ಆ್ಯಪ್ನಗರ

ಕನ್ನಡ ಶಾಲೆ ಉಳಿಸಿಕೊಳ್ಳಲು ಕೋರ್ಟ್‌ ಮೆಟ್ಟಿಲು ಹತ್ತೋದಕ್ಕೂ ಸಿದ್ಧ: ಕಸಾಪ ಅಧ್ಯಕ್ಷ ಡಾ. ಮಹೇಶ ಜೋಶಿ

ಕನ್ನಡ ಸಾಹಿತ್ಯ ಪರಿಷತ್ತು ಯಾವುದೇ ಕಾರಣಕ್ಕೂ ಕನ್ನಡ ಶಾಲೆಗಳನ್ನು ಮುಚ್ಚುವುದನ್ನು ಸಹಿಸುವುದಿಲ್ಲ. ಪ್ರಸ್ತುತ ಚಿಕ್ಕಪೇಟೆಯಲ್ಲಿ ಇರುವ ಸರಕಾರಿ ಪ್ರೌಢಶಾಲೆ ಉಳಿಸಿಕೊಳ್ಳುವ ಅವಶ್ಯಕತೆ ಜೊತೆ ನಾಡಿನಲ್ಲಿ ಯಾವುದೇ ಕನ್ನಡ ಶಾಲೆಗಳನ್ನು ಮುಚ್ಚುವ ಹುಚ್ಚು ಪ್ರಯತ್ನಕ್ಕೆ ಸರಕಾರ ಮುಂದಾಗಬಾರದು. ತಕ್ಷಣದಲ್ಲಿ ಬೆಂಗಳೂರು ಜಿಲ್ಲಾಡಳಿತ ಎಚ್ಚೆತ್ತುಕೊಳ್ಳಬೇಕು.ಈಗಾಗಲೇ ಚಿಕ್ಕಪೇಟೆಯ ಸರಕಾರಿ ಪ್ರೌಢಶಾಲೆಯನ್ನು ಮುಚ್ಚಲು ಹೊರಡಿಸಿರುವ ಆದೇಶವನ್ನು ವಾಪಸ್ ಪಡೆಯಬೇಕು. ಜೀರ್ಣವಾಗಿದ್ದ ಕಟ್ಟಡವನ್ನು ಹೊಸದಾಗಿ ಕಟ್ಟಿ ಪೂರ್ತಿ ಕಟ್ಟಡವನ್ನು ಶಾಲೆ ನಡೆಸುವುದಕ್ಕೆ ನೀಡಬೇಕು ಎಂದು ಮಹೇಶ್ ಜೋಶಿ ಆಗ್ರಹಿಸಿದ್ದಾರೆ.

Edited byದಿಲೀಪ್ ಡಿ. ಆರ್. | Vijaya Karnataka Web 19 Aug 2022, 12:38 pm

ಹೈಲೈಟ್ಸ್‌:

  • ಸರಕಾರಿ ಕನ್ನಡ ಶಾಲೆಯ ಜಾಗ ಮಾರಾಟಕ್ಕೆ ಇಟ್ಟಿರುವ ಕ್ರಮ ಅಕ್ಷಮ್ಯ
  • ಬೆಂಗಳೂರಿನ ಚಿಕ್ಕಪೇಟೆ ಒಟಿಸಿ ರಸ್ತೆಯಲ್ಲಿ ಇರುವ ಶಾಲೆ
  • 1945ರಲ್ಲಿ ಆರಂಭವಾಗಿದ್ದ ಸರಕಾರಿ ಪ್ರೌಢ ಶಾಲೆ
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web mahesh joshi
ಕನ್ನಡ ಶಾಲೆ ಉಳಿಸಿಕೊಳ್ಳಲು ಕೋರ್ಟ್‌ ಮೆಟ್ಟಿಲು ಹತ್ತೋದಕ್ಕೂ ಸಿದ್ಧ: ಕಸಾಪ ಅಧ್ಯಕ್ಷ ಡಾ. ಮಹೇಶ ಜೋಶಿ
ಬೆಂಗಳೂರು: ಕನ್ನಡ ಶಾಲೆಗಳನ್ನು ಉಳಿಸಿ ಕನ್ನಡ ಭಾಷೆಯನ್ನು ಬೆಳೆಸಬೇಕು ಎನ್ನುವ ಮೂಲ ಧ್ಯೇಯವನ್ನು ಹೊಂದಿರುವ ಕನ್ನಡ ಸಾಹಿತ್ಯ ಪರಿಷತ್ತು ಯಾವುದೇ ಸಬೂಬು ಹೇಳಿ ಕನ್ನಡ ಶಾಲೆಗಳನ್ನು ಮುಚ್ಚುವುದನ್ನು ಸಹಿಸುವುದಿಲ್ಲ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಡೋಜ ಡಾ. ಮಹೇಶ ಜೋಶಿ ಹೇಳಿದ್ದಾರೆ. ಸರಕಾರ ಕನ್ನಡ ಶಾಲೆಗಳ ಬಗ್ಗೆ ಅಸಡ್ಡೆ ತೋರುವುದು ಆಗಾಗ ಕಂಡು ಬರುತ್ತಿದ್ದು, ಈ ಕ್ರಮವನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನ ಚಿಕ್ಕಪೇಟೆ ಒಟಿಸಿ ರಸ್ತೆಯಲ್ಲಿ ಇರುವ 1945ರಲ್ಲಿ ಆರಂಭವಾದ ಸರಕಾರಿ ಪ್ರೌಢ ಶಾಲೆಯನ್ನು ಶಿಕ್ಷಣ ಇಲಾಖೆಯ ತಕರಾರಿನ ಮಧ್ಯವೂ ಜಿಲ್ಲಾಡಳಿತ ಮುಚ್ಚಲು ಹೊರಟಿರುವುದು ಅಕ್ಷಮ್ಯ. ಸ್ವತಂತ್ರ ಪೂರ್ವದ ಶಾಲೆಯನ್ನು ಕಟ್ದಡದ ಸಮೇತ ಮಾರಾಟ ಮಾಡಿ ಬೇರೆಯವರಿಗೆ ಪರಭಾರೆ ಮಾಡಲು ಹೊರಟಿರುವುದನ್ನು ಯಾವೊಬ್ಬ ಕನ್ನಡಿಗನೂ ಸಹಿಸಲು ಸಾಧ್ಯವಿಲ್ಲ. ಬಹುಕೋಟಿ ಮೌಲ್ಯದ ಚಿಕ್ಕಪೇಟೆ ಸರಕಾರಿ ಪ್ರೌಢ ಶಾಲೆ ಇರುವ ಜಾಗ ಸರಕಾರಕ್ಕೆ ಕನ್ನಡ ಶಾಲೆ ನಡೆಸಲು ದಾನಿಗಳು ನೀಡಿದ್ದು. ಪ್ರಸಕ್ತ ಜಾಗವನ್ನು ಬೆಂಗಳೂರು ನಗರ ಜಿಲ್ಲಾಧಿಕಾರಿಗಳು ಕಂದಾಯ ಇಲಾಖೆಗೆ ಮಾರಾಟ ಮಾಡುವಂತೆ ಅಥವಾ ಹರಾಜು ಮಾಡುವಂತೆ ಪತ್ರ ಬರೆದಿದ್ದಾರೆ ಎನ್ನುವ ವರದಿ ಕನ್ನಡಿಗರಿಗೆ ಆತಂಕ ಉಂಟು ಮಾಡಿದೆ ಎಂದು ಮಹೇಶ್ ಜೋಶಿ ಹೇಳಿದ್ದಾರೆ.
250 ಮಕ್ಕಳಿಗೆ ಕೇವಲ 4 ಶಿಕ್ಷಕರು: ಮುಧೋಳ ರನ್ನ ಶಾಲೆಗೆ ಶಿಕ್ಷಕರ ಕೊರತೆ ನೀಗಿಸಲು ಕನ್ನಡ ಸಾಹಿತ್ಯ ಪರಿಷತ್ ಆಗ್ರಹ
ಬೆಂಗಳೂರು ನಗರ ಜಿಲ್ಲಾಡಳಿತದ ಈ ಅಸಂಬದ್ಧ ಕ್ರಮವನ್ನು ವಿರೋಧಿಸುವುದರ ಜೊತೆಗೆ ಕನ್ನಡ ಶಾಲೆಗಳ ಉಳಿವಿಗೆ ಸರಕಾರ ಮುತುವರ್ಜಿ ವಹಿಸುವ ಅವಶ್ಯಕತೆ ಇದೆ. ತಕ್ಷಣದಲ್ಲಿ ಸರಕಾರ ಬೆಂಗಳೂರು ಉತ್ತರ ತಾಲೂಕು ತಹಸೀಲ್ದಾರ್ ಹಾಗೂ ಲೋಕೋಪಯೋಗಿ ಇಲಾಖೆಯ ಅಭಿಯಂತರು ಶಾಲೆ ಇರುವ ಜಾಗದ ಮೌಲ್ಯಮಾಪನ ಮಾಡಿರುವ ಬಗ್ಗೆ ವರದಿ ಪ್ರಕಟವಾಗುತ್ತಿದೆ. 77 ವರ್ಷ ಇತಿಹಾಸ ಇರುವ ಪುರಾತನ ಶಾಲೆಯ ಮೇಲೆ ಜಿಲ್ಲಾಡಳಿತದ ಗಧಾ ಪ್ರಹಾರವನ್ನು ಕನ್ನಡ ಸಾಹಿತ್ಯ ಪರಿಷತ್ತು ಸಹಿಸುವುದಿಲ್ಲ ಎಂದು ನಾಡೋಜ ಡಾ. ಮಹೇಶ ಜೋಶಿ ಗುಡುಗಿದ್ದಾರೆ.

ಶಿಥಿಲಾವಸ್ಥೆಯಲ್ಲಿ ಇದ್ದ ಶಾಲೆಗೆ ನೂತನ ಕಟ್ಟಡವನ್ನು ನಿರ್ಮಾಣ ಮಾಡಬೇಕಿದ್ದ ಸರಕಾರ, ಇದ್ದ ಶಾಲೆ ಹಾಗೂ ಅದಕ್ಕೆ ಸಂಬಂಧ ಪಟ್ಟ ಆಸ್ತಿಯನ್ನು ಉಳಿಸಿಕೊಳ್ಳುವ ಬದಲು ಮಾರಾಟ ಮಾಡಲು ಸಜ್ಜಾಗುವ ಮೂಲಕ ಯಾವ ಪುರುಷಾರ್ಥ ಸಾಧನೆ ಮಾಡಲು ಹೊರಟಿದೆ ಎಂದು ಮಹೇಶ ಜೋಶಿ ಪ್ರಶ್ನಿಸಿದ್ದಾರೆ.

1979ರಲ್ಲಿ ಖಾಸಗಿ ಸಂಸ್ಥೆಯವರು ಸರಕಾರಕ್ಕೆ ಮನವಿ ಸಲ್ಲಿಸಿ ಶಾಲೆಯ ಕಟ್ಟಡವನ್ನು ದುರಸ್ತಿ ಮಾಡುವಂತೆ ಮನವಿ ಮಾಡಿತ್ತು. ಅದಕ್ಕೆ ಕಾರಣ ಶಾಲೆಯ ಕೆಲವು ಭಾಗವನ್ನು ಬಾಡಿಗೆ ಆಧಾರದಲ್ಲಿ ಖಾಸಗಿ ಸಂಸ್ಥೆಗೆ ನೀಡಲಾಗಿತ್ತು. ಆ ಮೂಲಕ ಪ್ರತಿ ತಿಂಗಳಿಗೆ 16,350 ರೂ ಪ್ರಕಾರ ಕಳೆದ 20 ವರ್ಷಗಳಿಂದ ಬಾಡಿಗೆ ವಸೂಲು ಮಾಡಲಾಗಿದೆ ಎನ್ನಲಾಗುತ್ತಿದೆ. ಸರಕಾರಕ್ಕೆ ಕನ್ನಡ ಶಾಲೆಗಿಂತ ಹೆಚ್ಚಾಗಿ ಆ ಜಾಗದ ಆದಾಯ ಮುಖ್ಯವೇ..? ಎನ್ನುವ ಪ್ರಶ್ನೆ ಪತ್ರಿಯೊಬ್ಬ ಸ್ವಾಭಿಮಾನಿ ಕನ್ನಡಿಗನಿಗೂ ಏಳದೆ ಇರಲಾರದು ಎಂದಿದ್ದಾರೆ.

ಏ.5ರಂದು ಕನ್ನಡ ಶಾಲೆಯ ಉಳಿವಿಗಾಗಿ ಎಸ್‌ಎಲ್‌ ಬೈರಪ್ಪ ಅಧ್ಯಕ್ಷತೆಯಲ್ಲಿ ‘ದುಂಡು ಮೇಜಿನ ಸಭೆ’
ಕನ್ನಡ ಶಾಲೆಗಳ ಉಳಿಸಿ - ಕನ್ನಡ ಬೆಳೆಸಿ ಎನ್ನುವ ಧ್ಯೇಯ ವಾಕ್ಯದೊಂದಿಗೆ ನಾಡಿನ ಹಿರಿಯ ಸಾಹಿತಿ ನಾಡೋಜ ಡಾ. ಎಸ್. ಎಲ್. ಬೈರಪ್ಪ ಅವರ ಅಧ್ಯಕ್ಷತೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ನಾಡಿನ ಪ್ರಮುಖ ಶಿಕ್ಷಣ ತಜ್ಞರು, ಸಾಹಿತಿಗಳು, ಮಠಾಧೀಶರು ಸೇರಿದ೦ತೆ ಪ್ರಮುಖರ ದುಂಡು ಮೇಜಿನ ಸಭೆಯನ್ನು ನಡೆಸಿತ್ತು. ಕನ್ನಡ ಶಾಲೆ ಉಳಿಸಿ ಬೆಳಸಲು ಕೆಲವು ಪ್ರಮುಖ ಮಾರ್ಗದರ್ಶನವನ್ನು ಸರಕಾರಕ್ಕೆ ನೀಡಿತ್ತು. ಕನ್ನಡ ಶಾಲೆಗಳಲ್ಲಿ ಮಕ್ಕಳ ಕೊರತೆ ಇದೆ. ಅದಕ್ಕೆ ಶಾಲೆಗಳನ್ನು ಮುಚ್ಚುವ ಅನಿರ್ವಾಯತೆ ಇದೆ ಎಂದು ಹೇಳಿಕೊಳ್ಳುತ್ತಿರುವ ಸರಕಾರ ಹಾಗೂ ಶಿಕ್ಷಣ ಇಲಾಖೆ ಈಗ ಹೊಸದೊಂದು ವರಾತ ತೆಗೆದು ಕನ್ನಡ ಶಾಲೆಗಳಿಗೆ ಇತಿಶ್ರೀ ಹಾಡಲು ಮುಂದಾಗಿದೆ ಎಂದು ಮಹೇಶ ಜೋಷಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಕನ್ನಡ ಸಾಹಿತ್ಯ ಪರಿಷತ್ತು ಯಾವುದೇ ಕಾರಣಕ್ಕೂ ಕನ್ನಡ ಶಾಲೆಗಳನ್ನು ಮುಚ್ಚುವುದನ್ನು ಸಹಿಸುವುದಿಲ್ಲ. ಪ್ರಸ್ತುತ ಚಿಕ್ಕಪೇಟೆಯಲ್ಲಿ ಇರುವ ಸರಕಾರಿ ಪ್ರೌಢಶಾಲೆ ಉಳಿಸಿಕೊಳ್ಳುವ ಅವಶ್ಯಕತೆ ಜೊತೆ ನಾಡಿನಲ್ಲಿ ಯಾವುದೇ ಕನ್ನಡ ಶಾಲೆಗಳನ್ನು ಮುಚ್ಚುವ ಹುಚ್ಚು ಪ್ರಯತ್ನಕ್ಕೆ ಸರಕಾರ ಮುಂದಾಗಬಾರದು. ತಕ್ಷಣದಲ್ಲಿ ಬೆಂಗಳೂರು ಜಿಲ್ಲಾಡಳಿತ ಎಚ್ಚೆತ್ತುಕೊಳ್ಳಬೇಕು.
ಈಗಾಗಲೇ ಚಿಕ್ಕಪೇಟೆಯ ಸರಕಾರಿ ಪ್ರೌಢಶಾಲೆಯನ್ನು ಮುಚ್ಚಲು ಹೊರಡಿಸಿರುವ ಆದೇಶವನ್ನು ವಾಪಸ್ ಪಡೆಯಬೇಕು. ಜೀರ್ಣವಾಗಿದ್ದ ಕಟ್ಟಡವನ್ನು ಹೊಸದಾಗಿ ಕಟ್ಟಿ ಪೂರ್ತಿ ಕಟ್ಟಡವನ್ನು ಶಾಲೆ ನಡೆಸುವುದಕ್ಕೆ ನೀಡಬೇಕು. ಈ ಕುರಿತು ಕನ್ನಡ ಸಾಹಿತ್ಯ ಪರಿಷತ್ತು ಸರಕಾರ ಹಾಗೂ ಶಿಕ್ಷಣ ಇಲಾಖೆಗೆ ಎಚ್ಚರಿಕೆ ನೀಡಲಿದೆ. ಒಂದು ವೇಳೆ ಅವಶ್ಯ ಬಿದ್ದರೆ ಕನ್ನಡ ಶಾಲೆಗಳ ಉಳಿವಿಗಾಗಿ ನಿವೃತ್ತ ನ್ಯಾಯಾಧಿಶರ ಸಲಹೆ ಪಡೆದು ಕಾನೂನು ಹೋರಾಟ ನಡೆಸಲಿದೆ. ಕನ್ನಡ ಉಳಿಸಿ ಬೆಳೆಸಬೇಕಾದರೆ ಕನ್ನಡ ಶಾಲೆಗಳನ್ನು ಉಳಿಸಿಕೊಳ್ಳುವುದು ಮುಖ್ಯವಾಗಿದೆ. ಅದಕ್ಕೆ ಕನ್ನಡ ಸಾಹಿತ್ಯ ಪರಿಷತ್ತು ನ್ಯಾಯಾಲಯದ ಮೊರೆ ಹೋಗುವುದು ಅನಿವಾರ್ಯವಾಗುವುದು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಡೋಜ ಡಾ. ಮಹೇಶ ಜೋಶಿ ಎಚ್ಚರಿಸಿದ್ದಾರೆ.
ಲೇಖಕರ ಬಗ್ಗೆ
ದಿಲೀಪ್ ಡಿ. ಆರ್.
ವಿಜಯ ಕರ್ನಾಟಕದ ಡಿಜಿಟಲ್ ಪತ್ರಕರ್ತನಾಗಿ 2019ರ ಆಗಸ್ಟ್‌ನಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡ ಟಿವಿ ನ್ಯೂಸ್ ವಾಹಿನಿಗಳಲ್ಲಿ 14 ವರ್ಷಕ್ಕೂ ಹೆಚ್ಚು ಕಾಲ ವಿವಿಧ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿದ ಅನುಭವ ಹೊಂದಿದ್ದಾರೆ. ರಾಜಕೀಯ, ವಿಜ್ಞಾನ-ತಂತ್ರಜ್ಞಾನ ರಂಗಗಳು ಇವರ ಆಸಕ್ತಿಯ ವಿಷಯಗಳು. ಇದಲ್ಲದೆ ಹಾಸ್ಯ, ವಿಡಂಬನಾತ್ಮಕ ಬರಹ, ವ್ಯಕ್ತಿ ಚಿತ್ರ, ಜೀವ ಪರ ನಿಲುವಿನ ಸಂವೇದನಾತ್ಮಕ ಲೇಖನಗಳನ್ನು ಹೆಚ್ಚಾಗಿ ಬರೆಯುತ್ತಾರೆ. ಕಾಡು, ಹಸಿರು, ಬೆಟ್ಟ ಗುಡ್ಡಗಳ ಚಾರಣ ಮಾಡುವುದು ಇವರ ಹವ್ಯಾಸ.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ