ಆ್ಯಪ್ನಗರ

ಹೋಟೆಲ್‌, ಆಸ್ಪತ್ರೆ, ಶಾಪಿಂಗ್‌ ಮಾಲ್‌ಗಳಲ್ಲಿ ಕೊಡುಗೆ

ನಗರದಲ್ಲಿ ಮತದಾನವನ್ನು ಹೆಚ್ಚಳ ಮಾಡುವ ಸಲುವಾಗಿ ಹೋಟೆಲ್‌, ಕಾಫಿ ಶಾಪ್‌, ಆಸ್ಪತ್ರೆ ಹಾಗೂ ಶಾಪಿಂಗ್‌ ಮಾಲ್‌ಗಳು ಘೋಷಿಸಿದ್ದ ಆಕರ್ಷಕ ಬಂಪರ್‌ ಕೊಡುಗೆಗಳನ್ನು ಮತದಾರರು ಗುರುವಾರ ಮುಗಿಬಿದ್ದು ಪಡೆದರು.

Vijaya Karnataka 19 Apr 2019, 5:00 am
ಬೆಂಗಳೂರು: ನಗರದಲ್ಲಿ ಮತದಾನವನ್ನು ಹೆಚ್ಚಳ ಮಾಡುವ ಸಲುವಾಗಿ ಹೋಟೆಲ್‌, ಕಾಫಿ ಶಾಪ್‌, ಆಸ್ಪತ್ರೆ ಹಾಗೂ ಶಾಪಿಂಗ್‌ ಮಾಲ್‌ಗಳು ಘೋಷಿಸಿದ್ದ ಆಕರ್ಷಕ ಬಂಪರ್‌ ಕೊಡುಗೆಗಳನ್ನು ಮತದಾರರು ಗುರುವಾರ ಮುಗಿಬಿದ್ದು ಪಡೆದರು.
Vijaya Karnataka Web 1804-2-2-01 (6)


ನೃಪತುಂಗ ರಸ್ತೆಯಲ್ಲಿರುವ 'ನಿಸರ್ಗ ಗ್ರ್ಯಾಂಡ್‌' ಹೋಟೆಲ್‌ ಮತ ಚಲಾವಣೆ ಮಾಡಿ ಬಂದವರಿಗೆ ಉಚಿತವಾಗಿ ತಿಂಡಿ ವ್ಯವಸ್ಥೆ ಮಾಡಿತ್ತು. ಹಾಗಾಗಿ, ಬೆಳಗ್ಗೆಯಿಂದಲೇ ಹೋಟೆಲ್‌ಗೆ ಭಾರಿ ಸಂಖ್ಯೆಯಲ್ಲಿ ಗ್ರಾಹಕರು ಹೋಟೆಲ್‌ಗೆ ಆಗಮಿಸಿದ್ದರು. ಎಲ್ಲರಿಗೂ ತುಪ್ಪದ ದೋಸೆ, ಲಡ್ಡು ಹಾಗೂ ಪಾನಕವನ್ನು ನೀಡಿ ಹೋಟೆಲ್‌ನ ಸಿಬ್ಬಂದಿ ಸತ್ಕರಿಸಿದರು.

ಹಿರಿಯ ನಟ ರಮೇಶ್‌ ಭಟ್‌, ನಟಿ ರೂಪಿಕಾ, ಕೆಎಎಸ್‌ ಅಧಿಕಾರಿ ಕೆ.ಎಸ್‌.ಮಥಾಯಿ ಸೇರಿದಂತೆ ಸಂಜೆ ವೇಳೆಗೆ ಸುಮಾರು 5,700ಕ್ಕೂ ಹೆಚ್ಚು ಮಂದಿ ಹೋಟೆಲ್‌ಗೆ ಭೇಟಿ ನೀಡಿ ತಿಂಡಿಯನ್ನು ಸವಿದರು. ''ಕಳೆದ ಬಾರಿ ಉತ್ತಮ ಪ್ರತಿಕ್ರಿಯೆ ಬಂತು. ಹಾಗಾಗಿ, ಈ ಬಾರಿ ಸಹ ಮುಂದುವರೆಸಿದ್ದೇನೆ. ಸಂಜೆ ವೇಳೆಗೆ ಸುಮಾರು 5,700ಕ್ಕೂ ಹೆಚ್ಚು ಮಂದಿ ತಿಂಡಿ ಸಿವಿದಿದ್ದಾರೆ ಎಂಬುದೇ ಖುಷಿಯ ವಿಚಾರ,'' ಎಂದು ನಿಸರ್ಗ ಗ್ರ್ಯಾಂಡ್‌ ಹೋಟೆಲ್‌ ಮಾಲೀಕ ಕೃಷ್ಣರಾಜ್‌ ತಿಳಿಸಿದರು.

ರಿಯಾಯಿತಿ ದರದಲ್ಲಿ ಚಿಕಿತ್ಸೆ: ಚಾಮರಾಜಪೇಟೆಯ 'ಬೃಂದಾವನ್‌ ಏರಿಯಾನ್‌ ಆಸ್ಪತ್ರೆ'ಯು ಮತದಾನ ಮಾಡಿ ಬಂದವರಿಗೆ ಶೇ.15ರಷ್ಟು ರಿಯಾಯಿತಿ ದರದಲ್ಲಿ ಚಿಕಿತ್ಸೆ ನೀಡುವ ಮೂಲಕ ಮತದಾನ ಹೆಚ್ಚಳಕ್ಕೆ ಪ್ರೇರೇಪಣೆ ನೀಡಿತು. ಮತದಾನ ಮಾಡಿ ಚಿಕಿತ್ಸೆಗೆ ಬಂದ ರೋಗಿಗಳಿಗೆ ಲ್ಯಾಬೊರೇಟರಿ ಮತ್ತು ಕನ್ಸಲ್ಟೇಷನ್‌ ಶುಲ್ಕದಲ್ಲಿ ರಿಯಾಯಿತಿ ನೀಡಲಾಯಿತು. ''ಸಂಜೆ ವೇಳೆಗೆ ಒಟ್ಟು 19 ಮಂದಿ ಮತದಾರರು ಈ ರಿಯಾಯಿತಿಯ ಲಾಭ ಪಡೆದರು. ಮತದಾನ ಮಾಡಿ, ಶಾಯಿ ಬೆರಳು ತೋರುವ ರೋಗಿಗಳಿಗೆ ಶುಕ್ರವಾರ ಸಂಜೆವರೆಗೂ ಈ ರಿಯಾಯಿತಿ ದರದ ಚಿಕಿತ್ಸೆಯನ್ನು ಮುಂದುವರೆಸಲಾಗುವುದು,'' ಎಂದು ಆಸ್ಪತ್ರೆಯ ಜನರಲ್‌ ಮ್ಯಾನೇಜರ್‌ ರವೀಂದ್ರ ತಿಳಿಸಿದರು.

ಗೋಪಾಲನ್‌ ಮಾಲ್‌ನಲ್ಲಿ ಉಚಿತ ಪಾರ್ಕಿಂಗ್‌: ಗೋಪಾಲನ್‌ ಮಾಲ್‌ ಸಮೂಹವು ನಗರದಲ್ಲಿರುವ ತನ್ನ ಎಲ್ಲಾ ಮಾಲ್‌ಗಳಲ್ಲಿ ಮತದಾನಕ್ಕೆ ತೆರಳುವ ಗ್ರಾಹಕರಿಗೆ ಉಚಿತವಾಗಿ ವಾಹನಗಳ ಪಾರ್ಕಿಂಗ್‌ಗೆ ವ್ಯವಸ್ಥೆ ಕಲ್ಪಿಸಿತ್ತು. ಜತೆಗೆ, ಮತದಾನ ಮಾಡಿ ಮಾಲ್‌ಗೆ ಆಗಮಿಸಿ ಕನಿಷ್ಠ 273 ರೂ.ಗಿಂತ ಹೆಚ್ಚಿನ ಮೊತ್ತದ ಶಾಪಿಂಗ್‌ ಮಾಡಿದ ಗ್ರಾಹಕರಿಗೆ ಲಕ್ಕಿ ಡ್ರಾ ಸ್ಪರ್ಧೆಯನ್ನು ಸಹ ಹಮ್ಮಿಕೊಂಡಿತ್ತು. ಮೇ 1ರಂದು ಗೋಪಾಲನ್‌ ಸಿಗ್ನೇಚರ್‌ ಮಾಲ್‌ನಲ್ಲಿ ಅದೃಷ್ಟಶಾಲಿಗಳ ಆಯ್ಕೆ ನಡೆಯಲಿದೆ. ವಿಜೇತರಿಗೆ ಸ್ಕೂಟರ್‌ ಸೇರಿದಂತೆ ಹಲವು ಬಹುಮಾನಗಳನ್ನು ನೀಡುವುದಾಗಿ ಘೋಷಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ