ಬೆಂಗಳೂರು: ''ಬೆಂಗಳೂರು ನಗರದಲ್ಲಿ ಕಾನೂನು ಜಾರಿಯಲ್ಲಿದೆಯೇ, ಇಲ್ಲ ಜಂಗಲ್ ರಾಜ್ ಇದೆಯೇ ?''
ಹೀಗೆಂದು ಹೈಕೋರ್ಟ್ ಹಂಗಾಮಿ ಸಿಜೆ ಎಚ್.ಜಿ.ರಮೇಶ್ ಮತ್ತು ನ್ಯಾ.ಪಿ.ಎಸ್.ದಿನೇಶ್ ಕುಮಾರ್ ಅವರಿದ್ದ ವಿಭಾಗೀಯಪೀಠ ಬಿಬಿಎಂಪಿಯ ಅಧಿಕಾರಿ ಮತ್ತು ಎಂಜಿನಿಯರ್ಗಳನ್ನು ಪ್ರಶ್ನಿಸಿದ ಪ್ರಸಂಗ ಬುಧವಾರ ನಡೆಯಿತು.
ನಕ್ಷೆ ಮಂಜೂರಿಲ್ಲದೆ ಬೆಂಗಳೂರಿನ ಅರಕೆರೆ ಪ್ರದೇಶದಲ್ಲಿ ನಾಲ್ಕು ಅಂತಸ್ತಿನ ಅಕ್ರಮ ಕಟ್ಟಡ ನಿರ್ಮಾಣದ ವಿಚಾರದಲ್ಲಿ ಕ್ರಮ ಕೈಗೊಳ್ಳದ ಎಂಜಿನಿಯರ್ಗಳ ವಿರುದ್ಧ ನ್ಯಾಯಪೀಠ ಚಾಟಿ ಬೀಸಿತು.
ಬೇಗೂರು ಹೋಬಳಿಯ ಅರಕೆರೆಯ ಯಲೇನಹಳ್ಳಿಯಲ್ಲಿ ರಾಜಕಾಲುವೆ ಮೇಲೆ ಅಕ್ರಮವಾಗಿ ಕಟ್ಟಡವನ್ನು ನಿರ್ಮಿಸಲಾಗುತ್ತಿದೆ ಎಂದು ಜೆ. ಸುನಿಲ್ ಕುಮಾರ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಆಲಿಸಿದ ನ್ಯಾಯಪೀಠ ಪಾಲಿಕೆ ಅಧಿಕಾರಿಗಳ ಕ್ರಮವನ್ನು ಕಟುಶಬ್ದಗಳಲ್ಲಿ ಟೀಕಿಸಿತು.
ಎಂಜಿನಿಯರ್ಗಳು ಏನು ಮಾಡುತ್ತಿದ್ದರು? ಅರ್ಜಿದಾರರು ಸಲ್ಲಿಸಿದ ಕಟ್ಟಡ ನಿರ್ಮಾಣದ ಚಿತ್ರವನ್ನು ಗಮನಿಸಿದ ಹಂಗಾಮಿ ಸಿಜೆ ''ಅಧಿಕಾರಿಗಳು ಶಾಮೀಲಾಗದೇ ಇಂಥದ್ದೆಲ್ಲಾ ಸಾಧ್ಯವೇ? ಅದೂ ಕೋಟ್ಯಂತರ ರೂಪಾಯಿ ಹಣ ಖರ್ಚು ಮಾಡಿ ಇಂತಹ ದೊಡ್ಡ ಕಟ್ಟಡವನ್ನು ನಿರ್ಮಿಸಲು ಹೇಗೆ ಸಾಧ್ಯ? ಪಾಲಿಕೆಯ ಮುಖ್ಯ ಎಂಜಿನಿಯರ್, ವಾರ್ಡ್ ಮಟ್ಟದ ಎಂಜಿನಿಯರ್ ಕಣ್ಮುಚ್ಚಿ ಕುಳಿತಿದ್ದಾರಾ? ''ಎಂದು ಪ್ರಶ್ನಿಸಿತು.
ಅಲ್ಲದೆ, ''ಬೆಂಗಳೂರಿನಲ್ಲಿ ರೂಲ್ ಆಫ್ ಲಾ (ಕಾನೂನು )ಜಾರಿಯಲ್ಲಿದೆಯೇ, ಇಲ್ಲ ಜಂಗಲ್ ಲಾ (ಅರಣ್ಯ ಕಾನೂನು ) ಇದೆಯೇ, ಅಥವಾ ಜಂಗಲ್ ರಾಜ್ ನಡೆಯುತ್ತಿದೆಯೇ?''ಎಂದು ಖಾರವಾಗಿ ಪ್ರಶ್ನಿಸಿದ ನ್ಯಾಯಪೀಠ ಈ ವಿಷಯ ಪಾಲಿಕೆ ಆಯುಕ್ತರ ಗಮನಕ್ಕೆ ಬಂದಿಲ್ಲವೇ? ಪ್ಲಾನ್ ಅನುಮೋದನೆ ಇಲ್ಲದೆ ಈ ರೀತಿ ನಾಲ್ಕು ಮಹಡಿಯ ಕಟ್ಟಡ ನಿರ್ಮಾಣವಾಗುವವರೆಗೆ ನಿಮ್ಮ ಎಂಜಿನಿಯರ್ಗಳು ಏನು ಮಾಡುತ್ತಿದ್ದರು, ಅವರೇಕೆ ಸುಮ್ಮನಿದ್ದರು? ಏಕೆ ಕಾಮಗಾರಿ ನಿಲ್ಲಿಸಲಿಲ್ಲ? ಎಂದು ಕೇಳಿತು.
ಪಾಲಿಕೆ ಪರ ವಾದ ಮಂಡಿಸಿದ ವಕೀಲರಾದ ಶ್ರೀನಿಧಿ ''ಅಕ್ರಮ ಕಟ್ಟಡ ನಿರ್ಮಾಣ ವಿಚಾರ ಪಾಲಿಕೆ ಗಮನಕ್ಕೆ ಬಂದಿದ್ದು, ಈಗಾಗಲೇ ನೋಟಿಸ್ ನೀಡಲಾಗಿದೆ. ಕಾಮಗಾರಿ ಸ್ಥಗಿತಗೊಂಡಿದೆ ''ಎಂದರು. ಅದಕ್ಕೆ ಅರ್ಜಿದಾರರ ವಕೀಲರು ''ಇಲ್ಲ ಸ್ವಾಮಿ, ಇಂದು ಬೆಳಿಗ್ಗೆಯೂ ನೋಡಿದೆ, ಕಾಮಗಾರಿ ನಡೆಯುತ್ತಿದೆ''ಎಂದರು.
ವ್ಯಂಗ್ಯವಾಡಿದ ಕೋರ್ಟ್: ''ಯಾವುದೇ ಹೊಸ ಕಟ್ಟಡಗಳ ಕಾಮಗಾರಿ ಆರಂಭವಾದರೆ ಅದು ನಿಮ್ಮ ಎಂಜಿನಿಯರ್, ಅಧಿಕಾರಿಗಳ ಗಮನಕ್ಕೆ ಬಂದೇ ಬರುತ್ತದೆ. ಅವರು ದಿನವೂ ಹೋಗಿ ಕಟ್ಟಡ ಕಾನೂನು ಪ್ರಕಾರ ಇದೆಯೇ, ನಕ್ಷೆ ಮಂಜೂರಾಗಿದೆಯೇ ಎಂದೆಲ್ಲಾ ಪರಿಶೀಲಿಸಿ, ಬೇಕಾದ ದಾಖಲೆಗಳನ್ನು ಸಂಗ್ರಹಿಸುತ್ತಾರೆ. ಆದರೂ ಅಕ್ರಮ ಕಟ್ಟಡಗಳು ತಲೆ ಎತ್ತುತ್ತವಲ್ಲ ಹೇಗೆ? ''ಎಂದು ಹಂಗಾಮಿ ಸಿಜೆ ವ್ಯಂಗ್ಯವಾಡಿದರು.
''ಇಲ್ಲಿ ಕಾನೂನಿಗಿಂತ ದೊಡ್ಡವರು ಯಾರೂ ಇಲ್ಲ, ಯಾರೇ ಇದ್ದರೂ ಅಕ್ರಮ ಕಟ್ಟಡವಾದರೆ ಅದನ್ನು ಖಂಡಿತಾ ತೆರವುಗೊಳಿಸಲಾಗುವುದು. ಆ ಬಗ್ಗೆ ಯಾವುದೇ ಅನುಮಾನ ಬೇಡ ''ಎಂದು ನ್ಯಾಯಪೀಠ ಹೇಳಿತು.
ಸರಕಾರ ಮತ್ತು ಬಿಬಿಎಂಪಿಗೆ ತುರ್ತು ನೋಟಿಸ್ ಜಾರಿಗೊಳಿಸಿದ ನ್ಯಾಯಪೀಠ ವಿಚಾರಣೆಯನ್ನು ಜ.29ಕ್ಕೆ ಮುಂದೂಡಿತು. ಅಷ್ಟರಲ್ಲಿ ಪಾಲಿಕೆ ತಾನು ಅಕ್ರಮ ಕಟ್ಟಡದ ತೆರವಿಗೆ ಕೈಗೊಂಡಿರುವ ಕ್ರಮದ ಬಗ್ಗೆ ವಿವರ ಸಲ್ಲಿಸುವಂತೆ ಸೂಚನೆ ನೀಡಿತು.
ಆಡಳಿತ ವೈಫಲ್ಯಕ್ಕೆ ಸಾಕ್ಷಿ: ಪಾಲಿಕೆ ಪರ ವಕೀಲರು ''ಅಧಿಕಾರಿಗಳು ಕಟ್ಟಡ ನಿರ್ಮಾಣ ಸ್ಥಳಕ್ಕೆ ಹೋಗಲು ಹೆದರುತ್ತಿದ್ದಾರೆ.ಕೆಲವು ಪ್ರಕರಣಗಳಲ್ಲಿ ಅಧಿಕಾರಿಗಳ ಮೇಲೆ ಹಲ್ಲೆಗಳಾಗಿವೆ''ಎಂದು ನ್ಯಾಯಪೀಠಕ್ಕೆ ತಿಳಿಸಿದರು.
ಆಗ ಸಿಟ್ಟಿಗೆದ್ದ ಹಂಗಾಮಿ ಸಿಜೆ ''ಇದೇನ್ರಿ ಹೀಗೆ ಹೇಳ್ತೀರಿ, ದರೋಡೆಕೋರರ ಬಳಿ ಶಸ್ತ್ರಾಸ್ತ್ರ ಇರುತ್ತದೆ ಎಂದು ಹೆದರಿದರೆ ಪೊಲೀಸರಿಗೆ ಕಾನೂನು ಸುವ್ಯವಸ್ಥೆ ಪಾಲನೆ ಮಾಡೋಕೆ ಆಗುತ್ತಾ, ಅದೇ ರೀತಿ ನೀವು ಭಯ ಎಂದುಕೊಂಡು ಕುಳಿತರೆ ಆಗದು. ಪೊಲೀಸರ ನೆರವು ಪಡೆದು ಅಕ್ರಮ ಕಟ್ಟಡ ನಿರ್ಮಾಣ ಕಾರ್ಯ ನಿಲ್ಲಿಸಿ, ಕಾಮಗಾರಿ ನಿಲ್ಲಿಸಲು ಸಾಧ್ಯವಿಲ್ಲ ಎನ್ನುವುದಕ್ಕೆ ಇದೇನು 'ಜಂಗಲ್ ರಾಜ್' ಅಲ್ಲ ಅಲ್ಲವೇ? ಇದು ಆಡಳಿತ ವೈಫಲ್ಯವನ್ನು ಎತ್ತಿ ತೋರಿಸುತ್ತದೆ ''ಎಂದರು.