ಆ್ಯಪ್ನಗರ

ಹುಲ್ಲಹಳ್ಳಿಯಲ್ಲಿ ಗಬ್ಬೆದ್ದು ನಾರುತ್ತಿವೆ ಕೆರೆಗಳು, ಗ್ರಾನೈಟ್‌ ಕಾರ್ಖಾನೆಯೇ ಕಾರಣ

ಮಂಟಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುಲ್ಲಹಳ್ಳಿಯ ಬಹುತೇಕ ಜಲಮೂಲಗಳು ಕಲುಷಿತಗೊಂಡಿದ್ದು, ದುರ್ನಾತ ಬೀರುತ್ತಿವೆ. ಗ್ರಾನೈಟ್‌ ಕಾರ್ಖಾನೆ, ಗೋದಾಮುಗಳಿಂದ ಮಾಲಿನ್ಯ. ಒಳಚರಂಡಿ ನೀರು ನೇರವಾಗಿ ಕೆರೆ ಸೇರ್ಪಡೆ. ಪಂಚಾಯಿತಿ ನಿರ್ಲಕ್ಷ್ಯ ಇದಕ್ಕೆ ಕಾರಣ.

Vijaya Karnataka Web 29 Jan 2020, 10:30 am
ಶಶಿಕುಮಾರ್‌ ಎಸ್‌
Vijaya Karnataka Web lake

ಬನ್ನೇರುಘಟ್ಟ: ಮಂಟಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುಲ್ಲಹಳ್ಳಿಯ ಬಹುತೇಕ ಜಲಮೂಲಗಳು ಕಲುಷಿತಗೊಂಡಿದ್ದು, ದುರ್ನಾತ ಬೀರುತ್ತಿವೆ.

ಹುಲ್ಲಹಳ್ಳಿಯಲ್ಲಿ ದೊಡ್ಡ ಕೆರೆಗಳಾದ ಭುಜಂಗ ದಾಸನ ಕೆರೆ (48 ಎಕರೆ ವಿಸ್ತೀರ್ಣ), ಹೊಂಗೆ ಕೆರೆ (4 ಎಕರೆ ವಿಸ್ತೀರ್ಣ) ಮಾತ್ರವಲ್ಲದೆ ಥಾಮಸ್‌ ಕುಂಟೆ , ತೂಬು ಕುಂಟೆ, ಕರಿಯನ ಕುಂಟೆ, ಮಠದ ಕೆರೆ, ಹುರಳಿ ಕೆರೆ ಬಳಕೆಗೆ ಯೋಗ್ಯವಾಗಿಲ್ಲ.

ಪಂಚಾಯಿತಿ ವ್ಯಾಪ್ತಿಯಲ್ಲಿ ಹಲವು ಖಾಸಗಿ ಬಡಾವಣೆಗಳು ಅಭಿವೃದ್ಧಿಯಾಗುತ್ತಿವೆ. ಈ ಬಡಾವಣೆಗಳಿಂದ ಒಳಚರಂಡಿ ನೀರನ್ನು ನೇರವಾಗಿ ಕೆರೆಗಳಿಗೆ ಹರಿಸಲಾಗುತ್ತಿದೆ. ಇದಲ್ಲದೆ ಹಲವು ಗ್ರಾನೈಟ್‌ ಕಾರ್ಖಾನೆಗಳು, ಗೋದಾಮುಗಳು, ಕೈಗಾರಿಕೆಗಳು ಕೆರೆಗಳನ್ನು ಮಲಿನಗೊಳಿಸುತ್ತಿವೆ. ಜಂಕ್‌ ಫುಡ್‌ ಫ್ಯಾಕ್ಟರಿಯಿಂದಾಗಿ ಹೊಂಗೆ ಕೆರೆ ಮಲಿನಗೊಳ್ಳುತ್ತಿದೆ. ಮಳಿಗೆಯೊಂದರ ಗೋದಾಮಿನಿಂದ ಭುಜಂಗದಾಸನ ಕೆರೆ ಮಲಿನಗೊಳ್ಳುತ್ತಿದೆ. ಗ್ರಾನೈಟ್‌ ಕಾರ್ಖಾನೆಗಳು ಟ್ರಾಕ್ಟರ್‌ನಲ್ಲಿ ಕೆರೆಗೆ ತ್ಯಾಜ್ಯ ತಂದು ಹಾಕುತ್ತಿವೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಗ್ರಾಮದ ನಿವಾಸಿ ಮುನಿರಾಜು ಹುಲ್ಲಹಳ್ಳಿ, ''ಸಿ.ಕೆ ಪಾಳ್ಯದ ಕೊಳಚೆ ನೀರು ನೇರವಾಗಿ ಹೊಂಗೆ ಕೆರೆ ಸೇರುತ್ತಿದೆ. ಚಿಕ್ಕ ಕೆರೆಯಾಗಿರುವುದರಿಂದ ಅಲ್ಲಿಂದ ಉಕ್ಕಿ ಹರಿದು ಭುಜಂಗ ದಾಸನ ಕೆರೆಯೂ ಕಲುಷಿತಗೊಂಡಿದೆ. ಇದರಿಂದ ಅಕ್ಕ ಪಕ್ಕದ ನಿವಾಸಿಗಳು ತೀವ್ರ ತೊಂದರೆಗೊಳಗಾಗಿದ್ದೇವೆ. ಜಾನುವಾರುಗಳು ಕಲುಷಿತ ನೀರನ್ನು ಕುಡಿಯುತ್ತಿದ್ದು, ಆರೋಗ್ಯ ಕೆಡಿಸಿಕೊಳ್ಳುತ್ತಿವೆ,'' ಎಂದು ದೂರಿದರು.

ಮಂಟಪ ಗ್ರಾಮ ಪಂಚಾಯಿತಿ ಸದಸ್ಯ ಲೊಕೇಶ್‌ ಈ ಬಗ್ಗೆ ಪ್ರತಿಕ್ರಿಯಿಸಿ '' ಗ್ರಾನೈಟ್‌ ಮಳಿಗೆಗಳಿಂದ ಮಾಲಿನ್ಯವಾಗುತ್ತಿರುವುದು ಗಮನಕ್ಕೆ ಬಂದಿದೆ. ಈ ಬಗ್ಗೆ ಎಚ್ಚರಿಕೆ ನೀಡಲಾಗಿದೆ. ಟ್ರಾಕ್ಟರ್‌ನಲ್ಲಿಲೋಡ್‌ ಮಾಡಿ ಬೇರೆ ಕಡೆ ಸುರಿಯಲು ಮಾಲೀಕರು ಹೇಳಿದರೂ ಡ್ರೈವರ್‌ಗಳು ಕೆರೆಯಲ್ಲಿಸುರಿಯುತ್ತಿದ್ದಾರೆ,'' ಎಂದು ದೂರಿದರು.

ಶೀಘ್ರ ನೋಟಿಸ್‌ ಜಾರಿ:
''ಕೆರೆಗಳಿಗೆ ಕಲುಷಿತವಾಗುತ್ತಿರುವುದು ಗಮನಕ್ಕೆ ಬಂದಿದೆ. ಭುಜಂಗದಾಸನ ಕೆರೆಗೆ ಕಲುಷಿತ ನೀರನ್ನು ಬಿಟ್ಟವರಿಗೆ ನೋಟಿಸ್‌ ನೀಡಲಾಗುವುದು. ಕೆರೆ ಅಭಿವೃದ್ಧಿ ಬಗ್ಗೆಯೂ ಯೋಜನೆ ಹಮ್ಮಿಕೊಳ್ಳಲಾಗಿದೆ,'' ಎಂದು ಮಂಟಪ ಪಂಚಾಯಿತಿ ಪಿಡಿಒ ನರೇಂದ್ರ ಬಾಬು ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ