪೊರೇಟರ್‌ ಇಮ್ರಾನ್‌ ಪಾಷಾ ಅವರು ಮೊಬೈಲ್‌ ಸ್ವಿಚ್‌ ಆಫ್‌ ಮಾಡಿಕೊಂಡು ಮನೆಯೊಳಗೇ ಇದ್ದರು. ಹೀಗಾಗಿ, ಅವರನ್ನು ಸಂಪರ್ಕಿಸಲು ಸಾಕಷ್ಟು ಪ್ರಯತ್ನ ಪಟ್ಟರೂ ಸಾಧ್ಯವಾಗಿರಲಿಲ್ಲ. ಈ ವಿಷಯವನ್ನು ಆಯುಕ್ತರಿಗೆ ತಿಳಿಸಲಾಯಿತು. ಅವರು ಪೊಲೀಸರೊಂದಿಗೆ ಮನೆಯೊಳಗೆ ಹೋಗುವಂತೆ ಸೂಚಿಸಿದರು. ಅಲ್ಲದೆ, ಪ್ರಕರಣ ದಾಖಲಿಸುವ ಎಚ್ಚರಿಕೆ ನೀಡಿದರು. ಆ ಬಳಿಕ ಸದಸ್ಯರು ಮನೆಯಿಂದ ಮಧ್ಯಾಹ್ನ 12.15ಕ್ಕೆ ಮನೆಯಿಂದ ಹೊರಬಂದರು,'' ಎಂದು ಪಾಲಿಕೆಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

''ಇಮ್ರಾನ್‌ ಪಾಷಾ ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದು, ಅವರೊಂದಿಗೆ ಪ್ರಾಥಮಿಕ ಸಂಪರ್ಕದಲ್ಲಿದ್ದ 19 ಮಂದಿಯನ್ನು ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ. ದ್ವಿತೀಯ ಸಂಪರ್ಕದಲ್ಲಿದ್ದ 19 ಮಂದಿಯನ್ನು ಹೋಮ್‌ ಕ್ವಾರಂಟೈನ್‌ನಲ್ಲಿಇರಿಸಲಾಗಿದೆ. ಕ್ವಾರಂಟೈನ್‌ಗೆ ಒಳಪಟ್ಟವರಲ್ಲಿ ಸದಸ್ಯರ ಆಪ್ತ ಸಿಬ್ಬಂದಿ, ಭದ್ರತಾ ಸಿಬ್ಬಂದಿ, ಚಾಲಕರು, ಸ್ನೇಹಿತರು ಮತ್ತು ಕುಟುಂಬ ಸದಸ್ಯರಿದ್ದಾರೆ,'' ಎಂದು ಹೇಳಿದರು.

''ಪಾದರಾಯನಪುರ ವಾರ್ಡ್‌ನಲ್ಲಿ ಒಟ್ಟು 4 ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ. ರ್ಯಾಂಡಮ್‌ ಪರೀಕ್ಷೆಯಲ್ಲಿ ಇಬ್ಬರಿಗೆ ಸೋಂಕು ತಗಲಿರುವುದು ದೃಢಪಟ್ಟಿದೆ. ಇದಲ್ಲದೆ, ಗರ್ಭಿಣಿಯೊಬ್ಬರಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ,'' ಎಂದು ತಿಳಿಸಿದರು.

ಕಾರ್ಪೊರೇಟರ್‌ ವಿರುದ್ಧ ಪ್ರಕರಣ


ಈ ನಡುವೆ, ''ಪಾದರಾಯನಪುರ ವಾರ್ಡ್‌ನ ಕಾರ್ಪೊರೇಟರ್‌ ಇಮ್ರಾನ್‌ ಪಾಷಾ ಆಸ್ಪತ್ರೆಗೆ ಬಾರದೆ ಅವರ ಮನೆ ಬಳಿ ಸಾರ್ವಜನಿಕರು ಹಾಗೂ ಬೆಂಬಲಿಗರು ಜಮಾಯಿಸಲು ಅವಕಾಶ ಮಾಡಿಕೊಟ್ಟ ಹಿನ್ನೆಲೆಯಲ್ಲಿ ಅವರ ವಿರುದ್ಧ ಸಾಂಕ್ರಾಮಿಕ ರೋಗಗಳ ನಿಯಂತ್ರಣ ಕಾಯ್ದೆಯನ್ವಯ ಪ್ರಕರಣ ದಾಖಲಿಸಲಾಗುವುದು'' ಎಂದು ಬಿಬಿಎಂಪಿ ಆಯುಕ್ತ ಬಿ.ಎಚ್‌. ಅನಿಲ್‌ಕುಮಾರ್‌ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ