ಆ್ಯಪ್ನಗರ

400 ದಿನಗಳಲ್ಲಿ 43 ರಾಷ್ಟ್ರ ಸುತ್ತಿ, ಅಂಗಾಂಗ ದಾನದ ಮಹತ್ವ ಸಾರಿದ ಕಿಡ್ನಿ ದಾನಿ!

ಅಮೆರಿಕ ನಿವಾಸಿಯಾಗಿರುವ ಬೆಂಗಳೂರಿನ ಅನಿಲ್‌ ಶ್ರೀವತ್ಸ 2014ರಲ್ಲಿ ತನ್ನ ಸಹೋದರನಿಗೆ ಮೂತ್ರಪಿಂಡವನ್ನು ದಾನ ಮಾಡಿದ್ದರು. ಇದೀಗ ಒಂದೇ ಕಿಡ್ನಿಯಲ್ಲಿ 400 ದಿನಗಳಲ್ಲಿ 1 ಲಕ್ಷಕ್ಕೂ ಹೆಚ್ಚು ಕಿ.ಮೀ.ಗಳನ್ನು ಕ್ರಮಿಸಿ ವಿಶ್ವಾದ್ಯಂತ ಅಂಗಾಂಗ ದಾನದ ಮಹತ್ವವನ್ನು ಸಾರುತ್ತಿದ್ದಾರೆ.

Vijaya Karnataka Web 18 Jan 2020, 3:33 pm
ಬೆಂಗಳೂರು: ವಿಶ್ವದಾದ್ಯಂತ ಸಂಚರಿಸಿ ಅಂಗಾಂಗ ದಾನದ ಮಹತ್ವವನ್ನು ತಿಳಿಸಿಕೊಡುತ್ತಿರುವ ಭಾರತೀಯ ಮೂಲದ ಅಮೆರಿಕ ಉದ್ಯಮಿ ಅನಿಲ್‌ ಶ್ರೀವತ್ಸ ಸುಮಾರು 400 ದಿನಗಳಲ್ಲಿ ಬರೋಬ್ಬರಿ 1 ಲಕ್ಷ ಕಿ.ಮೀ. ಕ್ರಮಿಸಿ, 43 ರಾಷ್ಟ್ರಗಳ 73,000 ಮಂದಿಯನ್ನು ಭೇಟಿ ಮಾಡಿ ದಾಖಲೆ ಮಾಡಿದ್ದಾರೆ.
Vijaya Karnataka Web Anil Srivatsava


ಸ್ವತಃ ಕಿಡ್ನಿಯನ್ನು ಸಹೋದರನಿಗೆ ದಾನ ಮಾಡಿರುವ ಶ್ರೀವತ್ಸ ಅವರು ಉಳಿದೊಂದು ಕಿಡ್ನಿಯಲ್ಲೇ ಸುಮಾರು 400 ದಿನಗಳ ಕಾಲ ಕಾರಿನಲ್ಲಿ ಪ್ರಯಾಣಿಸಿದ್ದಾರೆ. ಬರೋಬ್ಬರಿ 1,10,000 ಕಿ.ಮೀ. ಕ್ರಮಿಸಿ, ಜಗತ್ತಿನ ಮೂಲೆ ಮೂಲೆಯ ಜನರನ್ನು ಭೇಟಿಯಾಗಿ ತನ್ನದೇ ಕತೆಯನ್ನು ಹೇಳುವ ಮೂಲಕ ಅಂಗಾಂಗ ದಾನದ ಮಹತ್ವವನ್ನು ಸಾರುತ್ತಿದ್ದಾರೆ. ಇದುವರೆಗೆ 73,000 ಮಂದಿಯನ್ನು ಭೇಟಿ ಮಾಡಿ ತಮ್ಮ ಅಂಗಾಂಗ ದಾನದ ಕತೆಯನ್ನು ಹೇಳಿಕೊಂಡಿದ್ದಾರೆ. ಅಂಗಾಂಗ ದಾನವನ್ನು ಮಾಡುವಂತೆ ವಿನಂತಿಸಿಕೊಂಡಿದ್ದಾರೆ. ಪ್ರೀತಿಪಾತ್ರರ ಜೀವ ಉಳಿಸುವಂತೆ ಭಿನ್ನವಿಸಿಕೊಂಡಿದ್ದಾರೆ.

ವಿಶ್ವ ದಾಖಲೆಯ 'ಅನಿಲ್‌ ಕಿ ಆವಾಜ್‌' ಮೂಲಕ ಗಮನ ಸೆಳೆದ ರೇಡಿಯೋವಾಲಾ ಕಂಪನಿಯ ಸಿಇಓ ಆಗಿದ್ದ ಅನಿಲ್‌ ಶ್ರೀವತ್ಸ ಅವರು 2014ರಲ್ಲಿ ನರರೋಗ ತಜ್ಞರಾಗಿರುವ ಅಣ್ಣ ಡಾ. ಅರ್ಜುನ್‌ ಶ್ರೀವತ್ಸ ಅವರಿಗೆ ಕಿಡ್ನಿ ದಾನ ಮಾಡಿ ಜೀವ ಉಳಿಸಿದ್ದರು.

ಅಂಗಾಂಗ ದಾನದ ಮೂಲಕ ಹಲವರ ಬಾಳಿಗೆ ಬೆಳಕಾದ ಚಿತ್ರದುರ್ಗದ ಕೆಎಸ್‌ಆರ್‌ಟಿಸಿ ಬಸ್‌ ಚಾಲಕ

ಅಣ್ಣನಿಗೆ ಮೂತ್ರಪಿಂಡ ದಾನ ಮಾಡಿದ ಬಳಿಕ ವಿಶ್ವ ಪರ್ಯಟನೆ ಮಾಡುತ್ತ ಅಂಗಾಂಗ ದಾನದ ಮಹತ್ವವನ್ನು ಸಾರಲು ನಿರ್ಧರಿಸಿದರು. ಇದಕ್ಕೆ 'ಗಿಫ್ಟ್‌ ಆಫ್‌ ಲೈಫ್‌ ಅಡ್ವೆಂಚರ್‌' (Gift of life adventure) ಎಂಬ ಹೆಸರಿಟ್ಟು ಪ್ರಯಾಣವನ್ನು ಆರಂಭಿಸಿದರು.

''ನನ್ನ ಸಹೋದರನಿಗೆ ಕಿಡ್ನಿ ದಾನ ಮಾಡಲು ಪ್ರಮುಖ ಕಾರಣ ಪ್ರೀತಿ. ನನ್ನ ಪ್ರಕಾರ ಬೇರೆಯವರಿಗೆ ಅಂಗಾಂಗವನ್ನು ದಾನ ಮಾಡಲು ಪ್ರೀತಿಯಿಂದಷ್ಟೇ ಸಾಧ್ಯ. ವೈಯಕ್ತಿವಾಗಿ ಗೊತ್ತಿರುವವರನ್ನು ಪ್ರೀತಿಸಿ ಅಥವಾ ಆಗಂತುಕರಿಗೆ ಸಹಾಯ ಮಾಡುವುದನ್ನು ಪ್ರೀತಿಸಿ'' ಎಂದು ಸಂತೃಪ್ತಿಯ ನಗು ಬೀರುವ ಅನಿಲ್‌ ಅವರಿಗೆ ಬೆನ್ನೆಲುಬಾಗಿ ಜೊತೆಗಿರುವುದು ಪತ್ನಿ ದೀಪಾಲಿ.

ಪುತ್ರನಿಗೆ ಕಿಡ್ನಿ ದಾನ ಮಾಡಿ ಪುನರ್ಜನ್ಮ ಕೊಟ್ಟ 72 ವರ್ಷದ ತಾಯಿ

ಅನಿಲ್‌ ದಂಪತಿ ಇದುವರೆಗೆ ಸುಮಾರು 43 ರಾಷ್ಟ್ರಗಳನ್ನು ಸುತ್ತಿದ್ದಾರೆ. ಕಾರಿನಲ್ಲೇ ಅಡುಗೆ ಮಾಡಿಕೊಂಡು ಊಟ ಮಾಡುತ್ತಿದ್ದಾರೆ. ಜೊತೆಗೆ ಆಯಾ ಸ್ಥಳದ ನಿವಾಸಿಗಳು ಆಹಾರವನ್ನು ನೀಡಿದರೆ ಸ್ವೀಕರಿಸುತ್ತ ಪ್ರಯಾಣ ಮುಂದುವರಿಸಿದ್ದಾರೆ.

ಶ್ರೀವತ್ಸ ಅವರು ನೂರಾರು ಶಾಲೆಗಳಲ್ಲಿ, ಕಾಲೇಜುಗಳಲ್ಲಿ, ರೋಟರಿ ಕ್ಲಬ್‌ಗಳಲ್ಲಿ, ಸಮುದಾಯ ಕೇಂದ್ರಗಳಲ್ಲಿ ಅಂಗಾಂಗ ದಾನದ ಮಹತ್ವದ ಕುರಿತು ಮಾತನಾಡಿದ್ದಾರೆ. ಅಂಗಾಂಗ ದಾನ ಮಾಡುವ ಸಂದರ್ಭ ಉಂಟಾಗುವ ಭಯವನ್ನು ಹೇಗೆ ನಿಯಂತ್ರಿಸಬೇಕು? ಅಂಗಾಂಗ ದಾನದ ಕಾನೂನು ಚೌಕಟ್ಟುಗಳೇನು? ಎಂಬಿತ್ಯಾದಿ ಬಗ್ಗೆ ಪೂರ್ಣ ಪ್ರಮಾಣದ ಮಾಹಿತಿಯನ್ನು ನೀಡುತ್ತಿದ್ದಾರೆ.

ಮೆದುಳು ನಿಷ್ಕ್ರಿಯ; 7 ಮಂದಿಗೆ ಹೊಸ ಬಾಳು ಕೊಟ್ಟ ನಿರ್ಮಲಾ ಭಟ್

1997 ರಿಂದ -2006 ರ ವರೆಗೆ ಅಮೆರಿಕದಲ್ಲಿ 'ಅನಿಲ್‌ ಕಿ ಆವಾಜ್‌' ಎಂಬ ರೇಡಿಯೋ ಟಾಕ್‌ ಶೋ ನಡೆಸಿಕೊಡುವ ಮೂಲಕ ಲಿಮ್ಕಾ ಬುಕ್‌ನಲ್ಲಿ ಹೆಸರು ದಾಖಲಿಸಿರುವ ಅನಿಲ್‌ ಶ್ರೀವತ್ಸ ಅವರ ಮುಂದಿನ ಪ್ರಯಾಣ ನ್ಯೂಯಾರ್ಕ್‌ನಿಂದ ಅರ್ಜೆಂಟಿನಾ ಕಡೆಗೆ. ಮಾರ್ಚ್‌ ತಿಂಗಳಲ್ಲಿ 'ಗಿಫ್ಟ್‌ ಆಫ್‌ ಲೈಫ್‌ ಅಡ್ವಂಚರ್‌'ಅನ್ನು ಶ್ರೀವತ್ಸ ಮುಂದುವರಿಸಲಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ