ಆ್ಯಪ್ನಗರ

ಬಾಗಿಲು ಮುಚ್ಚಿದ ‘ಜನ ಸಂಜೀವಿನಿ’ ಔಷಧಾಲಯ

ಜಯನಗರದ ಸಂಜಯಗಾಂಧಿ ಅಸ್ಥಿ ಮತ್ತು ಟ್ರಾಮಾ ಚಿಕಿತ್ಸಾ ಕೇಂದ್ರದ ಆವರಣದಲ್ಲಿರುವ ‘ಜನ ಸಂಜೀವಿನಿ’ ಔಷಧಾಲಯವನ್ನು ಐದಾರು ದಿನಗಳಿಂದ ಮುಚ್ಚಲಾಗಿದೆ.

Vijaya Karnataka Web 23 Jun 2018, 10:27 am
-ಎಚ್‌.ಪಿ.ಪುಣ್ಯವತಿ ಬೆಂಗಳೂರು
Vijaya Karnataka Web hospital


ಜಯನಗರದ ಸಂಜಯಗಾಂಧಿ ಅಸ್ಥಿ ಮತ್ತು ಟ್ರಾಮಾ ಚಿಕಿತ್ಸಾ ಕೇಂದ್ರದ ಆವರಣದಲ್ಲಿರುವ ‘ಜನ ಸಂಜೀವಿನಿ’ ಔಷಧಾಲಯವನ್ನು ಐದಾರು ದಿನಗಳಿಂದ ಮುಚ್ಚಲಾಗಿದೆ. ಈ ಬಗ್ಗೆ ಮಾಹಿತಿ ಇಲ್ಲದ ಸಾರ್ವಜನಿಕರು ದೂರದ ಪ್ರದೇಶಗಳಿಂದ ಬಂದು ವಾಪಸ್‌ ಹೋಗುತ್ತಿದ್ದಾರೆ.

‘ಜನ ಸಂಜೀವಿನಿ’ ಔಷಧಾಲಯದ ನಿರ್ವಹಣೆ ಹೊಣೆ ಹೊತ್ತಿರುವ ಎಚ್‌ಎಲ್‌ ಲೈಫ್‌ ಕೇರ್‌ ಲಿಮಿಟೆಡ್‌ನ ಪ್ರತಿನಿಧಿ ಹೇಳುವ ಪ್ರಕಾರ, ಸಿಬ್ಬಂದಿ ರಜೆಯಲ್ಲಿ ತೆರಳಿರುವುದರಿಂದ ಬಾಗಿಲು ಮುಚ್ಚಲಾಗಿದೆ. ಪರ್ಯಾಯ ವ್ಯವಸ್ಥೆ ಮಾಡದೆ ಔಷಧಾಲಯದ ಬಾಗಿಲು ಮುಚ್ಚಿರುವುದರಿಂದ ರೋಗಿಗಳು ತೊಂದರೆಗೊಳಗಾಗುವಂತಾಗಿದೆ.

ಮೂಳೆ ಸಂಬಂಧಿ ರೋಗಗಳಿಂದ ಬಳಲುತ್ತಿರುವವರು, ಶಸ್ತ್ರಚಿಕಿತ್ಸೆ ಮಾಡಿಸಿಕೊಂಡವರು ನಿತ್ಯ ಸುಮಾರು 50-100 ಮಂದಿ ಔಷಧಿಗಳ ಖರೀದಿಗಾಗಿ ಬಂದು ವಾಪಸ್‌ ಹೋಗುತ್ತಿದ್ದಾರೆ. ಮಳಿಗೆಯನ್ನು ಮುಚ್ಚಿರುವ ಕುರಿತು ಇಲ್ಲವೇ ಯಾವಾಗ ತೆರೆಯುತ್ತೇವೆ ಎಂಬುದರ ಸೂಚನಾ ಫಲಕವೂ ಇಲ್ಲದಿರುವುದರಿಂದ ಬಹುತೇಕ ರೋಗಿಗಳು ಬಾಗಿಲಲ್ಲಿ ಕುಳಿತು ಗಂಟೆಗಟ್ಟಲೆ ಕಾಯುತ್ತಿರುತ್ತಾರೆ. ನಂತರ ಯಾರಿಂದಲೋ ಇದರ ಬಗ್ಗೆ ಮಾಹಿತಿ ತಿಳಿದಾಗ ರೋಗಿಗಳು ಮತ್ತು ಅವರ ಸಂಬಂಧಿಕರು ಬೇಸರದಿಂದ ಬೇರೆ ಜನ ಸಂಜೀವಿನಿಗೆ ತೆರಳುತ್ತಾರೆ. ಇದರಿಂದ ಅವರಿಗೆ ಹಣ ಮತ್ತು ಸಮಯ ಎರಡೂ ವ್ಯರ್ಥವಾಗುತ್ತಿದೆ.

ನಮ್ಮಲ್ಲಿದ್ದ ಸಿಬ್ಬಂದಿಯಲ್ಲಿ ಒಬ್ಬರು ಹೆರಿಗೆ ರಜೆಗೆಂದು ತೆರಳಿದ್ದಾರೆ. ಮತ್ತೊಬ್ಬರು ಅವರ ತಾಯಿ ಅನಾರೋಗ್ಯಕ್ಕೆ ತುತ್ತಾಗಿದ್ದಾರೆಂದು ರಜೆ ಹಾಕಿದ್ದಾರೆ. ಬೇರೆಯವರನ್ನು ನಿಯಮಾವಳಿ ಪ್ರಕಾರ ನೇಮಕ ಮಾಡಿಕೊಳ್ಳಲಾಗುತ್ತಿದೆ. ಬಿ ಫಾರ್ಮಾ, ಡಿ ಫಾರ್ಮಾ, ಎಂ ಫಾರ್ಮಾ ಮಾಡಿರುವವರೇ ಇಲ್ಲಿ ಕಾರ್ಯನಿರ್ವಹಿಸಲು ನೇಮಕ ಮಾಡಿಕೊಳ್ಳಬೇಕು. ಸಿಬ್ಬಂದಿ ನೇಮಕದ ಬಳಿಕ ತೊಂದರೆಯಾಗದು.

- ಮಣಿ ಮಿತ್ತಲ್‌, ಮುಖ್ಯಸ್ಥೆ ( ಕರ್ನಾಟಕ)ಎಚ್‌ಎಲ್‌ ಲೈಫ್‌ ಕೇರ್‌ ಲಿಮಿಟೆಡ್‌


ಜನ ಸಂಜೀವಿನಿ ನಮ್ಮ ವ್ಯಾಪ್ತಿಗೆ ಇಲ್ಲ

ಜನ ಸಂಜೀವಿನಿ ಔಷಧಾಲಯಕ್ಕೆ ನಮ್ಮ ಆಸ್ಪತ್ರೆ ಆವರಣದಲ್ಲಿ ಜಾಗ ನೀಡಲಾಗಿದೆ. ಆದರೆ ಇದರ ನಿರ್ವಹಣೆ ಹೊಣೆ ನಮ್ಮ ವ್ಯಾಪ್ತಿಗೆ ಸೇರಿಲ್ಲ. ಔಷಧಾಲಯ ಮುಚ್ಚಿರುವ ಕುರಿತು ನಮಗೂ ದೂರುಗಳು ಬಂದಿವೆ. ಈ ಬಗ್ಗೆ ಔಷಧ ನಿಯಂತ್ರಣ ಮಂಡಳಿಯ ಸಂಬಂಧಪಟ್ಟವರಿಗೂ ಮಾಹಿತಿ ನೀಡಲಾಗಿದೆ.

- ಡಾ.ಚಂದ್ರಶೇಖರ್‌, ನಿರ್ದೇಶಕರು, ಸಂಜಯ್‌ಗಾಂಧಿ ಆಸ್ಪತ್ರೆ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ