ಆ್ಯಪ್ನಗರ

ನಿಷ್ಕ್ರಿಯತೆ ಮುಂದುವರಿದರೆ ಮೊಟ್ಟೆ ಏಟು: ಕಿರಣ್‌ ಮಜುಂದಾರ್‌ ಷಾ

ನಿಷ್ಕ್ರಿಯತೆ ಮುಂದುವರಿದರೆ ಮೊಟ್ಟೆ ಏಟು (ಪ್ರಮುಖ) ಒಟ್ಟು ಪದಗಳ ಸಂಖ್ಯೆ(266) -ಕಿರಣ್‌ ಮಜುಂದಾರ್‌ ಷಾ- ವಿಕ ಸುದ್ದಿಲೋಕ ಬೆಂಗಳೂರು : ರಾಜಧಾನಿಯಲ್ಲಿ ...

ವಿಕ ಸುದ್ದಿಲೋಕ 25 May 2016, 4:00 am

-ವಿಷನ್‌ ಗ್ರೂಪ್‌ ಸದಸ್ಯೆ ಕಿರಣ್‌ ಮಜುಂದಾರ್‌ ಷಾ ಎಚ್ಚರಿಕೆ-

Vijaya Karnataka Web kiran mazumdar shah warning
ನಿಷ್ಕ್ರಿಯತೆ ಮುಂದುವರಿದರೆ ಮೊಟ್ಟೆ ಏಟು: ಕಿರಣ್‌ ಮಜುಂದಾರ್‌ ಷಾ


ಬೆಂಗಳೂರು : ರಾಜಧಾನಿಯಲ್ಲಿ ಮೂಲಸೌಕರ್ಯ ಕೊರತೆ ನೀಗಿಸದೇ ಇದ್ದರೆ ಬೇಸತ್ತ ಜನ ನಮ್ಮ ಮುಖಕ್ಕೆ ಮೊಟ್ಟೆ ಎಸೆಯುವ ದಿನ ದೂರವಿಲ್ಲ ಎಂದು ಬಯೋಕಾನ್‌ ಮುಖ್ಯಸ್ಥೆ, ಬೆಂಗಳೂರು ವಿಷನ್‌ ಗ್ರೂಪ್‌ನ ಸದಸ್ಯೆ ಕಿರಣ್‌ ಮಜುಂದಾರ್‌ ಷಾ, ಸರಕಾರವನ್ನು ಎಚ್ಚರಿಸಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ವಿಧಾನಸೌಧದಲ್ಲಿ ನಡೆದ ಬೆಂಗಳೂರು ವಿಷನ್‌ ಗ್ರೂಪ್‌ನ ಮೊದಲ ಸಭೆಯಲ್ಲಿ ಮಾತನಾಡಿದ ಷಾ, ಸರಕಾರ ಹಾಗೂ ಅಧಿಕಾರಿಗಳ ಕಾರ್ಯವೈಖರಿಗೆ ತೀವ್ರ ಅತೃಪ್ತಿ ವ್ಯಕ್ತಪಡಿಸಿದರು ಎಂದು ಗೊತ್ತಾಗಿದೆ. ''ಬೆಂಗಳೂರು ನಗರಕ್ಕೆ ಮೂಲಸೌಲಭ್ಯ ಕಲ್ಪಿಸುವ ಕೆಲಸ ನಿರೀಕ್ಷಿತ ಮಟ್ಟದಲ್ಲಿ ನಡೆಯುತ್ತಿಲ್ಲ. ವಿಷನ್‌ಗ್ರೂಪ್‌ ಸಭೆಯನ್ನೂ ಸರಿಯಾಗಿ ನಡೆಸುತ್ತಿಲ್ಲ. ಇದರಿಂದ ನಾಗರಿಕರು ಬೇಸರಗೊಂಡಿದ್ದು, ನಾವು ಎಚ್ಚೆತ್ತುಕೊಂಡು ಕಾಲಮಿತಿಯಲ್ಲಿ ಮೂಲಸೌಕರ್ಯ ಕಲ್ಪಿಸದೇ ಇದ್ದರೆ ಜನ ನಮ್ಮ ಮುಖಕ್ಕೆ ಮೊಟ್ಟೆ ಎಸೆಯುವ ದಿನಗಳನ್ನು ಎದುರಿಸಬೇಕಾದೀತು,'' ಎಂದು ಆತಂಕ ವ್ಯಕ್ತಪಡಿಸಿದರು ಎಂದು ತಿಳಿದುಬಂದಿದೆ.

ಸಭೆಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ''ಬೆಂಗಳೂರಿಗೆ ಮೂಲಸೌಕರ್ಯ ಕಲ್ಪಿಸುವ ಕಾಮಗಾರಿಗಳನ್ನು ವಿಳಂಬವಿಲ್ಲದೆ ಮಾಡಿ,'' ಎಂದು ಆದೇಶಿಸಿದರು.

ತಜ್ಞರ ಸಮಿತಿ

ಸಭೆ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಸಿದ್ದರಾಮಯ್ಯ, ''ಮುಂದಿನ 2-3 ವರ್ಷಗಳಲ್ಲಿ ಬೆಂಗಳೂರಿನ ಚಿತ್ರಣವನ್ನೇ ಬದಲಿಸಲು ಸರಕಾರ ಪಣತೊಟ್ಟಿದ್ದು, ವಿಷನ್‌ ಗ್ರೂಪ್‌ ಜತೆಯಲ್ಲಿ ತಜ್ಞರ ಸಮಿತಿ ರಚಿಸಲು ತೀರ್ಮಾನಿಸಲಾಗಿದೆ,''ಎಂದು ಹೇಳಿದರು.

''ರೂಪಿಸಿದ ಯೋಜನೆಗಳನ್ನು ಎರಡು ವರ್ಷಗಳ ಕಾಲಮಿತಿಯಲ್ಲಿ ಅನುಷ್ಠಾನ ಮಾಡಲಿದ್ದೇವೆ. ಕಾಮಗಾರಿಗಳು ಬಾಕಿ ಉಳಿದರೆ ಎರಡು ವರ್ಷದ ನಂತರ ಮರಳಿ ಅಧಿಕಾರಕ್ಕೆ ಬಂದಾಗ ಪೂರ್ಣಗೊಳಿಸುತ್ತೇವೆ,'' ಎಂದರು.

''ವಿಷನ್‌ ಗ್ರೂಪ್‌ನ ಮೊದಲ ಸಭೆ ನಡೆಸಿದ್ದೇವೆ. ವಿದೇಶ ಪ್ರವಾಸದಲ್ಲಿರುವ ಎನ್‌.ಆರ್‌. ನಾರಾಯಣ ಮೂರ್ತಿ, ಮೋಹನದಾಸ್‌ ಪೈ ಸಭೆಗೆ ಹಾಜರಾಗಿರಲಿಲ್ಲ. ಬೆಂಗಳೂರಿನ ಸಾರಿಗೆ ವ್ಯವಸ್ಥೆ, ಕಸ ವಿಲೇವಾರಿ, ಪೆರಿಫೆರಲ್‌ ರಿಂಗ್‌ರಸ್ತೆ, ಬಡವರಿಗೆ ಮನೆ, ಕುಡಿಯುವ ನೀರು ಒದಗಿಸುವ ಬಗ್ಗೆ ಚರ್ಚೆ ನಡೆಸಿದ್ದೇವೆ. ಮೂರು ತಿಂಗಳಿಗೊಮ್ಮೆ ವಿಷನ್‌ ಗ್ರೂಪ್‌ನ ಸಭೆ ನಡೆಸಿ, ಯೋಜನೆ ಅನುಷ್ಠಾನಕ್ಕೆ ಚುರುಕು ನೀಡುತ್ತೇವೆ,'' ಎಂದರು.

''ಬೆಂಗಳೂರು ಸಬ್‌ಅರ್ಬನ್‌ ರೈಲು ಯೋಜನೆಗೆ ಕೇಂದ್ರದ ಅನುಮತಿ ಸಿಕ್ಕಿದ್ದು, ರಾಜ್ಯ ಸರಕಾರ 1000 ಕೋಟಿ ರೂ. ನೀಡಲಿದೆ. 11880 ಕೋಟಿ ರೂ. ವೆಚ್ಚದಲ್ಲಿ 65 ಕಿ.ಮೀ. ಉದ್ದ ಪೆರಿಫೆರಲ್‌ ರಿಂಗ್‌ರಸ್ತೆ ನಿರ್ಮಿಸುವ ಯೋಜನೆ ಇದೆ. ಭೂಸ್ವಾಧೀನಕ್ಕೆ 8000 ಕೋಟಿ ರೂ. ಅಗತ್ಯವಿದೆ. ಪರ್ಯಾಯ ಮೂಲದಿಂದ ಸಂಪನ್ಮೂಲ ಕ್ರೋಡೀಕರಣ ಮಾಡಲು ಚಿಂತಿಸಲಾಗಿದೆ. ರಿಂಗ್‌ರಸ್ತೆಗೆ ಟೋಲ್‌ ವಿಧಿಸುವ ಬಗ್ಗೆ ಚಿಂತನೆ ನಡೆದಿದೆ,'' ಎಂದರು.

''ಕೆರೆ ಒತ್ತುವರಿ ಕುರಿತು ಸಭೆಯಲ್ಲಿ ಚರ್ಚೆ ನಡೆದಿದ್ದು, ಎಲ್ಲಾ ಒತ್ತುವರಿದಾರರನ್ನು ತೆರವುಗೊಳಿಸಲಾಗುವುದು. ಒತ್ತುವರಿದಾರಿಗೆ ನೋಟಿಸ್‌ ನೀಡಲು ಸರಕಾರ ತೀರ್ಮಾನಿಸಿದೆ,'' ಎಂದು ಹೇಳಿದರು.

''ನಗರದಲ್ಲಿ ಏಳು ಸಾವಿರ ಎಕರೆ ಸರಕಾರಿ ಭೂಮಿಯನ್ನು ಒತ್ತುವರಿದಾರರಿಂದ ವಶಪಡಿಸಿಕೊಳ್ಳಲಾಗಿದೆ. ಈ ಪ್ರದೇಶದಲ್ಲಿ ಬಡವರಿಗೆ ವಸತಿ ಯೋಜನೆಗಳನ್ನು ನಿರ್ಮಿಸಲು ಯೋಜನೆ ರೂಪಿಸಲಾಗುವುದು,'' ಎಂದು ಹೇಳಿದರು.

ಸಭೆಯಲ್ಲಿ ಉದ್ಯಮಿ ಅಜೀಂ ಪ್ರೇಮ್‌ಜಿ, ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್‌, ಮೇಯರ್‌ ಮಂಜುನಾಥ ರೆಡ್ಡಿ, ಉಪಮೇಯರ್‌ ಹೇಮಲತಾ ಗೋಪಾಲಯ್ಯ ಮೊದಲಾದವರು ಪಾಲ್ಗೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ