ವಿಕ ಸುದ್ದಿಲೋಕ ಬೆಂಗಳೂರು
ಲಾಲ್ಬಾಗ್ನಲ್ಲಿ ಈ ಬಾರಿ ಆ.9ರಿಂದ 18ರವರೆಗೆ ಸ್ವಾತಂತ್ರ್ಯೋತ್ಸವ ಫಲಪುಷ್ಪ ಪ್ರದರ್ಶನ ನಡೆಯಲಿದ್ದು, ಮೈಸೂರು ದಸರಾ ಮಹೋತ್ಸವದ ಚಿತ್ರಣ ಪುಷ್ಪಗಳಲ್ಲಿ ಅರಳಲಿದೆ. ಈ ಪ್ರದರ್ಶನಕ್ಕಾಗಿ ಭರದ ಸಿದ್ಧತೆಗಳು ನಡೆದಿವೆ.
ಪ್ರದರ್ಶನಕ್ಕೆ ಒಂದು ವಾರ ಮುಂಚಿತವಾಗಿ ಹೂವುಗಳು ಅರಳುವಂತೆ ಅಲ್ಲಲ್ಲಿ ಸಾಲು ಸಾಲಾಗಿ ಬಣ್ಣ ಬಣ್ಣದ ಹೂವಿನ ಗಿಡಗಳನ್ನು ನೆಡಲಾಗಿದೆ. ಈಗಾಗಲೇ ಬೆಳೆದು ನಿಂತಿರುವ ಅಲಂಕಾರಿಕ ಗಿಡಗಳನ್ನು ನಾನಾ ವಿನ್ಯಾಸದಡಿ ಟ್ರಿಮ್ಗೊಳಿಸಲಾಗುತ್ತಿದೆ. ಉದ್ಯಾನದ ನರ್ಸರಿ ಹಾಗೂ ತೋಟಗಾರಿಕೆ ತರಬೇತಿ ಕೇಂದ್ರದಲ್ಲಿ ಪ್ರದರ್ಶನಕ್ಕೆಂದೇ ವಿಶೇಷವಾಗಿ ಹೂವು, ತರಕಾರಿ ಹಾಗೂ ಹಣ್ಣಿನ ಸಸಿಗಳನ್ನು ಪಾಟ್ಗಳಲ್ಲಿ ಬೆಳೆಸಲಾಗುತ್ತಿದ್ದು, ಅವುಗಳನ್ನು ಪ್ರದರ್ಶನಕ್ಕೆ ಅಣಿಗೊಳಿಸಲಾಗುತ್ತಿದೆ.
ಯದುವಂಶದ ಕೊನೆಯ ಮಹಾರಾಜ ಮತ್ತು ಸ್ವತಂತ್ರ ಭಾರತದ ಮೈಸೂರು ರಾಜ್ಯದ ಮೊದಲ ರಾಜ್ಯಪಾಲ ಜಯಚಾಮರಾಜ ಒಡೆಯರ್ (ಜು.18, 1919) ಅವರ ಜನ್ಮ ಶತಮಾನೋತ್ಸವ ಅಂಗವಾಗಿ ಈ ಬಾರಿಯ ಪ್ರದರ್ಶನವನ್ನು ಅವರಿಗೆ ಅರ್ಪಿಸಲು ಚಿಂತನೆ ನಡೆದಿದೆ. ಮೈಸೂರು ಉದ್ಯಾನ ಕಲಾಸಂಘ ಹಾಗೂ ರಾಜ್ಯ ತೋಟಗಾರಿಕೆ ಇಲಾಖೆಗಳ ಸಹಯೋಗದೊಂದಿಗೆ ಫಲಪುಷ್ಪ ಪ್ರದರ್ಶನ ನಡೆಯಲಿದೆ. ಜಯಚಾಮರಾಜ ಒಡೆಯರ್ ಅವರ ಜೀವನ ಚರಿತ್ರೆಯನ್ನು ಪುಷ್ಪಗಳಿಂದ ಅನಾವರಣಗೊಳಿಸಲು ನಿರ್ಧರಿಸಲಾಗಿದೆ ಎಂದು ಇಲಾಖೆ ಅಧಿಧಿಕಾರಿಗಳು ತಿಳಿಸಿದರು.
ಜಯಚಾಮರಾಜ ಒಡೆಯರ್ ಅವರು 1940ರ ಸೆಪ್ಟೆಂಬರ್ 8ರಂದು ಮೈಸೂರು ಮಹಾರಾಜರಾಗಿ ಪಟ್ಟಾಭಿಷೇಕಗೊಂಡರು. 1947ರವರೆಗೆ ಮಹಾರಾಜರಾಗಿದ್ದರು. 1950ರಿಂದ 1956ರವರೆಗೆ ಮೈಸೂರು ರಾಜ್ಯದ ರಾಜಪ್ರಮುಖರಾಗಿದ್ದರು. ಇವರು ರಾಜ್ಯದ ಅಭಿವೃದ್ಧಿಗಾಗಿ ಅಪಾರ ಕೊಡುಗೆ ನೀಡಿದ್ದಾರೆ. ಹೀಗಾಗಿ ಇವರ ಕುರಿತು ಇತಿಹಾಸ ತಜ್ಞರಿಂದ ಮಾಹಿತಿ ಸಂಗ್ರಹಿಸಿ ಏನೆಲ್ಲಾ ಮಾಡಬಹುದು ಎಂಬುದನ್ನು ನಿರ್ಧರಿಸಲಾಗುವುದು. ದಸರಾ ಮಹೋತ್ಸವದಲ್ಲಿ ನಡೆಯುವ ಜಂಬೂಸವಾರಿ, ಮೈಸೂರು ಸಂಸ್ಥಾನದ ಚಿನ್ನದ ಸಿಂಹಾಸನವನ್ನು ಪುಷ್ಪಗಳ ಮೂಲಕ ಅನಾವರಣಗೊಳಿಸಲಾಗುವುದು. ಜತೆಗೆ ಮೈಸೂರು ಸಂಸ್ಥಾನಕ್ಕೆ ಸೇರಿದ (ಬೆಂಗಳೂರು ಅರಮನೆ, ಮೈಸೂರು ಅರಮನೆ ಹೊರತುಪಡಿಸಿ) ಯಾವುದಾದರೊಂದು ಅರಮನೆಯನ್ನು ಆಯ್ಕೆ ಮಾಡಲಾಗುವುದು ಎಂದು ಅಧಿಧಿಕಾರಿಗಳು ಮಾಹಿತಿ ನೀಡಿದರು.