ಬೆಂಗಳೂರು: ಎಫ್ಡಿಎ ಕೆಲಸ ಕೊಡಿಸುವುದಾಗಿ ನಂಬಿಸಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಉಪ ಕಾರ್ಯದರ್ಶಿ ರಾಮಚಂದ್ರಯ್ಯ ಎಂಬುವರು 24 ಲಕ್ಷ ರೂ. ಪಡೆದಿದ್ದಾರೆಂದು ಆರೋಪಿಸಿ ವಿಧಾನಸೌಧ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಮನಗರದ ಚನ್ನಪಟ್ಟಣ ಮೂಲದ ಶ್ರೀಕಂಠಯ್ಯ ಎಂಬುವರು ಜ.11ರಂದು ದೂರು ದಾಖಲಿಸಿದ್ದಾರೆ.
''ನನ್ನ ಸಹೋದರಿ ಅಂಜನಾ ಅವರಿಗೆ ಅಂಬೇಡ್ಕರ್ ನಿಗಮ ಮತ್ತು ದೇವರಾಜ ಅರಸು ನಿಗಮದಲ್ಲಿ ಎಫ್ಡಿಎ ಹುದ್ದೆ ಕೊಡಿಸುವುದಾಗಿ ನಂಬಿಸಿ, ನನ್ನಿಂದ ಹಾಗೂ ಸಂಬಂಧಿಕರಾದ ಸತೀಶ, ಪುಟ್ಟತಾಯಮ್ಮ ಮತ್ತು ಅಭಿಷೇಕ್ ಅವರಿಂದ ಮಧ್ಯವರ್ತಿ ಲಕ್ಷ್ಮೇನಾರಾಯಣ ಎಂಬುವರ ಮೂಲಕ ವಿಕಾಸಸೌಧಲ್ಲಿ ಕೆಲಸ ಮಾಡುತ್ತಿದ್ದ ಉಪ ಕಾರ್ಯದರ್ಶಿ ರಾಮಚಂದ್ರಯ್ಯ, ತಲಾ 6 ಲಕ್ಷ ರೂ.ನಂತೆ ಒಟ್ಟು 24 ಲಕ್ಷ ರೂ. ಪಡೆದಿದ್ದಾರೆ. ಆದರೆ, ಕೆಲಸ ಕೊಡಿಸದೇ ಮೋಸ ಮಾಡಿದ್ದಾರೆ,'' ಎಂದು ಶ್ರೀಕಂಠಯ್ಯ ದೂರಿನಲ್ಲಿ ಕೋರಿದ್ದಾರೆ.
''ಅಧಿಕಾರಿ ಈಗ ವಿಕಾಸಸೌಧದಲ್ಲಿ ಕೆಲಸ ಮಾಡುತ್ತಿಲ್ಲ. ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ,'' ಎಂದು ವಿಧಾನಸೌಧ ಪೊಲೀಸರು ತಿಳಿಸಿದ್ದಾರೆ.