-ಕೆ.ಎಂ.ಪಂಕಜ ಬೆಂಗಳೂರು
ಇಂದಿರಾ ನಗರದಲ್ಲಿರುವ ಸುಂದರ ಅಂಜನೇಯ ಸ್ವಾಮಿ ದೇಗುಲ 800 ವರ್ಷಕ್ಕೂ ಹೆಚ್ಚಿನ ಇತಿಹಾಸ ಹೊಂದಿದ್ದು, ಸ್ವಾಮಿಯ ಮೂರ್ತಿಯು ರಾವಣನನ್ನು ಸಂಹರಿಸುವ ಭಂಗಿಯಲ್ಲಿರುವುದು ವಿಶೇಷವಾಗಿದೆ.
ಸುಮಾರು ಒಂದೂವರೆ ಅಡಿ ಎತ್ತರ ಇರುವ ಸ್ವಾಮಿಯು ಮೂರ್ತಿ, ಇದೇ ಪ್ರದೇಶದಲ್ಲಿ ಉದ್ಭವವಾದದ್ದು ಎಂದು ಹೇಳಲಾಗುತ್ತಿದೆ. ಬಲಗೈ ಅಭಯ ಹಸ್ತ, ಎಡಗೈಲಿ ಕಮಲದ ಹೂ ಹಿಡಿದು ಪೂರ್ವಾಭಿಮುಖನಾಗಿ ಸ್ವಾಮಿಯು ದರ್ಶನ ನೀಡುತ್ತಿದ್ದಾನೆ. ಜೀರ್ಣೋದ್ಧಾರದ ಸಂದರ್ಭದಲ್ಲಿ ಮೂಲ ಮೂರ್ತಿಯ ರೂಪದಲ್ಲೇ ಸುಮಾರು 5 ಅಡಿ ಎತ್ತರದ ಮತ್ತೊಂದು ಆಂಜನೇಯ ಸ್ವಾಮಿಯ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ.
ವಿವಿಧ ಹರಕೆ ಹೊತ್ತ ಭಕ್ತರು, ಈಡೇರಿದಲ್ಲಿ ಸ್ವಾಮಿಗೆ ವಿಶೇಷವಾಗಿ 'ಗಟ್ಟಿ ವಡೆಯ ಮಾಲೆ'ಯನ್ನು ಅರ್ಪಿಸುತ್ತಾರೆ. ಮೂಲ ಮೂರ್ತಿಯ ಹೃದಯ ಭಾಗದಲ್ಲಿ ಬೆಣ್ಣೆ ಇಟ್ಟು ಬೇಡಿಕೊಂಡರೆ ಕಷ್ಟಗಳೆಲ್ಲ ಬೆಣ್ಣೆ ಕರಗಿದಷ್ಟು ಸುಲಭವಾಗಿ ದೂರಾಗಲಿವೆ ಹಾಗೂ ಬೇಡಿದ್ದೆಲ್ಲ ಸಿದ್ಧಿಸುತ್ತದೆ ಎಂಬುದು ಭಕ್ತರ ನಂಬಿಕೆಯಾಗಿದೆ.
ದೇವಾಲಯದ ವಿಶೇಷತೆ
ದೇವಾಲಯ ಆವರಣ ಪ್ರವೇಶಿಸುತ್ತಿದ್ದಂತೆ ಶ್ರೀದೇವಿ, ಭೂದೇವಿ, ಪದ್ಮಾವತಿ ಸಹಿತ ವೆಂಕಟೇಶ್ವರ ಸ್ವಾಮಿಯ ದರ್ಶನವಾಗುತ್ತದೆ. ಎಡಕ್ಕೆ ತಿರುಗಿದರೆ ಶ್ರೀ ಸುಂದರ ಆಂಜನೇಯ ಸ್ವಾಮಿ, ಬಲಕ್ಕೆ ವರಸಿದ್ಧಿ ಗಣಪತಿ, ಆಂಡಾಳ್ ದೇವಿಯ ದರ್ಶನವಾಗುತ್ತದೆ. ಆವರಣದಲ್ಲಿ ನವಗ್ರಹಗಳು ಇವೆ. ದೇವಾಲಯದ ಹೊರಭಾಗದಲ್ಲಿನ ರಾಜಗೋಪುರದಲ್ಲಿ ಮಾರುತಿ, ಶನಿಮಹಾತ್ಮ, ರಾಮ, ಸೀತೆ, ಲಕ್ಷ್ಮಣ, ಆಂಜನೇಯ ಸೇರಿದಂತೆ ಹಲವರು ದೇವರ ಮೂರ್ತಿಗಳನ್ನೊಳಗೊಂಡು ಆಕರ್ಷಕವಾಗಿವೆ.
ಉತ್ಸವಗಳು
ದೇವಾಲಯದಲ್ಲಿ ಹನುಮಜಯಂತಿ, ರಾಮನವಮಿಯಂದು ವಿಶೇಷ ಪೂಜೆ, ಭಜನೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತವೆ. ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡು ದೇವರ ದರ್ಶನ ಪಡೆಯುತ್ತಾರೆ. ಶನಿವಾರ, ಮಂಗಳವಾರ ಹಾಗೂ ಭಾನುವಾರ ದೇವಾಲಯದಲ್ಲಿ ವಿಶೇಷ ಪೂಜೆ ನೆರವೇರುತ್ತದೆ.
ನಮ್ಮ ತಂದೆ ಅರ್ಚಕರಾಗಿದ್ದಾಗ ದೇವಸ್ಥಾನದಲ್ಲಿ ನಿತ್ಯವೂ 'ಸುಂದರಕಾಂಡ' ಅಧ್ಯಾಯ ಪಾರಾಯಣ ಮಾಡುತ್ತಿದ್ದರು. ಇದೇ ಕಾರಣದಿಂದ ಸ್ವಾಮಿಗೆ 'ಶ್ರೀ ಸುಂದರ ಆಂಜನೇಯ ಸ್ವಾಮಿ' ಎಂಬ ಹೆಸರು ಬಂದಿದೆ.
- ಆರ್. ಶೇಷಾದ್ರಿ ಭಟ್, ಪ್ರಧಾನ ಅರ್ಚಕರು
ನೂರಾರು ವರ್ಷಗಳ ಹಿಂದೆ ಇಲ್ಲಿ ಸಣ್ಣದೊಂದು ಗುಡಿ ಇತ್ತು.ಮುಜರಾಯಿ ಇಲಾಖೆಗೆ ಸೇರ್ಪಡೆಯಾದ ಬಳಿಕ ಹಂತ ಹಂತವಾಗಿ ಅಭಿವೃದ್ಧಿ ಪಡಿಸಲಾಯಿತು. 2013ರಲ್ಲಿ ದೇಗುಲವನ್ನು ಸಂಪೂರ್ಣ ಜೀರ್ಣೋದ್ಧಾರ ಮಾಡಲಾಯಿತು.
- ಪಿ. ಲೋಕೇಶ್, ದೇವಾಲಯದ ಪಾರುಪತ್ತೇದಾರ
ಸಮಯ
ಬೆಳಗ್ಗೆ 6.30ರಿಂದ 11.00 ಸಂಜೆ 5.30ರಿಂದ 8.30
ಶನಿವಾರ ಬೆಳಗ್ಗೆ 6.00 ರಿಂದ ಮಧ್ಯಾಹ್ನ 12.30 ಹಾಗೂ ಸಂಜೆ 5.00 ರಿಂದ ರಾತ್ರಿ 9.00
ವಿಳಾಸ: ಶ್ರೀ ಸುಂದರ ಆಂಜನೇಯ ಸ್ವಾಮಿ ದೇವಾಲಯ, 100 ಅಡಿ ರಸ್ತೆ, ಇಂದಿರಾನಗರ.
ಚೀಟಿ ಮೂಲಕ ಪರಿಹಾರ
ಸುಂದರ ಆಂಜನೇಯ ಸ್ವಾಮಿಯ ಭಕ್ತರಲ್ಲಿ ಬಹುತೇಕರು ಗೊಂದಲ ಏರ್ಪಟ್ಟಾಗೆಲೆಲ್ಲ ಸ್ವಾಮಿಯ ಸನ್ನಿಧಿಗೆ ಬಂದು ಪರಿಹಾರ ಕಂಡುಕೊಳ್ಳುವುದು ವಾಡಿಕೆ. ಪ್ರತಿ ಭಾನುವಾರ ಸ್ವಾಮಿಯ ಸನ್ನಿಧಿಯಲ್ಲಿ ಚೀಟಿ ಮೂಲಕ ಉತ್ತರ ಕೊಡಿಸುವ ಸೇವೆ ನಡೆಯುವುದು ವಿಶೇಷವಾಗಿದೆ.
''ಭಕ್ತರು ತಾವು ಕೈಗೊಳ್ಳಬೇಕೆಂದಿರುವ ಕಾರ್ಯದ ಕುರಿತು ಪ್ರಾರ್ಥನೆ ಮಾಡಿಕೊಳ್ಳಲು ತಿಳಿಸಲಾಗುತ್ತದೆ. ಕಾರ್ಯ ಉತ್ತಮವಾಗಿ ನೆರವೇರಲಿದೆಯೇ ? ಮಾಡಬೇಕೆ ? ಬೇಡವೇ ? ಎಂಬುದಕ್ಕೆ ಪ್ರತ್ಯೇಕ ಚೀಟಿಗಳಲ್ಲಿ ಹೌದು ಅಥವಾ ಇಲ್ಲ ಎಂದೋ ಶುಭ ಅಥವಾ ಅಶುಭ ಎಂಬುದಾಗಿ ಪುರೋಹಿತರೇ ಬರೆದಿಟ್ಟು ಪೂಜೆ ನೆರವೇರಿಸುತ್ತಾರೆ. ಪೂಜೆ ಬಳಿಕ ಅದರಲ್ಲಿ ಒಂದನ್ನು ತೆಗೆದುಕೊಡುತ್ತಾರೆ. ಅದರಂತೆ ಭಕ್ತರು ನಿರ್ಧಾರ ಕೈಗೊಳ್ಳುತ್ತಾರೆ,'' ಎಂದು ದೇವಾಲಯದ ಅರ್ಚಕ ಎಸ್.ಬಾಲಾಜಿ ಭಟ್ ವಿವರಿಸಿದರು.