ಆ್ಯಪ್ನಗರ

2019ರ ಮಾರ್ಚ್‌ನಿಂದ ಜಯದೇವ ಮೇಲುರಸ್ತೆ ತೆರವು ಕಾಮಗಾರಿ ಆರಂಭ

ಮೆಟ್ರೊ ಎರಡನೇ ಹಂತದ ಆರ್‌.ವಿ.ರಸ್ತೆ-ಬೊಮ್ಮಸಂದ್ರ ಹಾಗೂ ಗೊಟ್ಟಿಗೆರೆ-ನಾಗವಾರ ಮಾರ್ಗದ ನಿರ್ಮಾಣಕ್ಕಾಗಿ ಜಯದೇವ ಆಸ್ಪತ್ರೆ ಬಳಿಯ ಮೇಲುರಸ್ತೆಯನ್ನು ತೆರವುಗೊಳಿಸುವ ಕಾಮಗಾರಿ 2019ರ ಮಾರ್ಚ್‌ನಿಂದ ಆರಂಭವಾಗಲಿದೆ.

Vijaya Karnataka 29 Oct 2018, 5:00 am
ಬೆಂಗಳೂರು: ಮೆಟ್ರೊ ಎರಡನೇ ಹಂತದ ಆರ್‌.ವಿ.ರಸ್ತೆ-ಬೊಮ್ಮಸಂದ್ರ ಹಾಗೂ ಗೊಟ್ಟಿಗೆರೆ-ನಾಗವಾರ ಮಾರ್ಗದ ನಿರ್ಮಾಣಕ್ಕಾಗಿ ಜಯದೇವ ಆಸ್ಪತ್ರೆ ಬಳಿಯ ಮೇಲುರಸ್ತೆಯನ್ನು ತೆರವುಗೊಳಿಸುವ ಕಾಮಗಾರಿ 2019ರ ಮಾರ್ಚ್‌ನಿಂದ ಆರಂಭವಾಗಲಿದೆ.
Vijaya Karnataka Web F8EF724E-7EE3-424F-9DAE-876DB93DF895


ಹತ್ತು ವರ್ಷಗಳ ಹಿಂದೆ 21 ಕೋಟಿ ರೂ. ವೆಚ್ಚದಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಮೇಲುರಸ್ತೆ ನಿರ್ಮಿಸಿತ್ತು. ಮೆಟ್ರೊ ಎತ್ತರಿಸಿದ ಮಾರ್ಗಕ್ಕಾಗಿ ಈ ಮೇಲುರಸ್ತೆಯನ್ನು ತೆರವುಗೊಳಿಸುವ ಕಾಮಗಾರಿಯನ್ನು ಬಿಎಂಆರ್‌ಸಿಎಲ್‌ ನಿರ್ವಹಿಸಲಿದೆ. ಬನ್ನೇರುಘಟ್ಟ ರಸ್ತೆಯಲ್ಲಿ ಈಗಾಗಲೇ ಮೆಟ್ರೊ ಕಾಮಗಾರಿ ನಡೆಯುತ್ತಿದೆ. ಜತೆಗೆ ಆರ್‌.ವಿ.ರಸ್ತೆ-ಬೊಮ್ಮಸಂದ್ರ ಮಾರ್ಗದ ಕಾಮಗಾರಿಯೂ ಆರಂಭವಾಗಿದೆ. ಇಂತಹ ಸಮಯದಲ್ಲಿ ಮೇಲುರಸ್ತೆಯನ್ನು ಕೆಡವಿ ಹಾಕಿದರೆ, ಪರ್ಯಾಯ ಸಂಚಾರ ವ್ಯವಸ್ಥೆ ಮಾಡಿದರೂ ಸಂಚಾರ ದಟ್ಟಣೆ ಅತಿಯಾಗುತ್ತದೆ. ಹೀಗಾಗಿ ಮೇಲುರಸ್ತೆ ತೆರವುಗೊಳಿಸುವ ಕಾಮಗಾರಿಯನ್ನು ಪದೇಪದೆ ಮುಂದೂಡಲಾಗಿತ್ತು. ಈಗ 2019ರ ಮಾರ್ಚ್‌ನಿಂದ ಕಾಮಗಾರಿ ಆರಂಭಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ.

'ವಿಜಯ ಕರ್ನಾಟಕ'ದ ಸಹೋದರ ಸಂಸ್ಥೆ 'ಬೆಂಗಳೂರು ಮಿರರ್‌' ಬೇಗೂರು ಪ್ರದೇಶದ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಏರ್ಪಡಿಸಿದ್ದ ಸಂವಾದದಲ್ಲಿ ಬಿಎಂಆರ್‌ಸಿಎಲ್‌ ಅಧಿಕಾರಿಗಳು ಈ ಮಾಹಿತಿ ನೀಡಿದ್ದಾರೆ.

''ಬಿಬಿಎಂಪಿ, ಸಂಚಾರ ಪೊಲೀಸರೂ ಸೇರಿದಂತೆ ಎಲ್ಲರ ಸಹಕಾರದೊಂದಿಗೆ ಮೇಲುರಸ್ತೆಯನ್ನು ತೆರವುಗೊಳಿಸುವ ಕಾಮಗಾರಿ ನಡೆಯಲಿದೆ. ಜಯದೇವ ಮೇಲುರಸ್ತೆ ಬಳಿ ಒಂದೇ ಆಧಾರ ಕಂಬದಿಂದ ಎರಡು ಮೆಟ್ರೊ ಮಾರ್ಗಗಳು ನಿರ್ಮಾಣವಾಗಲಿವೆ. ಆರ್‌.ವಿ.ರಸ್ತೆ-ಬೊಮ್ಮಸಂದ್ರ ಮಾರ್ಗವು ಕೆಳಗೆ ಹಾಗೂ ಅದರ ಮೇಲೆ ಗೊಟ್ಟಿಗೆರೆ-ನಾಗವಾರ ಮಾರ್ಗ ಹಾದುಹೋಗಲಿದೆ. ಇಲ್ಲಿ ಇಂಟರ್‌ಚೇಂಜ್‌ ನಿಲ್ದಾಣ ಬರಲಿದೆ. ಆರ್‌.ವಿ.ರಸ್ತೆ-ಬೊಮ್ಮಸಂದ್ರ ಮಾರ್ಗದ ಯೋಜನೆಯಲ್ಲಿ ಜೆ.ಪಿ.ನಗರದವರೆಗೆ ಮಾರ್ಗ ನಿರ್ಮಾಣ ಕಾರ್ಯ ಸಾಗಿದೆ. ಜಯದೇವ ಮೇಲುರಸ್ತೆ ಬಳಿ ದೊಡ್ಡ ನಿಲ್ದಾಣ ನಿರ್ಮಾಣವಾಗಲಿದೆ,'' ಎಂದು ಬಿಎಂಆರ್‌ಸಿಎಲ್‌ ಹೆಚ್ಚುವರಿ ಮುಖ್ಯ ಎಂಜಿನಿಯರ್‌ ಬಿ.ಸಿ.ನಟರಾಜ್‌ ತಿಳಿಸಿದರು.

ಗೊಟ್ಟಿಗೆರೆ ನಿಲ್ದಾಣವು ವಾಸ್ತವವಾಗಿ ಗೊಟ್ಟಿಗೆರೆಯಲ್ಲಿ ನಿರ್ಮಾಣವಾಗುವುದಿಲ್ಲ. ಈ ನಿಲ್ದಾಣಕ್ಕೆ 'ಗೊಟ್ಟಿಗೆರೆ' ಎಂದು ಹೆಸರಿಡಲಾಗಿದೆ. ಆದರೆ ಇದು ಬನ್ನೇರುಘಟ್ಟ ರಸ್ತೆ ಬಳಿಯ ಲೋಯಲ ಶಾಲೆ ಬಳಿ ಬರಲಿದೆ. ಇಲ್ಲಿಂದ ಹುಳಿಮಾವು ನಿಲ್ದಾಣಕ್ಕೆ 1 ಕಿ.ಮೀ. ಅಂತರವಿರಲಿದೆ. ಗೊಟ್ಟಿಗೆರೆ-ನಾಗವಾರ ಮಾರ್ಗವು 2023ಕ್ಕೆ ಸಂಚಾರ ಮುಕ್ತವಾಗಬಹುದು ಎಂದು ಅಂದಾಜಿಸಲಾಗಿದೆ.

ರಸ್ತೆ ಅಗಲೀಕರಣ: ಬೇಗೂರು ರಸ್ತೆಯ ಅಗಲೀಕರಣ ಕಾಮಗಾರಿಗೆ 2019 ರ ಜನವರಿಯಲ್ಲಿ ಟೆಂಡರ್‌ ಕರೆಯುವ ನಿರೀಕ್ಷೆ ಇದೆ. ಬಿಬಿಎಂಪಿ ಅಧಿಕಾರಿಗಳು ವಿಸ್ತೃತ ಯೋಜನಾ ವರದಿ ರೂಪಿಸಿದ್ದು, ಇದು ಮುಗಿದ ಬಳಿಕ ಟೆಂಡರ್‌ ಕರೆಯಲಾಗುತ್ತದೆ.

ಬೇಗೂರು ವಾರ್ಡ್‌ ಕಾರ್ಪೊರೇಟರ್‌ ಎಂ.ಆಂಜನಪ್ಪ ಮಾತನಾಡಿ, ''ಹೊಸೂರು ರಸ್ತೆಯ ಬೊಮ್ಮನಹಳ್ಳಿ ಸಿಗ್ನಲ್‌ ಮತ್ತು ಬೇಗೂರಿನಲ್ಲಿ 4.3 ಕಿ.ಮೀ. ಉದ್ದದ ರಸ್ತೆಯಲ್ಲಿ ಅಗಲೀಕರಣ ಕಾಮಗಾರಿ ನಡೆಯಲಿದೆ. 25 ಅಡಿ ಅಗಲದ ರಸ್ತೆಯನ್ನು 80 ಅಡಿಗೆ ವಿಸ್ತರಣೆ ಮಾಡಲಾಗುತ್ತದೆ. ಇದರಿಂದ ಜಿಗಣಿ, ಹೊಸೂರು ರಸ್ತೆ, ಎಲೆಕ್ಟ್ರಾನಿಕ್‌ ಸಿಟಿಗೆ ಸಂಚರಿಸುವವರಿಗೆ ಅನುಕೂಲವಾಗಲಿದೆ. ಕಾಮಗಾರಿಗೆ ಒಟ್ಟು 60 ಕೋಟಿ ರೂ. ಖರ್ಚಾಗಲಿದ್ದು, 15 ಕೋಟಿ ರೂ. ಅನ್ನು ರಾಜ್ಯ ಸರಕಾರ ಬಿಡುಗಡೆ ಮಾಡಿದೆ. ಕೆಲವೆಡೆ ಭೂ ಮಾಲೀಕರಿಗೆ ಪರಿಹಾರ ನೀಡುವಲ್ಲಿ ಸಮಸ್ಯೆ ಉಂಟಾಗಿದೆ. ಟಿಡಿಆರ್‌ ಮೂಲಕ ಸಮಸ್ಯೆ ಬಗೆಹರಿಸಲಾಗುವುದು,'' ಎಂದು ತಿಳಿಸಿದರು.

ಮೇಯರ್‌ ಗಂಗಾಂಬಿಕೆ, ಎಸಿಪಿ ಕೆ.ಎನ್‌.ರಮೇಶ್‌ ಸಂವಾದದಲ್ಲಿ ಪಾಲ್ಗೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ