ಆ್ಯಪ್ನಗರ

ಗಬ್ಬೆದ್ದು ನಾರುತ್ತಿದೆ ಮೆಜೆಸ್ಟಿಕ್‌ ಕೆಎಸ್ಸಾರ್ಟಿಸಿ ನಿಲ್ದಾಣ

ಅಂತರಾಜ್ಯ ಟರ್ಮಿನಲ್‌ 1 ಬಸ್‌ ನಿಲ್ದಾಣದಲ್ಲಿ ಎಲೆ ಅಡಿಕೆ, ಗುಟ್ಕಾ ಕಲೆಗಳು ಎಲ್ಲೆಂದರಲ್ಲಿ ಕಾಣ ಸಿಗುತ್ತವೆ. ಪ್ರಯಾಣಿಕರು ಕುಳಿತುಕೊಳ್ಳುವ ಆಸನಗಳು ಧೂಳು, ಹಕ್ಕಿಗಳ ಪಿಕ್ಕೆಗಳಿಂದ ತುಂಬಿದ್ದು, ಕುಳಿತುಕೊಳ್ಳಲು ಮುಜುಗರವಾಗುವಂತಿವೆ. ನಿತ್ಯ ಸಾವಿರಾರು ಮಂದಿ ಬಳಕೆ ಶೌಚಾಲಯ ನಿರ್ವಹಣೆ ಇಲ್ಲದೆ ಗಬ್ಬು ನಾರುತ್ತಿವೆ.

Vijaya Karnataka 10 Sep 2019, 8:07 am
ರವಿಕುಮಾರ್‌ ಬೆಟ್ಟದಪುರ ಬೆಂಗಳೂರು
Vijaya Karnataka Web ksrtc

ರಾಜಧಾನಿ ಬೆಂಗಳೂರಿನಿಂದ ರಾಜ್ಯದ ಮೂಲೆ ಮೂಲೆಗೆ ಸಂಪರ್ಕ ಕಲ್ಪಿಸುವ ಮೆಜೆಸ್ಟಿಕ್‌ನ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣ ಜಿಲ್ಲಾ ಕೇಂದ್ರದ ನಿಲ್ದಾಣಕ್ಕಿಂತಲೂ ಕಡೆಯಾಗಿದೆ. ನಿತ್ಯ ಲಕ್ಷಾಂತರ ಪ್ರಯಾಣಿಕರು ಬಂದು ಹೋಗುವ ಇಲ್ಲಿ ಸೌಲಭ್ಯಗಳ ಕೊರತೆ ಕಾಣಿಸುತ್ತಿದೆ.

ರಾಜ್ಯದ ನಾನಾ ಮೂಲೆಗಳಿಗೆ ಇಲ್ಲಿಂದ ಬಸ್‌ ಹೊರಡುವುದರಿಂದ ಗ್ರಾಮೀಣ ಜನರು ಸೇರಿದಂತೆ ಹೊಸಬರು ಈ ನಿಲ್ದಾಣದ ಮೂಲಕ ಪ್ರಯಾಣಿಸುತ್ತಾರೆ. ಬಹುತೇಕರಿಗೆ ಯಾವ ಬಸ್‌ ಯಾವ ಪ್ಲಾಟ್‌ಫಾರಂನಲ್ಲಿ ನಿಲ್ಲುತ್ತದೆ. ಎಷ್ಟು ಹೊತ್ತಿಗೆ ಹೊರಡುತ್ತದೆ ಎಂಬ ಮಾಹಿತಿ ಇರುವುದಿಲ್ಲ. ಇಂತಹ ಪ್ರಯಾಣಿಕರಿಗೆ ಮಾಹಿತಿ ನೀಡಲೆಂದೇ ಬಸ್‌ ನಿಲ್ದಾಣದ ಪ್ರವೇಶ ದ್ವಾರದಲ್ಲೇ ಉದ್ಘೋಷಕರನ್ನು ನೇಮಿಸಲಾಗಿದೆ. ಆದರೆ, ಅವರು ಬಹುತೇಕ ಸಮಯ ಸೀಟಿನಲ್ಲೇ ಇರುವುದಿಲ್ಲ. ಮೈಕ್‌ ಮತ್ತು ಸ್ಪೀಕರ್‌ಗಳು ಪ್ರದರ್ಶನಕ್ಕಷ್ಟೇ ಸೀಮಿತವಾಗಿವೆ. ಪ್ರಯಾಣಿಕರು ಕೂರುವ ಆಸನದ ಮೇಲ್ಬಾಗದಲ್ಲಿ ಜಾಹೀರಾತು ಫಲಕ ತೂಗುಹಾಕಿದ್ದು, ಇದು ಈಗಲೋ, ಆಗಲೋ ಬೀಳುವಂತಿದೆ.

ಸ್ವಚ್ಛವಿಲ್ಲದ ಆಸನಗಳು:

ಅಂತರಾಜ್ಯ ಟರ್ಮಿನಲ್‌ 1 ಬಸ್‌ ನಿಲ್ದಾಣದಲ್ಲಿ ಎಲೆ ಅಡಿಕೆ, ಗುಟ್ಕಾ ಕಲೆಗಳು ಎಲ್ಲೆಂದರಲ್ಲಿ ಕಾಣ ಸಿಗುತ್ತವೆ. ಪ್ರಯಾಣಿಕರು ಕುಳಿತುಕೊಳ್ಳುವ ಆಸನಗಳು ಧೂಳು, ಹಕ್ಕಿಗಳ ಪಿಕ್ಕೆಗಳಿಂದ ತುಂಬಿದ್ದು, ಕುಳಿತುಕೊಳ್ಳಲು ಮುಜುಗರವಾಗುವಂತಿವೆ. ನಿತ್ಯ ಸಾವಿರಾರು ಮಂದಿ ಬಳಕೆ ಶೌಚಾಲಯ ನಿರ್ವಹಣೆ ಇಲ್ಲದೆ ಗಬ್ಬು ನಾರುತ್ತಿವೆ.

ಇದ್ದರೂ ಇಲ್ಲದಂತಿರುವ ಡಿಜಿಟಲ್‌ ಬೋರ್ಡ್‌:
ಅಂತರಾಜ್ಯ ಬಸ್‌ ನಿಲ್ದಾಣದ 18ನೇ ಪ್ಲಾಟ್‌ ಫಾರಂನಲ್ಲಿರುವ ಡಿಜಿಟಲ್‌ ಬೋರ್ಡ್‌ ಇದ್ದರೂ ಜನರಿಗೆ ಉಪಯೋಗವಾಗುತ್ತಿಲ್ಲ. ಸಂಪೂರ್ಣವಾಗಿ ಧೂಳಿನಿಂದ ಆವರಿಸಿರುವ ಬೋರ್ಡ್‌ ಕಾರ್ಯನಿರ್ವಹಿಸುತ್ತಿದೆ ಎಂದು ಯಾರಿಗೂ ತಿಳಿಯುವುದಿಲ್ಲ. ಅಂತಾರಾಜ್ಯ ಈಶಾನ್ಯ ಬಸ್‌ ನಿಲ್ದಾಣದೊಳಗೆ ಕೆಎಸ್‌ಆರ್‌ಟಿಸಿ ಬಸ್‌ಗಳನ್ನು ಮಾತ್ರ ನಿಲ್ಲಿಸುವ ನಿಯಮವಿದೆ. ಖಾಸಗಿ ವ್ಯಕ್ತಿಗಳು ಬೈಕ್‌ಗಳನ್ನು ನಿಲ್ಲಿಸಲೆಂದೇ ಪಾರ್ಕಿಂಗ್‌ ವ್ಯವಸ್ಥೆ ಕಲ್ಪಿಸಲಾಗಿದೆ. ಆದರೆ ಕೆಲ ಖಾಸಗಿ ವ್ಯಕ್ತಿಗಳು ಬಸ್‌ ನಿಲ್ದಾಣದೊಳೆಗೇ ಬೈಕ್‌ ನಿಲ್ಲಿಸುತ್ತಿದ್ದಾರೆ. ಇದನ್ನು ಕೇಳುವವರೇ ಇಲ್ಲದಂತಾಗಿದೆ.

ಗುಂಡಿಮಯ ನಿಲ್ದಾಣ :
ಬಸ್‌ ನಿಲ್ದಾಣದ ಆವರಣದಲ್ಲಿ ಅಲ್ಲಲ್ಲಿ ಹೊಂಡಗಳು ಕಾಣ ಸಿಗುತ್ತವೆ. ಸ್ವಲ್ಪ ಮಳೆ ಬಂದರೂ ಗುಂಡಿಯಲ್ಲಿ ನೀರು ನಿಂತು ಸಂಚರಿಸುವುದೇ ಕಷ್ಟವಾಗುತ್ತದೆ.

ಪ್ಲೈಓವರ್‌ನಲ್ಲಿ ಕೆಟ್ಟ ಲೈಟ್‌ಗಳು
ಬಿಎಂಟಿಸಿ ಬಸ್‌ ನಿಲ್ದಾಣದ ಕಡೆಯಿಂದ ಕೆಂಪೇಗೌಡ ಬಸ್‌ ನಿಲ್ದಾಣದ ಕಡೆಗೆ ಹೋಗುವ ಪ್ಲೈಓವರ್‌ನಲ್ಲಿ ರಾತ್ರಿವೇಳೆ ಬೆಳಕು ಬೀರಲೆಂದು ಅಳವಡಿಸಿರುವ ಲೈಟ್‌ಗಳು ಕೆಟ್ಟು ಹೋಗಿವೆ. ಐದು ಕಂಬಗಳಲ್ಲಿರುವ ಲೈಟ್‌ಗಳು ಕೆಟ್ಟಿರುವುದರಿಂದ ಅಗತ್ಯ ಬೆಳಕಿಲ್ಲದೆ ಸಾರ್ವಜನಿಕರ ಓಡಾಟಕ್ಕೆ ತೊಂದರೆಯುಂಟಾಗಿದೆ.

ಶಿಶು ಪೋಷಣಾ ಕೊಠಡಿಗೆ ಬೀಗ

ಕೆಂಪೇಗೌಡ ಬಸ್‌ ನಿಲ್ದಾಣದಲ್ಲಿ ಶಿಶು ಪೋಷಣೆಗೆಂದು ಪ್ರತ್ಯೇಕ ಕೊಠಡಿಯನ್ನೇನೋ ಮೀಸಲಿಡಲಾಗಿದೆ. ಆದರೆ, ಅದಕ್ಕೆ ಬೀಗ ಹಾಕಿರುವುದರಿಂದ ಉಪಯೋಗವಾಗುತ್ತಿಲ್ಲ. ನಿಲ್ದಾಣಕ್ಕೆ ಹಸುಳೆಗಳೊಂದಿಗೆ ಬಂದ ತಾಯಂದಿರು ಬೀಗ ನೋಡಿ ವಾಪಾಸು ಹೋಗುವುದು ಸಾಮಾನ್ಯವಾಗಿದೆ.

ಕೆಂಪೇಗೌಡ ಬಸ್‌ ನಿಲ್ದಾಣದಲ್ಲಿ ಟರ್ಮಿನಲ್‌ಗಳಾಗಿ ವಿಂಗಡಿಸಲಾಗಿದೆ. ಆದ್ದರಿಂದ ಕೆಲವು ಟರ್ಮಿನಲ್‌ನಲ್ಲಿ ಉದ್ಘೋಷಕಗಳನ್ನು ಅಳವಡಿಸಿಲ್ಲ. ನಿಲ್ದಾಣದಲ್ಲಿ ಕೆಟ್ಟಿರುವ ಲೈಟ್‌ಗಳನ್ನು ಸರಿ ಮಾಡುವಂತೆ ಅಧಿಧಿಕಾರಿಗಳಿಗೆ ಸೂಚಿಸಲಾಗುವುದು.
-ಇನಾಯತ್‌ ಭಗವಾನ್‌, ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಕರು, ಬೆಂಗಳೂರು

ಗ್ರಾಮೀಣ ಭಾಗದಿಂದ ಬೆಂಗಳೂರಿಗೆ ಬಂದ ಮಂದಿಗೆ ಇಷ್ಟು ದೊಡ್ಡ ಬಸ್‌ ನಿಲ್ದಾಣದಲ್ಲಿ ಪ್ಲಾಟ್‌ ಫಾರಂ ಮತ್ತು ಬಸ್‌ ಬಗ್ಗೆ ಮಾಹಿತಿ ದೊರೆಯುತ್ತಿಲ್ಲ. ಸಿಕ್ಕ ಸಿಕ್ಕವರನ್ನು ಕೇಳಿಕೊಂಡು ಬಸ್‌ ನಿಂತಿರುವ ಜಾಗಕ್ಕೆ ಬರಬೇಕಾಗಿದೆ. ಇಂತಹ ವೇಳೆ ಕೆಲವರು ತಪ್ಪು ದಾರಿಗಳನ್ನು ತೋರಿಸುತ್ತಾರೆ.
- ಮಲ್ಲಪ್ಪ, ಪ್ರಯಾಣಿಕ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ