ಆ್ಯಪ್ನಗರ

ಜೆಡಿಎಸ್‌ ಸಮಾವೇಶ: ವಾಹನ ಸವಾರರಿಗೆ ಟ್ರಾಫಿಕ್‌ ಜಾಮ್‌ ಬಿಸಿ

ಅರಮನೆ ಮೈದಾನದಲ್ಲಿ ಬುಧವಾರ ನಡೆದ ಜೆಡಿಎಸ್‌ ಸಮಾವೇಶದಿಂದಾಗಿ ಆ ಭಾಗದಲ್ಲಿ ಬೆಳಗ್ಗೆಯಿಂದ ಸಂಜೆವರೆಗೆ ವಾಹನ ಸವಾರರು ಟ್ರಾಫಿಕ್‌ ಜಾಮ್‌ನಲ್ಲಿ ಸಿಲುಕಿ ತೊಂದರೆಗೀಡಾದರು.

Vijaya Karnataka 31 Jan 2019, 5:00 am
ಬೆಂಗಳೂರು: ಅರಮನೆ ಮೈದಾನದಲ್ಲಿ ಬುಧವಾರ ನಡೆದ ಜೆಡಿಎಸ್‌ ಸಮಾವೇಶದಿಂದಾಗಿ ಆ ಭಾಗದಲ್ಲಿ ಬೆಳಗ್ಗೆಯಿಂದ ಸಂಜೆವರೆಗೆ ವಾಹನ ಸವಾರರು ಟ್ರಾಫಿಕ್‌ ಜಾಮ್‌ನಲ್ಲಿ ಸಿಲುಕಿ ತೊಂದರೆಗೀಡಾದರು.
Vijaya Karnataka Web IMG-20190130-WA0039


ಸಮಾವೇಶ ಬೆಳಗ್ಗೆ 11ಕ್ಕೆ ನಿಗದಿಯಾಗಿದ್ದರಿಂದ 10 ಗಂಟೆಯಿಂದಲೇ ಅರಮನೆ ಮೈದಾನಕ್ಕೆ ಬಸ್‌, ಕಾರು, ಜೀಪ್‌ಗಳಲ್ಲಿ ಜೆಡಿಎಸ್‌ ಕಾರ್ಯಕರ್ತರು ಆಗಮಿಸಲಾರಂಭಿಸಿದರು. ಮೈದಾನದ ಒಳಗೆ ವಾಹನ ನಿಲುಗಡೆಗೆ ಪ್ರತ್ಯೇಕ ಜಾಗ ಮೀಸಲಿಡಲಾಗಿತ್ತು. ನೂರಾರು ಬಸ್‌, ಕಾರ್‌ಗಳು ಒಂದೇ ಬಾರಿ ಮೇಖ್ರಿ ವೃತ್ತದ ತೆರಳಿದ ಪರಿಣಾಮ ಸಂಚಾರ ವ್ಯತ್ಯಯಗೊಂಡಿತು. ಬಳ್ಳಾರಿ ರಸ್ತೆಯ ಹಾಗೂ ಜಯಮಹಲ್‌ ರಸ್ತೆ ಮೂಲಕ ಸಾಗಿ ಬಂದ ವಾಹನಗಳ ಮಧ್ಯೆ ಸಿಲುಕಿದ ಸಾರ್ವಜನಿಕರು ಪರದಾಡಿದರು.

ಮಧ್ಯಾಹ್ನದ ವೇಳೆಗೆ ಸಮಾವೇಶ ಮುಕ್ತಾಯ ಕಂಡರೂ, ಸಂಜೆ 5ರ ವರೆಗೂ ಆ ಭಾಗದಲ್ಲಿ ವಾಹನ ಸಂಚಾರ ವ್ಯತ್ಯಯಕ್ಕೆ ಕಾರಣವಾಯಿತು. ಇದರ ಬೆನ್ನಲ್ಲೇ ಕಚೇರಿ ಬಿಡುವ ಸಮಯದಲ್ಲಿ ಕಾಣಸಿಗುವ ವಾಹನ ದಟ್ಟಣೆ ಮತ್ತೆರಡು ಗಂಟೆ ವಿಸ್ತರಿಸುವಂತಾಯಿತು. ಬಿಎಂಟಿಸಿ, ಕೆಎಸ್‌ಆರ್‌ಟಿಸಿ ಬಸ್‌ ಸಹಿತ ಬಹುತೇಕ ಎಲ್ಲಾ ವಾಹನಗಳು ಆಮೆ ವೇಗದಲ್ಲಿ ಸಂಚರಿಸುವಂತಾಯಿತು. ಇದೇ ಹಾದಿಯಲ್ಲಿ ನಗರದೊಳಕ್ಕೆ ರೋಗಿಗಳನ್ನು ಕರೆದೊಯ್ಯುವ ಆಂಬ್ಯುಲೆನ್ಸ್‌ ವಾಹನಗಳು ಟ್ರಾಫಿಕ್‌ನಲ್ಲಿ ಸಿಲುಕಿದವು.

ಬದಲಿ ಮಾರ್ಗ ಇಲ್ಲದೆ ಪರದಾಟ: ಕಳೆದೆರಡು ವರ್ಷದಿಂದ ಅರಮನೆ ಮೈದಾನದಲ್ಲಿ ನಡೆಯುವ ದೊಡ್ಡ ಕಾರ್ಯಕ್ರಮಗಳ ಮುನ್ನ ಸಂಚಾರ ನಿಯಂತ್ರಣಕ್ಕೆ ಪೊಲೀಸರು ಮುನ್ನೆಚ್ಚರಿಕೆ ವಹಿಸುತ್ತಿದ್ದಾರೆ. ಆದರೆ, ಜೆಡಿಎಸ್‌ ಸಮಾವೇಶದ ಹಿನ್ನೆಲೆಯಲ್ಲಿ ಯಾವ ಕ್ರಮವನ್ನೂ ಕೈಗೊಳ್ಳದಿದ್ದದ್ದು ಕಂಡುಬಂತು. ಬದಲಿ ಮಾರ್ಗದಲ್ಲಿ ತೆರಳಲು ಸೂಚನೆ ಇರಲಿಲ್ಲ. ಪ್ರಮುಖ ರಸ್ತೆ, ಜಂಕ್ಷನ್‌ಗಳಲ್ಲಿ ಪೊಲೀಸರು ಇದ್ದರಾದರೂ, ದಟ್ಟಣೆಯಿಂದಾಗಿ ವಾಹನಗಳ ಸರಾಗ ಸಂಚಾರಕ್ಕೆ ಅವಕಾಶ ಮಾಡಿಕೊಡಲು ಸಾಧ್ಯವಾಗಲಿಲ್ಲ. ಇದು ಸಂಚಾರ ಪೊಲೀಸರ ವೈಫಲ್ಯಕ್ಕೆ ನಿದರ್ಶನ ಎಂಬುದಾಗಿ ಸಾರ್ವಜನಿಕರೊಬ್ಬರು ಪ್ರತಿಕ್ರಿಯಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ